ಅಂಕಣಗಳು

ಜೇನುಕುರುಬರ ಯಜಮಾನನಿಗೆ ಪದ್ಮಶ್ರೀ ಗರಿ

• ದೇವಿಕಾ ನಾಗೇಶ್

ಬುಡಕಟ್ಟು ಸಮುದಾಯದ ಸಾಕ್ಷಿಪ್ರಜ್ಞೆಯಂತಿರುವ ಸಿ.ಸೋಮಣ್ಣ ಒಂದು ರೀತಿಯಲ್ಲಿ ಆದಿವಾಸಿ ಪಾರಂಪರಿಕ ಜ್ಞಾನದ ನಡೆದಾಡುವ ವಿಶ್ವಕೋಶ. ನಮ್ಮ ಹಿರಿಯರು ಬಾಳಿ ಬದುಕುವ ಮನೆಯನ್ನು ಕಟ್ಟುವಾಗ ತೆಗೆದುಕೊಳ್ಳುತ್ತಿದ್ದ ಮುಂಜಾಗ್ರತೆಯ ಕ್ರಮವನ್ನು ವಿವರಿಸುವ ಇವರು ಮನೆ ಕಟ್ಟುವ ಜಾಗದಲ್ಲಿ ಪಾಯ ತೋಡಿ ನೀರು ತುಂಬಿಸಿ ಅದು ಒಣಗಲು ಬಿಟ್ಟ ನಂತರ ಅಲ್ಲಿ ಯಾವುದೇ ಬಿರುಕು ಕಾಣಿಸಿಕೊಳ್ಳದೇ ಇದ್ದರೆ ಆ ಜಾಗದಲ್ಲಿ ಮನೆ ಕಟ್ಟುವುದು ಸೂಕ್ತವೇ ಎಂದು ನಿರ್ಧರಿಸುವ ಮೊದಲು ಒಂದರ ಮೇಲೆ ಒಂದು ಹೀಗೆ ಮೂರು ಕಲ್ಲುಗಳನ್ನು ಇಟ್ಟು ಕಾಯುತ್ತಾರೆ .ಆ ಕಲ್ಲು ಯಥಾ ಸ್ಥಿತಿಯಲ್ಲಿ ಇದೆ ಎಂದಾದರೆ ಜಾಗ ಮನೆ ಕಟ್ಟಲು ಸೂಕ್ತ ಎಂದು ನಿರ್ಧರಿಸುತ್ತಾರೆ. ಬಾಳಿ ಬದುಕುವ ಮನೆಯಲ್ಲಿ ನೆಮ್ಮದಿಯು ನೆಲೆ ಬೇಕು ಎನ್ನುವ ಕಾರಣಕ್ಕೆ ಈ ರೀತಿ ಪೂರ್ವ ತಯಾರಿಗಳು ಇರುತ್ತದೆ ಎನ್ನುವ ಸೋಮಣ್ಣ ಕಾಡಿನ ಒಳಗೆ ಕಟ್ಟಿಕೊಳ್ಳುವ ಈ ಮನೆಗಳು ಆಯಕಟ್ಟಿನ ಜಾಗದಲ್ಲಿ ಇದ್ದು ಕಾಡಿನಲ್ಲಿರುವ ಇತರೆ ಜೀವಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಇರುತ್ತಿತ್ತು ಎನ್ನುತ್ತಾರೆ. ವೃತ್ತಾಕಾರದಲ್ಲಿ ನಿರ್ಮಾಣವಾಗುತ್ತಿದ್ದ ಇಂತಹ ಮನೆಗಳಲ್ಲಿ ನಡುವೆ ಹಾಡಿಯ ಜನ ಆರಾಧಿಸುವ ಗುಡಿಗಳಿದ್ದು ಎಲ್ಲ ಮನೆಗಳೂ ಕಾಣುವಂತೆ ಹಾಡಿಯ ಯಜಮಾನನ ಮನೆ ಇರುತ್ತಿತ್ತು. ಸಾಮೂಹಿಕ ವಾಗಿ ಬದುಕುತ್ತಿದ್ದ ಈ ಜನರ ಹಾಡಿಗಳನ್ನು ಜಮ್ಮಾ ಎಂದು ಕರೆಯುತ್ತಿದ್ದರು.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಮೊತ್ತ ಬುಡ ಕಟ್ಟು ಜನರ ಹಾಡಿಯಲ್ಲಿ ಸೋಮಣ್ಣ 1957ರಲ್ಲಿ ಜನಿಸಿದರು. ಕುಪ್ಪಯ್ಯ ಮತ್ತು ಬಸಮ್ಮ ಇವರ ಹೆತ್ತವರು. ಅದ್ಭುತ ಪಾರಂಪರಿಕ ಜ್ಞಾನವನ್ನು ಹೊಂದಿರುವ ಇವರು ನಾವು ಕುಡಿಯುವ ನೀರು, ಒಡ ನಾಡುವ ಪರಿಸರ, ನಡೆದಾಡುವ ಭೂಮಿ, ಹಗಲು ಬೆಳಗುವ ಸೂರ್ಯ, ರಾತ್ರಿ ಮಿನುಗುವ ನಕ್ಷತ್ರ ಇದು ಯಾರೊಬ್ಬರ ಸೊತ್ತಲ್ಲ. ಇರು ವಷ್ಟು ಕಾಲ ಇದನ್ನು ಸುಸ್ಥಿತಿಯಲ್ಲಿಟ್ಟುಕೊಂಡು ನಮ್ಮ ನಂತರದವರಿಗೆ ಇವನ್ನು ಬಳಸಲು ಯೋಗ್ಯವಾಗಿರುವಂತೆ ಬಿಟ್ಟು ಹೋಗುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಬದುಕಿದವರು. ಬಹುಶಃ ಕಾಡಿನ ಒಡನಾಡಿ ಯಾಗಿದ್ದ ಅವರಿಗೆ ಕಾಡು ಕಲಿಸಿದ ಪಾಠ ಇದು. ನಾನು, ನನ್ನದು, ನನಗೆ ಮಾತ್ರ ಇದು ಎನ್ನುವ ಸ್ವಾರ್ಥ ತುಂಬಿದ ನಾಗರಿಕ ಪ್ರಪಂಚದ ಸೋಗಿಗೆ ತಾನು ಉತ್ತರಿಸಬೇಕು ಎಂಬ ಕಾರಣಕ್ಕೆ ಸಂಘಟನೆಯ ಕನಸು ಕಂಡರು, ಕಟ್ಟಿದರು. ನಾಲ್ಕು ದಶಕಗಳಿಂದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ
ಸಂವೇದನೆಗಳಿಗೆ ಧ್ವನಿಯಾಗಿರುವ ಸಿ.ಸೋಮಣ್ಣ ಮೈಸೂರು ಜಿಲ್ಲೆಯ ಆದಿವಾಸಿ ಬುಡಕಟ್ಟು ಜನರ ಸಂಘಟಿತ ಹೋರಾಟದ ಮುಂದಾಳತ್ವ ವಹಿಸಿ 6,000 ಎಕರೆ ಜಮೀನು ಆದಿವಾಸಿಗಳಿಗೆ ದೊರೆಯುವುದಕ್ಕೆ ಶ್ರಮಿಸಿದರು. ಅರಣ್ಯ ರಕ್ಷಣೆಯ ನೆಪ ಹೇಳಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಕಾಯ್ದೆ ಮತ್ತು ಅಣೆಕಟ್ಟೆಗಳ ನಿರ್ಮಾಣದಿಂದ ನೆಲೆ ಕಳೆದುಕೊಂಡ ಸಾವಿರಾರು ಬುಡಕಟ್ಟು ಕುಟುಂಬಗಳ ಜನರನ್ನು, ಕೃಷಿಕರನ್ನು ಸಂಘಟಿಸಿ ಹೋರಾಟ ನಡೆಸಿ ಯಶಸ್ವಿಯಾದರು.

ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವ ಭಾರತದಲ್ಲಿ ಅವರು ಹುಟ್ಟು ಹಾಕಿದ ಹೋರಾಟದ ಗಾಥೆ ಇಂದು ಇತಿಹಾಸ. 1991ರಲ್ಲಿ ಫೇಡಿನಾ ಸಹಕಾರದಿಂದ ಫಿಲಿಫೈನ್ಸ್‌ಗೆ ಹೋಗಿ ಅಲ್ಲಿನ ಬುಡಕಟ್ಟು ಸಮುದಾಯಗಳ ಜೊತೆ ಸಂವಾದ ನಡೆಸುವ ವಿಶೇಷ ಅವಕಾಶವೂ ಇವರಿಗೆ ದೊರೆತದ್ದು, ಇವರ ಸಾಧನೆಯ ಹಾದಿಯ ಮುಖ್ಯ ಮೈಲಿಗಲ್ಲು. ಕರ್ನಾಟಕದ ಎರಡು ಮೂಲ ನಿವಾಸಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ಸೋಮಣ್ಣ ಅವರು ಮೈಸೂರು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೈಸೂರು ಜಿಲ್ಲಾಮಟ್ಟದ ಹಿತರಕ್ಷಣಾ ಸಮಿತಿಯ ಸದಸ್ಯರಾಗಿ ದ್ದರು. ಉಳ್ಳವರ ಸ್ವತ್ತಾಗಿದ್ದ ನ್ಯಾಯ ಬೆಲೆ ಅಂಗಡಿಗಳ ಪೈಕಿ ಕನಿಷ್ಠ ಬುಡಕಟ್ಟು ಸಮುದಾಯಗಳ ಹಟ್ಟಿಗಳಲ್ಲಿರುವ ನ್ಯಾಯಬೆಲೆ ಅಂಗಡಿ ಗಳನ್ನು ಸಮುದಾಯದವರೇ ನಡೆಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹಕ್ಕೊತ್ತಾಯದ ಭಾಗವಾಗಿ ಕಾಲುನಡಿಗೆ ಜಾಥಾ ನಡೆಸಿ ಯಶಸ್ವಿಯಾದರು. ಬದುಕು ತನಗೆ ಕಲಿಸಿದ ಪಾಠವನ್ನು ತನ್ನ ಸಮುದಾಯದ ಜನರು ಕಲಿತುಕೊಳ್ಳುವುದಕ್ಕೆ ಸಂಘಟನೆಯಿಂದಷ್ಟೇ ಸಾಧ್ಯ ಎನ್ನುವುದನ್ನು ಅರಿತಿದ್ದ ಸೋಮಣ್ಣ ಇದಕ್ಕಾಗಿ ಅವಿರತ ಶ್ರಮಿಸಿದರು. ಸಿ.ಸೋಮಣ್ಣ ಅವರು ಕಲಿತದ್ದು ನಾಲ್ಕನೇ ತರಗತಿ. ಕಲಿಕೆ ಎನ್ನುವುದು ಬರೀ ನಾಲ್ಕು ಗೋಡೆ ಯೊಳಗಿರುವ ಪಾಠಶಾಲೆಯಲ್ಲಿ ನಡೆಯುವುದಿಲ್ಲ. ಬದುಕು ಎಂಬ ಬಾಣಲೆ ಯಲ್ಲಿ ಹುರಿದು ಒಪ್ಪಗೊಂಡು ಜೀವನ ಪ್ರೀತಿಯ ಸಂಕೇತವಾಗಿ ಹೊರ ಹೊಮ್ಮುವುದು ಸಾಧ್ಯವಿದೆ ಎನ್ನುವುದಕ್ಕೆ ಸಾಕ್ಷಿಯಾದವರು ಸಿ.ಸೋಮಣ್ಣ.
devikanagesh55@gmail.com

andolanait

Recent Posts

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

31 mins ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

1 hour ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

6 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

6 hours ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

6 hours ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

6 hours ago