ಅಂಕಣಗಳು

ರೊಟ್ಟಿಯಷ್ಟೇ ಗಟ್ಟಿಗಿತ್ತಿ ಮೂಡಲಯ ಸೇವಂತಾ ಹೊಸಮನಿ

ಚಾರುವಾಕ ಶಿವಣ್ಣ

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಒಂದು ಅಪರೂಪದ ದೃಶ್ಯ ಕಣ್ಣಿಗೆ ಬಿದ್ದಿತು. ನನ್ನ ವೈಯಕ್ತಕ ಸಮಸ್ಯೆ ಕುರಿತು ಅಹವಾಲು ಅರ್ಜಿಯನ್ನು ಹಿಡಿದು ಹೋಗಿದ್ದ ವೇಳೆ ಕಂಡ ಆ ಸಂಗತಿ ನಿಜಕ್ಕೂ ಒಂದು ರೀತಿಯ ಆಶ್ಚರ್ಯ ಉಂಟು ಮಾಡಿತು. ಅದು ಸೇವಂತಾ ಹೊಸಮನಿ ಎಂಬ ದಿಟ್ಟ ಮಹಿಳೆಯು ತನ್ನ ಸಮಸ್ಯೆಗೆ ಸರ್ಕಾರದ ನೆರವು ಕೋರಿ ಸ್ಥಳದಲ್ಲೇ ಪರಿಹಾರ ಕಂಡುಕೊಂಡದ್ದು.

ಕೈಯಲ್ಲಿ ಒಂದು ತರಕಾರಿ ಕೊಂಡೊಯ್ಯುವಬ್ಯಾಗಿನೊಂದಿಗೆ ಅಹವಾಲು ಪತ್ರವನ್ನು ಹಿಡಿದು, ಬೆಳಗಾವಿಯ ಸುವರ್ಣ ಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಕುಶನ್ ಕುರ್ಚಿಯ ಮೇಲೆ ಒಬ್ಬರೇ ಕುಳಿತಿದ್ದರು. ಅತ್ಯಂತ ಮುಜುಗರ ಸ್ವಭಾವದಿಂದ ಕುಳಿತಿದ್ದ ಅವರು ಅತಿಯಾದ ಸಂಕೋಚದಿಂದಲೇ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ನಾನು ಕುತೂಹಲಕ್ಕಾಗಿ ಅವರ ಜೊತೆ ಮಾತಿಗಿಳಿದೆ. ಎಲ್ಲಾ ವಿಷಯ ಚರ್ಚಿಸಿದ ಮೇಲೆ ನಮಗೆ ಆ ಮಹಿಳೆ ವಿಶೇಷವಾಗಿ ಕಂಡರು.

ರೊಟ್ಟಿ ತಯಾರಿಸಿ ಜೀವನದ ಬಂಡಿ ಮುನ್ನಡೆಸುವ ಕಾಯಕ ನೆಚ್ಚಿಕೊಂಡಿದ್ದ ಸೇವಂತಾ, ತನ್ನ ಕೈಕಸುಬನ್ನೇ ಬಂಡವಾಳ ಮಾಡಿಕೊಂಡು ದಿನಕಳೆಯುತ್ತಿದ್ದರು. ಕಾಲ ಕಳೆದಂತೆ ರೊಟ್ಟಿ ತಯಾರಿಸುವ ಯಂತ್ರ ಖರೀದಿಸಿ ತನ್ನೊಂದಿಗೆ ನಾಲ್ಕು ಜನ ಮಹಿಳೆಯರನ್ನೂ ಸೇರಿಸಿಕೊಂಡು ಜೀವನೋಪಾಯಕ್ಕೂ ನೆರವಾದರು. ಆದರೆ ಇದೀಗ ಅವರಿಗೆ ಧುತ್ತನೆ ಸಮಸ್ಯೆಯೊಂದು ಎದುರಾಗಿದ್ದು, ಪರಿಹಾರಕ್ಕಾಗಿ ದಿಕ್ಕುತೋಚದೆ ಸುವರ್ಣ ಸೌಧಕ್ಕೆ ಬಂದು ನೇರವಾಗಿ ಮುಖ್ಯಮಂತ್ರಿಗಳಿಗೆ ಅಹವಾಲು ನೀಡಿದ್ದಾರೆ. ತನ್ನ ಬಳಿ ಇದ್ದ ಎಲ್ಲ ದಾಖಲೆ ಸಹಿತ ಅರ್ಜಿಯನ್ನು ನೀಡಿದ ಅವರಿಗೆ ಇನ್ನೊಂದು ಪ್ರತಿ ಬೇಕೆಂದು ಅನಿಸಿದಾಗ ಪಕ್ಕದಲ್ಲಿದ್ದವರಿಂದ ಮುಖ್ಯಮಂತ್ರಿಗಳ ಕಚೇರಿಯ ಸಂಖ್ಯೆ ಬರೆಸಿಕೊಂಡು ಹುಡುಕಿ ಬಂದರಂತೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನವರಾದ ಸೇವಂತಾ ಹೊಸಮನಿ ರೊಟ್ಟಿ ತಯಾರಿಸುವ ಯಂತ್ರವನ್ನು ಬ್ಯಾಂಕ್ ಒಂದರಲ್ಲಿ ಸಾಲ ಪಡೆದು ಖರೀದಿಸಿದ್ದರು. ಬಾಡಿಗೆ ಕಟ್ಟಡದಲ್ಲಿ ನಾಲ್ಕು ಮಂದಿ ಸಹಾಯಕ ಕೆಲಸಗಾರರೊಂದಿಗೆ ರೊಟ್ಟಿ ಮಾಡುತ್ತಿದ್ದ ಅವರಿಗೆ ನ್ಯಾಯವಾಗಿ ದೊರಕಬೇಕಾಗಿದ್ದ ಸಬ್ಸಿಡಿಯೂ ದೊರೆಯಲಿಲ್ಲ. ಇತ್ತ ಅವಧಿಯೊಳಗೆ ಸಾಲ ಮರುಪಾವತಿಸಲು ಕಷ್ಟಕರವಾಗಿ ಪರಿಣಮಿಸಿತು. ಬ್ಯಾಂಕಿನ ವರು ದಿನನಿತ್ಯ ಕರೆ ಮಾಡುತ್ತಿದ್ದದ್ದು ಅವರನ್ನು ಒತ್ತಡಕ್ಕೆ ಸಿಲುಕಿಸಿತು. ಪರಿಸ್ಥಿತಿ ಕೈ ಮೀರುವುದನ್ನು ಅರಿತು ಉದ್ದಿಮೆಯನ್ನು ನಿಲ್ಲಿಸಬಾರದು ಎಂದು ಹಠದಿಂದ ಟೊಂಕಕಟ್ಟಿ ಪರಿಹಾರಕ್ಕಾಗಿ ಇದೇ ಸರ್ಕಾರ ಜಾರಿ ಮಾಡಿರುವ ‘ಶಕ್ತಿ’ ಯೋಜನೆಯ ಬಸ್ಸು ಹಿಡಿದು ಧಾವಿಸಿದ್ದರು.

ಸರ್ಕಾರದ ಉನ್ನತ ಕಚೇರಿಗಳ ಪರಿಚಯವೇ ಇಲ್ಲದ ಅವರಿಗೆ ಮುಖ್ಯಮಂತ್ರಿಗಳ ಕಚೇರಿಯು ಒಂದು ವಿಸ್ಮಯದಂತೆ ಕಾಣಿಸಿರಬಹುದು. ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಕಂಡು ಹೊಸ ಜಗತ್ತಿಗೆ ಕಾಲಿಟ್ಟಂತೆ ಪರಿಭಾವಿಸಿದ್ದರು ಎಂಬುದು ಅವರು ನಿರುಮ್ಮಳವಾಗಿ ಕುಳಿತು ಮುಗ್ಧತೆಯಿಂದ ಅತ್ತಿತ್ತ ಕಡೆ ನೋಡುತ್ತಿರುವುದನ್ನು ಗಮನಿಸಿದರೆ ತಿಳಿಯುತ್ತಿತ್ತು. ಸೇವಂತಾ ಅವರ ಅರ್ಜಿಯನ್ನು ಪರಿಶೀಲಿಸಿದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಹುಡುಕುವ ದಾರಿ ಹಿಡಿದು ಅನೇಕ ನಿಗಮಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದರು. ಎಲ್ಲಿಯೂ ಕೂಡ ನಿಖರ ಉತ್ತರ ದೊರಕದಿದ್ದಾಗ ಕಡೆಯದಾಗಿ ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ನೆರವು ದೊರಕಿಸಿಕೊಡುವ ಕ್ರಮ ಕೈಗೊಂಡಿದ್ದಾರೆ. ಶೀಘ್ರದಲ್ಲೇ ಸಾಲ ಸಬ್ಸಿಡಿ ದೊರಕಿಸುವ ಭರವಸೆಯನ್ನು ಪ್ರಧಾನ ಕಾರ್ಯದರ್ಶಿ ನೀಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಕಂಡ ಆ ಮಹಿಳೆಯ ಕಣ್ಣು ಅರಳಿತು. ದ್ವಂದ್ದತೆಯಿಂದ ಕೂಡಿದ್ದ ಮನಸ್ಸು ತಕ್ಕಮಟ್ಟಿಗೆ ಹಗುರಾಯಿತು ಅನಿಸುತ್ತದೆ.

ಯಾರ ಹಂಗಿಲ್ಲದೆ ಸ್ವಾವಲಂಬನೆಯ ಜೀವನ ನಡೆಸುವ ಮೂಲಕ ಸ್ವಾಭಿಮಾನದ ಬದುಕಿಗಾಗಿ ಹವಣಿಸುತ್ತಿರುವ ಈ ಮಹಿಳೆಯ ಸ್ಪೂರ್ತಿದಾಯಕ ಬದುಕು ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಮಾದರಿ ಎಂದರೆ ತಪ್ಪಾಗಲಾರದು. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯಾಗಿದ್ದು, ತಾನು ಮಾಡಿದ ರೊಟ್ಟಿಯನ್ನು ನೇರವಾಗಿ ಯಾರೂ ಖರೀದಿಸುವುದಿಲ್ಲ ಎಂಬ ಅಂಶ ಗೋಚರಿಸಿದ ಮೇಲೆ ರೊಟ್ಟಿಯನ್ನು ಮತ್ತೊಬ್ಬರಿಗೆ ಸಗಟಿನಲ್ಲಿ ಮಾರಾಟ ಮಾಡಿ ಆ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ. ಈ ರೀತಿಯ ತನ್ನ ಸವಾಲಿನ ಬದುಕಿಗೆ ಸವಾಲು ಹಾಕಿ ಬದುಕು ಕಟ್ಟಿಕೊಂಡಿರುವ ಅವರ ಬದುಕು ಒಂದು ರೋಚಕತೆಯೇ ಆಗಿದೆ.

ಸಾಮಾನ್ಯವಾಗಿ ಸರ್ಕಾರದ ಸೌಲಭ್ಯಗಳು ಹೆಚ್ಚಾಗಿ ಆಯಾ ಪಕ್ಷದ ಕಾರ್ಯಕರ್ತರಿಗೆ, ನಾಯಕರ ಹಿಂಬಾಲಕರಿಗೆ ಅಥವಾ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡವರಿಗೆ ಮಾತ್ರ ದೊರಕುತ್ತವೆ. ಇಲ್ಲವೆ, ಶಾಸಕರು ಹಾಗೂ ಮಂತ್ರಿಗಳ ಶಿಫಾರಸ್ಸು ಪತ್ರ ಪಡೆದವರುಸೌಲಭ್ಯ ಗಿಟ್ಟಿಸಿಕೊಳ್ಳುವ ಪರಿಪಾಠ ಹೆಚ್ಚಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಸೇವಂತಾ ಅವರು ಯಾವ ರಾಜಕಾರಣಿಯ ಸಹಾಯವನ್ನೂ ಬೇಡದೆ ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ಬಂದು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು ಅಚ್ಚರಿಯ ಬೆಳವಣಿಗೆ ಅನಿಸಿತು. ಉತ್ತರ ಕರ್ನಾಟಕದಲ್ಲಿ ಇಂತಹ ಅನೇಕ ಪ್ರಕರಣಗಳಲ್ಲಿ ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿದ ಬಗೆಯನ್ನು ಕಂಡು ಈ ಭಾಗದಲ್ಲಿ ನಡೆದ ಚಳಿಗಾಲದ ಅಧಿವೇಶನ ನಿಜಕ್ಕೂ ಸಾರ್ಥಕವಾಯಿತು ಎಂದು ಅನಿಸಿತು.

andolanait

Recent Posts

ರೈತರು ಬೆಳೆದ ಕಾಫಿ, ಅಡಿಕೆ, ಮೆಣಸು ಕಳ್ಳರ ಪಾಲು

ರಾತ್ರೋರಾತ್ರಿ ಬೆಳೆ ಕಳವು ಗಸ್ತು ಹೆಚ್ಚಳ ಸೇರಿದಂತೆ ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸಿದ್ದಾಪುರ: ವನ್ಯಜೀವಿಗಳ ಉಪಟಳ, ಹವಾಮಾನ ವೈಪರೀತ್ಯ,…

9 mins ago

ಸರಗೂರು ಸಾರಿಗೆ ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ

ದಾಸೇಗೌಡ  ಓವರ್‌ಹೆಡ್ ಟ್ಯಾಂಕ್‌ಗಳ ನಡುವೆ ತಪ್ಪಾದ ಸಂಪರ್ಕ; ಪೋಲಾಗುತ್ತಿರುವ ನೀರು; ಸಾರ್ವಜನಿಕರ ಆಕ್ರೋ ಸರಗೂರು : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್…

2 hours ago

19 ಬೇಚರಾಕ್ ಹಳ್ಳಿಗಳು ಇನ್ಮುಂದೆ ಕಂದಾಯ ಗ್ರಾಮಗಳು

ಹುಣಸೂರು ತಾಲ್ಲೂಕಿನ ಜನರ ನಾಲ್ಕು ದಶಕಗಳ ಕನಸು ನನಸು; ಗ್ರಾಮಸ್ಥರು ಫುಲ್ ಖು ಹುಣಸೂರು: ತಾಲ್ಲೂಕಿನ ೧೯ ಬೇಚರಾಕ್ ಗ್ರಾಮಗಳನ್ನು…

2 hours ago

ಹೊಸ ವರ್ಷಕ್ಕೆ ಇಂದಿರಾ ಕಿಟ್

ಗಿರೀಶ್ ಹುಣಸೂರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನ ಮೈಸೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸ ವರ್ಷಾರಂಭದ ಜನವರಿ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ…

2 hours ago

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

13 hours ago