ಅಂಕಣಗಳು

ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯವೂ ಆಳ್ವಿಕೆಯ ಉತ್ತರದಾಯಿತ್ವವೂ

ನಾ. ದಿವಾಕರ

ತಳಮಟ್ಟದ ಸಮಾಜದಲ್ಲಿ ಸಾರ್ವಜನಿಕ ಆರೋಗ್ಯದ ಅಗತ್ಯಗಳು ವಿವಿಧ ಸ್ವರೂಪದ್ದಾಗಿರುತ್ತವೆ. ಸಮಾಜದ ವಿವಿಧ ಸ್ತರಗಳಲ್ಲಿ ಆರೋಗ್ಯ ಸೇವೆಯ ಆದ್ಯತೆಗಳೂ ಭಿನ್ನವಾಗಿರುತ್ತವೆ. ಯಾವುದೇ ಸರ್ಕಾರವಾದರೂ ತನ್ನ ಆರೋಗ್ಯ ನೀತಿಯನ್ನು ರೂಪಿಸುವ ಸಂದರ್ಭದಲ್ಲಿ ಈ ವೈವಿಧ್ಯತೆ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೀತಿ ನಿರೂಪಣೆ ಮಾಡಬೇಕಾಗುತ್ತದೆ. ತಳಮಟ್ಟದಲ್ಲಿನ ಸಾಮಾನ್ಯ ಜನತೆಯ ಆರೋಗ್ಯದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರಗಳು ಲಭ್ಯವಿರುವ ಸಂಪನ್ಮೂಲಗಳ ಸಮರ್ಪಕ ಬಳಕೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ.

ಆದರೆ ಎನ್‌ಡಿಎ ಆಳ್ವಿಕೆಯ ಮೊದಲ ಬಜೆಟ್‌ನಲ್ಲಿ ಸಾಮಾಜಿಕ ಕ್ಷೇತ್ರದ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಲಾಗಿದ್ದು, ವಿಶೇಷವಾಗಿ ಆರೋಗ್ಯ ವಲಯವನ್ನು ಹೆಚ್ಚು ಕಡೆಗಣಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಸರ್ಕಾರದ ಸಾರ್ವಜನಿಕ ಆರೋಗ್ಯ ನೀತಿಗಳನ್ನು ಗಮನಿಸಿದರೆ, ತಳಮಟ್ಟದ ಸಮಾಜದಲ್ಲಿ ವಂಚಿತ ಜನಸಮುದಾಯಗಳ ಕಾಳಜಿಗಳನ್ನು ಪರಿಹರಿಸುವಂತಹ ಯಾವುದೇ ಸ್ಪಷ್ಟ ನೀತಿ ನಿರೂಪಣೆಗಳನ್ನು ಕಾಣಲಾಗುವುದಿಲ್ಲ. ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ಬಡತನ-ದಾರಿದ್ರ್ಯದ ಕಾರಣಕ್ಕೆ ಉಂಟಾಗುವ ಅಗತ್ಯಗಳು. ಕ್ಷಯ ರೋಗ, ಮಲೇರಿಯಾ, ಅಪೌಷ್ಟಿಕತೆ, ಗರ್ಭಿಣಿಯರ ಮರಣ, ಆಹಾರ-ಜಲ ಮಾಲಿನ್ಯದ ಸೋಂಕಿನಿಂದ ಉಂಟಾ ಗುವ ಟೈಫಾಯ್ಡ್, ಹೆಪಾಟೈಟಿಸ್, ಅತಿಸಾರ (Diarrhea) ಇವೆಲ್ಲವೂ ದುರ್ಬಲ ಬಡ ಜನತೆಯನ್ನು ಕಾಡುವ ಆರೋಗ್ಯ ಸಮಸ್ಯೆಗಳು.

ಎರಡನೆಯ ಅಗತ್ಯ ಎಂದರೆ ಮಧ್ಯಮ ವರ್ಗಗಳ ಹಾಗೂ ಹಿತವಲಯದ ಜನರು ಎದುರಿಸುವ ಆರೋಗ್ಯ ಸಮಸ್ಯೆಗಳು. ವಾಯು ಮಾಲಿನ್ಯ, ಜಲ ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಇಲ್ಲಿ ಪ್ರಧಾನ ಸಮಸ್ಯೆಗಳಾಗಿ ಎದುರಾಗುತ್ತವೆ. ಒಳಚರಂಡಿ ವ್ಯವಸ್ಥೆಯ ಕೊರತೆ ಅಥವಾ ಅಸಮರ್ಪಕ ನಿರ್ವಹಣೆ, ನಿತ್ಯ ಜೀವನದಲ್ಲಿ ಜನರು ಸೇವಿಸುವ ಆಹಾರಗಳಲ್ಲಿ ಆರೋಗ್ಯಕರ ಗುಣಮಟ್ಟ ಇಲ್ಲದಿರುವುದು ಈ ವರ್ಗಗಳನ್ನು ಕಾಡುವ ಪ್ರಶ್ನೆಗಳಾಗಿರುತ್ತವೆ. ಈ ಸಮಸ್ಯೆಗಳು ಮೊದಲನೆಯ ವರ್ಗಗಳಲ್ಲೂ ಇದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಕಾಣುವುದಿಲ್ಲ. ಸಾರ್ವಜನಿಕ ಆರೋಗ್ಯ ವಲಯದ ಮೂರನೆಯ ಗುಂಪನ್ನು ಸಾಮಾನ್ಯ ಜನತೆಯ ಚಿಕಿತ್ಸಾತ್ಮಕ ಅಗತ್ಯಗಳಲ್ಲಿ ಗುರುತಿಸಬಹುದು. ಆಡಳಿತಾತ್ಮಕವಾಗಿ ನೋಡಿದಾಗ ಸಾರ್ವಜನಿಕವಾಗಿ ಚಿಕಿತ್ಸಾತ್ಮಕ ಆರೋಗ್ಯ ಸೇವೆಯನ್ನು ಒದಗಿಸುವುದು ಸರ್ಕಾರಗಳಿಗೆ ಸಾಕಷ್ಟು ಜಟಿಲ ಸವಾಲುಗಳನ್ನು ಮುಂದೊಡ್ಡುತ್ತದೆ.

ಈ ಚಿಕಿತ್ಸಾತ್ಮಕ ಸೇವೆಗಳನ್ನು ಪ್ರಾಥಮಿಕ, ಅನುಷಂಗಿಕ (secondary) ಮತ್ತು ಮೂರನೇ ಶ್ರೇಣಿಯ ಹಂತಗಳಲ್ಲಿ ವಿಂಗಡಿಸಬಹುದು. ಕಡುಬಡತನದ ದುರ್ಬಲ ವರ್ಗಗಳು ಪ್ರಾಥಮಿಕ ಆರೋಗ್ಯ ಸೇವೆಯನ್ನು ಪಡೆಯಲು ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಅವಲಂಬಿಸುತ್ತವೆ. ತಮ್ಮ ಮನೆಗಳಿಗೆ ಹತ್ತಿರ ಇರುವ, ಅಗ್ಗದ ವೆಚ್ಚದ ಚಿಕಿತ್ಸೆಗಳನ್ನು ಅಪೇಕ್ಷಿಸುತ್ತವೆ. ಅನುಷಂಗಿಕ ಗುಂಪುಗಳು ಆರಂಭದಿಂದಲೂ ಆಳ್ವಿಕೆಯ ನಿರ್ಲಕ್ಷ್ಯಕ್ಕೊಳಗಾಗಿದ್ದು ಜನಸಂಖ್ಯಾ ನಿಯಮಗಳಿಗೆ ಹೋಲಿಸಿದಾಗ ಮೂಲ ಸೌಕರ್ಯಗಳ, ತಜ್ಞ ಆರೋಗ್ಯ ಸಿಬ್ಬಂದಿಗಳ ಮತ್ತು ಸೂಕ್ತ ಸೌಲಭ್ಯಗಳ ಕೊರತೆಯನ್ನು ಗುರುತಿಸಬಹುದು. ಸರ್ಕಾರದ ಆರೋಗ್ಯ ಯೋಜನೆಗಳು: ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ (ಪಿಎಂಜೆಎವೈ) ಯನ್ನು ಈ ಮೂರನೇ ಗುಂಪನ್ನು ಉದ್ದೇಶಿಸಿ ರೂಪಿಸಲಾಗಿದೆ.

೨೦೦೫ರಲ್ಲಿ ಜಾರಿಯಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಹಾಗೂ ತದನಂತರ ೨೦೧೩ರಲ್ಲಿ ರೂಪಿಸಲಾದ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್ ಎಮ್) ಈ ಎರಡೂ ಯೋಜನೆಗಳು ೨೦೦೨ರಲ್ಲಿ ಪ್ರಸ್ತಾಪಿಸಲಾದ ಆರೋಗ್ಯ ಸೇವೆಯ ಖಾಸಗೀಕರಣದ ಸಲಹೆಗಳಿಗೆ ವ್ಯತಿರಿಕ್ತವಾಗಿದ್ದವು. ಎನ್‌ಎಚ್ ಎಮ್ ಬಹುಮುಖ್ಯವಾಗಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೂಪಿಸಲಾಗಿದ್ದು, ೧೯೯೦ರ ಜಾಗತೀಕರಣದ ನಂತರದಲ್ಲಿ ಕುಸಿಯುತ್ತಿದ್ದ ಆರೋಗ್ಯ ಕ್ಷೇತ್ರದ ಸಂರಚನೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಾಗಿತ್ತು. ಪ್ರಾಥಮಿಕ ಆರೋಗ್ಯ ಕಾಳಜಿಯ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವ ಉಪಕ್ರಮಗಳನ್ನು ಎನ್‌ಎಚ್‌ಎಮ್ ಮೂಲಕ ಕೈಗೊಳ್ಳಲಾಗಿತ್ತು. ತನ್ಮೂಲಕ ಸಾರ್ವಜನಿಕರಲ್ಲಿ ಸಾರ್ವಜನಿಕ ಆರೋಗ್ಯ ವಲಯದ ಬಗ್ಗೆ ವಿಶ್ವಾಸ ಮೂಡಿಸಲಾಗಿತ್ತು. ಈ ಹಂತದಲ್ಲಿ ಭಾರತದಲ್ಲಿ ೧,೫೩,೬೫೫ ಉಪ ಕೇಂದ್ರಗಳು, ೨೫,೩೦೮ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೫,೩೯೬ ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯೋನ್ಮುಖವಾಗಿದ್ದವು ಎಂದು ೨೦೧೫ರ ಗ್ರಾಮೀಣ ಆರೋಗ್ಯದ ಅಂಕಿಸಂಖ್ಯೆಗಳು ಸೂಚಿಸುತ್ತವೆ. ಒಂದು ವೇಳೆ ಆನಂತರದ ಆರೋಗ್ಯ ನೀತಿಗಳು ಅನುಷಂಗಿಕ ಹಾಗೂ ತೃತೀಯ ಶ್ರೇಣಿಯ (tertiary) ಆರೋಗ್ಯ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೆ ಬಹುಶಃ ಈ ಅಡಿಪಾಯ ಮತ್ತಷ್ಟು ಬಲವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ೨೦೧೮ರ ಆಯುಷ್ಮಾನ್ ಭಾರತ ಯೋಜನೆಯ ಅಡಿಯಲ್ಲಿ ಸಾರ್ವಜನಿಕ ಅನುದಾನಿತ ಆರೋಗ್ಯ ವಿಮಾ ಯೋಜನೆಯನ್ನು (ಪಿಎಫ್ ಎಚ್‌ಐ) ಜಾರಿಗೊಳಿಸಲಾಯಿತು.

ಭಾರತದ ಸಂದರ್ಭದಲ್ಲಿ ಪಿಎಫ್‌ಎಚ್‌ಐ ಅಥವಾ ಆಯುಷ್ಮಾನ್ ವಿಮಾ ಯೋಜನೆಯ ಪ್ರಮುಖ ಫಲಾನುಭವಿಗಳಾಗಿ ಹೊರಹೊಮ್ಮಿದ್ದು ಖಾಸಗಿ ಆರೋಗ್ಯ ಕ್ಷೇತ್ರ. ಭಾರತದ ಆರೋಗ್ಯ ವಿಮಾ ಯೋಜನೆಗಳು ಕೇವಲ ಆಸ್ಪತ್ರೆಗೆ ದಾಖಲಾದ ಸಂದರ್ಭಗಳಲ್ಲಿ ಮಾತ್ರ ಉಪಯುಕ್ತವಾಗುತ್ತವೆ. ಈಗ ಸರ್ಕಾರವು ೭೦ ವರ್ಷ ಮೇಲ್ಪಟ್ಟ ನಾಗರಿಕರಿಗೆ ಕುಟುಂಬದ ಆಧಾರದಲ್ಲಿ ೫ ಲಕ್ಷ ರೂ. ವಿಮೆ ಒದಗಿಸುವ ಆಯುಷ್ಮಾನ್ ಯೋಜನೆಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹವಾಗಿದ್ದು, ಇದರ ಸಾಧ್ಯಾಸಾಧ್ಯತೆಗಳು ಇನ್ನು ಮುಂದೆ ಸ್ಪಷ್ಟವಾಗಲಿವೆ. ಈ ಯೋಜನೆಗಳ ಮುಖಾಂತರ ಖಾಸಗಿ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದಿಮೆಗಳಿಗೆ ಏಕಸ್ವಾಮ್ಯ ದೊರೆತಂತಾಗಿದ್ದು, ಕಾರ್ಪೊರೇಟ್ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲೇ ವೈದ್ಯಕೀಯ ಚಿಕಿತ್ಸೆ, ಸೇವೆಯನ್ನು ಒದಗಿಸುವುದಾಗಿ ಹೇಳಿದರೂ, ಮತ್ತೊಂದು ಬದಿಯಲ್ಲಿ ಈ ಗ್ರಾಹಕ ವಲಯಕ್ಕೆ ಸಾರ್ವಜನಿಕ ಆರೋಗ್ಯಸೇವೆ ದೊರೆಯದಂತೆ ಮಾಡಲು ಆ ಕ್ಷೇತ್ರವನ್ನೇ ದುರ್ಬಲಗೊಳಿಸುತ್ತವೆ. ಸಾರ್ವ ಜನಿಕ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಒಂದು ಉಪಕ್ರಮ ಎಂದರೆ ೨೦೧೮ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಉಪಕೇಂದ್ರಗಳಾಗಿ ರೂಪಾಂತರಗೊಳಿಸಿರುವುದು. ಈ ಯೋಜನೆಯ ಅನುಸಾರ ದೇಶಾದ್ಯಂತ ಒಂದೂವರೆ ಲಕ್ಷ ಗ್ರಾಮಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು (ಎಚ್‌ಡಬ್ಲ್ಯುಸಿ Health and Wellness Centres) ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು.

ವಿಡಂಬನೆ ಎಂದರೆ ೨೦೧೫ರ ಗ್ರಾಮೀಣ ಆರೋಗ್ಯ ಸೇವೆಯ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಸರ್ಕಾರದ ಈ ನೀತಿಯಲ್ಲಿ ಇತ್ತೀಚಿನ ಬದಲಾವಣೆ ಎಂದರೆ ೨೦೨೩ರಲ್ಲಿ ಎಲ್ಲ ಎಚ್‌ಡಬ್ಲ್ಯುಸಿಗಳನ್ನೂ ಆಯುಷ್ಮಾನ್ ಆರೋಗ್ಯ ಮಂದಿರ ಎಂದು ಮರುನಾಮಕರಣ ಮಾಡಿದ್ದು. ಈ ಹೊಸ ಹೆಸರು ಹಿಂದಿಯೇತರ ಭಾಷೆಯ ರಾಜ್ಯಗಳಿಗೆ ಹೇಗೆ ಸಮಂಜಸವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರತದಂತಹ ದೇಶದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಎಲ್ಲ ವರ್ಗಗಳಿಗೂ ಸಮನಾಗಿ ತಲುಪುವಂತೆ ಎಚ್ಚರ ವಹಿಸಬೇಕಾಗುತ್ತದೆ. ದುರ್ಬಲ ವರ್ಗಗಳಿಗೆ, ಬಡಜನತೆಗೆ ರೋಗ ನಿರೋಧಕ ಯೋಜನೆಗಳಾಗಲೀ, ಆರೋಗ್ಯ ವೃದ್ಧಿಯನ್ನು ಉತ್ತೇಜಿಸುವ ಚಟುವಟಿಕೆಗಳಾಗಲೀ ಕೈಗೆಟುಕದ ಲಕ್ಸುರಿಗಳಾಗಿರುತ್ತವೆ. ಏಕೆಂದರೆ ಈ ಉಪ ಕ್ರಮಗಳು ಅವರ ಜೀವನೋಪಾಯದ ಸಮಸ್ಯೆಗಳನ್ನು ಬಗೆ ಹರಿಸುವುದಿಲ್ಲ. ಹಾಗಾಗಿ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಪ್ರಾಥಮಿಕ ಹಾಗೂ ಅನುಷಂಗಿಕ ಹಂತದ ಚಿಕಿತ್ಸಕ ಕಾಳಜಿಯ ಸೇವೆಗಳು ಬಹಳ ಮುಖ್ಯವಾಗುತ್ತವೆ. ಚಾರಿತ್ರಿಕವಾಗಿ ನೋಡಿದಾಗ, ಪ್ರಾಥಮಿಕ ಆರೋಗ್ಯ ಸಂಸ್ಥೆಗಳು ಈ ಜವಾಬ್ದಾರಿಯನ್ನು ಹೊರುತ್ತಿದ್ದುದೇ ಅಲ್ಲದೆ ಜನರ ಮನೆಯ ಸಮೀಪದಲ್ಲೇ ಲಭ್ಯವಾಗುವಂತೆ ಚಿಕಿತ್ಸಕ ಸೇವೆಗಳನ್ನು ಒದಗಿಸುತ್ತಿದ್ದವು.

ಇದು ಜನಸಾಮಾನ್ಯರಿಗೆ ಸಾಂಸ್ಕ ತಿಕವಾಗಿಯೂ ಹೆಚ್ಚು ಪ್ರಸ್ತುತ ಎನಿಸುವಂತಿ ರುತ್ತಿತ್ತು. ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿರುವ ಕಾರಣ ಜನಸಾಮಾನ್ಯರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲಿನ ವಿಶ್ವಾಸ ಕುಸಿಯುತ್ತಲೇ ಇದೆ. ಖಾಸಗಿ ವಲಯದ ಮಾರುಕಟ್ಟೆ ದರಗಳು ಈ ಜನತೆಯನ್ನು ದೂರ ಇರಿಸುತ್ತವೆ. ಈ ಕೇಂದ್ರಗಳಿಗೆ ಧಾವಿಸುವ ಅಪಾರ ಸಂಖ್ಯೆಯ ಜನರನ್ನು ನಿರ್ವಹಿಸಲು ಅಗತ್ಯವಾದ ಸೌಕರ್ಯಗಳನ್ನು ಒದಗಿಸದೆ ಇರುವುದೂ ಒಂದು ಕಾರಣವಾಗಿದೆ. ಭಾರತದಂತಹ ದೇಶದಲ್ಲಿ ಶೇ. ೬೦ಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದರಿಂದ, ಈ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ. ಆದರೆ ನವ ಉದಾರವಾದಿ ಆರ್ಥಿಕತೆಯಲ್ಲಿ ಆರೋಗ್ಯ ಕ್ಷೇತ್ರವನ್ನು ವಿರುದ್ಧ ದಿಕ್ಕಿನಲ್ಲಿ ಒಯ್ಯಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷವೂ ಈ ನೀತಿಯ ಬಗ್ಗೆ ಸೊಲ್ಲೆತ್ತದಿರುವುದು ದೇಶ ಸಾಗುತ್ತಿರುವ ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಕನಿಷ್ಠ ಎಡಪಕ್ಷಗಳಾದರೂ ಈ ನಿಟ್ಟಿನಲ್ಲಿ ಜನಸಾಮಾನ್ಯರ ನಡುವೆ ಜಾಗೃತಿ ಮೂಡಿಸಲು ಮುಂದಾಗಬೇಕಿದೆ.

 

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago