ಅಂಕಣಗಳು

ಕೊನೆಯ ದಿನಗಳ ಆಸೆಗಳನ್ನು ಈಡೇರಿಸಿ

ಸೌಮ್ಯ ಕೋಠಿ, ಮೈಸೂರು.

ಕೊನೆಗಾಲ ಎಂದಾಕ್ಷಣ ಎಲ್ಲರಿಗೂ ಕಣ್ಣಂಚಲ್ಲಿ ನೀರು ಬರುವುದು ಸಹಜ. ಸಾಮಾನ್ಯವಾಗಿ ಹಿರಿಯರಿಗೆ ಕೊನೆಗಾಲದಲ್ಲಿ ಸಾಕಷ್ಟು ಬಯಕೆಗಳಿರುತ್ತವೆ. ಅವುಗಳ ಈಡೇರಿಕೆಗಾಗಿ ಅವರು ಹಾತೊರೆಯುತ್ತಾರೆ. ಅವುಗಳನ್ನು ಅರ್ಥ ಮಾಡಿಕೊಂಡು ಈಡೇರಿಸುವುದು ನಮ್ಮ ಹೊಣೆಗಾರಿಕೆಯಾಗಬೇಕು.

ಆಸ್ತಿವಂತರಾಗಿದ್ದರೆ, ಹತ್ತಾರು ಎಕರೆ ಗದ್ದೆ ತೋಟಗಳಿದ್ದರೆ ಅವುಗಳನ್ನು ತಮ್ಮ ಮಕ್ಕಳಿಗೆ, ಕೊನೆಗಾಲದಲ್ಲಿ ತನ್ನ ಹೆಂಡತಿಗೂ ಆಸರೆಯಾಗಬೇಕು ಎಂಬ ದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಆಸ್ತಿಯನ್ನು ವಿಲ್ ಮಾಡಿಡುವವರಿದ್ದಾರೆ. ಇದರ ಬಗ್ಗೆ ಅವರು ಕೊನೆಯ ದಿನಗಳಲ್ಲಿ ಗಂಭೀರವಾಗಿ ಯೋಚಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ನಿರ್ಧಾರವನ್ನು ಗೌರವಿಸುವುದು ಮಕ್ಕಳ ಜವಾಬ್ದಾರಿಯಾಗಿರುತ್ತದೆ. ಅವರಿಗೆ ಕೊನೆಗಾಲದಲ್ಲಿ ಯಾವುದೇ ನೋವು ನೀಡುವುದು ಅಷ್ಟು ಸೂಕ್ತವಲ್ಲ.

ಇದೆಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಕಾಡುವುದು ಮರಣದ ನಂತರ ತಮ್ಮ ಅಂತ್ಯಕ್ರಿಯೆ ಎಷ್ಟು ಅಚ್ಚುಕಟ್ಟಾಗಿ ಪದ್ಧತಿಯನುಸಾರ ಜರುಗುತ್ತದೆ ಎಂಬುದು. ಜತೆಗೆ ಕೆಲವರಿಗೆ ತಮ್ಮ ದೇಹ ಮತ್ತೊಬ್ಬರಿಗೆ ಉಪಯೋಗವಾಗಬೇಕು ಎಂಬ ಬಯಕೆಯೂ ಇರುತ್ತದೆ. ಅದರ ಬಗ್ಗೆ ಅವರು ಮೊದಲೇ ತೀರ್ಮಾನಿಸಿ ಅಂಗಾಂಗ, ದೇಹದಾನ ಕುರಿತು ಕುಟುಂಬದ ಆಪ್ತರೊಡನೆ ಸಮಾಲೋಚನೆ ನಡೆಸುತ್ತಿರುತ್ತಾರೆ. ಅವುಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಹೊರುವುದು ಮಕ್ಕಳಾದ ನಮ್ಮ ಕರ್ತವ್ಯ.

ಡಾ. ರಾಜ್ ಕುಮಾರ್‌ರಂತೆ ನಾವೂ ನೇತ್ರದಾನ ಮಾಡಬೇಕು ಎಂದುಕೊಳ್ಳುವ ಸಾಕಷ್ಟು ಹಿರಿಯರನ್ನು ನಾವು ನೋಡಿದ್ದೇವೆ. ಅಂಗಾಂಗಗಳನ್ನು ದಾನ ಮಾಡಬೇಕು ಎಂದುಕೊಂಡಿರುವವರು ಸಾಕಷ್ಟಿದ್ದಾರೆ. ಇದು ಸಾಕಷ್ಟು ಹಿರಿಯರ ಬಯಕೆಯಾಗಿದ್ದರೂ ಅದನ್ನು ಹಂಚಿಕೊಳ್ಳುವ ಧೈರ್ಯ ಅವರಿಗೆ ಕಡಿಮೆ. ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಉತ್ತಮ ಬದುಕು ಕಟ್ಟಿಕೊಂಡ ಹಿರಿಯರಿಗೆ ಅವರ ಕಾಲಾನಂತರವೂ ಮತ್ತೊಬ್ಬರಿಗೆ ನೆರವಾಗಬೇಕು ಎಂಬ ಬಯಕೆ ಸದಾ ಇರುತ್ತದೆ.

ಈ ಸಂದರ್ಭದಲ್ಲಿ ಒಂದು ಘಟನೆಯನ್ನು ನೆನಪಿಸಲು ಇಚ್ಛಿಸುತ್ತೇನೆ. ನನಗೆ ತಿಳಿದ ಹಿರಿಯರೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ಅವರ ಮಗ ನೋಡಿಕೊಳ್ಳಲಿಲ್ಲ ಎಂದು ಬೇಸರಗೊಂಡು ವೃದ್ಧಾಶ್ರಮವನ್ನು ಸೇರಿಕೊಂಡರು. ಅಲ್ಲಿಯೇ ಒಂದಿಷ್ಟು ವರ್ಷ ದೂಡಿದ ಅವರು, ಕೊನೆಗಾಲದಲ್ಲಿ ವೃದ್ಧಾಶ್ರಮದವರಿಗೆ ನನ್ನ ದೇಹವನ್ನು ದಯವಿಟ್ಟು ದಾನ ಮಾಡಿಬಿಡಿ. ನನ್ನ ಮಗ ಬಂದು ಕೇಳಿದರೆ ಕೊಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಅವರ ಆಸೆ ಈಡೇರದೆ ಹಠಕ್ಕೆ ಬಿದ್ದ ಮಗ ಅವರ ದೇಹವನ್ನು ಅಂತ್ಯಕ್ರಿಯೆ ಮಾಡಿದ. ಇರುವಾಗ ಒಂದು ತುತ್ತು ಅನ್ನ ಹಾಕದವರು, ಸತ್ತಾಗ ತಂದೆಯ ಆಸೆಯಂತಾದರೂ ದೇಹವನ್ನು ದಾನ ಮಾಡಲು ಬಿಡದೆ, ಅಂತ್ಯಸಂಸ್ಕಾರ ನೆರವೇರಿಸಿ ಅಪರ ಕಾರ್ಯವನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ? ಈ ಬಗ್ಗೆ ನಾವು ಚಿಂತಿಸುವುದು ಅವಶ್ಯ.

ಭಗವದ್ಗೀತೆಯ ಉಲ್ಲೇಖದಂತೆ ಆತ್ಮ ಮತ್ತು ದೇಹ ಜೀವನದ ನಿಜವಾದ ಸಂಗಾತಿಗಳು. ಹಾಗಾಗಿ ನಮ್ಮ ದೇಹದ ಮೇಲೆ ನಮಗೆ ಅಧಿಕಾರವಿರುತ್ತದೆ. ನಾವು ಸತ್ತ ಮೇಲೂ ಆ ದೇಹ ಏನಾಗಬೇಕು ಎಂಬ ನಿರ್ಧಾರವನ್ನು ನಾವೇ ತೆಗೆದುಕೊಳ್ಳಬಹುದಾಗಿದೆ. ಹಾಗಾಗಿ ಹಿರಿಯರ ನಿರ್ಧಾರವನ್ನು ಗೌರವಿಸುವುದು, ಅವರ ಬಯಕೆಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ರವರನ್ನು ಸ್ಮರಿಸುವುದು ಅತ್ಯಗತ್ಯ. ಅವರ ಅಭಿಮಾನಿಯಾಗಿರುವ ಹಿರಿಜೀವಗಳು ಅವರಂತೆಯೇ ನೇತ್ರದಾನಕ್ಕೆ ಮುಂದಾಗಿರುವುದು ನಿಜಕ್ಕೂ ಮೆಚ್ಚುವ ಕೆಲಸ. ಹಿರಿಯರ ಆಸರೆಯಲ್ಲಿ ಕಿರಿಯರು ಬದುಕುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.

 

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: 24 ರೂ. ಹಿಡಿದು ಮುಂಬೈಗೆ ಬಂದ ಮುನ್ನಾ ಈಗ ಸೆಲೆಬ್ರೆಟಿ ಫೋಟೋಗ್ರಾಫರ್!

ಪ್ರಸಿದ್ಧ ಬಾಲಿವುಡ್ ತಾರೆಗಳ ಜೊತೆಯಲ್ಲಿ ಕೆಲಸ ಮಾಡಿದ ಅನುಭವ ಮುಂಬೈ ಎಂಬ ಮಾಯಾನಗರಿಗೆ ಪ್ರತಿ ದಿನ ಬದುಕು ಹುಡುಕಿಕೊಂಡು, ಕನಸುಗಳನ್ನು…

1 hour ago

ಟಿ-20 ವಿಶ್ವಕಪ್: ಕೌಂಟ್‌ಡೌನ್ ಶುರು

ಆರ್.ಎಲ್.ಮಂಜುನಾಥ್ ಮೈಸೂರು: ಕ್ರಿಕೆಟ್ ಪ್ರಿಯರಿಗೆ ಈಗ ಹಬ್ಬವೋ ಹಬ್ಬ. ಅದರಲ್ಲೂ ಕ್ರಿಕೆಟ್‌ನ ಭಾಷ್ಯವನ್ನೇ ಬದಲಿಸುತ್ತಿರುವ ಟಿ-೨೦ ಪಂದ್ಯಗಳು ಎಲ್ಲರಿಗೂ ಅಚ್ಚುಮೆಚ್ಚು.…

2 hours ago

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸೈಬರ್ ವಂಚನೆ..!

ಕೃಷ್ಣ ಸಿದ್ದಾಪುರ ಪೊಲೀಸರು ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು ಹೂಡಿಕೆ ಹಣ ದೋಚುತ್ತಿರುವ ಖದೀಮರು  ಸಿದ್ದಾಪುರ: ಸೈಬರ್ ಅಪರಾಧ ಪ್ರಕರಣಗಳ…

2 hours ago

ಫೆ.6ರಂದು ಮಹದೇಶ್ವರ ದೇವಾಲಯದ ಉದ್ಘಾಟನೆ

ಎಂ.ಯೋಗಾನಂದ್ ಹಿರಿಕ್ಯಾತನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇಗುಲ; ಭಕ್ತರಿಂದ ಅನ್ನಸಂತರ್ಪಣೆ  ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮಹದೇಶ್ವರ…

2 hours ago

ರೈಲ್ವೆ ಕಂಬಿಗಳಿಗೆ ತಂತಿ ಜಾಲರಿ ಅಳವಡಿಕೆ ಪ್ರಯೋಗ ಯಶಸ್ವಿ

ಮಂಜು ಕೋಟೆ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ; ರೈತರು, ಸಾರ್ವಜನಿಕರು ನಿರಾಳ  ಎಚ್.ಡಿ.ಕೋಟೆ: ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಗಟ್ಟಲು…

2 hours ago

ಕ್ಯಾನ್ಸರ್ ಚಿಂತೆ ಬಿಡಿ, ಚಿಕಿತ್ಸೆ ಬಗ್ಗೆ ಗಮನ ಕೊಡಿ

ಫೋನ್ ಇನ್ ಕಾರ್ಯಕ್ರಮಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಹಲವು ಸಲಹೆ  ಕುಮಾರ್, ಬೆಂಗಳೂರು: ರೊಬೊಟಿಕ್ಸ್ ಶಸಚಿಕಿತ್ಸೆಗೂ, ಸಾಮಾನ್ಯ ಶಸ್ತ್ರಚಿಕಿತ್ಸೆಗೂ ಇರುವ…

2 hours ago