ಅಂಕಣಗಳು

ಅಪರಾಧಿಕ ಚೌಕಟ್ಟಿನಲ್ಲಿ ಲಿಂಗತ್ವ ಸೂಕ್ಷ್ಮತೆ ಹುಡುಕಾಟ

• ನಾ.ದಿವಾಕರ

ಸಮಕಾಲೀನ ಭಾರತ ಹಲವಾರು ದ್ವಂದ್ವಗಳ ನಡುವೆ ಬದುಕುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳ ನಡುವೆ ಸಮಾಜದ ವಸ್ತುಸ್ಥಿತಿಯನ್ನು, ನೆಲದ ವಾಸ್ತವವನ್ನು ಅರಿಯದ ಸಮಾಜ ಈ ದ್ವಂದ್ವಗಳಿಗೆ ಸಾಕ್ಷಿಯಾಗಿದೆ. ಸರ್ಕಾರಗಳು ವೇದಿಕೆಗಳ ಮೇಲೆ ನಿಂತು ಬೆನ್ನುತಟ್ಟಿ ಕೊಳ್ಳುತ್ತಿರುವಾಗಲೇ ಪರದೆಯ ತೆರೆಮರೆ ಯಲ್ಲಿ ಅತ್ಯಾಚಾರ, ದೌರ್ಜನ್ಯ, ಅಪರಾಧಗಳು ಅವ್ಯಾಹತವಾಗಿ ನಡೆಯುತ್ತಿವೆ.

ಭಾರತದ ಮಹಿಳಾ ಸಂಕುಲಕ್ಕೆ ಸಾಂತ್ವನ ನೀಡುವ ರಾಜಕೀಯ ಆಶ್ವಾಸನೆಗಳ ನಡುವೆಯೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ADR) ನಡೆಸಿರುವ ಸಮೀಕ್ಷೆಯೊಂದು, ಕಾನೂನು ನಿರೂಪಕರ ನೈತಿಕತೆಯನ್ನೇ ಪ್ರಶ್ನಿಸುವಂತಿದೆ.2019ರಿಂದ 2024ರವರೆಗಿನ ಅವಧಿಯಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಶಾಸಕರು ಮತ್ತು ಸಂಸದರು ಸಲ್ಲಿಸಿರುವ ಪ್ರಮಾಣಪತ್ರಗಳ ಪರಿಶೀಲನೆಯಲ್ಲಿ, 16 ಸಂಸದರು, 135 ಶಾಸಕರು ಮಹಿಳೆಯರ ವಿರುದ್ದ ಅಪರಾಧ ಎಸಗಿರುವುದು ಕಂಡುಬಂದಿದೆ. ಇವರ ಪೈಕಿ ಇಬ್ಬರು ಸಂಸದರು, 14 ಶಾಸಕರು ಐಪಿಸಿ ಸೆಕ್ಷನ್ 3760 ಡಿ ಕನಿಷ್ಠ ಹತ್ತು ವರ್ಷ ವರ್ಷ ಶಿಕ್ಷೆಗೊಳಗಾಗಬಹುದಾದ ಅಪರಾಧಗಳನ್ನು ಎಸಗಿರುವುದು ದಾಖಲಾಗಿದೆ.

ರಾಜಕೀಯ ವಾಗ್ದಾನಗಳ ಭ್ರಮೆಯಲ್ಲಿ : ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಮತ್ತೊಮ್ಮೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಸಜೆ ವಿಧಿಸಲು ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸುತ್ತೇವೆ’ ಎಂದೂ ಹೇಳಿದ್ದಾರೆ. ಈ ಆಶಾದಾಯಕ ಭರವಸೆಗಳ ನಡುವೆಯೇ ಪ್ರಸಕ್ತ ವರ್ಷ ಜುಲೈವರೆಗೆ ರಾಜ್ಯದಲ್ಲಿ 340 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 234 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ, ಉಳಿದವು ಬಾಕಿ ಉಳಿದಿವೆ. ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2024ರ ಜುಲೈ ಮಾಸದವರೆಗೆ ರಾಜ್ಯದಲ್ಲಿ 2,089 ಪೋಕೋ ಪ್ರಕರಣಗಳು ದಾಖಲಾಗಿವೆ. ಒಟ್ಟು 3,643 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 3,863, 2022ರಲ್ಲಿ 3,194 ಪೋಕೋ ಪ್ರಕರಣಗಳು, ಇದೇ ವರ್ಷಗಳಲ್ಲಿ ಕ್ರಮವಾಗಿ 607 ಮತ್ತು 537 ಅತ್ಯಾಚಾರ ಪ್ರಕರಣಗಳೂ ದಾಖಲಾಗಿದ್ದವು. ಕಳೆದ ವಾರ ಕೊಲ್ಕತ್ತಾದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆದ ಬೀಭತ್ಸ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ವಿಷಯವಾಗಿರುವಾಗಲೇ ಮಹಾರಾಷ್ಟ್ರದ ಧಾರಾಶಿವಾದಲ್ಲಿ 15 ವರ್ಷದ ಬಾಲಕಿ, ಪಾಲಾರ್ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ, ಠಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ 10 ವರ್ಷದ ಬಾಲಕಿ, ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಅತ್ಯಾಚಾರಕ್ಕೆ ಗುರಿಯಾಗಿರುವುದು ವರದಿಯಾಗಿದೆ. ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಸಂಜಯ್ ರಾಯ್ ಎಂಬ

ವ್ಯಕ್ತಿಯನ್ನು ಬಂಧಿಸಲಾಗಿದೆ.

ชื่อย ಕಾಯ್ದೆಗಳು ಯಾವುದೇ ಅಪರಾಧಗಳಿಗಾದರೂ ಪ್ರತಿಬಂಧಕವಾಗುತ್ತವೆಯೇ ಹೊರತು, ಮೇಲ್‌ಸ್ತರದ ಸಮಾಜದಿಂದ ತಳಸ್ತರದವರೆಗೂ ದೌರ್ಜನ್ಯಗಳಿಗೆ ತುತ್ತಾಗುತ್ತಿರುವ ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವೇ? ಸಮಾಜದ ಎಲ್ಲ ಸ್ತರಗಳಲ್ಲೂ ಮಹಿಳಾ ದೌರ್ಜನ್ಯರಹಿತ ಸಾಮಾಜಿಕ ವಾತಾವರಣವನ್ನು ರೂಪಿಸುವ ನಿಟ್ಟಿನಲ್ಲಿ ಯಾವ ಸರ್ಕಾರವಾದರೂ ಒಂದು ಕಾರ್ಯಸೂಚಿ-ಕಾರ್ಯಯೋಜನೆ ಸಿದ್ದಪಡಿಸಿದೆಯೇ? ಈ ಪ್ರಶ್ನೆಗೆ ಎಲ್ಲ ರಾಜಕೀಯ ಪಕ್ಷಗಳೂ, ಸರ್ಕಾರಗಳೂ ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳಬೇಕಿದೆ. ಎಡಿಆರ್ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿರುವ 151 ಜನಪ್ರತಿನಿಧಿಗಳ ವಿರುದ್ದ ಯಾವ ಪಕ್ಷ ಯಾವ ರೀತಿಯ ಶಿಸ್ತು ಕ್ರಮ ಕೈಗೊಂಡಿದೆ?. ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳ-ದೌರ್ಜನ್ಯಗಳಿಂದ ನೊಂದು ಇಡೀ ವಿಶ್ವಕ್ಕೆ ಕಾಣುವಂತೆ ಕಣ್ಣೀರುಗರೆದಾಗ ನಮ್ಮ ಸಮಾಜ ಅಥವಾ ಸರ್ಕಾರಗಳು ಆ : ಹೆಣ್ಣು ಮಕ್ಕಳಿಗೆ ಹೇಗೆ ಸ್ಪಂದಿಸಿದವು?

ಸಾಮಾಜಿಕ ಕ್ರೌರ್ಯ ಮತ್ತು ಗಂಡಾಳ್ವಿಕೆ: ವಿಶ್ವದಲ್ಲೇ ಅತ್ಯುನ್ನತ ನ್ಯಾಯಾಂಗವನ್ನು ಹೊಂದಿರುವ ಭಾರತದಲ್ಲಿ ಇಂದಿಗೂ ಖಾಪ್ ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಮಹಿಳೆಯರನ್ನು ಶಿಕ್ಷೆಗೊಳಪಡಿಸುವ ಅಧಿಕಾರವನ್ನು ಚಲಾಯಿಸುತ್ತಿರುವುದು ವಿಪರ್ಯಾಸವಲ್ಲವೇ? ಇತ್ತೀಚಿನ ಘಟನೆಯೊಂದರಲ್ಲಿ ಒಡಿಶಾದ ಭುವನೇಶ್ವರ ಜಿಲ್ಲೆಯ ಝಾರಸುಗುಡ ಗ್ರಾಮದಲ್ಲಿ ತನ್ನ ಗಂಡನಿಗೆ ಹೊಡೆದಿದ್ದಳು ಎಂಬ ಆರೋಪದ ಮೇಲೆ ಅಲ್ಲಿನ ಗ್ರಾಮ ಪಂಚಾಯಿತಿ ಮಹಿಳೆಗೆ ಉಗ್ರ ಶಿಕ್ಷೆ ವಿಧಿಸಿ, ತಲೆ ಬೋಳಿಸಿ, ಬಹಿಷ್ಕಾರ ಹೇರಿ 5,000 ರೂ.ಗಳ ದಂಡ ವಿಧಿಸಿದೆ. ಈ ಅಧಿಕಾರ ಚಲಾಯಿಸುವ ಹಕ್ಕನ್ನು ಯಾವ ಸಂವಿಧಾನ ಅಥವಾ ಸಂವಿಧಾನದ ಯಾವ ಅನುಚ್ಛೇದ ನೀಡಿದೆ? ಭಾರತದ ತಳಮಟ್ಟದ ಸಮಾಜದಲ್ಲಿ ಇಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಲವ್ ಜಿಹಾದ್, ಕೇರಳ ಫೈಲ್ ಕುರಿತು ಭಾವಾತಿರೇಕದ ಹೇಳಿಕೆಗಳನ್ನು ನೀಡುವ ಬಿಜೆಪಿ ನಾಯಕರಿಗೆ ಇಲ್ಲೇಕೆ ಯಾವುದೇ ಜಿಹಾದ್ ಅಥವಾ ಫೈಲುಗಳು ಕಾಣುವುದಿಲ್ಲ?

ಮಹಿಳಾ ದೌರ್ಜನ್ಯ ಅಥವಾ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಗಳ ಬಗ್ಗೆ ನಿಗಾವಹಿಸಲು ರೂಪಿಸಲಾಗಿರುವ ಆಂತರಿಕ ದೂರು ಸಮಿತಿಗಳು (ICC) ಬಹುತೇಕ ವಲಯಗಳಲ್ಲಿ ಪುರುಷಾಡಳಿತದ ಪ್ರಭಾವಕ್ಕೊಳಗಾಗಿ ನಿಷ್ಕ್ರಿಯವಾಗಿರುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಈ ICCಗಳು ತಪ್ಪೆಸಗುವವರಿಂದ ಅಥವಾ ಉದ್ಯೋಗಸ್ಥರಿಂದಲೇ ಪ್ರಭಾವಿತವಾಗುತ್ತವೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಇಂದಿಗೂ ಪುರುಷಾಧಿಪತ್ಯದಲ್ಲೇ ನಡೆಯುವ ಬಹುತೇಕ ಸಾಮಾಜಿಕ ಹೋರಾಟಗಳು ಮತ್ತು ಕಾರ್ಮಿಕ ಸಂಘಟನೆಗಳು, ಕಮ್ಯುನಿಸ್ಟ್ ಪಕ್ಷಗಳೂ ತಮ್ಮ ಆಂತರಿಕ ಚೌಕಟ್ಟಿನೊಳಗೇ ಕಾರ್ಯಕರ್ತರಲ್ಲಿ ಲಿಂಗ ಸೂಕ್ಷ್ಮತೆ ಬೆಳೆಸಲು ಯಾವ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಈ ನೆಲೆಯಲ್ಲಿ ನಿಂತು ನೋಡಿದಾಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದು, ಪ್ರತಿ 16 ನಿಮಿಷಕ್ಕೊಂದರಂತೆ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳಿಗೆ ಉತ್ತರದಾಯಿ ಯಾರು? ಎರಡನೆಯ ಪ್ರಶ್ನೆ, ಸಮಾಜದಲ್ಲಿ ನೆಲಮಟ್ಟದಿಂದಲೂ ಲಿಂಗತ್ವ ಸೂಕ್ಷ್ಮತೆ-ಮಹಿಳಾ ಸಂವೇದನೆಯನ್ನು ಬೆಳೆಸದೆಯೇ ಈ ದೌರ್ಜನ್ಯಗಳನ್ನು ಕೇವಲ ಪ್ರತಿಬಂಧಕ ಕಾನೂನುಗಳಿಂದ ತಡೆಗಟ್ಟಲು ಸಾಧ್ಯವೇ? ಈ ಎರಡೂ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗುವ ಸರ್ಕಾರಗಳು ಮತ್ತು ಈ ಸರ್ಕಾರಗಳನ್ನು ನಿರ್ವಹಿಸುವ ಅಥವಾ ವಿರೋಧಿಸುವ ರಾಜಕೀಯ ಪಕ್ಷಗಳು. ಇದನ್ನೂ ಮೀರಿ ಇಡೀ ಸಾಮಾಜಿಕ-ರಾಜಕೀಯ ವ್ಯವಸ್ಥೆಯನ್ನು ಹಾಗೂ ಸಾಂಸ್ಕೃತಿಕ ಜಗತ್ತನ್ನು ತನ್ನ ಅಧಿಪತ್ಯದಲ್ಲಿ ಬಂಧಿಸಿರುವ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆ ಇದಕ್ಕೆ ಉತ್ತರಿಸಬೇಕಾಗುತ್ತದೆ.

ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಲೈಂಗಿಕ ಶಿಕ್ಷಣ ನೀಡುವುದರ ಮೂಲಕ, ಎಳೆಯರಲ್ಲಿ ಲಿಂಗತ್ವದ ಅರಿವು ಮೂಡಿಸುವ ಹಾಗೂ ಬೆಳವಣಿಗೆಯ ಹಂತದಲ್ಲೇ ಲಿಂಗತ್ವ ಸೂಕ್ಷ್ಮತೆಯನ್ನು ಬೋಧಿಸುವ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರ ಕ್ರಿಯಾಶೀಲವಾಗಿ ಯೋಚಿಸಬೇಕಿದೆ. ಪ್ರತಿಯೊಂದು ಸಂಸ್ಥೆಯಲ್ಲಿ, ಸಾಮಾಜಿಕ-ರಾಜಕೀಯ ಸಂಘಟನೆಯಲ್ಲಿ, ಚಳವಳಿಗಳಲ್ಲಿ, ಹೋರಾಟ ಕೇಂದ್ರಗಳಲ್ಲಿ, ಸೇವಾ ವಲಯಗಳಲ್ಲಿ ಲಿಂಗತ್ವ ಸೂಕ್ತ ತೆಯನ್ನು ಬೋಧಿಸುವ ಮಾರ್ಗೋಪಾಯಗಳನ್ನು ರೂಪಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಈ ಜವಾಬ್ದಾರಿ ಇರುವುದು ಕೇವಲ ಮಹಿಳಾ ಸಂಘಟನೆಗಳ ಮೇಲಲ್ಲ. ಆ ಕೆಲಸ ನಡೆಯುತ್ತಲೇ ಇದೆ. ಬದಲಾಗಿ ಪುರುಷ ಸಮಾಜದ ಮೇಲೆ, ಇಡೀ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನ ಮೇಲೆ ಈ ಜವಾಬ್ದಾರಿ ಇದೆ. ಈ ನೈತಿಕ ಜವಾಬ್ದಾರಿ ನಮ್ಮ ಹೆಗಲ ಮೇಲಿರುವುದನ್ನು ಅರಿತು ಮುನ್ನಡೆಯುವ ಪ್ರಾಮಾಣಿಕತೆ ನಮ್ಮಲ್ಲಿ ಅವಶ್ಯವಾಗಿ ಇರಲೇಬೇಕಲ್ಲವೇ? ಇದೆಯೇ?

ಆಂದೋಲನ ಡೆಸ್ಕ್

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

7 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago