ಅಂಕಣಗಳು

ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹಚ್ಚಿದ ಡಿಕೆಶಿ ನಡೆ

ವರಿಷ್ಠರಿಗೆ ಹೊಸ ಸಂದೇಶ ರವಾನಿಸಿದರೇ ಉಪ ಮುಖ್ಯಮಂತ್ರಿ?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ಸಂದರ್ಭಗಳಲ್ಲಿ ಆಡಿದ ಮಾತುಗಳು ಕರ್ನಾಟಕದ ರಾಜಕಾರಣದಲ್ಲಿ ಕಿಚ್ಚು ಹಚ್ಚಿವೆ. ಈ ಪೈಕಿ ಮೊದಲ ಮಾತನ್ನು ಅವರು ವಿಧಾನಸಭೆಯಲ್ಲಿ ಆಡಿದರೆ, ಎರಡನೇ ಮಾತನ್ನು ವಿಧಾನಸಭೆಯ ಹೊರಗೆ ಆಡಿದರು. ವಿಧಾನ ಸಭೆಯಲ್ಲಿ ಮಾತನಾಡುತ್ತಾ ಅವರು, ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’ ಎಂದು ಸಂಘ ಪರಿವಾರದ ಉಸಿರೇ ಆಗಿರುವ ಗೀತೆಯನ್ನು ಉಚ್ಚರಿಸಿದರೆ, ಮತ್ತೊಂದು ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ ಎಂದರು.

ಇವತ್ತು ದಸರೆಯ ಬಗ್ಗೆ ಅವರಾಡಿದ ಮಾತನ್ನು ಹಲವರು, ಆಕಸ್ಮಿಕವಾಗಿ ಆದ ಪ್ರಮಾದ ಎಂದು ಬಣ್ಣಿಸುತ್ತಾರೆ. ವಾಸ್ತವವಾಗಿ ಅವರು ದಸರೆ ನಾಡಹಬ್ಬ.ಹೀಗಾಗಿ ಎಲ್ಲರೂ ಸೇರಿ ಇದನ್ನು ಆಚರಿಸಬೇಕು ಎಂದು ಹೇಳುವ ಉದ್ದೇಶ ಹೊಂದಿದ್ದರು ಎನ್ನುತ್ತಾರೆ. ಆದರೆ ನಾಡಿನ ಉಪಮುಖ್ಯಮಂತ್ರಿಯಾಗಿರುವ ಒಬ್ಬ ನಾಯಕ, ಅದರಲ್ಲೂ ಭವಿಷ್ಯದ ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿರುವ ಒಬ್ಬ ನಾಯಕ, ಬಾಯಿ ತಪ್ಪಿಯೂ ಇಂತಹ ಮಾತುಗಳನ್ನು ಆಡಲು ಸಾಧ್ಯವೇ? ಹಾಗೆಂಬ ಪ್ರಶ್ನೆ ಬಂದಾಗ ರಾಜಕೀಯ ವಲಯಗಳು ತಮ್ಮದೇ ಅನುಮಾನ ವ್ಯಕ್ತಪಡಿಸುತ್ತವೆ. ಅವುಗಳ ಪ್ರಕಾರ, ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನಿಂತು ‘ನಮಸ್ತೆ ಸದಾ ವತ್ಸಲೆ’ ಎಂದು ಹಾಡಿದ್ದು ಮತ್ತು ದಸರೆಯ ಬಗ್ಗೆ ತಮ್ಮದೇ ಶೈಲಿಯಲ್ಲಿ ಹೇಳಿಕೆ ನೀಡಿದ್ದಕ್ಕೆ ನಿರ್ದಿಷ್ಟ ಉದ್ದೇಶವಿದೆ.

ಏಕೆಂದರೆ, ನಮಸ್ತೆ ಸದಾ ವತ್ಸಲೆ ಎಂಬುದು ಸಂಘಪರಿವಾರದ ಶಾಖೆಗಳಲ್ಲಿ ನಿತ್ಯ ಪಠಣವಾಗುವ ಗೀತೆ. ಅರ್ಥಾತ್, ಸಂಘಪರಿವಾರದ ಉಸಿರೇ ಆಗಿರುವ ಗೀತೆಯನ್ನು ವಿಧಾನಸಭೆಯಲ್ಲಿ ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರಿಗೆ ಎರಡು ಬಗೆಯ ಸಂದೇಶಗಳನ್ನು ರವಾನಿಸಿದರು. ಮೊದಲನೆಯದಾಗಿ, ನವೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ತಮ್ಮನ್ನು ಆ ಜಾಗದಲ್ಲಿ ಕೂರಿಸುವ ಕೆಲಸವಾಗದಿದ್ದರೆ, ತಮ್ಮ ದಾರಿ ತಮಗೆ ಎಂದು ಸ್ಪಷ್ಟಪಡಿಸುವುದು.

ಅದೇ ರೀತಿ, ಧರ್ಮಸ್ಥಳದ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಹೀಗಾಗಿ ಭವಿಷ್ಯದಲ್ಲಿ ಹಿಂದೂ ಮತಗಳು ಕಾಂಗ್ರೆಸ್ ವಿರುದ್ಧ ಕ್ರೋಢೀಕರಣಗೊಳ್ಳುವ ಅಪಾಯವಿದೆ. ಹೀಗಾಗಿ ಈ ಅಪಾಯವನ್ನು ಕಡಿಮೆ ಮಾಡಲು ತಾವು ಹಿಂದುತ್ವದ ಪ್ರತಿಪಾದಕನಂತೆ ವಿಧಾನಸಭೆಯಲ್ಲಿ ಮಾತನಾಡಬೇಕಾಯಿತು ಎಂಬುದು ಮತ್ತೊಂದು. ಹೀಗೆ ಒಂದೇ ಬೆಳವಣಿಗೆಯ ಮೂಲಕ ಎರಡು ಸಂದೇಶಗಳನ್ನು ರವಾನಿಸಬಲ್ಲ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಸರೆಯ ವಿಷಯದಲ್ಲಿ ಏಕೆ ಎಡವಿದರು? ಅವರ ಹೇಳಿಕೆಯನ್ನು ಒಂದು ಮಟ್ಟದಲ್ಲಿ ಹಿಗ್ಗಿಸುವ ಪ್ರಯತ್ನವಾಗಿರಬಹುದು. ಆ ಮಾತು ಬೇರೆ. ಆದರೆ ಸ್ಥೂಲ ಅರ್ಥದಲ್ಲಿ ಅವರಾಡಿದ ಮಾತು ಸಹಜವಾಗಿಯೇ ಹಿಂದೂ ಧರ್ಮೀಯರನ್ನು ಕೆರಳಿಸುವುದು ಸಹಜ. ಇದು ಗೊತ್ತಿದ್ದ ಮೇಲೂ ಡಿ.ಕೆ.ಶಿವಕುಮಾರ್ ಅವರು ಇಂತಹ ಮಾತುಗಳನ್ನಾಡಿದರು ಎಂದರೆ ಅದಕ್ಕೆ ಇನ್ನೊಂದು ಆಯಾಮವೂ ಇರಬಹುದು. ಅದೆಂದರೆ, ನವೆಂಬರ್ ಅಂತ್ಯದ ವೇಳೆಗೆ ತಾವು ಸಿಎಂ ಆಗುವುದು ಕಷ್ಟ ಅಂತ ಅವರಿಗೆ ದಿನ ಕಳೆದಂತೆ ಹೆಚ್ಚೆಚ್ಚು ಮನವರಿಕೆ ಆಗುತ್ತಿದೆ.

ಹೀಗಾಗಿ ದಸರೆಯ ಕುರಿತು ಮಾತನಾಡಿ ಹಿಂದೂಗಳನ್ನು ಕೆರಳಿಸಿದರೆ ಸಹಜವಾಗಿಯೇ ಭವಿಷ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹಿಂದೂ ಮತಗಳು ಕ್ರೋಢೀಕರಣಗೊಳ್ಳಬಹುದು. ಹಾಗೇನಾದರೂ ಆದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಹಿಡಿಯುವುದು ಕಷ್ಟ. ಹಾಗಾಗಲಿ ಎಂದು ಡಿ.ಕೆ.ಶಿವಕುಮಾರ್ ಬಯಸಿದ್ದಾರೆಯೇ? ರಾಜ್ಯ ಕಾಂಗ್ರೆಸ್‌ನ ಆಳಕ್ಕೆ ಹೊಕ್ಕು ನೋಡಿದರೂ, ವ್ಯಕ್ತವಾಗುವ ಪ್ರಮುಖ ಅನುಮಾನಗಳು ಇವು. ಅಂದ ಹಾಗೆ ಇವತ್ತು ಅಧಿಕಾರ ಹಂಚಿಕೆಯ ಮಾತನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆಯಾಗಿರುವ ಮತ್ತೊಂದು ಸಂಗತಿ ಎಂದರೆ, ತಾವು ನವೆಂಬರ್ ನಂತರ ಬಿಜೆಪಿಗೆ ಹೋದರೂ ತಮ್ಮ ಹಿಂದೆ ಗಣನೀಯ ಪ್ರಮಾಣದ ಶಾಸಕರು ಬರುವುದಿಲ್ಲ ಎಂಬುದು. ಇದಕ್ಕೆ ಕಾರಣವೂ ಇದೆ. ಅದೆಂದರೆ, ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರಿಗೆ ಮುಂದಿನ ಚುನಾವಣೆಯ ಆಶಾಕಿರಣ ಎಂದರೆ ಸಿದ್ದರಾಮಯ್ಯ. ಒಂದು ವೇಳೆ ಅವರೇನಾದರೂ ಮುಂಬರುವ ಚುನಾವಣೆಗೂ ಮುನ್ನ ಅಧಿಕಾರದಿಂದ ಕೆಳಗಿಳಿದರೆ ತಾವು ಚುನಾವಣೆಯನ್ನು ಎದುರಿಸುವುದು ಕಷ್ಟ ಎಂಬುದು ಬಹುತೇಕ ಶಾಸಕರಿಗೆ ಗೊತ್ತಿದೆ.

ಹೀಗಾಗಿ ನಾಳೆ ಸಿಎಂ ಹುದ್ದೆಗಾಗಿ ಡಿ.ಕೆ.ಶಿವಕುಮಾರ್ ಏನೇ ಗದ್ದಲ ಮಾಡಿದರೂ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಅವರ ಹಿಂದೆ ನಿಲ್ಲುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಶಾಸಕರು ಡಿ.ಕೆ.ಶಿವಕುಮಾರ್ ಅವರ ಜತೆ ನಿಲ್ಲುವುದಾಗಿ ಹೇಳಿದ್ದರಾದರೂ, ಸಿದ್ದರಾಮಯ್ಯ ಅವರನ್ನು ಇಳಿಸಲು ಹೈಕಮಾಂಡ್ ತೀರ್ಮಾನಿಸಿದರೆ ಮಾತ್ರ ಅವರು ಡಿ.ಕೆ. ಶಿವಕುಮಾರ್ ಅವರ ಹಿಂದೆ ಹೋಗುತ್ತಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇವತ್ತು ಬಲವಂತವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಸ್ಥಿತಿಯಲ್ಲಿಲ್ಲ. ಹಾಗೇನಾದರೂ ಅದು ಹೇಳಲು ಮುಂದಾದರೆ ದಲಿತ ಸಿಎಂ ಕೂಗು ದಟ್ಟವಾಗುತ್ತದೆ. ಹೀಗಾಗಿ ನಾಳೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಿಂದ ಹೊರಬೀಳಲು ನಿರ್ಧರಿಸಿದರೆ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಅವರ ಜತೆ ನಿಲ್ಲಬಹುದು.

ಯಾವಾಗ ಈ ವಿಷಯ ಅರ್ಥವಾಯಿತೋ? ಇದಾದ ನಂತರ ಡಿ.ಕೆ. ಶಿವಕುಮಾರ್ ಅವರ ನಡೆ ವಿಚಿತ್ರವಾಗಿ ಬದಲಾಗಿದೆ. ಮೊದಲನೆಯದಾಗಿ ನಮಸ್ತೆ ಸದಾ ವತ್ಸಲೆ ಎಂದು ಹೇಳುವ ಮೂಲಕ ಬಿಜೆಪಿಗೆ ತಾವು ಹತ್ತಿರ ಎಂಬ ಸಂದೇಶವನ್ನು ಅವರು ರವಾನಿಸಿದರು. ವಾಸ್ತವವಾಗಿ ಡಿ.ಕೆ.ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೆ ಎಂಬ ಗೀತೆಯನ್ನು ಹಾಡಿದ ನಂತರ ಬಿಜೆಪಿಯ ಕೆಲ ನಾಯಕರು ಸಭೆ ನಡೆಸಿ ಡಿಕೆಶಿ ಬಿಜೆಪಿ ಕಡೆ ಬರಬಹುದೇ? ಅವರು ಬಂದರೆ ನಾವು ಏನು ಮಾಡಬೇಕು ಎಂದು ಚಿಂತನೆ ನಡೆಸಿದ್ದಾರೆ.

ಅವರ ಪ್ರಕಾರ, ಇವತ್ತಿನ ದಿನಗಳಲ್ಲಿ ಯಾರು ಯಾರ ಜತೆ ಆತ್ಮೀಯವಾಗಿದ್ದಾರೆ ಎಂದು ಹೇಳುವುದು ಕಷ್ಟ. ಏಕೆಂದರೆ ಡಿಕೆಶಿ ಅವರು ಮನಸ್ಸು ಬಂದಾಗ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುತ್ತಾರೆ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಾರೆ. ಹೀಗಾಗಿ ನಾಳೆ ಅವರು ಬಿಜೆಪಿಗೆ ಬರುವುದಿಲ್ಲ ಎಂದು ನಂಬುವುದು ಹೇಗೆ ಎಂಬುದು ಕೆಲ ಬಿಜೆಪಿ ನಾಯಕರ ಯೋಚನೆ. ಇಂತಹ ಯೋಚನೆಯಲ್ಲಿರುವಾಗಲೇ ಅವರ ಚಿಂತೆಯನ್ನು ಹೆಚ್ಚಿಸಿದ ಮತ್ತೊಂದು ಬೆಳವಣಿಗೆ ದಸರೆಯ ಕುರಿತು ಡಿ.ಕೆ.ಶಿವಕುಮಾರ್ ಅವರು ಮಾತನಾಡಿರುವುದು. ಏಕೆಂದರೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಇವತ್ತು ಲಾಭವಾಗಿರುವುದು ಬಿಜೆಪಿಗೆ.

ಏಕೆಂದರೆ ಅವರು ಈ ಹೇಳಿಕೆ ನೀಡಿದ ಕೂಡಲೇ ಅದರ ಹಿಂದೆ ಹಿಂದೂ ವಿರೋಧಿ ಮನಃಸ್ಥಿತಿ ಇದೆ ಎಂದು ಬಿಜೆಪಿ ಕೂಗಾಡುತ್ತಿದೆ. ಅದು ರಾಜ್ಯದ ಜನರ ಗಮನ ಸೆಳೆದಿರುವುದು ಕೂಡಾ ನಿಜ. ಹೀಗೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಡಿಕೆಶಿ ಇಂತಹ ಮಾತುಗಳನ್ನಾಡಿದರು ಎಂಬುದು ಕಾಂಗ್ರೆಸ್‌ನ ಕೆಲ ನಾಯಕರ ಅನುಮಾನ. ಕಾಂಗ್ರೆಸ್ ನಾಯಕರ ಈ ಮಾತುಗಳನ್ನು ಗಮನಿಸಿದರೆ,ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ವರಿಷ್ಠರು ಉತ್ಸುಕರಾಗಿದ್ದಾರೆ. ಡಿಕೆಶಿ ಅದಕ್ಕೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂಬ ಅನಿಸಿಕೆ ದಟ್ಟವಾಗುತ್ತದೆ. ಡಿಸಿಎಂ ಡಿಕೆಶಿ ನಡೆ ವಿಶೇಷ ಅರ್ಥಗಳನ್ನು ಪಡೆಯುತ್ತಿರುವುದು ಈ ಕಾರಣಕ್ಕಾಗಿ.

” ಡಿ.ಕೆ. ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೆ ಎಂಬ ಗೀತೆಯನ್ನು ಹಾಡಿದ ನಂತರ ಬಿಜೆಪಿಯ ಕೆಲ ನಾಯಕರು ಸಭೆ ನಡೆಸಿ ಡಿಕೆಶಿ ಬಿಜೆಪಿ ಕಡೆ ಬರಬಹುದೇ? ಅವರು ಬಂದರೆ ನಾವು ಏನು ಮಾಡಬೇಕು ಎಂದು ಚಿಂತನೆ ನಡೆಸಿದ್ದಾರೆ.”

ಬೆಂಗಳೂರು ಡೈರಿ 
-ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

4 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

4 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

6 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

7 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

8 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

8 hours ago