ಡಿ.ಎನ್.ಹರ್ಷ
ಕೆಲ ವರದಿಗಳ ಪ್ರಕಾರ ಒಬ್ಬ ರೈತ ತನ್ನ ಒಂದು ಎಕರೆ ಕೃಷಿ ಭೂಮಿಯಲ್ಲಿ ಕೃಷಿ ಮಾಡಿದರೆ ಅದರಿಂದ ಬಿತ್ತನೆ ಬೀಜ, ಗೊಬ್ಬರ, ಔಷಧಿ, ನೀರಾವರಿ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳು ಕನಿಷ್ಠ 15,000 ರೂ. ಲಾಭ
ಗಳಿಸಲಿವೆಯಂತೆ. ಆದರೆ ರೈತನಿಗೆ? ತಾನು ಹಾಕಿದ ಬಂಡವಾಳ ವಾಪಸ್ಸು ಬರುತ್ತದೆ ಎಂಬ ನಂಬಿಕೆಯೇ ಇರುವುದಿಲ್ಲ. ರೈತರಿಗೆ ಏಕೆ ಈ ಪರಿಸ್ಥಿತಿ ಬಂತು?
ನಮ್ಮ ಹಿಂದಿನ ದೇಸಿ ಕೃಷಿ ಪದ್ಧತಿಗಳನ್ನು ಮರೆತು, ಹೈಬ್ರಿಡ್ ಕೃಷಿ ಪದ್ಧತಿಗೆ ಈಗಿನ ರೈತರು ಮಾರುಹೋಗಿದ್ದಾರೆ. ಈಗ ಒಂದು ಕೆ.ಜಿ. ಪಪ್ಪಾಯ, ದಪ್ಪ ಮೆಣಸಿಕಾಯಿ ಬೀಜಗಳ ಬೆಲೆ ಎರಡು ಲಕ್ಷ ರೂ. ದಾಟಿದೆ. ಅದಷ್ಟೇ ಅಲ್ಲ ಇತರೆ ಬೀಜಗಳ ಬೆಲೆಯೂ ದುಬಾರಿಯೇ. ಇದನ್ನು ಮನಗಂಡ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಗ್ರಾಮದ ಪದ್ಮಮ್ಮ ದೇಸಿ ಬೀಜಗಳನ್ನು ಸಂರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.
ಮನೆಯ ಹಿತ್ತಲಲ್ಲಿ ತರಕಾರಿ ಬೆಳೆಯುವ ಮೂಲಕ ಕೃಷಿ ಆರಂ ಭಿಸಿದ ಪದ್ಮಮ್ಮ, ಮದುವೆ ಆಗಿ ಗಂಡನ ಮನೆಗೆ ಬಂದಾಗಲೂ ಅದನ್ನು ಮುಂದುವರಿಸಿದರು. ತೆಂಗು, ಅಡಕೆ, ಭತ್ತದಂತಹ ದ್ವಿದಳ ಧಾನ್ಯಗಳು, ಹಣ್ಣು, ತರಕಾರಿಗಳನ್ನು ಬೆಳೆಯುತ್ತಾ ಬಿಡುವಿನ ಸಮಯದಲ್ಲಿ ಸ್ತ್ರೀಶಕ್ತಿ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದ ರೊಂದಿಗೆ ಎರೆಹುಳು ಗೊಬ್ಬರ, ಸಿದ್ಧ ಉಡುಪು, ಸ್ಯಾನಿಟರಿ ಪ್ಯಾಡ್ಗಳ ತಯಾರಿಕೆ ಘಟಕಗಳನ್ನು ತೆರೆದಿರುವುದು ಇವರ ಹೆಗ್ಗಳಿಕೆ. 50ಕ್ಕೂ ಹೆಚ್ಚು ಸ್ತ್ರೀಶಕ್ತಿ ಸ್ವಸಹಾಯ ಸಂಘ ಗಳು ಮತ್ತು ಕಣಗಾಲ್ ಹಾಲು ಉತ್ಪಾದಕ ಸಂಘದ ಸ್ಥಾಪನೆಯಾಗುವಲ್ಲಿ ಇವರ ಪಾತ್ರ ಅಪಾರ.
ಕೆಲ ವರ್ಷಗಳ ಹಿಂದೆ ಚಂಡೀಗಢದಲ್ಲಿ ನಡೆದ ರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನದಲ್ಲಿ ಭಾಗ ವಹಿಸಿದಾಗ ಇವರಿಗೆ ದೇಸಿ ಬೀಜ ಸಂಗ್ರಹಣೆಯ ಮೇಲೆ ಆಸಕ್ತಿ ಮೂಡಿ ಮುಂದೆ ಬೀಜ ಸಂಗ್ರಹ ಮಾಡಲು ಆರಂಭಿಸಿದರು.
ಅವರೆ, ತೊಗರಿ, ಅಲಸಂದೆ, ಹೀರೆ, ಪಡ ಮಲಕಾಯಿ, ಸೋರೆಕಾಯಿ, ಭತ್ತ, ರಾಗಿ, ಜೋಳ ಹಾಗೂ ಕೀರೆ, ದಂಟು, ಪಾಲಕ್ ರೀತಿಯ 150ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಬೀಜಗಳನ್ನು ಪದ್ಮಮ್ಮ ಸಂಗ್ರಹ ಮಾಡುತ್ತಿದ್ದಾರೆ. ಅದೂ ಕೂಡ ಸಾವಯವ ವಿಧಾನದಲ್ಲಿ. ಇದರಿಂದಾಗಿ ಬೀಜಗಳ ಗುಣಮಟ್ಟವೂ ಉತ್ತಮವಾಗಿದ್ದು, ಆರೋಗ್ಯಕರ ಆಹಾರ ಉತ್ಪಾದನೆಯಾಗಲಿದೆ. ಕಾಯಿಗಳು ಹಣ್ಣಾಗಿ ಮಾಗುವ ತನಕ ಬಿಟ್ಟು, ಬಳಿಕ ಅವುಗಳನ್ನು ಒಣಗಿಸುತ್ತಾರೆ. ಮುಂದೆ ಆ ಬೀಜಗಳನ್ನು ಮೆಣಸಿನಕಾಯಿ, ಬೇವಿನಸೊಪ್ಪು ಇತ್ಯಾದಿಗಳನ್ನು ಬಳಸಿ, ದೇಸಿ ಸಂಪ್ರ ದಾಯ ಪದ್ಧತಿಯಲ್ಲಿ ಮಡಿಕೆಯಲ್ಲಿ ಸಂಗ್ರಹ ಮಾಡಿ, ಅದರ ಮೇಲೆ ರಾಗಿ, ಮಣ್ಣು ಮುಂತಾದವುಗಳಿಂದ ಮುಚ್ಚುತ್ತಾರೆ. ಬೇಡಿಕೆ ಬಂದಾಗ ಮಣ್ಣು, ರಾಗಿ ಬೇರ್ಪಡಿಸಿ ಅಗತ್ಯಕ್ಕೆ ತಕ್ಕಂತೆ ಪ್ಯಾಕ್ ಮಾಡುತ್ತಾರೆ. ಇತ್ತೀಚೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸಂಗ್ರಹ ಮಾಡಲು ಕಾಟನ್ ಬ್ಯಾಗ್ಗಳನ್ನು ಬಳಸುತ್ತಾರೆ.
ಇಂದು ಮಾರುಕಟ್ಟೆಯಲ್ಲಿ ವಿವಿಧ ಹೈಬ್ರಿಡ್ ಬೀಜಗಳು ಸಿಗುತ್ತವೆ. ಆದರೆ ಗುಣಮಟ್ಟ? ಅವುಗಳಿಗೆ ಖಾತ್ರಿ ಇಲ್ಲ. ಆದರೆ, ಪದ್ಮಮ್ಮನವರು ಬೀಜಗಳನ್ನು ಮೊದಲು ಎರೆಹುಳು ತೊಟ್ಟಿಯಲ್ಲಿ ಹುದುಗಿಸಿ, ಅವು ಮೊಳಕೆ ಬರುತ್ತವೆಯೇ ಎಂಬು ದನ್ನು ಗಮನಿಸಿ, ಉತ್ತಮವಾಗಿದ್ದರೆ ಮಾತ್ರ ಕೃಷಿಕರಿಗೆ ವಿತರಣೆ ಮಾಡುತ್ತಾರೆ. ಇದರಿಂದಲೇ ಬೀಜಗಳು ಉತ್ತಮ ಫಲಿತಾಂಶ ನೀಡುತ್ತಿದ್ದು, ಬೇಡಿಕೆಯೂ ಹೆಚ್ಚುತ್ತಿದೆ. ಕೃಷಿಕರು ಉದ್ದಿಮೆದಾರಾಗಿಯೂ ಆಲೋಚನೆ ಮಾಡಬೇಕಿದೆ. ಪದ್ಮಮ್ಮ ಇಂದು ಸಣ್ಣ ಕೃಷಿ ಉದ್ದಿಮೆ ಆಗಿದ್ದಾರೆ. ಕಾಯಿ ಮಾರಿದರೆ 10 ರೂ. ಬೀಜ ಮಾರಿದರೆ 100 ರೂ. ಸಾಮಾನ್ಯವಾಗಿ ರೈತರು ತಾವು ಬೆಳೆದ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ಪದ್ಮಮ್ಮ ಅವುಗಳನ್ನು ಬೀಜ ಮಾಡಿ ಮಾರಾಟ ಮಾಡುತ್ತಾರೆ.
ಪದ್ಮಮ್ಮ ಯಾವುದೇ ಕಾರಣಕ್ಕೂ ಯಾರಿಗೂ ಬೀಜಗಳನ್ನು ಉಚಿತವಾಗಿ ಕೊಡುವುದಿಲ್ಲ. ಉಚಿತವಾಗಿ ನೀಡಿದರೆ ಅದರ ಉಪ ಯೋಗವಾಗುವುದಿಲ್ಲ. ಆಸಕ್ತರು ದುಡ್ಡು ಕೊಟ್ಟು ಕೊಳ್ಳುತ್ತಾರೆ ಎಂಬುದು ಪದ್ಮಮ್ಮ ಕಂಡು ಕೊಂಡ ಅನುಭವದ ಸತ್ಯವಾಗಿದೆ. ಇಂದು ಬಹುರಾಷ್ಟ್ರೀಯ ಕಂಪೆನಿಗಳು ಬೀಜ, ಗೊಬ್ಬರ, ಔಷಧಿಗಳನ್ನು ಮಾರಿ, ಕೋಟಿ ಕೋಟಿ ರೂ. ಹಣ ಸಂಗ್ರಹ ಮಾಡುತ್ತಿದ್ದಾರೆ. ಅವುಗಳನ್ನು ಕೊಂಡು ರೈತರು ಸಾಲಗಾರರಾಗುತ್ತಿದ್ದಾರೆ.
ಎಲ್ಲ ಕೃಷಿಕರು ತಮಗೆ ಬೇಕಾದ ಬೀಜಗಳನ್ನು ತಾವೇ ಸಂಗ್ರಹ ಮಾಡಿದರೆ ರೈತರು ಅಭಿವೃದ್ಧಿ ಹೊಂದಯಾಗಬಹುದು.
ಆಸಕ್ತರು ಪದ್ಮಮ್ಮ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು.
ಪದ್ಮಮ್ಮ ಅವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ‘ಕೃಷಿ ರತ್ನ’ ಪ್ರಶಸ್ತಿ ಸ್ವೀಕರಿಸಿಸುವುದು ಹೆಮ್ಮೆಯ ಸಂಗತಿ.
(ಪದ್ಮಮ್ಮ ಮೊ. ಸಂಖ್ಯೆ: 99459-26108) (harshayogi@gmail.com)
ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್ನವರು: ಪ್ರತಿಪಕ್ಷ…
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…
ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…
ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…
ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…