ಅಂಕಣಗಳು

ಪ್ರೇಕ್ಷಕನ ಹಕ್ಕು, ಹಕ್ಕುಚ್ಯುತಿ, ಆಯ್ಕೆ ಚ್ಯುತಿ ಆರೋಪ ಕಟಕಟೆಯಲ್ಲಿ

ಬಾ.ನಾ.ಸುಬ್ರಹ್ಮಣ್ಯ 

ಗ್ರಾಹಕರ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕ ಇತ್ತೀಚೆಗೆ ನೀಡಿರುವ ತೀರ್ಪೊಂದು ಸಾರ್ವಜನಿಕರ, ವಿಶೇಷವಾಗಿ ಚಿತ್ರಾಸಕ್ತರ ಗಮನ ಸೆಳೆದಿದೆ. ಅದು ಐನಾಕ್ಸ್-ಪಿವಿಆರ್ ಬಳಗದ ಮಾಲೀಕತ್ವಕ್ಕೆ ನೀಡಿರುವ ಆದೇಶ. ಚಲನಚಿತ್ರ ಪ್ರದರ್ಶನ ವೀಕ್ಷಿಸಲು ಟಿಕೆಟ್ ಪಡೆಯುವ ವೇಳೆ ಅದರಲ್ಲಿ ಪ್ರದರ್ಶನ ವೇಳೆಯನ್ನು ನಮೂದಿಸಬೇಕು, ಸಿನಿಮಾ ಹೊರತಾಗಿ ಬೇರೆ ಜಾಹೀರಾತು, ಮತ್ತಿತರ ಚಿತ್ರಗಳನ್ನು ಪ್ರದರ್ಶಿಸಿ, ಅವರ ಸಮಯವನ್ನು ಹಾಳು ಮಾಡಕೂಡದು ಎನ್ನುವುದು, ಗ್ರಾಹಕರ ವೇದಿಕೆ ಮಾಡಿರುವ ತಾಕೀತು.

೨೦೨೩ರ ಪ್ರಕರಣವಿದು. ಬೆಂಗಳೂರಿನಲ್ಲಿ ಸಂಜೆ ೪.೦೫ಕ್ಕೆ ಹಿಂದಿ ಚಿತ್ರವೊಂದನ್ನು ವೀಕ್ಷಿಸಲು ಹೋದ ಅಭಿಷೇಕ್ ಮತ್ತವರ ಮನೆಯ ಇಬ್ಬರು ಸದಸ್ಯರು, ೪.೩೦ರ ವರೆಗೆ ಜಾಹೀರಾತುಗಳನ್ನು ನೋಡಿ ಕುಳಿತುಕೊಳ್ಳಬೇಕಾಯಿತು. ನಂತರ ಚಿತ್ರ ಆರಂಭವಾಯಿತು. ತಮ್ಮ ಸಮಯವನ್ನು ವೃಥಾ ವ್ಯಯಿಸಿದ ಚಿತ್ರಮಂದಿರ ಸಂಕೀರ್ಣದ ಮಾಲೀಕರು ಮತ್ತು ಮುಂಗಡ ಟಿಕೆಟ್ ನೀಡಿದ ಬುಕ್ ಮೈ ಶೋ ವಿರುದ್ಧ ಗ್ರಾಹಕ ವೇದಿಕೆಗೆ ದೂರು ನೀಡಿದ ಅಭಿಷೇಕ್ ಅವರಿಗೆ, ಮೇಲಿನ ಆದೇಶದ ಮೂಲಕ ನ್ಯಾಯ ನೀಡಿದೆ ಗ್ರಾಹಕ ವೇದಿಕೆ. ಮಾತ್ರವಲ್ಲ, ಅವರಿಗಾದ ಮಾನಸಿಕ ಹಿಂಸೆ, ದೂರು ನೀಡಲು ಭರಿಸಿದ ವೆಚ್ಚವನ್ನು ನೀಡುವುದರ ಜೊತೆಗೆ ದಂಡ ಶುಲ್ಕವನ್ನೂ ನೀಡುವಂತೆ ವೇದಿಕೆ ಆದೇಶಿಸಿದೆ.

ಇಂತಹದೊಂದು ದೂರು ಗ್ರಾಹಕ ಹಿತರಕ್ಷಣಾ ವೇದಿಕೆಗೆ ಸಲ್ಲಿಕೆಯಾದದ್ದು ಬಹುಶಃ ಇದೇ ಮೊದಲು. ಮಲ್ಟಿಪ್ಲೆಕ್ಸ್‌ಗಳು ದುಬಾರಿ ಪ್ರವೇಶ ಶುಲ್ಕವನ್ನು ವಿಧಿಸುವುದರ ಜೊತೆಗೆ, ಪ್ರೇಕ್ಷಕರ ಸಮಯವನ್ನು, ತಮ್ಮ ಆದಾಯ ಹೆಚ್ಚಿಸುವ ಜಾಹೀರಾತು ಪ್ರದರ್ಶಿಸುವ ಮೂಲಕವೂ ಕಳೆಯುತ್ತಾರೆ. ಯಾರದ್ದೇ ಆಗಲಿ ಸಮಯ ಅತ್ಯಮೂಲ್ಯ. ಅದನ್ನು ವೃಥಾ ವ್ಯಯಿಸುವ ಹಕ್ಕು ಯಾರಿಗೂ ಇಲ್ಲ. ಪ್ರತಿಯೊಬ್ಬರೂ ಆಯಾದಿನದ ಕಾರ್ಯಕ್ರಮಗಳನ್ನು, ಅದಕ್ಕೆ ಬೇಕಾದ ಸಮಯವನ್ನು ಹೊಂದಿಸಿರುತ್ತಾರೆ. ಚಿತ್ರಮಂದಿರದ ಮಂದಿ ನಿಗದಿತ ಪ್ರದರ್ಶನ ವೇಳೆಯನ್ನು ಟಿಕೆಟಿನಲ್ಲಿ ಮುದ್ರಿಸಿರಬೇಕು ಎಂದು ಅದು ಹೇಳಿದೆ. ಕಾನೂನು ಬಾಹಿರವಾಗಿ ತಾವು ವೇಳೆ ವ್ಯಯಿಸಿಲ್ಲ, ಸರ್ಕಾರದ ಆದೇಶದಂತೆ, ಚಿತ್ರ ಪ್ರದರ್ಶನದ ಮೊದಲು ೧೦ ನಿಮಿಷಗಳ ಕಾಲ, ಸಾರ್ವಜನಿಕ ಮಾಹಿತಿಗಳನ್ನು ನೀಡುವ ಚಿತ್ರಗಳ ಪ್ರದರ್ಶನ ಮಾಡಿದ್ದೇವೆ ಎಂದು ಮಲ್ಟಿಪ್ಲೆಕ್ಸ್‌ಗಳ ಪರ ವಾದ ಇತ್ತು. ಆದರೆ ಅಲ್ಲಿ ಪ್ರದರ್ಶನವಾದ ಜಾಹೀರಾತಿನ ಚಿತ್ರಿಕೆಗಳನ್ನು ಅಭಿಷೇಕ್ ಪ್ರತಿ ಮಾಡಿ ದೂರು ನೀಡುವ ವೇಳೆ ಕೊಟ್ಟಿದ್ದರು.

ಅದು ಪೈರೆಸಿ ಮಾಡಿದಂತೆ ಎನ್ನುವ ಪ್ರತಿವಾದವನ್ನು ವೇದಿಕೆ ಒಪ್ಪಲಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಹೋಗುವುದಾಗಿ ಐನಾಕ್ಸ್-ಪಿವಿಆರ್ ಬಳಗ ಹೇಳಿದೆ. ಮಲ್ಟಿಪ್ಲೆಕ್ಸ್‌ಗಳ ಆಗಮನದ ನಂತರ ಸಾಕಷ್ಟು ಬದಲಾವಣೆಗಳು ಭಾರತೀಯ ಚಿತ್ರರಂಗದಲ್ಲಿ ಆಗಿದೆ ಎನ್ನುವುದು ನಿಜ. ಆದರೆ, ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರಿಗೆ ಏನಾಯಿತು? ಬಹುತೇಕ ಸಂದರ್ಭಗಳಲ್ಲಿ, ಒಂದೆ ರಡು ಅಪವಾದಗಳನ್ನು ಹೊರತುಪಡಿಸಿದರೆ, ಕನ್ನಡ ಚಿತ್ರ ನಿರ್ಮಾಪಕ ಪಡೆದುಕೊಂಡದ್ದು ಕಡಿಮೆ; ಕಳೆದುಕೊಂಡದ್ದು ಹೆಚ್ಚು.

ಏಕಪರದೆಯ ಚಿತ್ರಮಂದಿರಗಳ ದಿನಗಳಲ್ಲಿ ಅಲ್ಲಿನ ಬಾಡಿಗೆ, ಪ್ರತಿಶತ ೨೦ರಿಂದ ೩೦ರಷ್ಟಿತ್ತು. ಅದಕ್ಕಿಂತ ಹೆಚ್ಚು ಎಂದೂ ಇರಲಿಲ್ಲ. ಈಗ ಹಾಗಿಲ್ಲ. ಮೊದಲ ವಾರ ಗಳಿಕೆಯ ೫೦% ಬಾಡಿಗೆಯಾದರೆ, ಮುಂದಿನ ವಾರ ಅದು ೫% ಏರುತ್ತದೆ. ೭೦% ವರೆಗೆ. ಯಾವುದಾದರೂ ಚಿತ್ರ ಹದಿನೈದು ವಾರ ಜನಭರಿತವಾಗಿ ಒಂದು ಪರದೆಯಲ್ಲಿ ಪ್ರದರ್ಶನ ಕಂಡರೆ, ನಿರ್ಮಾಪಕನಿಗೆ ಬರುವ ಪಾಲು ಕೇವಲ ಶೇ.೩೩! ಇನ್ನು ಪ್ರೇಕ್ಷಕನೋ! ಆತ ಒಂದು ಚಿತ್ರದ ಪ್ರದರ್ಶನದ ಅವಽಯಲ್ಲಿ ೩೦ ನಿಮಿಷಗಳಿಗಿಂತ ಹೆಚ್ಚು ವಾಣಿಜ್ಯ ಜಾಹೀರಾತುಗಳನ್ನು ನೋಡಬೇಕು. ಹಿಂದೆ ಫಿಲಂ ಡಿವಿಜನ್ ನಿರ್ಮಿಸುವ ವಾರ್ತಾ ಚಿತ್ರಗಳನ್ನು ಪ್ರದರ್ಶಿಸಬೇಕಿತ್ತು. ಆದರೆ ಈಗ ಅವುಗಳಿಲ್ಲ. ಒಟ್ಟಿನಲ್ಲಿ ಮೊನ್ನೆಯ ತೀರ್ಪು, ಪ್ರೇಕ್ಷಕರ ಸಮಯವನ್ನು ಹೇಗೆ ಬೇಕಾದರೂ ಬಳಸಬಹುದು ಎಂದುಕೊಂಡ ಮಂದಿಗೆ ಒಂದು ಛಡಿಯೇಟಂತೂ ಹೌದು.

ಯಾರದೇ ಸಮಯವಿರಲಿ, ಚಿತ್ರಮಂದಿರದಲ್ಲಿ ಎಂದಲ್ಲ, ಚಿತ್ರೀಕರಣ, ಪತ್ರಿಕಾಗೋಷ್ಠಿಗಳಲ್ಲಿ ಕೂಡಾ ವೃಥಾ ಕಾಲಹರಣ ಸಲ್ಲದು, ಅಲ್ಲವೇ? ಕೃತಿಚೌರ್ಯಕ್ಕೆ ಸಂಬಂಧಪಟ್ಟ ಪ್ರಕರಣವೊಂದರ ತೀರ್ಪು ಡಿಸೆಂಬರ್ ತಿಂಗಳಲ್ಲಿ ಬಂದಿದೆ. ಅದು ರಿಲಯನ್ಸ್ ಅವರ ೯೨.೭ ಎಫ್‌ಎಂ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಕುರಿತು. ಗಾಯಕ ಪಿ.ಬಿ.ಶ್ರೀನಿವಾಸ್ ಅವರ ಕುರಿತ ಕಾರ್ಯಕ್ರಮವೊಂದಕ್ಕೆ ಬಳಸಿದ ಸಾಹಿತ್ಯ, ಅವರ ಕುರಿತಂತೆ ತಾವು ಪ್ರಕಟಿಸಿದ ಕೃತಿಯದು, ತಮ್ಮ ಕೃತಿಚೌರ್ಯ ಆಗಿದೆ ಎಂದು ಕೃತಿಕಾರ, ಗಾಯಕ ಶ್ರೀನಾಥ್ ನ್ಯಾಯಾಲಯದ ಮೆಟ್ಟಲೇರಿದ್ದರು. ರಿಲಯನ್ಸ್ ಸಂಸ್ಥೆ, ಬೆಂಗಳೂರಿನಲ್ಲಿ ಅದರ ವಾಹಿನಿ ೯೨.೭ನ ಮುಖ್ಯಸ್ಥರು ಮತ್ತು ಅದಕ್ಕೆ ಸಾಹಿತ್ಯ ನೀಡಿದ್ದ ಶ್ರೀಧರಮೂರ್ತಿ ಈ ಮೂವರನ್ನು ಪ್ರತಿವಾದಿಗಳಾಗಿಸಿ, ಶ್ರೀನಾಥ ದೂರು ನೀಡಿ, ತಮಗಾದ ನಷ್ಟಕ್ಕೆ ಐದು ಲಕ್ಷ ರೂ. ಪರಿಹಾರ ಕೋರಿದ್ದರು.

ನ್ಯಾಯಾಲಯ ವಾದವಿವಾದಗಳನ್ನು ಆಲಿಸಿ, ರಿಲಯನ್ಸ್‌ನ ಪ್ರಸಾರ ಕಾಲ ಸಂಸ್ಥೆ ಮತ್ತಿತರರು, ಈ ಮೊತ್ತವನ್ನು ಮತ್ತು ದೂರುದಾರರಿಗೆ ಆದ ವೆಚ್ಚವನ್ನು ನೀಡುವಂತೆ ಆದೇಶಿಸಿದೆ. ಇಂತಹದೊಂದು ಪ್ರಸಂಗ, ಸಿನಿಮಾ ಸಾಹಿತ್ಯ ಕ್ಷೇತ್ರದಲ್ಲಿ ಇದೇ ಮೊದಲು ಎನ್ನಲಾಗಿದೆ. ಇದರ ವಿರುದ್ಧ ಸಂಸ್ಥೆ ಮೇಲ್ಮನವಿ ಸಲ್ಲಿಸಿದೆ.

ಇವೆರಡೂ ಪ್ರಕರಣಗಳು ಗ್ರಾಹಕ ಜಾಗೃತಿ ಮತ್ತು ಕೃತಿಸ್ವಾಮ್ಯದ ಮೇಲೆ ಬೆಳಕು ಚೆಲ್ಲಿದರೆ, ಇದು ಡಿಜಿಟಲ್ ಲೋಕದ ಹೊಸ ಸಮಸ್ಯೆಯೊಂದಕ್ಕೆ ಕನ್ನಡಿ ಹಿಡಿಯುತ್ತದೆ. ೧೬ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಉತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದು ಸ್ಪರ್ಧೆ. ಅದರಲ್ಲೂ ಕನ್ನಡ ವಿಭಾಗದಲ್ಲಿ ಸ್ಪರ್ಧಿಸಲು ಕೊನೆಯ ಕ್ಷಣದಲ್ಲಿ ತಯಾರಾಗುವ ಚಿತ್ರಗಳ ಮೆರವಣಿಗೆ ಇರುತ್ತದೆ. ಆದರೆ ಅವುಗಳಲ್ಲಿ ಆಯ್ಕೆ ಆಗುವುದು ೧೨. ಈ ಬಾರಿ ೧೪ ಚಿತ್ರಗಳಿವೆ. ತಮ್ಮ ಚಿತ್ರವನ್ನು ನೋಡಿಲ್ಲ, ನೋಡದೆಯೇ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ; ವಶೀಲಿಭಾಜಿ ನಡೆದಿದೆ, ಇತ್ಯಾದಿ ಆರೋಪಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಈ ನಡುವೆ ಕೆಲವು ನಿರ್ಮಾಣ ಸಂಸ್ಥೆಗಳು, ವಿಮಿಯೋ ತಾಣದ ಮೂಲಕ ಚಿತ್ರಗಳನ್ನು ಕಳುಹಿಸಿ, ಅರ್ಜಿ ಸಲ್ಲಿಸಿದವರು, ತಮ್ಮ ಚಿತ್ರಗಳನ್ನು ನೋಡಿದ ಪುರಾವೆ ಇಲ್ಲ ಎಂದು ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಅವರುಗಳ ಪ್ರಕಾರ, ವಿಡಿಯೋ ಕೊಂಡಿ ಮೂಲಕ ಕಳುಹಿಸಿದ ಚಿತ್ರಗಳನ್ನು ವೀಕ್ಷಿಸಿದಾಗ, ಎಷ್ಟು ಹೊತ್ತು, ಎಷ್ಟು ಮಂದಿ ವೀಕ್ಷಿಸಿದರು ಎನ್ನುವ ದಾಖಲೆ ಸಿಗುತ್ತದೆ. ಆದರೆ ಕಳುಹಿಸಿದ ಮಂದಿಗೆ ತಿಳಿಯದೆಯೂ ಅದನ್ನು ನೋಡಲು ಸಾಧ್ಯ ಎನ್ನುತ್ತಿದ್ದಾರೆ ಡಿಜಿಟಲ್ ತಜ್ಞರು.

ಚಿತ್ರೋತ್ಸವದ ಸಂಘಟನೆಯ ಮಂದಿ, ವಿಶೇಷವಾಗಿ ಈ ಚಿತ್ರಗಳ ಆಯ್ಕೆಯ ಮೇಲುಸ್ತುವಾರಿ ನೋಡುವವರ ಪ್ರಕಾರ, ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದ ಅಷ್ಟೂ ಚಿತ್ರಗಳನ್ನು ಆಯ್ಕೆ ಸಮಿತಿ ಸದಸ್ಯರು ನೋಡಿ ತಮ್ಮ ಶಿಫಾರಸನ್ನು ಕಳುಹಿಸಿದ್ದಾರೆ. ಅದರೆ ಈ ಸಮಜಾಯಿಷಿಯಿಂದ ಕೆಲವು ನಿರ್ಮಾಪಕರು ತೃಪ್ತರಾಗಿಲ್ಲ. ಅವರು ನೇರವಾಗಿ ಉಚ್ಚ ನ್ಯಾಯಾಲಯದ ಮೆಟ್ಟಲೇರಿದ್ದಾರೆ. ತಮ್ಮ ಚಿತ್ರಗಳಿಗೆ ಅನ್ಯಾಯವಾಗಿದೆ, ಸ್ಪರ್ಧೆಗೆ ಚಿತ್ರಗಳ ಮರುವೀಕ್ಷಣೆ ನಡೆದು ಆಯ್ಕೆ ಮಾಡಬೇಕು, ಅಲ್ಲಿಯವರೆಗೆ ಚಿತ್ರೋತ್ಸವವನ್ನು ಮುಂದೂಡಬೇಕು ಎಂದು ಕೋರಿದ್ದರು.

ಚಿತ್ರೋತ್ಸವವನ್ನು ಮುಂದೂಡಲಾಗದು, ಎಂದಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ನಾಳಿದ್ದು ಸೋಮವಾರ, ೨೪ಕ್ಕೆ ಮುಂದೂಡಿದೆ. ವಿಚಾರಣೆ ಮತ್ತು ಅದರ ತೀರ್ಪು ಏನೇ ಇರಲಿ, ಕನ್ನಡ ಚಿತ್ರರಂಗದಲ್ಲಿ ನ್ಯಾಯಾಲಯದ ಮೆಟ್ಟಲೇರುವ ಪ್ರಸಂಗ ಸರ್ವೇಸಾಮಾನ್ಯ. ೨೦೧೮ರ ರಾಜ್ಯ ಪ್ರಶಸ್ತಿಗಳು, ಸಹಾಯಧನ ಆಯ್ಕೆ ಎಲ್ಲವೂ ಕಟಕಟೆ ಏರಿತ್ತು. ಅವುಗಳನ್ನು ಹಿಂತೆಗೆದುಕೊಂಡದ್ದೋ, ತೆಗೆದು ಹಾಕಿದ್ದೋ ನಂತರ ಆಯಿತು. ಯಾರೇ ಆಗಲಿ, ಅನ್ಯಾಯ ಆದಾಗ ನ್ಯಾಯ ಕೋರಲು ಹೋಗುವುದು ತಪ್ಪೇನಲ್ಲ. ಆದರೆ ಅನ್ಯಾಯ ಆಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಂಡು ಮುಂದೆ ಹೆಜ್ಜೆ ಇಡುವುದು ಹೆಚ್ಚು ಸರಿ. ರಾಜ್ಯ ಸರ್ಕಾರ ನಡೆಸುವ, ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಚಿತ್ರೋತ್ಸವದಲ್ಲಿ ಗುಣಮಟ್ಟದ ಕನ್ನಡ ಚಿತ್ರಗಳ ಆಯ್ಕೆ ಸಾಮಾನ್ಯವಾಗಿ ನಡೆಯುತ್ತದೆ. ಚಿತ್ರ ನೋಡದೆ ಅಯ್ಕೆ ಮಾಡಿದ್ದಾರೆ ಎನ್ನುವ ಆರೋಪ ಎಷ್ಟು ಸರಿ ಎನ್ನುವುದು ಸೋಮವಾರ ಇತ್ಯರ್ಥ ಆಗಬಹುದು.

ಇವೆರಡು ಪ್ರಕರಣಗಳು ಗ್ರಾಹಕ ಜಾಗೃತಿ ಮತ್ತು ಕೃತಿಸ್ವಾಮ್ಯದ ಮೇಲೆ ಬೆಳಕು ಚೆಲ್ಲಿದರೆ, ಇದು ಡಿಜಿಟಲ್ ಲೋಕದ ಹೊಸ ಸಮಸ್ಯೆಯೊಂದಕ್ಕೆ ಕನ್ನಡಿ ಹಿಡಿಯುತ್ತದೆ. ೧೬ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಉತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದು ಸ್ಪರ್ಧೆ. ಅದರಲ್ಲೂ ಕನ್ನಡ ವಿಭಾಗದಲ್ಲಿ ಸ್ಪಽಸಲು ಕೊನೆಯ ಕ್ಷಣದಲ್ಲಿ ತಯಾರಾಗುವ ಚಿತ್ರಗಳ ಮೆರವಣಿಗೆ ಇರುತ್ತದೆ. ಆದರೆ ಅವುಗಳಲ್ಲಿ ಆಯ್ಕೆಯಾಗುವುದು ೧೨. ಈ ಬಾರಿ ೧೪ ಚಿತ್ರಗಳಿವೆ. ತಮ್ಮ ಚಿತ್ರವನ್ನು ನೋಡಿಲ್ಲ, ನೋಡದೆಯೇ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ; ವಶೀಲಿಭಾಜಿ ನಡೆದಿದೆ, ಇತ್ಯಾದಿ ಆರೋಪಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಆಂದೋಲನ ಡೆಸ್ಕ್

Recent Posts

ವರ್ಷಾಂತ್ಯ: ಗರಿಗೆದರದ ಮೈಸೂರು ಪ್ರವಾಸೋದ್ಯಮ

ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…

1 min ago

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

9 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

10 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

11 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

11 hours ago