ಅಂಕಣಗಳು

ಕಣ್ಣು ಕಾಣದವರಿಗೆ ಬೆಟ್ಟ ಕಾಣಿಸುವ ಪುಟ್ಟ ಕುಟುಂಬ

• ಸಿರಿ ಮೈಸೂರು

ಶೃತಿ ಮೈಸೂರಿನಲ್ಲಿ ನೆಲೆಸಿರುವ ಒಂದು ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಬೆಂಗಳೂರಿನ ಐಟಿ ಕೆಲಸ ತೊರೆದು ಪತಿ ಹರೀಶ್ ಹಾಗೂ ಪುತ್ರಿ ವಿನ್ಮಯಿ ಜೊತೆ ಮೈಸೂರಿನಲ್ಲೇ ನೆಲೆಸಿರುವ ಇವರು ಕುಟುಂಬ ಸಮೇತ ಅದೊಂದು ಚೇತೋಹಾರಿ ಕೆಲಸ ಮಾಡುತ್ತಾರೆ. ಅವರನ್ನ ಕೇಳಿದರೆ ಅದರಲ್ಲೇನಿದೆ ಬಿಡಿ..?’ ಎಂದು ನಗುವ ಇವರು ಅದೆಷ್ಟೋ ಅಂಧರಿಗೆ ಕಣ್ಣಾಗಿದ್ದಾರೆ. ಸದಾ ಹೊಸದನ್ನೇನಾದರೂ ಕಲಿಯುವ ತುಡಿತ ಹೊಂದಿರುವ ಇವರು ಕೆಲ ವರ್ಷಗಳ ಹಿಂದೆ ವ್ಯಾಯಾಮ ಶಾಲೆಯೊಂದಕ್ಕೆ ಸೇರಿಕೊಂಡರು. ಅಲ್ಲಿಯವರು ವ್ಯಾಯಾಮ ತರಗತಿಗಳ ಜೊತೆಗೆ ವಿಶೇಷ ಕೆಲಸವೊಂದನ್ನು ಮಾಡುತ್ತಾರೆ. ವಿವಿಧ ತರಬೇತಿಗಳಿಗೆಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಆಗಾಗ ಸಾಕಷ್ಟು ಮಂದಿ ಬರುತ್ತಿರುತ್ತಾರೆ. ಹಾಗೆ ಬರುವವರನ್ನು ಚಾಮುಂಡಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಕರೆದುಕೊಂಡು ಹೋಗು ವುದು ಇವರ ಕೆಲಸ. ವಿಶೇಷವೆಂದರೆ ಅವರಲ್ಲಿ ಎಷ್ಟೋ ಬಾರಿ ಅಂಧರ ಗುಂಪು ಇರುತ್ತದೆ. ಇದಕ್ಕೆ ಸ್ವಯಂಸೇವಕರಾಗಿ ಹೋಗುವುದು ಶೃತಿ ಹಾಗೂ ಕುಟುಂಬದ ಹೆಗ್ಗಳಿಕೆ.

‘ನಮಗೆಲ್ಲಾ ಆದರೆ ನಾವು ನೋಡಿರುವ ಒಂದು ಪ್ರಪಂಚ ಇದೆ. ಆದರೆ ಹುಟ್ಟಿನಿಂದಲೂ ಅಂಧರಾಗಿರುವ ಅವರಿಗೆ ಅವರ ಕಲ್ಪನೆಯೇ ಪ್ರಪಂಚ. ಎಲ್ಲಕ್ಕೂ ಮಿಗಿಲಾಗಿ ಅವರ ಕೈಹಿಡಿದು ನಾವು ಕರೆದೊಯ್ಯುವಾಗ ಸಂಪೂರ್ಣವಾಗಿ ನಮ್ಮನ್ನು ನಂಬಿಬಿಡುತ್ತಾರೆ. ಹೇಳಿದ್ದಕ್ಕೆ ಮರುಮಾತಾಡದೇ ಹಾಗೇ ಹೆಜ್ಜೆ ಇಡುತ್ತಾರೆ ಎನ್ನುತ್ತಾ ಶೃತಿ ಅವರೊಂದಿಗಿನ ಟ್ರೆಕ್ಕಿಂಗ್ ಅನುಭವಗಳನ್ನು ಬಿಚ್ಚಿಡುತ್ತಾರೆ. ‘ನಾವು ಏನನ್ನಾದರೂ ಅರ್ಥಮಾಡಿಕೊಳ್ಳಬೇಕಾದರೆ ಕೇವಲ ನೋಡಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಅವರು ಎಲ್ಲರನ್ನೂ ಅನುಭವಿಸುತ್ತಾರೆ. ಕೆಲವೊಮ್ಮೆ ನಮ್ಮನ್ನೇ ಅವರು ನಡೆಸುತ್ತಿದ್ದಾರೇನೋ ಅನಿಸಿಬಿಡುತ್ತದೆ. ಅವರ ಅಂತರಾಳದ ಕಣ್ಣುಗಳು ನಮ್ಮ ಭೌತಿಕ ಕಣ್ಣುಗಳಿಗಿಂತ ಅದೆಷ್ಟೋ ಶಕ್ತಿಶಾಲಿ. ಅಲ್ಲೆಲ್ಲೋ ಆಗುವ ಎಲೆಗಳ ಸದ್ದು, ಗಾಳಿ ಬೀಸುವ ಸಣ್ಣ ಸದ್ದು… ಹೀಗೆ ಎಲ್ಲವೂ ಸೂಕ್ಷ್ಮವಾಗಿ ತಿಳಿಯುತ್ತದೆ ಎಂಬುದು ಶೃತಿಯವರ ಅನುಭವದ ಮಾತು. ಒಮ್ಮೊಮ್ಮೆ ಕೆಲವರು ತಮ್ಮ ಕೈಲಾಗದು ಎಂದು ನಿರ್ಧರಿಸಿ ಬಸ್‌ನಿಂದ ಇಳಿಯದೇ ಉಳಿದ ಘಟನೆಗಳೂ ಇವೆಯಂತೆ. ಹಾಗಾದಾಗ ಅವರನ್ನು ಪ್ರೇರೇಪಿಸಿ, ಟ್ರೆಕ್ಕಿಂಗ್ ಮಾಡುವಂತೆ ಹುರಿದುಂಬಿಸುವುದು ಯಾರಿರಬಹುದು ಊಹಿಸಿ? ಅದು ಅವರೊಂದಿಗೇ ಇರುವ ಸಹೋದ್ಯೋಗಿಗಳು. ಹೌದು… ಅವರೆಲ್ಲರೂ ತರಬೇತಿಗೆಂದು ಅಷ್ಟು ದಿನಗಳ ಕಾಲ ಜೊತೆಯಿರುವಾಗ ಪರಸ್ಪರರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ತಿಳಿದಿರುತ್ತಾರೆ. ಅದರ ಆಧಾರದ ಮೇಲೆಯೇ ಯಾರಿಗಾದರೂ ಯಾವಾಗಲಾದರೂ ನೈತಿಕ ಸಹಾಯ ಬೇಕಾದಲ್ಲಿ ಭರಪೂರವಾಗಿ ನೀಡುತ್ತಾರೆ. ಆಗಲ್ಲ ಅನ್ನೋದೆಲ್ಲಾ ಇಲ್ಲ. ಟ್ರೆಕ್ಕಿಂಗ್ ಮುಗಿಸೋಣ ಬನ್ನಿ?’ ಎನ್ನುತ್ತಾ ಬರಲಾಗದು ಎನ್ನುವವರನ್ನೂ ಹುರಿದುಂಬಿಸಿ ಕರೆದುಕೊಂಡು ಬರುವ ಛಲ ಇರುವುದು ಅವರಲ್ಲಿ ಮಾತ್ರ. ಇಷ್ಟೇ ಅಲ್ಲದೆ ತಮ್ಮ ಗುಂಪಿನಲ್ಲಿ ಯಾರು ಚೆನ್ನಾಗಿ ಹಾಡುತ್ತಾರೆ, ಯಾರ ವಿಶೇಷ ಪ್ರತಿಭೆ ಏನು ಎಂಬುದೆಲ್ಲಾ ಅವರಿಗೆ ಗೊತ್ತು ಎಂದು ವಿವರಿಸುತ್ತಾರೆ ಶೃತಿ.

ಕೆಲವರು ಶೃತಿ ಪುತ್ರಿ ವಿನ್ಮಯಿಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಅದ್ಭುತ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸಿದ್ದಿದೆ. ‘ಕೆಲವೊಮ್ಮೆ ನಮ್ಮ ಉಸಿರಾಟದಲ್ಲಿ ಏರುಪೇರಾದಾಗ, ಕೈ ಬೆವರುವಾಗ, ನಮಗೆ ಸುಸ್ತಾದಾಗ ಕೂಡಲೆ ಪತ್ತೆಹಚ್ಚುವ ಅವರು ಆರಾಮಾಗಿರಿ ಎಂದು ಹೇಳುತ್ತಾರೆ. ನಿಜವಾಗಿಯೂ ನಮಗಿಂತ ಸೂಕ್ಷ್ಮ ಅಂತರಂಗ, ಭಾವನಾಶಕ್ತಿ ಅವರಿಗೆ ಇರುತ್ತದೆ. ನಮ್ಮ ಕಣ್ಣಿನಲ್ಲಿ ಅವರಿಗೆ ಜಗತ್ತು ಕಾಣುತ್ತದೆ ಎಂಬುದು ಅದೆಷ್ಟು ಹೆಮ್ಮೆಯ ವಿಷಯವಲ್ಲವೇ? ಅದನ್ನು ನೆನೆದಾಗಲೆಲ್ಲಾ ಖುಷಿಯಿಂದ ನನ್ನ ಕಣ್ಣಾಲಿಗಳು ತುಂಬುತ್ತವೆ’ ಎಂದು ಭಾವುಕರಾಗುತ್ತಾರೆ ಶೃತಿ.

ಕಣ್ಣು ಕಾಣುವವರಿಗೆ ನೋಡುವುದೊಂದು ಜಗತ್ತಾದರೆ, ಅಂಧರಿಗೆ ತಮ್ಮ ಕಲ್ಪನೆಯಲ್ಲಿ ಅದೆಷ್ಟೋ ಜಗತ್ತುಗಳಿವೆ. ನಾವು ಕಾಣುವುದನ್ನು ಅವರಿಗೆ ವಿವರಿಸುವ ಮೂಲಕ ಅವರ ಕಲ್ಪನೆಯ ಜಗತ್ತಿಗೆ ಇನ್ನೊಂದಿಷ್ಟು ಸಿಂಗಾರ ಮಾಡಿದರೆ ಅದೆಷ್ಟು ಖುಷಿಯ ಸಂಗತಿಯಲ್ಲವೇ? ಮಗುವಿನ ನಗುವನ್ನು ಮೊಗದಲ್ಲಿರಿಸಿಕೊಂಡೇ ಕಡಿದಾದ ಬೆಟ್ಟಗಳನ್ನು ಸರಾಗವಾಗಿ ಹತ್ತಿಬಿಡುವ ಅವರ ವ್ಯಕ್ತಿತ್ವಕ್ಕೆ ಕೈಹಿಡಿದು ಸಹಾಯ ಮಾಡುವುದೆಂದರೆ ಅದು ಅಳಿಲು ಸೇವೆಯಷ್ಟೇ. ನಿಜವಾಗಿ ಹೇಳಬೇಕೆಂದರೆ ಅವರ ಬಳಿ ನಾವು ಕಲಿಯುವುದು ಬಹಳಷ್ಟಿದೆ. ಬದುಕನ್ನು ಅವರು ನೋಡುವ ರೀತಿ, ಅವರ ಸೂಕ್ಷ್ಮ ಸಂವೇದನೆ, ಮನದಾಳದಿಂದ ನಗುವ ಮುಗ್ಧತೆ, ಅವರು ತೋರುವ ಮಮತೆ, ಅವರು ತಮ್ಮ ಕೈಹಿಡಿದಿರುವವರ ಮೇಲಿಡುವ ನಂಬಿಕೆ, ಬಂದದ್ದನ್ನೆಲ್ಲಾ ಸರಾಗವಾಗಿ ಸ್ವೀಕರಿಸುವ ಪರಿ… ಅಬ್ಬಬ್ಬಾ! ಅದೆಷ್ಟೆಲ್ಲಾ ಇದೆಯಲ್ಲವೇ ನಾವು ಅವರ ಬಳಿ ಕಲಿಯುವುದು! ಅವರಿಗೆ ನಮ್ಮ ನಕಾರಾತ್ಮಕತೆಯ ಸೋಂಕೇ ಇಲ್ಲ. ಸಕಾರಾತ್ಮಕತೆಯನ್ನೇ ಬದುಕಾಗಿಸಿಕೊಂಡಿರುವ ಅವರಿಗೆ ಖುಷಿಯನ್ನು ಹಂಚುವುದಷ್ಟೇ ಗೊತ್ತು ಎಂಬುದು ಶೃತಿಯವರ ಅಭಿಪ್ರಾಯ ಮಾತ್ರವಲ್ಲ… ಅವರ ಮಾತು ಕೇಳಿದ ಮೇಲೆ ನಮಗೂ ಅನಿಸುವ ಸಂಗತಿ.
sirimysuru18@gmail.com

andolanait

Recent Posts

ಸಿಎಂಗೆ ವಿದ್ಯಾರ್ಥಿಗಳ ಪತ್ರ

ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…

2 hours ago

ದಿವ್ಯ ಎಂಬ ಅಂದಿನ ಕಾಲದ ಪಣ ಪರೀಕ್ಷೆ

ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…

2 hours ago

ಎಮ್ಮೆ ನಿನಗೆ ಸಾಟಿ ಇಲ್ಲ…

ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…

2 hours ago

ಭಾನುವಾರದ ಪುರವಣಿಗಳಲ್ಲಿ ಸಾಹಿತ್ಯ ಯಾಕೆ ಮಾಯ?

ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…

3 hours ago

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

14 hours ago