ಅಂಕಣಗಳು

ಕುಪ್ಪಳ್ಳಿಯ ‘ಪುಟ್ಟ’ ಸುಪ್ರೀತ್

• ಕೀರ್ತಿ ಎಸ್.ಬೈಂದೂರು

‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಪುಲಿಕೇಶಿ ಪಾತ್ರದಿಂದ ಜನಪ್ರೀತಿಯನ್ನು ಗಳಿಸಿದ ‘ಕುಪ್ಪಳ್ಳಿಯ ಪುಟ್ಟ’ ಸುಪ್ರೀತ್. ರಂಗಭೂಮಿಗೆ ಭರವಸೆಯ ಕಲಾವಿದ. ಸಾಹಸಸಿಂಹ ಡಾ.ವಿಷ್ಣುವರ್ಧನ್‌ರಂತೆ ತಲೆಗೆ ಪೇಟ, ಕೈಗೆ ಪಟ್ಟಿ ಕಟ್ಟಿ, ತನ್ನ ತೊದಲು ಮಾತಿನಿಂದ ಮನೆ ಜನರಿಗೆ ಕಲಾವಿದನಾಗುವ ಎಲ್ಲ ಸುಳಿವುಗಳನ್ನು ಕೊಟ್ಟಿದ್ದ ತನ್ನ ಆರನೇ ವಯಸ್ಸಿನಲ್ಲಿ! ರಂಗದ ಮೇಲೆ ಅಭಿನಯಿಸುವಾಗ ನೋಡುಗರ ನಾಡಿಮಿಡಿತ ತಿಳಿದು, ರಂಗದಲ್ಲೇ ತನ್ನ ಸಂಭಾಷಣೆಯನ್ನು ಹದವರಿತು ಬದಲಿಸಬಲ್ಲ ಚತುರ.

ನಟನ ಸಂಸ್ಥೆ ಆಯೋಜಿಸಿದ್ದ ರಜಾಮಜಾ ಶಿಬಿರದಿಂದ ರಂಗಭೂಮಿ ಪಯಣವನ್ನು ಆರಂಭಿಸಿ, ಮುಂದೆ ಆ ಸಂಸ್ಥೆಯೊಂದಿಗೆ ಚೋರ ಚರಣದಾಸ, ರತ್ನಪಕ್ಷಿ, ಧಾಂ ಧೂಂ ಸುಂಟರಗಾಳಿ, ಸೋಲಿಗರ ಬಾಲೆ, ಅಲಿಬಾಬ ಮತ್ತು ನಲವತ್ತು ಕಳ್ಳರು ಹೀಗೆ ಅನೇಕ ನಾಟಕಗಳಲ್ಲೂ ಸುಪ್ರೀತ್‌ ಅಭಿನಯಿಸಿದ್ದಾರೆ. ಮಂಡ್ಯ ರಮೇಶ್, ವೈ.ಎಂ. ಪುಟ್ಟಣ್ಣಯ್ಯ, ಬಿ.ಎಂ.ರಾಮಚಂದ್ರ, ಆರ್. ಪರಮಶಿವನ್, ಸಿ.ಲಕ್ಷ್ಮಣ್, ಶ್ರೀಪಾದ್ ಭಟ್, ಪ್ರಸನ್ನ, ಲಕ್ಷ್ಮೀಗುಪ್ತಾ ಮುಂತಾದ ನಿರ್ದೇಶಕರುಗಳೊಂದಿಗೆ ಅಭಿನಯಿಸಿದ ಅನುಭವವಿದೆ. ರಾಜು ಅನಂತಸ್ವಾಮಿ ಅವರಿಂದ ರಂಗ ಸಂಗೀತವನ್ನೂ ಕಲಿತ ಅನುಭವವಿದೆ.

ದೇಶದ ಪ್ರತಿಷ್ಠಿತ ದೆಹಲಿಯ ನಾಟಕ ಶಾಲೆಯಲ್ಲಿ ಅಭಿ ನಯಿಸಬೇಕು ಎಂದು ಕನಸು ಕಟ್ಟುವ ಅನೇಕ ಕಲಾವಿದರ ನಡುವೆ, ಆರನೇ ತರಗತಿಯಲ್ಲಿಯೆ ಎನ್‌ಎಸ್‌ಡಿಯ ‘ಜಶೇ ಬಚಪನ್’ ಶಿಬಿರಕ್ಕೆ ತೆರಳಿ ಸುತ್ತಾಡಿದ್ದೆಲ್ಲವೂ, ಈಗ ಚಂದದ ನೆನಪೆನ್ನುತ್ತಾರೆ. ಮಹಾಜನ ಕಾಲೇಜಿನಲ್ಲಿ ಪದವಿ ಮುಗಿಸಿ, ಪ್ರಸ್ತುತ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ.ಓದುತ್ತಿದ್ದಾರೆ. ಎಳೆವೆಯಲ್ಲಿಯೇ ಅತ್ಯಂತ ತುಂಟನಾಗಿದ್ದ ಸುಪ್ರೀತ್‌ ನನ್ನು ಸಂಭಾಳಿಸು ವುದೇ ಕಷ್ಟವಾಗಿತ್ತು. ಏಳನೇ ತರಗತಿಯ ಪರೀಕ್ಷೆಯ ಫಲಿತಾಂಶದ ಸಮಯದಲ್ಲಿ ಇವನು ಇಲ್ಲೇ ಓದಬೇಕು ಅಂತಿದ್ದರೆ, ಏಳನೇ ತರಗತಿ ಫೇಲ್ ಮಾಡ್ತೀವಿ. ಬೇರೆ ಶಾಲೆಗೆ ಸೇರಿಸ್ತೇವೆ ಅಂತಿದ್ರೆ ಪಾಸ್ ಮಾಡ್ತೀವಿ’ ಎಂದು ಶಾಲೆಯವರು ಹೇಳಿದ್ದಕ್ಕೆ, ಹೊಸದಾಗಿ ಆರಂಭಿಸಿದ್ದ ತಂದೆಯ ಸ್ನೇಹಿತರೊಬ್ಬರ ಶಾಲೆಗೆ ಸೇರಿಸಿದರು. ತನ್ನ ಅಂಕಪಟ್ಟಿಯನ್ನೂ ಗಮನಿಸದೆ, ಫೇಲಾದ ವಿದ್ಯಾರ್ಥಿಯನ್ನು ಶಾಲೆಗೆ ದಾಖಲು ಮಾಡಿಕೊಂಡ ಮುಖ್ಯ ಶಿಕ್ಷಕರಿಗೆ ಹತ್ತನೇ ತರಗತಿಯ ಬಿಳ್ಕೊಡುಗೆ ಸಮಾರಂಭದಲ್ಲಿ ಧನ್ಯವಾದ ಹೇಳಿದಾಗಲೇ ಅವರಿಗೂ ತಿಳಿದದ್ದು ಎನ್ನುತ್ತಾ, ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ಎಲ್ಲದ್ದಕ್ಕಿಂತ ಅವರಿಗೆ ಪದವಿ ಕಾಲೇಜಿನಲ್ಲಿ ಸಿಕ್ಕಿದ ಪ್ರೋತ್ಸಾಹ ಗಮನಾರ್ಹ. ಹೇಗೆಂದು ಕುತೂಹಲದಲ್ಲಿ ಕೇಳಿದರೆ, ನಾವು ಪೋಲಿಯಾಗಿ ಸುತ್ತಾಡುತ್ತಿಲ್ಲವೆಂದು, ಶಿಕ್ಷಕರನ್ನು ನಾವು ಮೊದಲು ನಂಬಿಸಬೇಕು. ಈ ನಂಬಿಕೆಯ ಜೊತೆಗೆ ಪರಿಶ್ರಮ ನಿಜವಾಗಿದ್ದರೆ ಸಾಧನೆಗೆ ಶಿಕ್ಷಕರೂ ಬೆಂಬಲಿಸುತ್ತಾರೆ ಎನ್ನುವ ಆತ್ಮವಿಶ್ವಾಸದ ನುಡಿಗಳೇ ಅವರ ಉತ್ತರ.

ಸುಪ್ರೀತ್ ನಟನೆ, ಸಂಗೀತ, ವಾದ್ಯಗಳನ್ನು ನುಡಿಸುವ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಾಯಿ ಮನೆಯಲ್ಲೇ ನಡೆಸುವ ಸಂಗೀತ ತರಗತಿಗಳಿಗೆ ಒಂದು ದಿನವೂ ಹೋಗದಿದ್ದರೂ, ಸಂಗೀತವನ್ನು ಕೇಳುವ ಆಸಕ್ತಿಯನ್ನು
ಬೆಳೆಸಿಕೊಂಡವರು. ಈ ಆಸಕ್ತಿಯೇ ರಂಗಭೂಮಿಗೆ ಪೂರಕವಾಗಿ ಒದಗಿಬಂತು. ಮುಂದೆ, ಪಟಾಕಿಯ ಬದಲು, ಅದೇ ದುಡ್ಡಿಗೆ ಸಿಗುವ ವಾದ್ಯಗಳನ್ನು ಖರೀದಿಸಲು ಶುರುವಿಟ್ಟರು.

ಫಲಿತವೇನು ಎಂದರೆ, ಅವರ ಮನೆಯ ತುಂಬ ವಾದ್ಯಗಳಿರುವುದು.

ಓಡಾಟ, ಹಣಕಾಸಿನ ಕಿರಿಕಿರಿ ಇತ್ಯಾದಿ ಕಾರಣಗಳಿಗೆ ರಂಗಭೂಮಿ ತೊರೆ ಯುವ ಬಹಳಷ್ಟು ಮಂದಿಯಲ್ಲಿ ಸುಪ್ರೀತ್ ಬದುಕು ಬೇರೆಯೆ. ಏಕೆಂದರೆ, ಮನೆಯವರ ಸಹಕಾರ ಸಂಪೂರ್ಣವಾಗಿ ಸಿಕ್ಕಿದ್ದಕ್ಕಾಗಿ ರಂಗಭೂಮಿಯನ್ನು ಬಿಟ್ಟು ಹೋಗಬೇಕು ಎಂದು ಅವರಿಗೆ ಒಮ್ಮೆಯೂ ಅನ್ನಿಸಿಲ್ಲ. ಆದರೆ, ರಂಗಭೂಮಿಯನ್ನೇ ಬರಿದೇ ನಂಬಿ ಕೂತರೆ, ಮುಂದೊಂದು ದಿನ ಆರ್ಥಿಕ ಸ್ಥಿತಿಯಿಂದ ಬದುಕು ಹೊರೆಯಾಗಬಹುದು. ಆ ಕಾರಣಕ್ಕಾಗಿ ಇವೆಂಟ್ ಮ್ಯಾನೇಜ್‌ಮೆಂಟ್, ಶಾಲಾ ಮಕ್ಕಳಿಗೆ ನಾಟಕ ಕಲಿಸಿಕೊಡುವುದು, ಆರ್ಥಿಕ ಭದ್ರತೆಗಾಗಿ ಈ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ ಎನ್ನುತ್ತಾ ಪರಿಸ್ಥಿತಿಯನ್ನು ಅರ್ಥೈಸುತ್ತಾರೆ.

ಶೈಕ್ಷಣಿಕ ರಂಗಭೂಮಿಯ ಹೊಸ ಪ್ರಯೋಗ ‘ಕುಪ್ಪಳ್ಳಿಯ ಪುಟ್ಟ’ ನಾಟಕ. ಪರಿಚಿತವಿರುವ ಶಾಲೆಗೆ ಹೋಗಿ, ಅಲ್ಲೇ ಮಾಡುವ ನಾಟಕವದು. ಯಾವುದೋ ಒಂದು ಶಾಲೆಗೆ ಹೋಗಿದ್ದಾಗ, ‘ನೀವೆಲ್ಲ ರಂಗಭೂಮಿಗೆ ಸಂಬಂಧಿಸಿದ ಕೋರ್ಸ್ ಮುಗಿಸಿ ಬಂದವರಾ?’ ಎಂದರಂತೆ. ಕೋರ್ಸ್ ಮಾಡಿದರೇ ಮಾತ್ರ ನಟರಾ? ಉಳಿದವರು ಕಲಾವಿದರಲ್ಲವೇ? ಎಂದು ತೀಕ್ಷ್ಮವಾಗಿ ಪ್ರಶ್ನಿಸುತ್ತಾ, ಘಟನೆಯೊಂದನ್ನು ಉದಾಹರಿಸುತ್ತಾರೆ. ದೆಹಲಿಯ ಶೈಕ್ಷಣಿಕ ರಂಗಭೂಮಿಯಲ್ಲಿರುವ ರಜನೀಶ್ ಭಿಷ್ ಅವರು ಪಿಪ್ಪಿಗೊಂದು ಪಪ್ಪಿ’ ನಾಟಕವನ್ನು ಕಂಡ ಬಳಿಕ ಈ ಕಲಾವಿದರನ್ನೆಲ್ಲ ಕಿಡ್ನಾಪ್ ಮಾಡಿಕೊಂಡು ದೆಹಲಿಗೆ ಕರೆದುಕೊಂಡು ಹೋಗಿಬಿಡೇನೆ’ ಎಂದಿದ್ದನ್ನು ನೆನಪಿಸಿಕೊಳ್ಳುವಾಗ, ರಂಗಭೂಮಿಯಲ್ಲೇ ಬೆಸೆದ ವೈರುಧ್ಯವನ್ನೂ ಕಾಣಿಸುತ್ತಾರೆ.

ಇವರ ಇತ್ತೀಚಿನ ನಾಟಕ ‘ಕುಪ್ಪಳ್ಳಿಯ ಪುಟ್ಟ’. ಇದು ಶೈಕ್ಷಣಿಕ ರಂಗಭೂಮಿಯ ವಿಶೇಷ ಪ್ರಯೋಗ, ಈ ನಾಟಕ ನೋಡಿದ ಒಬ್ಬ ಹುಡುಗ ಮೂರು ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ಬರೆದಿರಲಿಲ್ಲ. ಈ ನಾಟಕ ನೋಡಿದ ಮೇಲೆ, ಮತ್ತೆ ಪರೀಕ್ಷೆ ಬರೆಯಬೇಕು ಎಂದು ಪರೀಕ್ಷೆ ಬರೆದಿದ್ದಾನೆ. ರಂಗಭೂಮಿ ಯಾವ ಬದಲಾವಣೆಯನ್ನು ಮಾಡಬಲ್ಲದು ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ, ರಂಗಭೂಮಿ ವ್ಯವಹಾರಕ್ಕೆ ಮೀರಿ ಅದೊಂದು ಕಲೆ ಎನ್ನುವ ಸುಪ್ರೀತ್, ಸದಾ ನಗುವ ಬುಗ್ಗೆ. ಬರಲಿರುವ ಅವರ ಮುಂದಿನ ಸಿನೆಮಾಗಳೆಲ್ಲವೂ ಯಶ ಕಾಣಲೆಂದು ಹಾರೈಕೆ.
(keerthisba2018@gmail.com)

andolanait

Recent Posts

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

37 mins ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

42 mins ago

ಓದುಗರ ಪತ್ರ: ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆ: ಮನಸ್ಸುಗಳಿಗಿಲ್ಲ ‘ಕೂಲ್‌ಕೂಲ್’

ದೇಶದ ಬಹುತೇಕ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ಗಳಲ್ಲಿ  ಸಾರ್ವಜನಿಕರು ಕುಡಿಯುವ ವಾಟರ್ ಕೂಲರ್‌ಗಳಲ್ಲಿ, ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್…

4 hours ago

ಓದುಗರ ಪತ್ರ: ಕೆಎಸ್‌ಪಿಸಿಬಿಯನ್ನು ರಾಜಕೀಯ ಮುಕ್ತಗೊಳಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ…

4 hours ago

ಓದುಗರ ಪತ್ರ: ಪರಸ್ಪರ ಗೌರವಕ್ಕೆ ಮತ್ತೊಮ್ಮೆ ಕನ್ನಡಿ

ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳಲ್ಲಿ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ‘ಬುರ್ಜ್ ಖಲೀಫಾ’ದಲ್ಲಿ ಭಾರತದ ತ್ರಿವರ್ಣ…

4 hours ago

ನಡೆಯದ ಸಂಸತ್ ಕಲಾಪ; ಕುಗ್ಗಿದ ಮೋದಿ-ಶಾ ವರ್ಚಸ್ಸು

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಸಂಸತ್ ಎಂದರೆ ಪ್ರಜಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಂಡು ದೇಶದ ಸಮಸ್ಯೆಗಳು ಮತ್ತು…

4 hours ago