ನವದೆಹಲಿ : ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಎತ್ತಿ ಹಿಡಿದಿದೆ. ಈ ಬಗ್ಗೆ ಮಾಜಿ ಸಚಿವ ಪಿ. ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಗೌರವಯುತವಾಗಿ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಖಾಯ್ದೆ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಈ ತೀರ್ಪಿನ ಹಿನ್ನಲೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ನ ಪಿ. ಚಿದಂಬರಂ ʼ370 ವಿಧಿಯನ್ನು ರದ್ದುಪಡಿಸಿದ ವಿಧಾನದ ತೀರ್ಪನ್ನು ನಾವು ಗೌರವಯುತವಾಗಿ ಒಪ್ಪುವುದಿಲ್ಲʼ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಕಟ್ಟುನಿಟ್ಟಾಗಿ ತಿದ್ದುಪಡಿ ಮಾಡುವವರೆಗೆ ಆರ್ಟಿಕಲ್ 370 ಗೌರವಕ್ಕೆ ಅರ್ಹವಾಗಿದೆ. ರಾಜ್ಯವನ್ನು ವಿಭಜಿಸುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಅದರ ಸ್ಥಾನಮಾನವನ್ನು ಕಡಿಮೆ ಮಾಡುವ ಪ್ರಶ್ನೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ಧರಿಸದಿರುವುದು ನಮಗೆ ನಿರಾಶೆಯಾಗಿದೆ ಎಂದಿದ್ದಾರೆ ಚಿದಂಬರಂ.
ಕಾಂಗ್ರೆಸ್ ಯಾವಾಗಲೂ ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿರುವ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಒತ್ತಾಯಿಸುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಕೂಡಲೇ ಸಂಪೂರ್ಣ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು, ಲಡಾಖ್ ಜನರ ಆಶೋತ್ತರಗಳನ್ನೂ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ನಾವು ಸ್ವಾಗತಿಸುತ್ತೇವೆ. ಅದಾಗ್ಯೂ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು, ಒಂದು ವರ್ಷ ಕಾಯಲು ನಿಖರ ಕಾರಣಗಳಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ರಾಜ್ಯಸಭಾ ಸಂಸದ ಹಾಗೂ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು “3ನೇ ವಿಧಿಯ ಪ್ರಕಾರ ಇಡೀ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಸಾಧ್ಯವಿಲ್ಲ. ರಾಜ್ಯತ್ವದ ವಿಷಯದ ಬಗ್ಗೆ ಈ ತೀರ್ಪಿನಲ್ಲಿ ವಿಚಿತ್ರವಾದ ವಿರೋಧಾಭಾಸವಿದೆ” ಎಂದು ಹೇಳಿದರು.
“ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ನೀವು ರಾಜ್ಯದ ಒಂದು ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬಹುದು ಅಥವಾ ರಾಜ್ಯವನ್ನು ಎರಡು ಅಥವಾ ಮೂರು ರಾಜ್ಯಗಳಾಗಿ ವಿಂಗಡಿಸಬಹುದು. ಆದರೆ ಪರಿಚ್ಛೇದ 3ರಲ್ಲಿ ಕೆಲವು ಭಾಗ ರಾಜ್ಯವಾಗಿಯೇ ಉಳಿಯಬೇಕು ಎಂಬ ಷರತ್ತು ಇದೆ. ಇಡೀ ರಾಜ್ಯವನ್ನು ಕೇವಲ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಸಾಧ್ಯವಿಲ್ಲ. ಈ ನಿರ್ಧಾರದಲ್ಲಿನ ವಿರೋಧಾಭಾಸವೆಂದರೆ ನೀವು ಇಡೀ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ್ದೀರಿ. ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಬಗ್ಗೆ ನಾವು ಸಿಂಧುತ್ವವನ್ನು ನಿರ್ಧರಿಸುತ್ತಿಲ್ಲ ಎಂದು ಹೇಳಿರುವಿರಿ, ಏಕೆಂದರೆ ಆದಷ್ಟು ಬೇಗ ಪೂರ್ಣ ರಾಜ್ಯತ್ವವನ್ನು ಪುನಃಸ್ಥಾಪಿಸಲಾಗುವುದು ಎಂಬ ಭರವಸೆ ಇದೆ. ಇತರ ಕೇಂದ್ರಾಡಳಿತ ಪ್ರದೇಶದ ವಿಷಯದಲ್ಲಿ ಇದು ಮಾನ್ಯ ಎಂದು ತೀರ್ಮಾನಿಸಲಾಗಿದೆ. ಆದ್ದರಿಂದ ಈ ಸಂಪೂರ್ಣ ಪ್ರದೇಶದ ಒಂದು ಭಾಗವು ರಾಜ್ಯವಾಗದ ತನಕ 3 ನೇ ವಿಧಿಯ ಅಡಿಯಲ್ಲಿ ಮಾನ್ಯವಾಗಿರುವುದಿಲ್ಲ. ಈ ನಿರ್ಧಾರ ದೊಡ್ಡ ವಿರೋಧಾಭಾಸವನ್ನು ತೋರಿಸುತ್ತದೆ ಮತ್ತು ಈ ತೀರ್ಪಿನಲ್ಲಿ ಸಾಂವಿಧಾನಿಕ ದೋಷವಿದೆ” ಎಂದು ಅವರು ಹೇಳಿದ್ದಾರೆ.
2019ರ ಆಗಸ್ಟ್ 6 ರಂದು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಸ್ಥಾನವನ್ನು ರದ್ದುಪಡಿಸಿದ ಕೇಂದ್ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ಪ್ರಕಟಿಸಿ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ.
ʼಐತಿಹಾಸಿಕ’ ತೀರ್ಪನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಈ ತೀರ್ಪನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಶ್ಲಾಘಿಸಿದೆ. ಪ್ರಧಾನಿ ಮೋದಿ ಅವರು ಈ ನಿರ್ಧಾರವನ್ನು “ಇಂದು ಸುಪ್ರೀಂ ಕೋರ್ಟ್ ಆರ್ಟಿಕಲ್ 370 ರದ್ದತಿ ಕುರಿತು ನೀಡಿರುವ ತೀರ್ಪು ಐತಿಹಾಸಿಕವಾಗಿದೆ ಹಾಗೂ ಈ ಮೂಲಕ 2019ರ ಆಗಸ್ಟ್ 5ರಂದು ಭಾರತದ ಪಾರ್ಲಿಮೆಂಟ್ ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಕವಾಗಿ ಎತ್ತಿ ಹಿಡಿದಿದೆ. ಇದು ಜಮ್ಮು, ಕಾಶ್ಮೀರ ಮತ್ತು ಲಡಾಖ್ನಲ್ಲಿನ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಭರವಸೆ, ಪ್ರಗತಿ ಮತ್ತು ಏಕತೆಯ ಪ್ರತಿಧ್ವನಿಸುವ ಘೋಷಣೆಯಾಗಿದೆ. ಇಂದಿನ ತೀರ್ಪು ಕೇವಲ ಕಾನೂನು ತೀರ್ಪಲ್ಲ, ಇದು ಭರವಸೆಯ ದಾರಿದೀಪವಾಗಿದೆ, ಉಜ್ವಲ ಭವಿಷ್ಯದ ಭರವಸೆ, ಬಲಿಷ್ಠ ಮತ್ತು ಅಖಂಡ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
-ನರೇಂದ್ರ ಮೋದಿ, ಪ್ರಧಾನಿ
ಆರ್ಟಿಕಲ್ 370 ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆಗಸ್ಟ್ 5, 2019ರಂದು ನರೇಂದ್ರ ಮೋದಿ ಆರ್ಟಿಕಲ್ 370 ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರವನ್ನು ತೆಗೆದುಕೊಂಡರು. ಅಲ್ಲಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆ ಮರಳಿದೆ. ಹಿಂಸಾಚಾರದಿಂದ ನಲುಗಿದ ಕಣಿವೆಯಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯು ಮಾನವ ಜೀವನಕ್ಕೆ ಹೊಸ ಅರ್ಥವನ್ನು ತಂದಿದೆ. ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಸಮೃದ್ಧಿಯು ಜಮ್ಮು, ಕಾಶ್ಮೀರ ಮತ್ತು ಲಡಾಖ್ನ ನಿವಾಸಿಗಳ ಆದಾಯ ಮಟ್ಟವನ್ನು ಹೆಚ್ಚಿಸಿದೆ. ಇಂದು ಸುಪ್ರೀಂ ಕೋರ್ಟ್ನ ತೀರ್ಪು 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವು ಸಂಪೂರ್ಣವಾಗಿ ಸಾಂವಿಧಾನಿಕವಾಗಿದೆ ಎಂದು ಸಾಬೀತುಪಡಿಸಿದೆ”
-ಅಮಿತ್ ಶಾ ಗೃಹ ಸಚಿವ
ನಿರಾಶೆಯಾದರೂ ನಿರಾಸೆಯಾಗಲಿಲ್ಲ. ಹೋರಾಟ ಮುಂದುವರಿಯಲಿದೆ. ಬಿಜೆಪಿಗೆ ಇಲ್ಲಿಗೆ ಬರಲು ದಶಕಗಳೇ ಬೇಕಾದವು. ಇದೀಗ ನಾವು ಕೂಡ ಸುದೀರ್ಘ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ.
-ಒಮರ್ ಅಬ್ದುಲ್ಲಾ
ಈವರೆಗೂ ಏನೆಲ್ಲಾ ಬೆಳವಣಿಗೆಗಳು ಆದವೋ ಎಲ್ಲವೂ ಸಂವಿಧಾನ ಬದ್ಧ ಎಂದಾಯ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರು ಆದಷ್ಟು ಬೇಗ ಮತ್ತೆ ರಾಜ್ಯದ ಸ್ಥಾನಮಾನವನ್ನು ಪುನರ್ಸ್ಥಾಪಿಸಬೇಕಿದೆ.
– ಕರಣ್ ಸಿಂಗ್, ಹಿರಿಯ ಕಾಂಗ್ರೆಸ್ ನಾಯಕ
ಆರ್ಟಿಕಲ್ 370 ರದ್ದತಿ ನಿರ್ಧಾರ ಸಂವಿಧಾನ ಬದ್ಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರೋದು ನಮಗೆ ಬೇಸರ ತರಿಸಿದೆ.
-ಗುಲಾಂ ನಬಿ ಆಜಾದ್, ಅಧ್ಯಕ್ಷ ಡೆಮಾಕ್ರೆಟಿಕ್ ಪ್ರೋಗ್ರೆಸ್ಸೀವ್ ಆಜಾದ್ ಪಕ್ಷ
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…