ಬೆಂಗಳೂರು: ಕಾಲಚಕ್ರ ಹೀಗೇ ಇರುವುದಿಲ್ಲ. ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್ಚರಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ವಿಧಾನಪರಿಷತ್ನಲ್ಲಿ ಮಾತನಾಡಿದ ಅವರು, ದೇಶವನ್ನೇ ಗೆದ್ದೇ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ಇಲ್ಲಿನ ಜನತೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೆದ್ದೇ ಬಿಡುತ್ತೇವೆ ಎಂಬ ನಿಮ್ಮ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರ ಜನಪ್ರಿಯತೆ ಈಗ ಕುಸಿಯುತ್ತಾ ಹೋಗಿದೆ. ರಾಜ್ಯದಲ್ಲಿ ಅವರು ಬಿಜೆಪಿಯನ್ನು ಉಳಿಸಲು ನಡೆಸಿದ ಎಲ್ಲ ಪ್ರಯತ್ನಗಳು ಕೈಕೊಟ್ಟವು. ಬರುವ ದಿನಗಳಲ್ಲೂ ಬಿಜೆಪಿಗೆ ಇಲ್ಲಿನ ಜನತೆ ಬೆಂಬಲಿಸುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿ ಹೋದ ಕಡೆಯೆಲೆಲ್ಲ ಬಿಜೆಪಿಗೆ ಸೋಲಾಗಿದೆ. ಕಲ್ಬುರ್ಗಿ ಜಿಲ್ಲೆಯ ಸೇಡಂನಲ್ಲೇ ಹೋಗಿ ಬಿಜೆಪಿ ಪರ ಪ್ರಚಾರ ನಡೆಸಿದರು. ಆದರೆ ಅಲ್ಲಿ ನಮ್ಮ ಅಭ್ಯರ್ಥಿ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಮೋದಿ ಅವರು ಜನರಿಂದ ದೂರವಾಗುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೀಕಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿಯವರು ರಾಜ್ಯಕ್ಕೆ 28 ಬಾರಿ ಬಂದು ರೋಡ್ ಶೋ , ಬಹಿರಂಗ ರ್ಯಾಲಿ ಸೇರಿದಂತೆ ಏನೇ ಗಿಮಿಕ್ ಮಾಡಿದರೂ ರಾಜ್ಯದಜನತೆ ಅವರನ್ನಾಗಲಿ, ಅವರ ಪಕ್ಷ ಬಿಜೆಪಿಯನ್ನು ಒಪ್ಪಿಕೊಳ್ಳಲಿಲ್ಲ. ಹಿಂದಿನ ಯಾವುದೇ ಪ್ರಧಾನಿ ಒಂದು ರಾಜ್ಯದ ವಿಧಾನಸಭೆ ಚುನಾವಣೆಗೆ ಇಷ್ಟು ಬಾರಿ ಪ್ರಚಾರ ನಡೆಸಿದ ನಿದರ್ಶನವಿಲ್ಲ. ಪ್ರಧಾನಿಯಾದವರು ದೇಶವನ್ನು ಮುನ್ನಡೆಸಬೇಕೆ ವಿನಃ ಒಂದು ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಲು ಬರಬೇಕಾದ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಎಲ್ಲೆಲ್ಲಿ ಮೋದಿ ಪ್ರಚಾರ ನಡೆಸಿದ್ದರೋ ಅಲ್ಲಲ್ಲಿ ಕಾಂಗ್ರೆಸ್ ಭಾರೀ ಮತಗಳ ಅಂತರದಿಂದ ಗೆದ್ದಿದೆ. ರೋಡ್ ಶೋ, ಸಾರ್ವಜನಿಕ ರ್ಯಾಲಿ ಎಲ್ಲವೂ ಬಿಜೆಪಿಗೆ ಕೈಕೊಟ್ಟಿವೆ. ಮೋದಿ ಜನಪ್ರಿಯತೆ ಕುಸಿಯುತ್ತಿರುವುದನ್ನು ನೀವು ಒಪ್ಪಿಕೊಳ್ಳಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರ ನಾಯಕತ್ವದ ಮೇಲೆ ಹೋದರೆ ಉಪಯೋಗವಿಲ್ಲ ಎಂದು ವ್ಯಂಗ್ಯವಾಡಿದರು.
ಈ ವೇಳೆ ವೈ.ಎ.ನಾರಾಯಣಸ್ವಾಮಿ ಅವರು ಬಿಜೆಪಿಗೆ ಸೋಲಾಗಿಲ್ಲ. ಮೋದಿಯವರ ಜನಪ್ರಿಯತೆ ಕುಗ್ಗಿಲ್ಲ. ಬದಲಿಗೆ ನಿಮ್ಮ ಐದು ಗ್ಯಾರಂಟಿಗಳನ್ನು ನಂಬಿ ಮತ ಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಏನೇ ಭಿನ್ನಾಭಿಪ್ರಾಯಗಳಿರಬಹುದು. ಅಂತಿಮವಾಗಿ ಜನಾದೇಶವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಪ್ರತಿಯೊಂದು ಜಾತಿ, ಧರ್ಮ ಎಲ್ಲರನ್ನೂ ಸಮಾನತೆಯಿಂದ ಗೌರವಿಸಬೇಕೆಂದು ಪ್ರತಿಯೊಂದು ಧರ್ಮವೂ ಹೇಳುತ್ತದೆ. ಪ್ರತಿಯೊಂದು ಧರ್ಮವೂ ಶ್ರೇಷ್ಠ. ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ ಎಂದು ಅಭಿಪ್ರಾಯಪಟ್ಟರು.
12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಮಪ್ರಭುವನ್ನು ಸ್ಪೀಕರ್ ಮಾಡಿದ್ದರು. ಅಂದಿನ ಅನುಭವ ಮಂಟಪವೇ ಇಂದಿನ ಸಂಸತ್. ನಮಗೆ ಬುದ್ದ, ಬಸವಣ್ಣ, ಅಂಬೇಡ್ಕರ್, ಕನಕದಾಸರು ಶ್ರೇಷ್ಠರಾಗಬೇಕು ಎಂದು ಸಲಹೆ ಮಾಡಿದರು.
ಆದಿ ಕವಿ ಪಂಪರಿಗಿಂತ ಮುಂಚೆಯೇ ಕವಿರಾಜ ಮಾರ್ಗದಲ್ಲಿ ಬೇರೆಯವರ ಸಂಸ್ಕøತಿ, ಜೀವನ ಗೌರವಿಸುವುದೇ ಸಮಾಜದ ಆಸ್ಥಿ, ಸಮಾಜದ ಒಡವೆ ಎಂದು ಹೇಳಿದ್ದಾರೆ. ಧರ್ಮ-ಧರ್ಮಗಳು ಬೇರೆ ಇರಬಹುದು. ಆದರೆ, ಸಾರಗಳು ಒಂದೇ. ಮನುಷ್ಯ ಮನುಷ್ಯನ ನಡುವೆ ಗೋಡೆ ಕಟ್ಟುವುದೇ ಕೋಮುವಾದ. ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವುದು ಅಮಾನವೀಯ. ವೈವಿಧ್ಯತೆಗಳಲ್ಲಿ ಏಕತೆ ಕಾಣುವುದರಲ್ಲಿ ನಂಬಿಕೆ ಇಟ್ಟವರು ನಾವು. ಯಾವುದೇ ಒಂದು ಜಾತಿ, ಧರ್ಮಕ್ಕೆ ಅಂಟಿಕೊಂಡಿಲ್ಲ. ಎಲ್ಲರನ್ನೂ ಪ್ರೀತಿಸಿ, ಗೌರವಿಸುತ್ತೇವೆ ಎಂದರು.
ನಾವು ಸಂವಿಧಾನಕ್ಕೆ ತಲೆಬಾಗುತ್ತೇವೆಯೇ ಹೊರತು ಬೇರೆ ಯಾವುದಕ್ಕೂ ತಲೆಬಾಗುವುದಿಲ್ಲ. ಇದು ನಮ್ಮ ಬದ್ಧತೆಯೂ ಹೌದು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲೆ. ಇದನ್ನೇ ಸಂವಿಧಾನದಲ್ಲಿ ಜಾತ್ಯಾತೀತತೆ ಎಂದು ಕರೆದಿರುವುದು. ಭಾರತ 142 ಕೋಟಿ ಜನಸಂಖ್ಯೆ ಹೊಂದಿದೆ. ಅಷ್ಟೂ ಜನರು ಕೂಡ ಒಂದೇ. ಕೆಲವು ವರ್ಷಗಳ ಹಿಂದೆ ಸ್ವಾರ್ಥಕ್ಕಾಗಿ ಜಾತಿ ಮಾಡಿದರು. ವೃತ್ತಿ ಆಧಾರಿತ ಜಾತಿ ಮೇಲೂ ಅಲ್ಲ. ಕೀಳೂ ಅಲ್ಲ. ಬಿಜೆಪಿಯವರಿಗೆ ನಾನು ನೀವು ನಂಬಿರುವ ಧರ್ಮವೇ ಶ್ರೇಷ್ಠ ಎಂಬುದನ್ನು ಬಿಡಿ ಎಂದು ಹೇಳಿದ್ದೇನೆ. ಆದರೆ, ಅವರು ಬಿಡುತ್ತಿಲ್ಲ. ಜನ ಹೀಗಾಗಿ ಅವರಿಗೆ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…
ಮಂಡ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…
ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…