ಶೇಷಣ್ಣಸ್ವಾಮಿಯವರ ಗಾಯನ ಜಾಗೃತಿ

ಜಾನಪದ ಸಂಗೀತ, ಕ್ರಾಂತಿಗೀತೆಗಳು, `ಹೋರಾಟದ ಹಾಡುಗಳು ಯುವಜನರಿಂದ ದೂರಾಗುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬರು ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪುರವರ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವ ಜತೆಗೆ ತಾವೇ ಕವಿತೆ ರಚಿಸಿ ರಾಗ ಸಂಯೋಜಿಸಿ ಹಾಡುವ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದಾರೆ.

ಚಾಮರಾಜನಗರದ ಕಂಪನಪುರ ಗ್ರಾಮದ ದಿವಂಗತ ಹಗ್ಗದ ಮಾದಯ್ಯ ಮತ್ತು ಮಹದೇವಮ್ಮ ದಂಪತಿ ಪುತ್ರ ಕೆ.ಎಂ. ಶೇಷಣ್ಣ ಸ್ವಾಮಿ ಪ್ರಸ್ತುತ ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ಅದರೊಟ್ಟಿಗೆ ಪ್ರಜ್ಞಾ ಪರಿವರ್ತನಾ ಕಲಾ ತಂಡ’ವೊಂದನ್ನು ಕಟ್ಟಿಕೊಂಡು ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಗಾಯನ ಕಲಿಸುವ ಜತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಾ, ಜಾನಪದ ಸಂಗೀತ, ಕ್ರಾಂತಿ ಗೀತೆಗಳತ್ತ ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕೆ.ಎಂ.ಶೇಷಣ್ಣಸ್ವಾಮಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನಲ್ಲಿ ‘ಸಂಗೀತ, ನಾಟಕ ಮತ್ತು ಐಚ್ಛಿಕ ಕನ್ನಡ’ ವಿಷಯದಲ್ಲಿ ಪದವಿ ಪಡೆದುಕೊಂಡರು. ಹಾಗೂ ‘ಮೃದಂಗ’ ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನೂ ಪಡೆದಿದ್ದು, ಕರಾಮುವಿಯ ದೂರ ಶಿಕ್ಷಣ ಕೇಂದ್ರದ ಮೂಲಕ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಸ್ತುತ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರೊ.ಎನ್.ಕೆ.ಲೋಲಾಕ್ಷಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಕೇವಲ ಕವನಗಳಿಗೆ ರಾಗ ಸಂಯೋಜನೆ ಮಾಡಿ ವಾಚನ ಮಾಡುವುದಷ್ಟೇ ಅಲ್ಲದ ಸ್ವತಃ ಕವಿಯಾಗಿರುವ ಇವರ ಕವಿತೆಗಳು ಪ್ರಬುದ್ಧ ಭಾರತ, ಸಮಾಜ ಪರಿವರ್ತನಾ ಬಹದನಿ, ರಂಗಶೀರ್ಷ, ಆಂದೋಲನ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಗಾಯನದ ಬಗ್ಗೆ ವಿಶೇಷ ಒಲವು ಹೊಂದಿರುವ ಜೇವಣ್ಣ ಚಂದನ ವಾಹಿನಿ, ಮೈಸೂರು ಆಕಾಶವಾಣಿ ಕೇಂದ್ರಗಳಲ್ಲಿ ಸಹಗಾಯಕರಾಗಿ ಕಾರ್ಯಕ್ರಮ ನೀಡಿದ್ದಾರೆ. ತಮ್ಮ ಗಾಯನದ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರಿಗೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಕೊಡಮಾಡುವ 2020ರ ‘ಕನ್ನಡ ವಿಕಾಸ ರತ್ನ’ ಪ್ರಶಸ್ತಿ, ಭಾರತೀಯ ವಿದ್ಯಾರ್ಥಿ ಸಂಘ, ಕರ್ನಾಟಕ ಇವರ 2022ರ ‘ಉದಯೋನ್ಮುಖ ಗಾಯಕ’ ಬಿರುದು, ಲಯನ್ಸ್ ಕ್ಲಬ್ ಆಫ್ ಮೈಸೂರು ಅವರ 2023ರ ‘ಸಂವಿಧಾನ ಸೇವಾ ರತ್ನ ಪ್ರಶಸ್ತಿ’, 2024ರಲ್ಲಿ ಮಾನಸಗಂಗೋತ್ರಿಯ ಕುವಂಪು ಕನ್ನಡ ಅಧ್ಯಯನ ಸಂಸ್ಥೆ, ಸಂಶೋಧನಾ ವಿದ್ಯಾರ್ಥಿ ವೇದಿಕೆ ವಶಿಯಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ‘ಗಾನ ಕೋಗಿಲೆ’ ಬಿರುದು ಸಂದಿವೆ. ಅಲ್ಲದೆ 2024ರಲ್ಲಿ ಮಾನಸಗಂಗೋತ್ರಿಯ ಇತಿಹಾಸ ಅಧ್ಯಯನ ವಿಭಾಗವು ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನದ ಅಂಗವಾಗಿ ‘ಭೀಮ ಗಾನ ಗಾರುಡಿಗೆ ಎಂಬ ಬಿರುದು ನೀಡಿ ಗೌರವಿಸಿದೆ.

ಇದಿಷ್ಟೇ ಅಲ್ಲದೆ ಮೈಸೂರಿನ ಕನ್ನಡ ಜಾನಪದ ಪರಿಷತ್‌ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಯುವ ವಾನಪದ ಪ್ರದಂಚ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ಕೆ.ಎಂ.ಶೇಷಣ್ಣಸ್ವಾಮಿ ಯುವಜನರಿಂದ ಜಾನಪದ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಆ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ದಾಟಿಸುವ ಪಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆಸಕ್ತರಿಗೆ ಸಂಗೀತ ಗಾಯನ ಕಲಿಸುವ ಗುರಿ ಇಟ್ಟುಕೊಂಡಿದ್ದು, ಬುದ್ಧ ಬಸವ, ಅಂಬೇಡ್ಕರ್, ಕುವೆಂಪು, ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಶಯಗಳನ್ನು ಗೀತೆಗಳ ಮೂಲಕ ಯುವ ಜನರ ಮುಂದೆ ಪ್ರಸ್ತುತ ಪಡಿಸುತ್ತಾ ಸಮಾಜವನ್ನು ಸರಿದಾರಿಗೆ ತರಲು ಜಾಗೃತಿ ಮೂಡಿಸಬೇಕು ಎಂಬುದು ಅವರ ಆಶಯವಾಗಿದೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

19 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

19 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

19 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

19 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

19 hours ago