ಯುವ ಡಾಟ್ ಕಾಂ

ರಂಗ ವಿದ್ಯಾರ್ಥಿಗಳ ಅಭಿಮನ್ಯು ಕಾಳಗ

ಚಿತ್ರಾ ವೆಂಕಟರಾಜು

ಕರ್ನಾಟಕದ ಆಧುನಿಕ ರಂಗ ಶಿಕ್ಷಣ ಶಾಲೆ ‘ನೀನಾಸಂ’ ರಂಗ ಶಿಕ್ಷಣ ಕೇಂದ್ರವು ಮಲೆನಾಡಿನಲ್ಲಿದ್ದುದರಿಂದ ಆ ಭಾಗದಲ್ಲಿ ಯಕ್ಷಗಾನ ಪ್ರಕಾರ ಪ್ರಚಲಿತದಲ್ಲಿದ್ದುದರಿಂದ ಬಹುಶಃ ಅಂದಿನಿಂದಲೂ ರಂಗ ಶಿಕ್ಷಣದ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆಗಳ ಮೂಲಕ ರಂಗಭೂಮಿ ಪಠ್ಯಕ್ರಮವನ್ನು ಪ್ರಾರಂಭ ಮಾಡಿರುವುದು ಒಂದು ಪದ್ಧತಿಯಾಗಿ ಬೆಳೆದುಬಂದಿದೆ. ಬಿ.ವಿ.ಕಾರಂತರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ವಿಲಿಯಂ ಶೇಕ್ಸ್‌ ಪಿಯರ್‌ನ ‘ಮ್ಯಾಕ್‌ ಬೆತ್’ ನಾಟಕವನ್ನು ಹಿಂದಿಯಲ್ಲಿ ಮಾಡಿಸಿದಾಗಲೂ ಯಕ್ಷಗಾನದ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿದ್ದರು.

ಹೀಗೆ ಯಕ್ಷಗಾನವನ್ನು ರಂಗಭೂಮಿ ವಿದ್ಯಾರ್ಥಿಗಳಿಗೆ ಕಲಿಸಲು ಅನೇಕ ಕಾರಣಗಳೂ ಇವೆ. ಯಕ್ಷಗಾನದಲ್ಲಿ ಸಂಗೀತ, ತಾಳ, ಲಯ, ಅಭಿನಯ, ಮಾತು ಪ್ರಸಾಧನ ಹೀಗೆ ನಟನೊಬ್ಬನಿಗೆ ಬೇಕಾದ ಎಲ್ಲವೂ ಇದರಲ್ಲಿರುವುದರಿಂದ ರಂಗಾಭ್ಯಾಸದ ಪ್ರಾರಂಭದಲ್ಲಿಯೇ ಯುವ ರಂಗಾಸಕ್ತರಿಗೆ ಕಲಿಸುವುದು ಸಂಪ್ರದಾಯವೇ ಆಗಿಬಿಟ್ಟಿದೆ. ಒಂದು ಕಲಾಪ್ರಕಾರವನ್ನು ಪ್ರದರ್ಶನದ ಉದ್ದೇಶದಿಂದ ಕಟ್ಟುವುದಕ್ಕೂ ಮತ್ತು ಒಂದು ಪ್ರಕಾರವನ್ನು ಮತ್ತೊಂದು ಪ್ರಕಾರಕ್ಕೆ ತೆಗೆದುಕೊಂಡು ಹೋಗುವಾಗ – ಅದು ಕಲಿಕೆಯ ಭಾಗವಾದಾಗ ಅದರ ಉದ್ದೇಶ ಮತ್ತು ಪ್ರಕ್ರಿಯೆ ಬೇರೆಯೇ ಆಗಬೇಕಾಗುತ್ತದೆ; ಆಗಿರುತ್ತದೆ ಕೂಡ. ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದ ಹೊರರೂಪವನ್ನು ಮಾತ್ರ ರಂಗಕ್ಕೆ ಅಳವಡಿಸಿಕೊಂಡ ಅನೇಕ ಪ್ರಯೋಗಗಳು ಆಗುತ್ತಿವೆ. ಆದರೆ ಅದರ ಸತ್ವವನ್ನು ಮಾತ್ರ ಇಟ್ಟುಕೊಂಡು ರಂಗಭೂಮಿಗೆ ತರುವ ಪ್ರಯೋಗಗಳು ತೀರಾ ಅಪರೂಪ. ಇತ್ತೀಚೆಗೆ ಮೈಸೂರು ರಂಗಾಯಣದ ‘ಭಾರತೀಯ ರಂಗ ಶಿಕ್ಷಣ ಕೇಂದ್ರ’ದ ವಿದ್ಯಾರ್ಥಿಗಳು ತಮ್ಮ ರಂಗಶಿಕ್ಷಣ ಅದ್ಯಯನದ ಪ್ರಯೋಗವಾಗಿ ದಿಗ್ವಿಜಯ ಹೆಗ್ಗೋಡು ಅವರ ಭಾಗವತಿಕೆ ಮತ್ತು ನಿರ್ದೇಶನದಲ್ಲಿ ಅಭಿಮನ್ಯು ಕಾಳಗ’ ಪ್ರಸಂಗವನ್ನು ಪ್ರಸ್ತುತಪಡಿಸಿದರು. ಕೃಷ್ಣ ಚೈತನ್ಯ ಮತ್ತು ಶ್ರೀನಿವಾಸ ಪುರಪ್ಪೆಮನೆಯವರ ಹಿಮ್ಮೇಳವಿತ್ತು.

ಯಕ್ಷಗಾನ ಪ್ರಸಂಗವೊಂದನ್ನು ಕಲಾವಿದರಿರಿಂದ ಆಡಿಸುವುದೇ ಬೇರೆ, ರಂಗಭೂಮಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಸುವುದೇ ಬೇರೆ. ಬೇರೆ ಯಾವುದೇ ಕಲೆ- ಅದು ನೃತ್ಯವಿರಲಿ, ಸಮರಕಲೆಯಿರಲಿ, ಸಂಗೀತವಿರಲಿ- ರಂಗಭೂಮಿಯಲ್ಲಿ ಅದನ್ನು ಹೇಗಿದೆಯೋ ಹಾಗೆಯೇ ಬಳಸಿಕೊಳ್ಳುವುದಿಲ್ಲ. ಪ್ರತಿಯೊಂದು ಪ್ರಕಾರದಲ್ಲೂ ರಂಗಭೂಮಿ ನಟನಿಗೆ ಬೇಕಾದ ಆ ಕಲಾಪ್ರಕಾರದ ನಿರ್ದಿಷ್ಟ ಅಂಶಗಳನ್ನು ಅಥವಾ ಆ ಪ್ರಕಾರ ಸತ್ವವನ್ನು ಮಾತ್ರ ತೆಗೆದುಕೊಂಡು ಅಳವಡಿಸಿಕೊಳ್ಳ ಲಾಗುತ್ತದೆ. ಆ ದೃಷ್ಟಿಯಲ್ಲಿ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ಯಕ್ಷಗಾನ ಪ್ರಸಂಗವು ಮಾದರಿಯಾಗಿತ್ತು. ಯಕ್ಷಗಾನದ ಹೆಜ್ಜೆಗಳು ತಾಳ-ಲಯ-ಕುಣಿತ-ದೇಹ, ಹಾವ ಮತ್ತು ಭಾವಗಳನ್ನೇ ಪ್ರಮುಖವಾಗಿಟ್ಟುಕೊಂಡು ಪ್ರಯೋಗವನ್ನು ಕಟ್ಟಿದ್ದು ಬಹಳ ವಿಶೇಷವಾಗಿತ್ತು. ಯಕ್ಷಗಾನ ಕಲೆಯ ಮುಖ್ಯ ಆಕರ್ಷಣೆಯಾದ ಉಡುಗೆ-ತೊಡುಗೆಗಳು, ಆಭರಣಗಳು ಮತ್ತು ಪ್ರಸಾಧನವನ್ನು ಸೂಚ್ಯವಾಗಿ ಮಾತ್ರ ಬಳಸಿಕೊಂಡು ರಂಗಭೂಮಿಯನ್ನು ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯಿಂದ ಅಗತ್ಯವಾಗಿ ಬೇಕಾದ ಆಂಗಿಕ, ವಾಚಿಕ ಮತ್ತು ಭಾವಗಳ ಮೇಲೆ ಹೆಚ್ಚಿನ ಪ್ರಾಶಸ್ಯವನ್ನು ಪ್ರದರ್ಶನದುದ್ದಕ್ಕೂ ನೀಡಲಾಗಿತ್ತು. ಆದರೆ, ಎಲ್ಲಿಯೂ ಅದು ಕೊರತೆ ಎನಿಸದಿರುವುದು ಪ್ರಸ್ತುತಿಯ ವೈಶಿಷ್ಟ್ಯ. ಕತೆಯೇನೋ ಮಹಾಭಾರತದ ಅಭಿಮನ್ಯುವಿನದೇ, ಆದರೆ ಮತ್ತೆ ಮತ್ತೆ ಮತ್ಸರಕ್ಕೆ ಬಲಿಯಾಗುವ, ಒಂದು ತಲೆಮಾರನ್ನೇ ರಾಜಕೀಯಕ್ಕೆ ದಾಳವಾಗಿ ಬಳಸಲ್ಪಡುವ ಕ್ರೌರ್ಯ ಮಾತ್ರ ಇಂದಿನದೇ. ವೇಷಗಳು ಮಹಾಭಾರತದ್ದಾದರೂ ಅವುಗಳಾಡಿದ ಮಾತುಗಳು ಇಂದಿನವೇ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿ ಮೋಸದಿಂದ ಹತನಾಗುವಲ್ಲಿ ಪ್ರಸಂಗ ಮುಗಿದಿದ್ದರೆ ಅದೊಂದು ಕತೆಯಾಗಿಯೇ ಮುಗಿದುಬಿಡುತ್ತಿತ್ತು. ಆದರೆ, ಅಭಿಮನ್ಯುವಿನ ಸಾವಿನ ನಂತರ ದೀರ್ಘ ಮೌನದಲ್ಲಿ ದುರ್ಯೋಧನಾದಿಯಾಗಿ ಪ್ರತಿ ಪಾತ್ರವೂ ರಂಗದಿಂದ ಇಳಿದು ಬಂದು ಅಭಿಮನ್ಯುವಿನ ಶವದ ಮುಂದೆ ತಮ್ಮ ತಮ್ಮ ಶಸ್ತ್ರವನ್ನು ಇಟ್ಟು ತಲೆಬಾಗಿಸಿ ಕೂರುವ ದೃಶ್ಯವು ಯಕ್ಷಗಾನದ ಪ್ರಸಂಗಕ್ಕೆ ನೀಡಿದ ಆಧುನಿಕ ರಂಗಭೂಮಿಯ ನೋಟಕ್ರಮವಾಗಿ ಕಂಡಿತು. ಖಾಲಿ ರಂಗದ ಮೇಲೆ ಇದ್ದ ಅಭಿಮನ್ಯುವಿನ ಶವದಲ್ಲಿ ವಿಶ್ವದಾದ್ಯಂತ ನಡೆಯುತ್ತಲೇ ಇರುವ ಹಲವು ಹತಭಾಗ್ಯ ಮಕ್ಕಳ ಹೆಣಗಳು ಕಣ್ಣಮುಂದೆ ಬಂದವು. ಎಲ್ಲ ಗಂಡಸರು ಅಭಿಮನ್ಯುವಿನ ಶವದ ಮುಂದೆ ತಲೆತಗ್ಗಿಸಿ ಕೂತಾಗ ಪರದೆ ಹಿಡಿದುಕೊಂಡು ಬಂದದ್ದು ಯಕ್ಷಗಾನದ ಒಂದು ತಂತ್ರವೇ ಆದರೂ, ಹೆಣ್ಣುಮಕ್ಕ ಳಿಂದಲೇ ಅದನ್ನು ಮಾಡಿಸಿದ್ದು ವಿಶೇಷವಾಗಿತ್ತು. ಆ ಮೂಲಕ ಪೊರೆಯುವ ತಾಯ್ತನವನ್ನು ಸೂಚ್ಯವಾಗಿಸುವುದರೊಂದಿಗೆ ಮುಗಿದ ಪ್ರಸಂಗ ಪ್ರೇಕ್ಷಕರಲ್ಲಿ ಆದ್ರ್ರತೆಯನ್ನು ಉದ್ದೀಪಿಸಿತು.ಹೀಗೆ ರಂಗಭೂಮಿಗೆ ಬರುವ ಯುವ ಕಲಾಸಕ್ತರಿಗೆ ನಾಡಿನ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದು ಪ್ರಸ್ತುತ ಅನಿವಾರ್ಯವಾಗಿದೆ. ಜಾನಪದ ಕಲಾ ಸಾಹಿತ್ಯ ಪ್ರಕಾರಗಳು ದೂರಾಗುತ್ತಿರುವ ಇಂದು ರಂಗಾಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮಜಲು ಗಳನ್ನು ಪರಿಚಯಿಸಲು ಮುಂದಾಗಿರುವುದು. ನಶಿಸುವ ಹಂತದಲ್ಲಿದ್ದ ಕಲೆಗಳಿಗೆ ಮರುಜೀವ ನೀಡಿದಂತಾಗಿದೆ.

ಯಕ್ಷಗಾನದಲ್ಲಿ ಇಂದು ಮರೆತೇ ಹೋಗುತ್ತಿರುವ ಹಳೆಯ ಯುದ್ಧದ ನಡೆಗಳು, ಮಟ್ಟುಗಳನ್ನು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಬಹಳ ಸಂತೋಷ, ಆಧುನಿಕತೆಯ ಭರದಲ್ಲಿ ಕಳೆದುಹೋಗುತ್ತಿರುವ ಯಕ್ಷಗಾನದ ಮೂಲಭೂತ ಅಂಶಗಳನ್ನು ಹೊಸ ಅರ್ಥವಂತಿಕೆಯೊಂದಿಗೆ ಮರುಸೃಷ್ಟಿಸಿರುವುದು ಮಹತ್ವದ ಸಂಗತಿ

-ಶ್ರೀನಿವಾಸ.ಕೆ ಪುರಪ್ಪೇಮನೆ, ಹಿರಿಯ ಯಕ್ಷಗಾನ ಕಲಾವಿದರು.

 

 

ಆಂದೋಲನ ಡೆಸ್ಕ್

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

12 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

12 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

13 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

15 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

18 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

18 hours ago