ಆಂದೋಲನ ಪುರವಣಿ

ಯೋಗ ಕ್ಷೇಮ : ಅಲ್ಟ್ರಾಸ್ಕ್ಯಾನಿಂಗ್ ಸೇವೆಯಲ್ಲಿ ಹೊಸ ಪ್ರಯೋಗ

ಖಾಸಗಿ ಆಸ್ಪತ್ರೆಗಳಲ್ಲಿ ಜನರ ಸುಲಿಗೆಗೆ ಕಡಿವಾಣ
– ಕೆ.ಬಿ.ರಮೇಶ್ ನಾಯಕ್

ಮೈಸೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆಯಿಂದಾಗಿ ಗರ್ಭಿಣಿಯರಿಗೆ ಅಲ್ಟ್ರಾಸ್ಕ್ಯಾನಿಂಗ್ ಹೆಸರಿನಲ್ಲಿ ಖಾಸಗಿ ಲ್ಯಾಬ್‌ಗಳಿಂದಾಗುವ ಸುಲಿಗೆ ಮತ್ತು ಗಂಟೆಗಟ್ಟಲೆ ಕಾಯಬೇಕಾದ ಸಮಯ ಉಳಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ತ್ರೀ ರೋಗ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವ ಹೊಣೆ ನೀಡಲು ಮೊದಲ ಹೆಜ್ಜೆ ಇಟ್ಟಿದೆ.

ಮೈಸೂರು ಜಿಲ್ಲೆಯಲ್ಲಿ ಈ ಯೋಜನೆಯು ಸಫಲತೆ ಪಡೆದರೆ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿ ತಾಯಿ ಮತ್ತು ಮಗುವಿನ ಆರೋಗ್ಯ ಗಮನಿಸಲು ಸುಲಭವಾಗಲಿದೆ. ಮೈಸೂರು ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿದಂತೆ ಪ್ರತಿ ವರ್ಷ 40 ಸಾವಿರ ಹೆರಿಗೆಗಳಾಗುತ್ತಿವೆ. ಖಾಸಗಿ ನರ್ಸಿಂಗ್ ಹೋಂಗಳಲ್ಲಿ ವರ್ಷಕ್ಕೆ ಅಂದಾಜು 5 ಸಾವಿರ ಹೆರಿಗೆಗಳು ಸೇರಿದಂತೆ ಒಟ್ಟು ಸಂಖ್ಯೆ 45 ಸಾವಿರ ದಾಟಿವೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಗಳ ಕೊರತೆ ಉಂಟಾಗಿರುವುದರಿಂದ ಖಾಸಗಿ ಆಸ್ಪತ್ರೆಗಳು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಎಕ್ಸರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಕೇವಲ ಐವರು ವಿಕಿರಣಶಾಸ್ತ್ರಜ್ಞರು ಇರುವುದರಿಂದಾಗಿ ಗರ್ಭಿಣಿಯರು ಖಾಸಗಿ ಲ್ಯಾಬ್‌ಗಳ ಮೊರೆ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗೆ ಕನಿಷ್ಠ 1ರಿಂದ 3 ಸಾವಿರ ರೂ.ವರೆಗೆ ದರ ನಿಗದಿಪಡಿಸಲಾಗಿದ್ದು, ಹೆರಿಗೆಯಾಗುವ ತನಕ ಕನಿಷ್ಠ ಮೂರರಿಂದ ಐದು ಬಾರಿಯಾದರೂ ಸ್ಕ್ಯಾನಿಂಗ್ ಮಾಡಿಸಬೇಕಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂ. ತೆರಬೇಕಾಗಿದೆ. ಇದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗುತ್ತಿರುವುದನ್ನು ಮನಗಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ತ್ರೀರೋಗ ತಜ್ಞರಿಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತರಬೇತಿ ಕೊಡಿಸಿ, ಗರ್ಭಿಣಿಯರು ಅಥವಾ ಅವರ ಕುಟುಂಬದವರಿಗೆ ಆಗುವ ಹೊರೆಯನ್ನು ತಪ್ಪಿಸಲು ಮಾರ್ಗೋಪಾಯವನ್ನು ಕಂಡುಕೊಂಡಿದೆ.

30 ಜನರಿಗೆ ತರಬೇತಿ: ಮೈಸೂರು ನಗರದಲ್ಲಿ ತುಳಸೀದಾಸ್ ದಾಸಪ್ಪ ಆಸ್ಪತ್ರೆ, ಜಯನಗರ ಹೆರಿಗೆ ಆಸ್ಪತ್ರೆ, ನಾಗಮ್ಮ ಪೆರುಮ್ಮಾಳ್ ಚೆಟ್ಟಿಯಾರ್ ಆಸ್ಪತ್ರೆ, ಜಯಲಕ್ಷ್ಮೀಪುರಂ ಲಕ್ಷ್ಮೀದೇವಮ್ಮ ಹೆರಿಗೆ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ವಿಕಿರಣ ಶಾಸ್ತ್ರಜ್ಞರು ಇದ್ದಾರೆ. ಆದರೆ ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವಿದ್ದರೂ ವಿಕಿರಣ ಶಾಸ್ತ್ರಜ್ಞರ ಕೊರತೆ ಇದೆ. ಹೀಗಾಗಿ, ಮೈಸೂರು ನಗರದ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ಮಂದಿ ಸ್ತ್ರೀರೋಗ ತಜ್ಞರಿಗೆ 15 ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ. ನುರಿತ ತಜ್ಞರು 15 ದಿನಗಳ ಕಾಲ ಸ್ತ್ರೀರೋಗ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವ ಬಗ್ಗೆ ತರಬೇತಿ ಕೊಡಿಸಿ, ಅವರಿಂದ ಐದಾರು ದಿನಗಳ ಕಾಲ ಪ್ರಾಯೋಗಿಕವಾಗಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಿದ ಮೇಲೆ ಅವರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲು ಯೋಜಿಸಲಾಗಿದೆ.


ಜಿಲ್ಲೆಯಲ್ಲಿ ವಿಕಿರಣಶಾಸ್ತ್ರಜ್ಞರ ಕೊರತೆ ಇರುವುದರಿಂದ ಸ್ತ್ರೀರೋಗ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 30ರಿಂದ 40ಜನ ಸ್ತ್ರೀರೋಗ ತಜ್ಞರಿದ್ದು, ಅವರಲ್ಲಿ 30 ಜನರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತರಬೇತಿ ನೀಡಲಾಗುತ್ತದೆ. ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಲು ಸಾವಿರಾರು ರೂ.ಕೊಡಬೇಕಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ ಜತೆಗೆ ಪರಿಣತರನ್ನು ರೂಪಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮೈಸೂರು


ಏತಕ್ಕಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್

ಭ್ರೂಣ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯಲು ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅಗತ್ಯವಿದೆ. ಆದ್ದರಿಂದ ಅದೇ ಸಮಯದಲ್ಲಿ, ಮಗುವಿನ ಎಲ್ಲಾ ಅಂಗಗಳ ಬೆಳವಣಿಗೆ ಸರಿಯಾಗಿದೆಯೋ ಇಲ್ಲವೋ ಅಥವಾ ಮಗು ಅವಳಿಯೋ ಎಂಬುದನ್ನು ತಿಳಿಯಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಹಕಾರಿಯಾಗಲಿದೆ.


ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಿಗೆ ಏನೇ ಆಧುನಿಕ ವ್ಯವಸ್ಥೆ ಕಲ್ಪಿಸಿದರೂ ಪರಿಣತರ ಕೊರತೆಯಿಂದಾಗಿ ಅವುಗಳ ಸೇವೆ ಲಭ್ಯವಾಗದೆ ಆರ್ಥಿಕವಾಗಿ ಹಿಂದುಳಿದ ಜನತೆ ಪರಿತಪಿಸುವಂತಾಗಿದೆ. ಹೀಗಾಗಿ ಹಲವು ಆಸ್ಪತ್ರೆಗಳಲ್ಲಿ ಆಧುನಿಕ ಯಂತ್ರೋಪಕರಣಗಳು ಧೂಳುಹಿಡಿಯುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಆದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಬಡ ಜನತೆಗೆ ಸೇವೆ ಒದಗಿಸುವ ಸದುದ್ದೇಶದಿಂದ ಅಲ್ಟ್ರಾ ಸ್ಕ್ಯಾನಿಂಗ್ ತಜ್ಞರನ್ನು ರೂಪಿಸಲು ಮುಂದಾಗಿರುವುದು ಹೊಸ ಪ್ರಯತ್ನ.

 

andolanait

Recent Posts

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

1 hour ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

1 hour ago

ಓದುಗರ ಪತ್ರ: ಶ್ರೇಷ್ಠ ಕಾರ್ಮಿಕ ಧುರೀಣ ಅನಂತ ಸುಬ್ಬರಾವ್

ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…

1 hour ago

ಬಾಪೂಜಿ ನೆನಪಲ್ಲಿ; ಖಾದಿ ಕೇಂದ್ರದ ಅಂಗಳದಲ್ಲಿ…

ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ  ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಚುನಾವಣೆ, ಚಿತ್ರನಗರಿ, ಒಟಿಟಿ ವರ್ತಮಾನ

ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…

2 hours ago

ಚಳಿ ಇರುವಾಗಲೇ ದಿನಕ್ಕೊಂದು ‘ಅಗ್ನಿ ಕರೆ’

ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…

2 hours ago