ವಾರಾಂತ್ಯ ವಿಶೇಷ

ದಟ್ಟ ಅಡವಿಯ ನಡುವೆ ನಕ್ಷತ್ರ ಕೋಟೆ ಮಂಜರಾಬಾದ್

ಗಿರೀಶ್ ಹುಣಸೂರು

ಹಾಸನ ಜಿಲ್ಲೆಯು ತನ್ನ ಶ್ರೀಮಂತ ಇತಿಹಾಸದಿಂದ ಜನಾಕರ್ಷಣೆಗೆ ಪಾತ್ರವಾಗಿದೆ. ಹಾಸನ ಜಿಲ್ಲೆ ಎಂದ ಕೂಡಲೇ ಕಣ್ಮುಂದೆ ಬರುವುದು ಬೇಲೂರು-ಹಳೇಬೀಡುಗಳ ಹೊಯ್ಸಳ ಶೈಲಿಯ ದೇವಾಲಯಗಳ ಕಣ್ಮನ ಸೆಳೆಯುವ ವಾಸ್ತು ಮತ್ತು ಶಿಲ್ಪಕಲೆಗಳು, ಪ್ರಾಕೃತಿಕ ಸೌಂದರ್ಯ, ಜೈನರ ಸುಪ್ರಸಿದ್ಧ ಯಾತ್ರಾಸ್ಥಳ ಶ್ರವಣಬೆಳಗೊಳದ ಜತೆಗೆ ಸಾಲು ಸಾಲು ಪ್ರವಾಸಿ ತಾಣಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಧಾರ್ಮಿಕ ತಾಣಗಳ ಜತೆಗೆ ನಿಸರ್ಗದತ್ತವಾಗಿಯೂ ಸಂಪದ್ಬರಿತವಾದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಸಾಕಷ್ಟು ಪ್ರವಾಸಿ ಸ್ಥಳಗಳು ಮತ್ತು ನೈಸರ್ಗಿಕ ಅದ್ಭುತ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕಲೆ ಮತ್ತು ವಾಸ್ತುಶಿಲ್ಪಗಳಿಂದ ಕೂಡಿದ ಜನಪ್ರಿಯ ಪ್ರವಾಸಿತಾಣಗಳಿಗೆ ಹೆಸರುವಾಸಿಯಾಗಿದೆ.

ಪಶ್ಚಿಮಘಟ್ಟ ಪರ್ವತ ಶ್ರೇಣಿಯ ಪುಷ್ಪಗಿರಿ, ಬಿಸಲೆ ಅರಣ್ಯ, ಹಿರೇಕಲ್ ಗಿರಿ, ನಿತ್ಯಹರಿದ್ವರ್ಣದ ಹಸಿರು ಹೊದ್ದ ದಟ್ಟ ಕಾನನ, ಬೆಟ್ಟಗುಡ್ಡಗಳು, ನದಿಗಳು, ಜಲಪಾತಗಳು, ನೀರಿನ ಝರಿಗಳು, ಗಿರಿಕಂದರಗಳಿಂದ ಕೂಡಿದ ಸಕಲೇಶಪುರ ತಾಲ್ಲೂಕು ಪ್ರಕೃತಿಯನ್ನು ಆರಾಧಿಸುವ, ಆಸ್ವಾದಿಸುವ ಜನರನ್ನು ತನ್ನತ್ತ ಸೆಳೆಯುತ್ತಿದೆ. ಪ್ರಕೃತಿ ಒಡಲೊಳಗಿರುವ ಸಕಲೇಶಪುರದ ಪ್ರಮುಖ ಆಕರ್ಷಣೆಗಳಲ್ಲಿ ಮಂಜರಾಬಾದ್ ಕೋಟೆ ಪ್ರಮುಖವಾಗಿದೆ. ಸಕಲೇಶಪುರ ಪಟ್ಟಣದಿಂದ ೫ ಕಿ.ಮೀ ದೂರದಲ್ಲಿದೆ. ನಕ್ಷತ್ರಾಕಾರದ ಈ ಕೋಟೆಯನ್ನು ೧೭೯೨ರಲ್ಲಿ ಟಿಪ್ಪುಸುಲ್ತಾನ್ ನಿರ್ಮಿಸಿದ್ದು, ಸಮುದ್ರಮಟ್ಟದಿಂದ ೩೧೪೧ ಅಡಿ ಎತ್ತರದಲ್ಲಿ, ಭೂಮಟ್ಟದಿಂದ ಸುಮಾರು ೯೮೮ ಮೀಟರ್ ಎತ್ತರದ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವಾಗ ಎಡಬದಿಯ ರಸ್ತೆಯಲ್ಲಿ ತಿರುಗಿದರೆ ಈ ಕೋಟೆಯನ್ನು ತಲುಪಬಹುದು. ಟಿಪ್ಪು ಸುಲ್ತಾನ್ ಮಂಜು ತುಂಬಿದ ಮಂಜರಾಬಾದಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ಈ ಕೋಟೆಗೆ ಮಂಜರಾಬಾದ್ ಎಂದು ಹೆಸರಿಟ್ಟ ಎಂದು ಹೇಳಲಾಗುತ್ತದೆ.

ಕೋಟೆಯನ್ನು ಯೂರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದರೂ ಕಟ್ಟಡ ನಿರ್ಮಾಣಕ್ಕೆ ಸುಟ್ಟ ಇಟ್ಟಿಗೆಗಳು, ಸುಣ್ಣದಗಾರೆ, ಗ್ರಾನೈಟ್ ಗಳನ್ನು ಬಳಸಲಾಗಿದೆ. ಕೋಟೆಯನ್ನು ಟಿಪ್ಪು ಸುಲ್ತಾನ್ ಸೇನೆಯ ಬ್ಯಾರಕ್‌ಗಳು, ಶಸಾಸಗಳು ಮತ್ತು ಗನ್ ಪೌಡರ್ ಸಂಗ್ರಹಿಸಲು ಬಳಸಲಾಗುತ್ತಿತ್ತು.

ಕೋಟೆಯ ಮೇಲೆ ಹತ್ತಿ ನಿಂತಾಗ ಸುತ್ತಲಿನ ಅಚ್ಚ ಹಸುರಿನ ಪ್ರಕೃತಿ ಸೌಂದರ್ಯ, ಮಣ್ಣಿನ ರಸ್ತೆಗಳು, ಬೆಟ್ಟಗಳು, ಕಣಿವೆಗಳು, ನದಿ,ತೊರೆ, ಝರಿಗಳು ಹೊಸದೊಂದು ಲೋಕಕ್ಕೆ ನಿಮ್ಮನ್ನು ಕರೆದೊಯ್ಯುವಲ್ಲಿ ಅಚ್ಚರಿಯೇ ಇಲ್ಲ. ಸುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯ ಎಂಥವರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ.

ಮಂಜರಾಬಾದ್ ಕೋಟೆಯನ್ನು ಸಂಪೂರ್ಣವಾಗಿ ವೀಕ್ಷಿಸಲು ಮತ್ತು ಕೋಟೆಯ ಇತಿಹಾಸವನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಕೇ ಬೇಕು. ಆದಾದ ಬಳಿಕವಷ್ಟೇ ಸಕಲೇಶಪುರ ಮತ್ತು ಅದರ ಸುತ್ತಮುತ್ತಲಿನ ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಮಂಜರಾಬಾದ್ ಕೋಟೆಗೆ ಸಮೀಪದಲ್ಲಿ ಸಕಲೇಶ್ವರ ದೇವಸ್ಥಾನ, ಅಬ್ಬೆ ಜಲಪಾತ, ಮಗಜಹಳ್ಳಿ ಜಲಪಾತ, ಬೆಟ್ಟದ ಭೈರವೇಶ್ವರ ದೇವಸ್ಥಾನ ಇತ್ಯಾದಿ ತಾಣಗಳಿವೆ. ಆಲೂರು ಪಟ್ಟಣದಿಂದ ೧೪ ಕಿ.ಮೀ ದೂರದಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಮಹಾರಾಜನ ದುರ್ಗವಿದೆ. ಇದರ ಮಧ್ಯೆ ಅಷ್ಟಭುಜಾಕೃತಿಯಲ್ಲಿ ನಿರ್ಮಿಸಿರುವ ಕೊಳ ಗಮನಸೆಳೆಯುತ್ತದೆ. ಹಳೆಯ ಕೋಟೆಯ ಅವಶೇಷಗಳನ್ನು ಮಹಾರಾಜನ ದುರ್ಗದಲ್ಲಿ ಕಾಣಬಹುದು. ಹಾರನಹಳ್ಳಿಯಲ್ಲಿ ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿರುವ ಕೋಟೆ ಇಲ್ಲಿದ್ದು, ಕೋಟೆ ಪ್ರಸ್ತುತ ಹಾಳಾಗಿದೆ. ಇಲ್ಲಿ ಸೋಮೇಶ್ವರ ದೇವಾಲಯ ಕೂಡ ಇದೆ.

ದೂರದಿಂದ ತೆರಳುವ ಪ್ರವಾಸಿಗರ ವಾಸ್ತವ್ಯಕ್ಕೆ ಸಕಲೇಶಪುರ ಪಟ್ಟಣದಲ್ಲಿ ಕೈಗೆಟುಕುವ ದರದಲ್ಲಿ ಹೋಂಸ್ಟೇಗಳು ಮತ್ತು ವಸತಿ ಗೃಹಗಳು ಲಭ್ಯವಿದೆ.

ಮಂಜರಾಬಾದ್ ತಲುಪುವುದು ಹೇಗೆ?: 

ಹಾಸನ ಜಿಲ್ಲಾ ಕೇಂದ್ರದಿಂದ ೪೦ ಕಿಮೀ ದೂರದಲ್ಲಿರುವ ಸಕಲೇಶಪುರ ಸಮೀಪವಿರುವ ಮಂಜರಾಬಾದ್ ಕೋಟೆಯನ್ನು ರಸ್ತೆ ಮಾರ್ಗದ ಮೂಲಕ ಮಾತ್ರ ತಲುಪಬಹುದು. ಹಾಸನ, ಮೈಸೂರಿನಿಂದ ಸಾಕಷ್ಟು ಸಾರಿಗೆ ಬಸ್‌ಗಳು ಈ ಮಾರ್ಗದ ಮೂಲಕವೇ ಸಂಚರಿಸುತ್ತವೆ. ಸ್ವಂತ ವಾಹನದಲ್ಲಿ ತೆರಳುವವರು ಯಾವುದೇ ಸಮಯದಲ್ಲೂ ಹೋಗಿ ಕೋಟೆ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ಕೋಟೆ ಪ್ರವೇಶ ಸಮಯ:  ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆವರೆಗೆ ಕೋಟೆ ತೆರೆದಿರುತ್ತದೆ. ಕೋಟೆ ಪ್ರವೇಶಿಸಲು ಯಾವುದೇ ಶುಲ್ಕವಿರುವುದಿಲ್ಲ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚರಂಡಿಯಿಂದ ವಿದ್ಯುತ್ ಕಂಬವನ್ನು ಬೇರ್ಪಡಿಸಿ

ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿ ಚರಂಡಿ, ಪಾದಚಾರಿಮಾರ್ಗ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸಿದ್ದಲಿಂಗೇಶ್ವರ ಅಂಗಡಿ ಬಳಿ ವಿದ್ಯುತ್…

4 hours ago

ಓದುಗರ ಪತ್ರ: ಬೇಲಿಯೇ ಎದ್ದು ಹೊಲ ಮೇಯ್ದಂತೆ !

ಮೈಸೂರು ನಗರದ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಒಂದರಲ್ಲಿ ಸಾಲ ನೀಡುವಿಕೆಯಲ್ಲಿ ಕೊಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.…

4 hours ago

ಓದುಗರ ಪತ್ರ: ಕೆಪಿಎಸ್‌ಸಿ ಶುದ್ಧೀಕರಣದ ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ…

4 hours ago

ದಸರೆಯ ಹಿಂದೆ ಸಾಗುವ ಗಜಪಡೆ ಮಹಾಯಾನ

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಮಾವುತ - ಆನೆ ನಡುವೆ ಹೃದಯಸ್ಪರ್ಶಿ ಸಂಬಂಧ ಮೈಸೂರು ದಸರಾ ಎಂದಾಕ್ಷಣ ನಮ್ಮ ಕಣ್ಣ…

4 hours ago

ಗರ್ಭಕೋಶ ಕ್ಯಾನ್ಸರ್‌ಗೆ ಲಸಿಕೆ ಅಸ್ತ್ರ

ಚಿರಂಜೀವಿ ಸಿ. ಹುಲ್ಲಹಳ್ಳಿ ಜಿಲ್ಲೆಯಲ್ಲಿ ಎಚ್‌ಪಿವಿ ಅಭಿಯಾನ; ಶೇ.೬೮.೮ರಷ್ಟು ಪ್ರಗತಿ ೧೫,೫೧೮ ಬಾಲಕಿಯರಿಗೆ ಲಸಿಕೆ ನೀಡುವ ಗುರಿ; ೮,೩೬೦ ಸಾಧನೆ…

4 hours ago

ಕೊಡಗಿನಲ್ಲಿ ಇಂದು ಕೈಲ್‌ಪೊಳ್ದ್ ಸಂಭ್ರಮ

ಎಸ್.ಎ. ಹುಸೇನ್ ಆಯುಧಗಳಿಗೆ ವಿಶೇಷ ಪೂಜೆ; ಜಿಲ್ಲೆಯಾದ್ಯಂತ ಸಂಭ್ರಮದ ಹಬ್ಬದಾಚರಣೆಗೆ ಸಿದ್ಧತೆ ಮಡಿಕೇರಿ: ಕೊಡಗಿನ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯ…

4 hours ago