ಚಿರಂಜೀವಿ ಸಿ. ಹುಲ್ಲಹಳ್ಳಿ
ಜಿಲ್ಲೆಯಲ್ಲಿ ಎಚ್ಪಿವಿ ಅಭಿಯಾನ; ಶೇ.೬೮.೮ರಷ್ಟು ಪ್ರಗತಿ
೧೫,೫೧೮ ಬಾಲಕಿಯರಿಗೆ ಲಸಿಕೆ ನೀಡುವ ಗುರಿ; ೮,೩೬೦ ಸಾಧನೆ
ಲಸಿಕೆ ಬಗ್ಗೆ ತಪ್ಪುಕಲ್ಪನೆ ಸಲ್ಲದು; ಆರ್ಸಿಎಚ್ಒ
ಮೈಸೂರು: ಮಹಿಳೆಯರನ್ನು ಕಾಡುವ ಅನೇಕ ಕಾಯಿಲೆಗಳ ಪೈಕಿ ಗರ್ಭಕೋಶದ ಕ್ಯಾನ್ಸರ್ ಕೂಡ ಒಂದು. ಚಿಕಿತ್ಸೆ ಪಡೆಯಲು ತಡವಾದರೆ ಅದು ಜೀವಕ್ಕೇ ಸಮಸ್ಯೆಯಾಗಬಹುದು. ಇದರ ಗಂಭೀರತೆಯನ್ನು ಅರಿತ ರಾಜ್ಯ ಸರ್ಕಾರ ಈ ಕಾಯಿಲೆಯನ್ನು ತಡೆಗಟ್ಟಲು ಲಸಿಕೆ ಅಭಿಯಾನವನ್ನು ಆರಂಭಿಸಿದ್ದು, ಆ ಮೂಲಕ ಮಹಿಳೆಯರ ಆರೋಗ್ಯವಂತ ಬದುಕಿಗೆ ಆದ್ಯತೆ ನೀಡಿದೆ.
ಜಿಲ್ಲೆಯಲ್ಲಿ ಎಚ್ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕೆ ನೀಡುವ ಅಭಿಯಾನದಲ್ಲಿ ಒಟ್ಟಾರೆ ೩೨,೯೪೬ ಬಾಲಕಿಯರನ್ನು ಗುರಿಯಾಗಿಸಿಕೊಂಡಿದ್ದು, ಇದುವರೆಗೆ ೨೨,೬೫೭ ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ.೬೮.೮ರಷ್ಟು ಪ್ರಗತಿ ಸಾಧಿಸಿದೆ.
ಆ.೨೮ರವರೆಗೆ ಜಿಲ್ಲೆಯ ಕೆಲವು ತಾಲ್ಲೂಕುಗಳು ಶೇ.೯೦ಕ್ಕೂ ಅಧಿಕ ಪ್ರಗತಿ ಸಾಧಿಸಿದ್ದರೆ, ಮೈಸೂರು ತಾಲ್ಲೂಕಿನಲ್ಲಿ ಲಸಿಕಾ ಪ್ರಗತಿ ಶೇ.೫೩.೯ರಷ್ಟು ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸುವ ಅಗತ್ಯ ಎದುರಾಗಿದೆ.
ಪಿರಿಯಾಪಟ್ಟಣ ಪ್ರಥಮ: ಎಚ್ಪಿವಿ ಲಸಿಕಾ ಸಾಧನೆ ಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಜಿಲ್ಲೆಗೆ ಮಾದರಿಯಾಗಿದೆ. ಇಲ್ಲಿ ೨,೩೮೪ ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ೨,೩೧೧ ಮಂದಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ ತಾಲ್ಲೂಕು ಶೇ.೯೬.೯ರಷ್ಟು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ. ಕೆ.ಆರ್.ನಗರ ತಾಲ್ಲೂಕು ಕೂಡ ಉತ್ತಮ ಸಾಧನೆ ಮಾಡಿದ್ದು, ೧,೩೬೫ ಗುರಿಯಲ್ಲಿ ೧,೨೬೫ ಮಂದಿಗೆ ಲಸಿಕೆ ನೀಡಿ ಶೇ.೯೨.೭ರಷ್ಟು ಪ್ರಗತಿ ದಾಖಲಿಸಿದೆ. ಗುರಿ ಪೂರ್ಣಗೊಳಿಸುವ ಹಂತಕ್ಕೆ ಈ ಎರಡೂ ತಾಲ್ಲೂಕುಗಳು ಸಮೀಪದಲ್ಲಿವೆ.
ತಿ.ನರಸೀಪುರ ತಾಲ್ಲೂಕಿನಲ್ಲಿ ೨,೯೩೩ ಗುರಿಯಲ್ಲಿ ೨,೪೭೦ ಮಂದಿಗೆ ಲಸಿಕೆ ನೀಡಿ ಶೇ.೮೪.೨, ಸರಗೂರು ತಾಲ್ಲೂಕಿನಲ್ಲಿ ೮೮೦ ಗುರಿಯಲ್ಲಿ ೭೩೯ ಮಂದಿಗೆ ಲಸಿಕೆ ನೀಡಿ ಶೇ.೮೪ ಹಾಗೂ ಹುಣಸೂರು ತಾಲ್ಲೂಕಿನಲ್ಲಿ ೨,೯೦೩ ಗುರಿಯಲ್ಲಿ ೨,೩೮೧ ಮಂದಿಗೆ ಲಸಿಕೆ ನೀಡಿ ಶೇ.೮೨ರಷ್ಟು ಸಾಧನೆ ಮಾಡಲಾಗಿದೆ. ಸಾಲಿಗ್ರಾಮ ತಾಲ್ಲೂಕಿನಲ್ಲಿ ೧,೨೫೨ ಬಾಲಕಿಯರ ಗುರಿಯಲ್ಲಿ ೧,೦೧೦ ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ.೮೦.೭ರಷ್ಟು ಪ್ರಗತಿ ಕಂಡುಬಂದಿದೆ.
ಮೈಸೂರು ತಾಲ್ಲೂಕಿನಲ್ಲಿ ಹಿನ್ನಡೆ: ಜಿಲ್ಲೆಯಲ್ಲೇ ಅತಿ ಹೆಚ್ಚು ಗುರಿ ಹೊಂದಿರುವ ಮೈಸೂರು ತಾಲ್ಲೂಕಿನಲ್ಲಿ ಲಸಿಕಾ ಪ್ರಗತಿ ಕಡಿಮೆಯಾಗಿರುವುದು ಗಮನ ಸೆಳೆದಿದೆ. ೧೫,೫೧೮ ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದರೂ, ಇದುವರೆಗೆ ೮,೩೬೦ ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಶೇ.೫೩.೯ರಷ್ಟು ಸಾಧನೆಯೊಂದಿಗೆ ಮೈಸೂರು ತಾಲ್ಲೂಕು ಜಿಲ್ಲೆಯಲ್ಲೇ ಕೊನೆಯ ಸ್ಥಾನದಲ್ಲಿದೆ.
ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ೧,೮೯೨ ಗುರಿಯಲ್ಲಿ ೧,೩೯೦ ಮಂದಿಗೆ ಲಸಿಕೆ ನೀಡಿ ಶೇ.೭೩.೫ರಷ್ಟು ಸಾಧನೆ ಮಾಡಲಾಗಿದೆ. ನಂಜನಗೂಡು ತಾಲ್ಲೂಕಿನಲ್ಲಿ ೩,೮೧೯ ಗುರಿಯಲ್ಲಿ ೨,೭೩೧ ಮಂದಿಗೆ ಲಸಿಕೆ ನೀಡಿ ಶೇ.೭೧.೫ರಷ್ಟು ಪ್ರಗತಿ ಸಾಧಿಸಲಾಗಿದೆ.
ವಯೋಮಾನಕ್ಕೆ ತಕ್ಕಂತೆ ಮೂರು ವಿಭಾಗಗಳಲ್ಲಿ ಮಹಿಳೆಯರಿಗೆ ಲಸಿಕೆ: ೯ ರಿಂದ ೧೪ ವರ್ಷದೊಳಗಿನ ಬಾಲಕಿಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದರಿಂದ ೨ ಡೋಸ್ಗಳನ್ನು ನೀಡಲಾಗುತ್ತಿದೆ. ಮೊದಲ ಡೋಸ್ ಪಡೆದ ೬ ರಿಂದ ೧೨ ತಿಂಗಳ ನಂತರ ಎರಡನೇ ಡೋಸ್ ಪಡೆಯಬಹುದು. ೧೫ ರಿಂದ ೨೬ ವರ್ಷದೊಳಗಿನ ಯುವತಿಯರು: ಈ ವಯಸ್ಸಿನವರು ಮೊದಲ ಬಾರಿಗೆ ಲಸಿಕೆ ಪಡೆಯುವು ದಾದರೆ, ೩ ಡೋಸ್ಗಳನ್ನು ತೆಗೆದುಕೊಳ್ಳಬೇಕು. (ಮೊದಲ ಡೋಸ್, ೧ ಅಥವಾ ೨ ತಿಂಗಳ ನಂತರ ಎರಡನೇ ಡೋಸ್, ಮತ್ತು ೬ ತಿಂಗಳ ನಂತರ ಮೂರನೇ ಡೋಸ್).
೨೭ ರಿಂದ ೪೫ ವರ್ಷದ ವಯಸ್ಕರು: ಈ ವಯಸ್ಸಿ ನವರಿಗೂ ಲಸಿಕೆ ಅನುಮೋದಿತವಾಗಿದ್ದರೂ, ಅವರು ಲಸಿಕೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.
ಕ್ಯಾನ್ಸರ್ ತಡೆಗಟ್ಟುವಿಕೆಗೆ ಲಸಿಕೆ ಮಹತ್ವದ ಅಸ್ತ್ರ: ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಲು ಈ ಲಸಿಕೆ ಪ್ರಮುಖವಾಗಿದೆ. ಹೆಣ್ಣು ಮಕ್ಕಳಿಗೆ ನಿಗದಿತ ವಯಸ್ಸಿನಲ್ಲಿಯೇ ಲಸಿಕೆ ನೀಡುವ ಮೂಲಕ ಭವಿಷ್ಯದಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮವನ್ನು ಕೈಗೊಂಡಿದೆ. ಆದರೆ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳು, ಮಾಹಿತಿ ಕೊರತೆ ಹಾಗೂ ಕೆಲವು ಪೋಷಕರ ಹಿಂಜರಿಕೆ ಅಭಿಯಾನದ ವೇಗಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅಗತ್ಯ.
” ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಬಾಲಕಿಯರು, ಯುವತಿಯರು ಲಸಿಕೆ ಪಡೆಯುವುದು ಅತ್ಯವಶ್ಯಕ. ಆದರೆ, ಕೆಲವರು ವ್ಯಾಕ್ಸಿನ್ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿರುವುದರಿಂದ ಗುರಿ ತಲುಪುವಲ್ಲಿ ವಿಳಂಬವಾಗುತ್ತಿದೆ. ಅಂತಹ ಪೋಷಕರು ಮತ್ತು ಮಕ್ಕಳಿಗೆ ಮನವರಿಕೆ ಮಾಡಿ ಲಸಿಕೆ ನೀಡಲಾಗುತ್ತಿದೆ. ಶೇ.೧೦೦ರಷ್ಟು ಗುರಿ ತಲುಪಲು ಇಲಾಖೆ ಮುಂದಾಗಿದೆ.”
– ಡಾ.ಮೊಹಮ್ಮದ್ ಸಿರಾಜ್ ಅಹಮ್ಮದ್, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್ಸಿಎಚ್ಒ)
ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿ ಚರಂಡಿ, ಪಾದಚಾರಿಮಾರ್ಗ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸಿದ್ದಲಿಂಗೇಶ್ವರ ಅಂಗಡಿ ಬಳಿ ವಿದ್ಯುತ್…
ಮೈಸೂರು ನಗರದ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಒಂದರಲ್ಲಿ ಸಾಲ ನೀಡುವಿಕೆಯಲ್ಲಿ ಕೊಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.…
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ…
ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಮಾವುತ - ಆನೆ ನಡುವೆ ಹೃದಯಸ್ಪರ್ಶಿ ಸಂಬಂಧ ಮೈಸೂರು ದಸರಾ ಎಂದಾಕ್ಷಣ ನಮ್ಮ ಕಣ್ಣ…
ಎಸ್.ಎ. ಹುಸೇನ್ ಆಯುಧಗಳಿಗೆ ವಿಶೇಷ ಪೂಜೆ; ಜಿಲ್ಲೆಯಾದ್ಯಂತ ಸಂಭ್ರಮದ ಹಬ್ಬದಾಚರಣೆಗೆ ಸಿದ್ಧತೆ ಮಡಿಕೇರಿ: ಕೊಡಗಿನ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯ…
ಮಂಜು ಕೋಟೆ ಕೋಟೆ: ಬಸ್ ನಿಲ್ದಾಣದಲ್ಲಿ ದೊರೆಯದ ಶುದ್ಧ ಕುಡಿಯುವ ನೀರು, ಪ್ರಯಾಣಿಕರಿಗೆ ಸಮಸ್ಯೆ ಎಚ್.ಡಿ.ಕೋಟೆ: ಪಟ್ಟಣದ ಕೆಎಸ್ಆರ್ಟಿಸಿ ಬಸ್…