ಆಂದೋಲನ ಪುರವಣಿ

ವನಿತೆ-ಮಮತೆ : ಮಣ್ಣೆಂದರೆ ಬರಿ ಮಣ್ಣಲ್ಲ, ಇದು ಹೊನ್ನು

– ಜಯಶಂಕರ್ ಬದನಗುಪ್ಪೆ

ಹೊಸತು ಎಂಬುದು ನಿರಂತರ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು, ಒಂದು ಪರಿಚಯವಾದರೆ ಮತ್ತೊಂದರ ಅವಿಷ್ಕಾರ ಆಗಲೇ ಬೇಕು. ಇದು ಆಧುನಿಕ ಜಗತ್ತಿನ ಅಭಿರುಚಿ, ಈ ಅಭಿರುಚಿ ನಿಂತ ನೀರಾಗಿರುವುದಿಲ್ಲ. ಸದಾ ಹೊಸದರೆಡೆಗಿನ ಸೆಳೆತ,ಆಕರ್ಷಣೆ ನಿರಂತರ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುತ್ತದೆ. ಶಿಲಾಯುಗದ ನಂತರ ನವ ನಾಗರಿಕ ಪ್ರಪಂಚದ ಮಸ್ತಿಷ್ಕಕಕ್ಕೆ ಹೊಳೆಯದೆ ಗೌಣವೆನಿಸಿದ್ದ ವಸ್ತುಗಳೆಲ್ಲ ಇವತ್ತಿನ ಕೌಶಲದ ನಾಜೂಕಿನ ಕೈಗಳಿಗೆ ಸಿಕ್ಕಿ ನವನವೀನ ರೂಪವನ್ನೇ ಪಡದುಕೊಳ್ಳುತ್ತಿವೆ. ಇಂತಹ ಕೌಶಲಗಳಲ್ಲಿ ಮಣ್ಣಿನ ‘ಟೆರ್ರಾಕೋಟಾ’ಕಲೆಯೂ ಒಂದು…!

ಅದರಲ್ಲೇನಿದೆ ಮಣ್ಣು…! ಇದು ಸಾಮಾನ್ಯ ಸಂದರ್ಭಗಳಲ್ಲೂ ಹೆಚ್ಚಾಗಿ ಹಳ್ಳಿಗರ ಬಾಯಿಂದ ಹೊರಡುವ ಗ್ರಾಮೀಣ ಸೊಗಡಿನ ಮಾತು.ತಿರುಳಿಲ್ಲದ್ದು,ಸಾರವಿಲ್ಲದ್ದು ಎಂಬುದೇ ಇದರ ಅರ್ಥ. ಆದರೆ ವಾಸ್ತವದಲ್ಲಿ ಮಣ್ಣಿನ ಒಡನಾಟವಿಲ್ಲದ ಮನುಷ್ಯನ ಬದುಕು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ್ದು. ಅದರ ಜತೆಗಿನ ಅವಿನಾಭಾವ ಸಂಬಂಧವೇ ಅಂಥದ್ದು.

ನವಯುಗದಲ್ಲಿ ಮಣ್ಣಿನ ಪರಿಕರಗಳ ಬಳಕೆ ಕ್ಷೀಣಿಸಿದರೂ ಇತ್ತೀಚೆಗೆ ಜಗತ್ತಿಗೆ ಆರೋಗ್ಯ ಪೂರ್ಣ ಬದುಕಿನ ವಾಸ್ತವಗಳನ್ನು ಅರುಹುವಲ್ಲಿ ‘ಕ್ರಿಯೇಟಿವಿಟಿ’ ಎಂಬ ಅಂಶ ಬಹಳ ಕೆಲಸ ಮಾಡುತ್ತಿದೆ. ಇದನ್ನೇ ಆರಂಭದಲ್ಲಿ ಹವ್ಯಾಸವಾಗಿ ತೆಗದುಕೊಂಡು ನಂತರ ವೃತ್ತಿಯಾಗಿಸಿಕೊಂಡು ವಿಭಿನ್ನ ರೀತಿಯಲ್ಲಿ ಬದುಕು ಕಟ್ಟಿಕೊಂಡವರು ಮೈಸೂರಿನ ಮಹಿಳೆ ‘ನೀಲಿ ಲೋಹಿತ್’!

ಮೈಸೂರಿನ ಕೆ.ಜಿ.ಕೊಪ್ಪಲಿನವರಾದ ನೀಲಿ ಲೋಹಿತ್ ಅವರು ಓದಿದ್ದು ಬಿಎ ಪದವಿ, ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದಾರೆ. ಇವರಿಗೀಗ ೩೭ ವರ್ಷ. ಆದರೆ ಅವರ ಪರಿಕಲ್ಪನೆ ವಯಸ್ಸಿಗೂ ಮೀರಿದ್ದು.

ಕುವೆಂಪು ನಗರದ ಕಾಮಾಕ್ಷಿ ಆಸ್ಪತ್ರೆ ರಸ್ತೆಯಲ್ಲಿರುವ ಅವರ ಕುಟೀರ ಮಣ್ಣಿನಿಂದ ರೂಪಗೊಂಡ ಆಭರಣಗಳ ತಾಣ. ಸುಮಾರು 500 ಕ್ಕೂ ಹೆಚ್ಚು ವಿವಿಧ ಮಾದರಿಯ ವಿನ್ಯಾಸಗಳನ್ನೊಳಗೊಂಡ ಟೆರ್ರಾಕೋಟಾ ಕಲೆಯ ಮಣ್ಣಿನ ಆಭರಣಗಳು ನೋಡುವ ಆಸಕ್ತರಿಗೆ ತೆರೆದುಕೊಳ್ಳುತ್ತವೆ. ಕಾಲ್ಗೆಜ್ಜೆಯಿಂದ ಶುರುವಾಗಿ ಓರ್ವ ಮಧುವಣಗಿತ್ತಿಗೆ ಏನೆಲ್ಲಾ ಸಿಂಗಾರ ಮಾಡಬಹುದೋ ಅದೆಲ್ಲವೂ ಇಲ್ಲಿ ಮಣ್ಣಿನಿಂದ ತಯಾರಾಗುತ್ತದೆ. ಅಡುಗೆ ಮನೆ, ಅಲಂಕಾರಿಕ ವಸ್ತುಗಳಂತಹ ಕೆಲವೇ ಕೆಲವು ಪರಿಕರಗಳಿಗೆ ಸೀಮಿತವಾಗಿದ್ದ ಮಣ್ಣು ನೀಲಿಲೋಹಿತ್ ಅವರ ಕೈಚಳಕದಿಂದ ಆಭರಣ ಲೋಕಕ್ಕೆ ತನ್ನನ್ನು ತೆರೆದುಕೊಂಡಿದೆ.

ಇಳಕಲ್ ಸೀರೆ,ಮೊಣಕಾಲ್ಮೂರು, ಮೈಸೂರು ಸಿಲ್ಕ್ ನಂತಹ ಸೀರೆ ಉಡಲು ಇಚ್ಚಿಸುವ ನಾರಿಯರ ಸೌಂದರ್ಯವನ್ನು ಇಲ್ಲಿ ರೂಪುಗೊಳ್ಳುವ ಮಣ್ಣಿನ ಆಭರಣಗಳು ಇಮ್ಮಡಿಗೊಳಿಸುತ್ತವೆ. ದುರ್ಬೀನು ಹಾಕಿ ನೋಡಿದರೂ ಇದು ಮಣ್ಣಿನ ಆಭರಣವೆಂದು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಆದರೆ ಚೆಲುವಿನಲ್ಲಿ ಚಿನ್ನದ ಆಭರಣವನ್ನೂ ಮೀರಿಸುತ್ತವೆ. ಇದೀಗ ಈ ಆಭರಣಗಳೆಡೆಗಿನ ಆಸಕ್ತಿ ಹೆಚ್ಚುತ್ತಿದ್ದು ಮಹಿಳೆಯರನ್ನು ಆಕರ್ಷಿಸುತ್ತಿವೆ. ಹದಗೊಳಿಸಿದ ಮಣ್ಣಿನಿಂದ ರೂಪುಗೊಂಡ ಈ ಆಭರಣಗಳು ಗಟ್ಟಿತನವನ್ನು ಹೊಂದಿರುತ್ತವೆ. ನೀರು ಬಿದ್ದರೆ ಕರಗುತ್ತವೆ ಅಥವಾ ಅಂದ ಕಳೆದುಕೊಳ್ಳುತ್ತವೆ ಎಂಬ ಆತಂಕವೂ ಇರದು. ಸಭೆ-ಸಮಾರಂಭಗಳಲ್ಲಿ ಉಳಿದವರನ್ನು ತನ್ನತ್ತ ಆಕರ್ಷಿಸಿ, ಒಂದಷ್ಟು ಚರ್ಚೆಯನ್ನು ಸೃಷ್ಟಿಸುತ್ತವೆ ಮಣ್ಣಿನ ನಾಜೂಕಿನ ಆಭರಣಗಳು.

ನೇರ ಮಾರುಕಟ್ಟೆಯ ಜತೆಗೆ ನೀಲಿ ಲೋಹಿತ್ ಅವರು ತಮ್ಮ ಉತ್ಪನ್ನಗಳಿಗೆ ಆಧುನಿಕ ಮಾರುಕಟ್ಟೆ ವ್ಯವಸ್ಥೆಯನ್ನೂ ಕಂಡು ಕೊಂಡಿದ್ದಾರೆ. ಇದಕ್ಕಾಗಿ ಒಂದು ವೆಬ್ ಸೈಟ್ ಸೃಷ್ಟಿಸಿದ್ದಾರೆ. ಇದರ ಜತೆಗೆ ಸಾಮಾಜಿಕ ಜಾಲತಾಣ, ಫೇಸ್ ಬುಕ್, ಇನ್ಸ್ಟಾ ಗ್ರಾಮ್,ಯೂಟೂಬ್ ಕೂಡ ಇವರ ಆಭರಣ ಉತ್ಪನ್ನಗಳಿಗೆ ಗ್ರಾಹಕರನ್ನು ಒದಗಿಸಿಕೊಟ್ಟಿವೆ.

ಅಮೆರಿಕಾದ ಕ್ಯಾಲಿಫೋರ್ನಿಯಾ, ಉಗಾಂಡ, ದೆಹಲಿ,ಹೈದರಾಬಾದ್, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಹಕರಿಗೆ ಇವರು ಮಣ್ಣಿನಿಂದ ತಯಾರಿಸಿದ ಮೂಗುತಿ,ಕಿವಿಯೋಲೆ, ಬೈತಲೆಬೊಟ್ಟು,ವಿವಿಧ ಮಾದರಿಯ ಕತ್ತಿನ ಸರಗಳು, ತೋಳ್ಬಂದಿ, ಸೊಂಟದಪಟ್ಟಿ, ಕಾಲ್ಗೆಜ್ಜೆ,ಜಡೆಬಿಲ್ಲೆ ಮುಂತಾದ ಮಣ್ಣಿನ ಆಭರಣಗಳು ತಲುಪಿ, ಜನಪ್ರಿಯತೆ ಗಳಿಸಿವೆ.

2017 ರ ಆರಂಭದಲ್ಲಿ ಶೂನ್ಯದಿಂದಲೇ ಆರಂಭವಾದ ಮಣ್ಣಿನ ಆಭರಣಗಳ ಕುಟೀರ 2019ರ ಸೆಪ್ಟಂಬರ್‌ನಲ್ಲಿ ‘ನೀಲಿಕಲಾ ಕ್ರಿಯೇಷನ್ಸ್ ’ ರೂಪ ತಾಳಿತು. ಕೊರೊನಾ ಸಂದರ್ಭದಲ್ಲಿ 9 ವರ್ಷದಿಂದ 60 ವರ್ಷದ ವರೆಗಿನ ಗೃಹಿಣಿಯರೂ ಆನ್‌ಲೈನ್ ತರಗತಿಯಲ್ಲಿ ಮಣ್ಣಿನ ಆಭರಣಗಳ ತಯಾರಿಕೆ ಕೌಶಲದ ಬಗ್ಗೆ ಕಲಿತಿದ್ದಾರೆ.ಸಾಕಷ್ಟು ಹೋರಾಟದ ನಂತರ ಕಳೆದ ವರ್ಷ ಕುವೆಂಪುನಗರ ಎಸ್‌ಬಿಐ ಶಾಖೆಯಿಂದ ಆರ್ಥಿಕ ನೆರವು ಸಿಕ್ಕಿದೆ. ಮರುಪಾವತಿಯೂ ಆಗುತ್ತಿದೆ. ಸಾಲಕೊಡುವಾಗ ಖಾತರಿಯ ಬಗ್ಗೆ ಹಿಂದೆಮುಂದೆ ನೋಡಿದ್ದ ಬ್ಯಾಂಕ್ ಅಧಿಕಾರಿಗಳು ನಿರಾಳರಾಗಿದ್ದಾರೆ.ನೀಲಿ ಕಲಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿಚ್ಚಿಸುವವರು ಮೊಬೈಲ್ ಸಂಖ್ಯೆ : 7676960671 ಇಲ್ಲಿ ಸಂಪರ್ಕಿಸಬಹುದು. ವೆಬ್‌ಸೈಟ್: www.Neelikala.com


8 ಮಂದಿಗೆ ಉದ್ಯೋಗ ಕೊಟ್ಟಿದ್ದೇನೆ. ಈ ಕೆಲಸದಲ್ಲಿ ‘ಕ್ರಿಯೇಟಿವಿಟಿ’ ಬಹಳ ಮುಖ್ಯ. ಅದೇ ಬಂಡವಾಳ, ಸದಾ ಹೊಸತರ ಬಗ್ಗೆ ಯೋಚಿಸುತ್ತಿರಬೇಕು, ಜನರೂ ಸಹ ಹೊಸ ಹೊಸ ವಿನ್ಯಾಸಗಳನ್ನು ಬಯಸುತ್ತಾರೆ. ಅದಕ್ಕೆ ನಾನೂ ಹೊಂದಿಕೊಂಡಿದ್ದೇನೆ. 5 ವರ್ಷಗಳ ಪರಿಶ್ರಮದ ನಂತರ ಸ್ಪಷ್ಟತೆ,ನೆಮ್ಮದಿ ಎರಡೂ ಸಿಕ್ಕಿದೆ.

-ನೀಲಿ ಲೋಹಿತ್.

————————-

ಇಂಟ್ರಾ :

ಹೊಸತು ಎಂಬುದು ನಿರಂತರ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು, ಒಂದು ಪರಿಚಯವಾದರೆ ಮತ್ತೊಂದರ ಅವಿಷ್ಕಾರ ಆಗಲೇ ಬೇಕು. ಇದು ಆಧುನಿಕ ಜಗತ್ತಿನ ಅಭಿರುಚಿ, ಈ ಅಭಿರುಚಿ ನಿಂತ ನೀರಾಗಿರುವುದಿಲ್ಲ. ಸದಾ ಹೊಸದರೆಡೆಗಿನ ಸೆಳೆತ,ಆಕರ್ಷಣೆ ನಿರಂತರ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುತ್ತದೆ. ಶಿಲಾಯುಗದ ನಂತರ ನವ ನಾಗರಿಕ ಪ್ರಪಂಚದ ಮಸ್ತಿಷ್ಕಕಕ್ಕೆ ಹೊಳೆಯದೆ ಗೌಣವೆನಿಸಿದ್ದ ವಸ್ತುಗಳೆಲ್ಲ ಇವತ್ತಿನ ಕೌಶಲದ ನಾಜೂಕಿನ ಕೈಗಳಿಗೆ ಸಿಕ್ಕಿ ನವನವೀನ ರೂಪವನ್ನೇ ಪಡೆದುಕೊಳ್ಳುತ್ತಿವೆ. ಇಂತಹ ಕೌಶಲಗಳಲ್ಲಿ ಮಣ್ಣಿನ ‘ಟೆರ್ರಾಕೋಟಾ’ಕಲೆಯೂ ಒಂದು…!

andolanait

Recent Posts

ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಬದಿಯಲ್ಲಿ ಒಂಟಿಸಲಗ ದರ್ಶನ: ಭಯಭೀತರಾದ ವಾಹನ ಸವಾರರು

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಬಾಲಕನ…

7 hours ago

ಸೈಬರ್ ಕ್ರೈಂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಕಳೆದುಹೋಗಿದ್ದ 104 ಮೊಬೈಲ್ ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಒಂದು ತಿಂಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ಮಾಡುವ ಮೂಲಕ ನಾಗರಿಕರು ಕಳೆದುಕೊಂಡ…

7 hours ago

ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು

ಎಚ್.ಡಿ.ಕೋಟೆ: ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯುಕ್ತ ಅರಣ್ಯ ಮತ್ತು…

7 hours ago

ಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಾ.ಬಿ.ವಿ.ನಂದೀಶ್

ಮಂಡ್ಯ: ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವ ಜನತೆಯೂ ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು…

8 hours ago

ಮಕ್ಕಳು ಅಂತರ್ಜಾಲದ ಬಳಕೆ ಕಡಿಮೆ ಮಾಡಬೇಕು: ಬಿ.ಸಿ.ಶಿವಾನಂದ ಮೂರ್ತಿ

ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ…

8 hours ago

ಮಂಡ್ಯ ಜಿಲ್ಲೆ ಇ-ಪೌತಿ ಖಾತಾ ಆಂದೋಲನದಲ್ಲಿ ರಾಜ್ಯಕ್ಕೆ ಪ್ರಥಮ

ಮಂಡ್ಯ: ಪೌತಿ ಖಾತೆ ಪ್ರಕ್ರಿಯೆಯನ್ನು ಮಂಡ್ಯ ಜಿಲ್ಲೆಯು ಈ ಪೌತಿ ಖಾತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ಪೌತಿ ಖಾತೆಯನ್ನು…

8 hours ago