ಆಂದೋಲನ ಪುರವಣಿ

ಹಿಮಾಲಯ ಬೆನ್ನೇರಿದ ಮೈಸೂರು ಸೈಕಲ್ ನಾರಿಯರು

• ನಂದಿನಿ ಎನ್.
ಹಚ್ಚ ಹಸಿರಿನ ಪಚ್ಚೆ ಪೈರು ಒಂದೆಡೆ, ಜುಳು ಜುಳು ಹರಿವ ತೊರೆಯೊಂದೆಡೆ, ಮಧ್ಯೆ ಮಲಗಿದ, ನೇರ ಎನ್ನಬಹುದಾದ ಕೆಂಪನೆಯ ಕಾಲುದಾರಿಯ ತುಸು ಇಳಿಜಾರಿನಲ್ಲಿ, ಎಳೆ ಬಿಸಿಲ ಸೀಳಿ ಬರುವ ತಂಪು ಗಾಳಿಗೆ ಕಣ್ಮುಚ್ಚಿ, ಆಕಾಶಕೆ ಮುಖವೊಡ್ಡಿ, ಆ ಸುಂದರ ಕ್ಷಣದ ಅನುಭೂತಿಯಷ್ಟೂ ನನಗೇ ಸಿಗಬೇಕೆನ್ನುವ ಆಸೆಯಲ್ಲಿ ಸೈಕಲ್ಲಿನ ಹಿಡಿಯನ್ನು ಬಿಟ್ಟು ಥೇಟ್ ಶಾರುಖ್ ಖಾನ್ ಸ್ಟೈಲ್‌ನಲ್ಲಿ ಕೈ ಆಗಲಿಸಿ ಭರದಿಂದ ಮುನ್ನುಗ್ಗುವಾಗ ಸಿಗುವ ಆನಂದಕ್ಕೆ ಪಾರವೇ ಇಲ್ಲ!

ವೃತ್ತಿಯಲ್ಲಿ ಮಕ್ಕಳ ದಂತ ವೈದ್ಯೆ ಡಾ.ವೃಂದ, ತನ್ನ ಈ ಸೈಕ್ಲಿಂಗ್‌ನ ಅನುಭವವನ್ನು ವಿವರಿಸುವಾಗ ಮನದಲ್ಲಿದ್ದ ತೀರದ ಉತ್ಸಾಹ ಎದ್ದುಕಾಣುತ್ತಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಇದ್ದು, ಕೂಡು ಕುಟುಂಬದ ನಿರ್ವಹಣೆಯಲ್ಲಿ ಸಮಯ ಹೊಂದಿಸುವುದೇ ಕಷ್ಟವಿದ್ದರೂ, ತನಗಾಗಿ ಕೊಂಚ ಕಾಲ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ ವೀಣಾ ಅಶೋಕರದ್ದೂ ಕೂಡ ಇದೇ ಅನುಭವ. ಈ ರೀತಿ ವ್ಯಾಯಾಮಕ್ಕೆ, ಒತ್ತಡ ನಿವಾರಣೆಗೆ ಎಂದು ಸೈಕಲ್ ತುಳಿಯಲು ಶುರು ಮಾಡಿ, ಈಗ ಸೈಕ್ಲಿಂಗ್‌ನಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೈಸೂರಿನ ಬಹಳಷ್ಟು ಮಹಿಳೆಯರಲ್ಲಿ ಇವರೀರ್ವರೂ ಇದ್ದಾರೆ.

ಸೈಕ್ಲಿಂಗ್ ಅನ್ನು ಹವ್ಯಾಸಕ್ಕಾಗಿ ಮಾಡುವುದು ಬೇರೆ ಮತ್ತು ವೃತ್ತಿಪರವಾಗಿ ಅನುಸರಿಸುವುದು ಬೇರೆ! ಹವ್ಯಾಸ ಹೆಚ್ಚು ಬೇಡದು, ಹಾಗೇ ವೃತ್ತಿಯ ಬೇಡಿಕೆ ನೀಗದು! ಅವಶ್ಯಕತೆಗೆ ತಕ್ಕಂತೆ ಐದು ಸಾವಿರ ರೂ.ಗಳಿಂದ ಲಕ್ಷಗಳ ರೂ. ಗಳವರೆಗೂ ಸೈಕಲ್‌ಗಳು ಲಭ್ಯವಿವೆ. ಇದರ ಜೊತೆಗೆ ಅದಕ್ಕಾಗಿಯೇ ಬೇಕಾಗುವ ಉಡುಪುಗಳು, ಶಿರಸ್ತ್ರಾಣ, ಶೂ, ಕಾಲುಚೀಲ, ನೀರಿನ ಬಾಟಲಿ, ಸೈಕಲ್ ನಿರ್ವಹಣೆ …ಹೀಗೆ ಅನೇಕ ಅವಶ್ಯಕತೆಗಳಿವೆ. ಹಾಗಾಗಿ ಹವ್ಯಾಸಕ್ಕಲ್ಲದೆ ವೃತ್ತಿಯಾಗಿ ಇದನ್ನು ಸ್ವೀಕರಿಸಿದಲ್ಲಿ ಜೇಬಿಗೆ ಸ್ವಲ್ಪ ಭಾರವಾಗುವುದೂ ದಿಟ ! ಇದರೊಂದಿಗೆ ಫಿಟ್ಟೆಸ್ ಹೆಸರಿನಲ್ಲಿ ನಾಲಿಗೆಯ ಚಪಲಕ್ಕೆ ಕಡಿವಾಣ ಬೀಳುವ ಭಯವೂ ಇದೆ ! ಈ ಆರಂಭಿಕ ತೊಡಕುಗಳನ್ನು ಮೀರಿದರೆ ಅವಕಾಶಗಳು ಅಪರಿಮಿತ!

ವರ್ಷವಿಡೀ ಹಲವಾರು ಸಂಸ್ಥೆಗಳು ಒಂದಿಲ್ಲೊಂದು ಸೈಕ್ಲಿಂಗ್ ಕಾರ್ಯಕ್ರಮವನ್ನು ಆಯೋಜಿಸುತ್ತವೆ. ಸ್ಥಳೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲದೆ ಅಂತರರಾಷ್ಟ್ರೀಯ ಮಟ್ಟದ ಸೈಕ್ಲೋಥಾನ್‌ಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತವೆ. ಭಾಗವಹಿಸುವವರಲ್ಲಿ ಈ ಅವಕಾಶಗಳು ಹೊಸ ಸ್ನೇಹವನ್ನು, ಅವಿಸ್ಮರಣೀಯ ಅನುಭವವನ್ನು ಮತ್ತು ಆತ್ಮವಿಶ್ವಾಸವನ್ನು, ವೃದ್ಧಿಸುವುದರಲ್ಲಿ ಸಂದೇಹವೇ ಇಲ್ಲ!

ಮೈಸೂರಿನ ಮಟ್ಟಿಗೆ ಹೇಳುವುದಾದರೆ, ಈ ಶತಮಾನ ಕಂಡ ಅತ್ಯಂತ ಕೆಟ್ಟ ಜಾಗತಿಕ ಸೋಂಕು ಕೊರೊನಾ ದಿನಗಳಲ್ಲಿ ಸಾರ್ವಜನಿಕರಲ್ಲಿ ಹೆಚ್ಚು ಆರೋಗ್ಯ ಕಾಳಜಿ ಮೂಡಿದ್ದಲ್ಲದೆ, ಸೈಕ್ಲಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿತು.

ಅದರಲ್ಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ತುಳಿಯಲು ಶುರು ಮಾಡಿದ್ದು ಗಮನಾರ್ಹ. ದೈಹಿಕ ಸದೃಢತೆಯ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುವ ಸೈಕ್ಲಿಂಗ್ ಕಲಿಸಲು ಮೈಸೂರಿನಲ್ಲಿ ಉತ್ತಮ ತರಬೇತುದಾರರಿರುವ ಕಾರಣ ಕೊರೊನಾ ಬಳಿಕ ತಂತಮ್ಮ ವೃತ್ತಿಗೆ ಮರಳಿದರೂ ಈ ಮಹಿಳೆಯರು ಸೈಕ್ಲಿಂಗ್ ಅನ್ನು ಮರೆಯಲಿಲ್ಲ! ಮೈಸೂರಿನ ಹಲವಾರು ಸೈಕ್ಲಿಂಗ್ ಕಾರ್ಯಕ್ರಮಗಳಲ್ಲಿ ಇವರ ಹಾಜರಿ ಖಚಿತ.

ಹಿಮಾಲಯದ ರುದ್ರರಮಣೀಯ ಪ್ರಕೃತಿಯ ಮಡಿಲಲ್ಲಿರುವ ಮನಾಲಿ – ಲೇಹ್ – ಕಾರದೊಂಗ್ಲಾ ಪಾಸ್ ರಸ್ತೆಯನ್ನು ಕ್ರಮಿಸುವುದು ಪ್ರತೀ ಸೈಕ್ಲಿಸ್ಟ್‌ನ ಕನಸು. ಆದರೀ ಕನಸನ್ನು ನನಸಾಗಿಸಲು ಮೈಯನ್ನು ಹುರಿಗಟ್ಟಿಸುವ ಜೊತೆಗೆ ಮಾನಸಿಕವಾಗಿಯೂ ಸದೃಢರಾಗುವುದು ಆವಶ್ಯಕ. ಕುಟುಂಬ ಮತ್ತು ಸ್ನೇಹಿತರ ಬೆಂಬಲದ ಜೊತೆಗೆ ಸಮುದಾಯದ ಪ್ರೋತ್ಸಾಹವೂ ಮಹಿಳಾ ಸೈಕ್ಲಿಸ್ಟ್‌ಗಳಿಗೆ ಮುಖ್ಯವಾಗುತ್ತದೆ. ಇಂತಹ ಅತಿಪ್ರಯಾಸದ ದೂರವನ್ನು ನಮ್ಮ ಮೈಸೂರಿನ ಕೆಲ “ಛಲದಂಕ ಮಲ್ಲಿ’ಯರು ಹಠ ತೊಟ್ಟು ಕ್ರಮಿಸಿ, ಸಾಧಿಸಿ ತೋರಿದ್ದಾರೆ!

ವೃತ್ತಿ-ಮನೆ- ಮಕ್ಕಳ ಜೊತೆಗೆ ಅನಾಯಾಸವಾಗಿ ತಮ್ಮ ಪ್ರವೃತ್ತಿಯನ್ನು ಮುಂದುವರಿಸುವುದಲ್ಲದೆ ಅದರಲ್ಲಿ ಸಾಧಿಸಿರುವುದು ಉಳಿದ ಮಹಿಳೆಯರಿಗೆ ಪ್ರೇರಣೆಯಾಗಬಹುದೇ? ಎಲ್ಲರಿಗೂ ಬರಲಿರುವ ಮಹಿಳಾ ದಿನದ ಶುಭಾಶಯಗಳು !!

 

andolana

Recent Posts

ನಾಲ್ವರು ಯೋಧರು ಹುತಾತ್ಮ ; ನಕ್ಸಲರಿಟ್ಟಿದ್ದ ನೆಲಬಾಂಬ್ ನಿಷ್ಕ್ರಿಯಗೊಳಿಸುವಾಗ ದುರ್ಘಟನೆ

ಛತ್ತೀಸಗಢ : ನಾರಾಯಣಪುರ ಗಡಿ ಪ್ರದೇಶದಲ್ಲಿ ನೆಲಬಾಂಬ್ ತೆಗೆಯುವ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಛೋಟಗೊಂಡಿದ್ದು ನಾಲ್ವರು ಡಿಆರ್‌ಜಿ ಯೋಧರು ಹುತಾತ್ಮರಾಗಿದ್ದಾರೆ.…

10 hours ago

ಮಂಡ್ಯ | ನೀರಿನ ಕೊಳದಲ್ಲಿ ಗೃಹಿಣಿಯ ಶವ ಪತ್ತೆ ; ಕೊಲೆ ಶಂಕೆ

ಮಂಡ್ಯ : ತಾಲ್ಲೂಕಿನ ಜವನಹಳ್ಳಿ ಗ್ರಾಮದಲ್ಲಿ ನೀರಿನ ಕೊಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆ ಶಂಕೆ…

10 hours ago

ಮಂಡ್ಯ ನಗರದಲ್ಲಿ ಮರಗಳ ಸಮೀಕ್ಷೆಗೆ ಅರಣ್ಯ ಸಚಿವರ ಆದೇಶ

ಮದ್ದೂರು : ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ…

11 hours ago

ಬಜೆಟ್ ಘೋಷಣೆ ಕಡತದಲ್ಲೇ ಉಳಿಯಬಾರದು ; ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಬೆಂಗಳೂರು : ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು. ಅನುಷ್ಠಾನದಲ್ಲಿ ವಿಳಂಬವಾದರೆ ಸಂಬಂಧಪಟ್ಟ ಕಾರ್ಯದರ್ಶಿಗಳೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

12 hours ago

ಟೆಂಪೋ-ಬೈಕ್‌ ಡಿಕ್ಕಿ : ಬೈಕ್‌ ಸವಾರ ಸಾವು ; ಓರ್ವ ಗಂಭೀರ

ಹನೂರು : ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಮೆಟ್ಟೂರಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ…

12 hours ago

NEET UG Exam | ನಾಳೆ ನೀಟ್ ಪರೀಕ್ಷೆ ; ʼಜೀರೋ ಲೀಕ್‌ʼ ಪಾಲಿಸಿ ಜಾರಿ

ಬೆಂಗಳೂರು : ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಯುಜಿ ಭಾನುವಾರ…

13 hours ago