ಮಹಿಳೆ ಸಬಲೆ

ಗಂಡಸರ ಮಾತು ನಂಬಿ ಸಮನ್ಸ್ ತಿರಸ್ಕರಿಸಬೇಡಿ

ಅಂಜಲಿ ರಾಮಣ್ಣ

ಮೈಸೂರು ಕಡೆಯ ಜನರಿಗೆ ಚಿರಪರಿಚಿತರಾಗಿದ್ದ ನನ್ನ ತಂದೆ ಕೆ.ರಾಮಣ್ಣ ಅವರು ಮೈಸೂರಿನ ಶಂಕರಮಠ ರಸ್ತೆಯಲ್ಲಿ ಒಂದು ಮನೆ ಕಟ್ಟಿದ್ದರು. ಇಬ್ಬರು ಮೂವರು ಬಾಡಿಗೆದಾರರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ದೊಡ್ಡ ಕುಟುಂಬದ ಸಂಸಾರಸ್ಥ ಒಬ್ಬ ಬಾಡಿಗೆದಾರ. ಆತನ ಮನೆಭರ್ತಿ ವಯಸ್ಕ ಹೆಂಗಸರು, ಯುವತಿಯರು, ಮಕ್ಕಳು ಇದ್ದರು. ಸರಿಯಾಗಿ ಬಾಡಿಗೆಯನ್ನೂ ಕೊಡದೆ, ಮನೆಯನ್ನು ಬಿಡಲೂ ಒಪ್ಪದೆ ಆತನ ಸತಾಯಿಸುವಿಕೆ ಜಾಸ್ತಿ ಆದಾಗ ಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು.

ವರ್ಷಗಳ ನಂತರ ಅಂತೂ ನಮ್ಮ ತಂದೆಯವರದ್ದೇ ಮನೆ ಅಂತಾಗಿ ಬಾಡಿಗೆದಾರ ಮನೆ ತೆರವು ಮಾಡಿಕೊಡಬೇಕು ಎಂದು ಕೋರ್ಟಿನ ಆದೇಶ ಆಯಿತು. ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವುದಕ್ಕೋಸ್ಕರ ನ್ಯಾಯಾಲಯದ ನೋಟಿಸ್ ಮತ್ತು ಸಮನ್ಸ್ ಅನ್ನು ನೀಡಲು ಪೊಲೀಸರು ಯಾವಾಗ ಹೋದರೂ ಆತ ಮನೆಯ ಹೆಬ್ಬಾಗಿಲಿನಲ್ಲಿ ಹೆಂಗಸರನ್ನು ಸಾಲಾಗಿ ಕುಳ್ಳಿರಿಸಿ ಮನೆಯಲ್ಲಿ ಯಾರೂ ಗಂಡಸರಿಲ್ಲ ಎಂದು ಸಬೂಬು ಹೇಳಿಸಿ ನ್ಯಾಯಾಲಯದ ಪೊಲೀಸರನ್ನು ಹಿಂದಿರುಗಿಸುತ್ತಿದ್ದರು. ಮನೆಯನ್ನು ವಶಪಡಿಸಿಕೊಳ್ಳುವ ಆದೇಶ ಪ್ರತಿಯನ್ನು ತೆಗೆದುಕೊಂಡು ಹೋದಾಗಲೂ ಇದ್ದಬದ್ದ ಹೆಂಗಸರೆಲ್ಲಾ ಹೊಸ್ತಿಲ ಮೇಲೇ ಕುಳಿತು ಗಂಡಸರು ಇಲ್ಲ ಎಂದು ಬಿರುಸಿನಲ್ಲಿ ಹೇಳುತ್ತಿದ್ದರು.

ಆಗ ಚಾಲ್ತಿಯಲ್ಲಿದ್ದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (Criminal Procedure Code) ೧೯೭೩ ಈ ಕಾನೂನಿನ ಸೆಕ್ಷನ್ ೬೪ರಲ್ಲಿ ಸಮನ್ಸ್ ನೀಡಲಾಗಿರುವ ವ್ಯಕ್ತಿ ಮನೆಯಲ್ಲಿ ಇರದಿದ್ದ ಸಂದರ್ಭದಲ್ಲಿ ಸಮನ್ಸ್ಅನ್ನು ಕುಟುಂಬದ ವಯಸ್ಕ ‘ಪುರುಷ’ ಸದಸ್ಯನಿಗೆ ತಲುಪಿಸಿ ಬರಬೇಕು ಎಂದಿತ್ತು. ಹಾಗಾಗಿ ಬಹಳ ಪ್ರಕರಣಗಳಲ್ಲಿ ಮಹಿಳೆಯರನ್ನು ಗುರಾಣಿಯಂತೆ ಬಳಸಿಕೊಂಡು ಪ್ರಕರಣಗಳ ವಿಲೇವಾರಿಯನ್ನು ವಿಳಂಬವಾಗುವಂತೆ ಮಾಡಲಾಗುತ್ತಿತ್ತು. ಕೋರ್ಟಿನಲ್ಲಿ ಅಂತಿಮ ತೀರ್ಪು ಬರುವುದರೊಳಗೆ ಆತ ಮನೆಯ ಹೊರಗಿನ ಆವರಣ ಬಿಟ್ಟು ಒಳಗಿನ ಎಲ್ಲಾ ಬಾಗಿಲುವಾಡಗಳನ್ನು, ಮರಗೆಲಸವನ್ನು ಕಿತ್ತು ಎಲ್ಲಿಗೋ ಸಾಗಿಸಿ ಬಿಟ್ಟಿದ್ದರು. ಗೋಡೆಗಳ ಪ್ಲಾಸ್ಟರ್ಅನ್ನು ಮುಕ್ಕು ಮಾಡಿ ನೆಲವನ್ನೆಲ್ಲಾ ಅಗೆದು ಬಿಟ್ಟಿದ್ದರು.

ತ್ವರಿತಗತಿಯ ನ್ಯಾಯ ಎನ್ನುವ ಉದ್ದೇಶವನ್ನು ಹೊಂದಿರುವ, ಜುಲೈ ೨೦೨೪ರಂದು ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಈ ಕಾನೂನಿನ ಸೆಕ್ಷನ್ ೬೬ರಲ್ಲಿ ಸಮನ್ಸ್ ನೀಡಲಾಗಿರುವ ವ್ಯಕ್ತಿ ಮನೆಯಲ್ಲಿ ಇಲ್ಲದಾಗ, ಕುಟುಂಬದ ‘ಯಾವುದೇ’ ವಯಸ್ಕ ಸದಸ್ಯರಿಗೆ ತಲುಪಿಸಬೇಕು ಎನ್ನುವ ಬದಲಾವಣೆ ತರಲಾಗಿದೆ. ಹಾಗಾಗಿ ಮಹಿಳೆಯರನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಸಮಯವನ್ನು ಹಾಳು ಮಾಡುವ ಹಾಗಿಲ್ಲ. ನ್ಯಾಯಾಲಯದ ಆದೇಶವನ್ನು ಜಾರಿ ತರುವುದಕ್ಕಾಗಿಯೋ, ಆರೋಪಿ ಎನ್ನುವ ಕಾರಣಕ್ಕೋ, ಸಾಕ್ಷಿ ಹೇಳುವುದಕ್ಕಾಗಿ ಹಾಜರಿರಬೇಕು ಎಂತಲೋ, ಆಪಾದಿತ ಎಂದು ದಾವೆಯಲ್ಲಿ ಸೇರಿಸಬೇಕೋ ಬೇಡವೋ ಎಂದು ನಿರ್ಧರಿಸುವ ಕಾರಣಕ್ಕೂ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಸಮನ್ಸ್ ನೀಡಬಹುದು.

ಅಂತಹ ಸಮನ್ಸ್ಅನ್ನು ಮರುಜಾರಿಯ ನಂತರವೂ ಕುಟುಂಬದ ಯಾವುದೇ ಮಹಿಳೆಯು ಆ ಸಮನ್ಸ್ ಸೇರಬೇಕಾದ ವ್ಯಕ್ತಿಗೆ ತಲುಪಿಸಲು ಅಡ್ಡಿಯಾದರೆ ಅದನ್ನು ಸೆಕ್ಷನ್ ೨೦೭ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಆಕೆಗೆ ೧ ರಿಂದ ೬ ತಿಂಗಳುಗಳ ಕಾಲ ಜೈಲು ಶಿಕ್ಷೆ ನೀಡಬಹುದು ಮತ್ತು ೫ ರಿಂದ ೧೦ ಸಾವಿರ ರೂ.ಗಳವರೆಗಿನ ದಂಡವನ್ನೂ ವಿಧಿಸಬಹುದು. ಅಷ್ಟೇ ಅಲ್ಲದೆ ಆಕೆಯನ್ನು ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿಯೂ ಅಪರಾಧಿ ಎಂದು ಹೇಳಿ ಸೆಕ್ಷನ್ ೧೨ರ ಅಡಿಯಲ್ಲಿ ಹೆಚ್ಚುವರಿ ಸೆರೆವಾಸ ಮತ್ತು ದಂಡ ವಿಧಿಸುವ ಅವಕಾಶ ನ್ಯಾಯಾಲಯಕ್ಕೆ ಇರುತ್ತದೆ. ಕುಟುಂಬದ ಯಾವುದೇ ವಯಸ್ಕ ಮಹಿಳೆಯು ಮನೆಯಲ್ಲಿನ ಪುರುಷರ ಮಾತನ್ನು ನಂಬಿ ಸಮನ್ಸ್ ಅನ್ನು ತಿರಸ್ಕರಿಸುವ ಹಾಗಿಲ್ಲ. ಅಂತೆಯೇ ಸಮನ್ಸ್ಅನ್ನು ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆ ಸ್ವೀಕರಿಸುವ ಹಾಗಿಲ್ಲ.

(ಲೇಖಕರು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು)

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

8 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

8 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

9 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

10 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

10 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

10 hours ago