• ಕೇಶವಮೂರ್ತಿ

ತೆಂಗಿನ ತೋಟದಲ್ಲಿ ‘ಯಾದ’ ಅಂದರೆ ಇಲಿಗಳು ಹಾಗೂ ಅಳಿಲುಗಳ ಕಾಟ ವಿಪರೀತವಾದಾಗ ಬೆಳೆ ಗಾರರು ಅವುಗಳಿಂದ ಬೆಳೆಗಳನ್ನು ರಕ್ಷಿಸಲು ವಿಧವಿಧವಾದ ತಂತ್ರಗಳನ್ನು ಬಳಸ್ತಾರೆ. ಇಲಿಗಳ ಹಾವಳಿಯನ್ನು ಹತೋಟಿಗೆ ತರಲು ಕೆಲ ಬಾರಿ ವಿಷ ಪ್ರಯೋಗ ಮಾಡುತ್ತಾರೆ. ಅಲ್ಲದೆ ಬೋನು ಇರಿಸಿ ಅವುಗಳನ್ನು ಸೆರೆ ಹಿಡಿಯುವುದೂ ಉಂಟು. ಇನ್ನು ಕೆಲ ಸಾವಯವ ಕೃಷಿಕರು ತೋಟಗಳಲ್ಲಿ ಬೆಕ್ಕುಗಳನ್ನು ಸಾಕುತ್ತಾರೆ ಅಥವಾ ಹಾವುಗಳನ್ನು ಸಾಯಿಸದೇ ತೋಟದಲ್ಲಿಯೇ ಇರುವಂತೆ ಮಾಡಿ ಅವುಗಳಿಂದ ಇಲಿಗಳ ಹಾವಳಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಾರೆ. ಇಲಿಗಳು ಹಾಗೂ ಅಳಿಲುಗಳು ಮರಹತ್ತದಂತೆ ತೆಂಗಿನ ಮರದ ಮಧ್ಯದಲ್ಲಿ ಕಬ್ಬಿಣದ ತಗಡು ಶೀಟ್‌ಗಳನ್ನು ಹೊಡೆಯುವುದು ಮತ್ತೊಂದು ವಿಧಾನ. ಆದರೆ ಈ ಬುದ್ದಿವಂತ ಜೀವಿಗಳು ತಗಡಿನ ಮೇಲೆ ಹತ್ತುವುದನ್ನು ಹಾಗೂ ನೆಗೆಯುವುದನ್ನು ಕಂಡಾಗ ಬೆರಗಾದ ರೈತರು ಅದೇ ತಗಡನ್ನು ಉಲ್ಟಾ ಆಲಿಕೆಯ ರೀತಿಯಲ್ಲಿ ಕಟ್ಟಿ ‘ಯಾದ’ಗಳು ಮೇಲೆ ಹೋಗುವುದಕ್ಕೆ ಕಡಿವಾಣ ಹಾಕುತ್ತಾರೆ.

ಕೆಲ ಅನುಭವಿ ಕೃಷಿಕರ ಪ್ರಕಾರ, ‘ತೆಂಗಿನ ಮರಕ್ಕೆ ತಗಡು ಹೊಡೆಯುವ ಮೊದಲು, ಮರ ಹತ್ತಿ ಮರದಲ್ಲಿ ವಾಸವಾಗಿರುವ ಯಾದಗಳನ್ನು ಓಡಿಸಬೇಕು. ಇಲ್ಲದಿದ್ದರೆ ಅವು ಮರದ ಮೇಲೆಯೇ ಇದ್ದು ಗರಿ ಕೂಡಿರುವ ತೋಟದಲ್ಲಿ ಮರದಿಂದ ಮರಕ್ಕೆ ಸುಲಭವಾಗಿ ಓಡಾಡುತ್ತವೆ’. ಹೀಗೆಯೇ ತೆಂಗಿನ ಬೆಳೆಗಾರರನ್ನು ಕಾಡುವ ಇಲಿಗಳ ಹತೋಟಿಗೆ ತರತರಹದ ವಿಧಾನ ಅನುಸರಿಸಿದರೂ ಅವು ಮರ ಹತ್ತೋದು ಬಿಟ್ಟಿಲ್ಲ. ಏಕೆ? ಇದೇ ಪ್ರಶ್ನೆಯನ್ನು ರೈತರೊಬ್ಬರು ತುಂಬಿದ ಸಭೆಯಲ್ಲಿ ಕೇಳಿದ್ದರು. ಯಾರಿಂದಲೂ ಸಮರ್ಪಕ ವಾದ ಉತ್ತರ ಬರಲಿಲ್ಲ. ‘ನೀವು ಏನೆಲ್ಲಾ ವಿಧಾನಗಳನ್ನು ಅನುಸರಿಸಿದರೂ ಇಲಿಗಳನ್ನು ಮರ ಹತ್ತದಂತೆ ತಡೆಯುವುದಕ್ಕೆ ಆಗಲ್ಲ. ಅವು ಏಕೆ ಮರ ಹತ್ತುತ್ತವೆ? ಯಾರಾದ್ರೂ ಯೋಚನೆ ಮಾಡಿದ್ದೀರಾ? ಮುಂದುವರಿದು, ಆ ರೈತರೇ ಹೇಳಿದ್ದರು, ‘ನೋಡಿ ಇಲಿಗಳ ಆಹಾರ ಮರದಲ್ಲಿದೆ. ಆ ಆಹಾರ ಬಿಟ್ಟರೆ ಅವಕ್ಕೆ ಬೇರೆ ಆಹಾರವಿಲ್ಲ. ಹಾಗಾಗಿ ಅವು ಎಷ್ಟೇ ಕಷ್ಟಗಳು ಎದುರಾದರೂ ಮರ ಹತ್ತೇ ಹತ್ತುತ್ತವೆ. ಏಕೆ ಹೇಳಿ? ಅವಕ್ಕೆ ಆಹಾರ ಬೇಕು. ಅವೂ ಬದುಕಬೇಕು’, ತುಂಬಿದ ಸಭೆ ಶಾಂತವಾಯಿತು. ಮುಂದುವರಿದು ಹೇಳಿದರು, ‘ನೋಡಿ ಇಲಿಗಳು ಮರ ಹತ್ತುವುದು ತೆಂಗಿನ ಮರದಲ್ಲಿರೋ ಅದರ ಆಹಾರಕ್ಕಾಗಿ ಅಂದಮೇಲೆ, ಅದರ ಆಹಾರವನ್ನು ನಿಮ್ಮ ತೋಟದಲ್ಲಿ ಮರಗಳ ಬುಡದಲ್ಲೇ ಒದಗಿಸಿ. ಆಗ ಅದು ಕಷ್ಟ ಪಟ್ಟು ಮರವನ್ನಾದರೂ ಏಕೆ ಹತ್ತಬೇಕು. ಬುಡದಲ್ಲಿ ನೀವು ಒದಗಿಸಿರುವ ಆಹಾರವನ್ನೇ ತಿಂದುಕೊಂಡು ನೆಲದಲ್ಲಿಯೇ ಬಿಲವನ್ನು ತೋಡಿಕೊಂಡು ವಾಸಿಸುತ್ತವೆ. ಅವುಗಳು ನೆಲದಲ್ಲಿ ಬಿಲ ತೋಡುವುದರಿಂದ ಮಳೆ ನೀರು ಭೂಮಿಯಲ್ಲಿ ಸುಲಭವಾಗಿ ಇಂಗುತ್ತದೆ. ಅವುಗಳ ಮಲ ಮತ್ತು ಮೂತ್ರದ ಮೂಲಕ ಮಣ್ಣಿನ ಫಲವತ್ತತ್ತೆಯೂ ಹೆಚ್ಚಾಗುತ್ತದೆ. ಹಾಗೆಯೇ ಹರಿದಾಡುವ ಹಾವುಗಳಿಗೆ ಅವು ಆಹಾರವಾಗಿ, ನಿಮ್ಮ ತೋಟದಲ್ಲಿ ನಿಸರ್ಗವೇ ನಿಯಂತ್ರಣ ಮಾಡಲಿದೆ’.

ಯಾವ ಆಹಾರಗಳನ್ನು ನೀವು ತೋಟದಲ್ಲಿ ಇಲಿಗಳಿಗಾಗಿ ಬೆಳೆಯಬೇಕು ಎಂದರೆ, ಸಿಹಿ ಗೆಣಸು, ಆರಾರೋಟ್, ಕ್ಯಾರೆಟ್ ಹಾಗೂ ಇತರೆ ಗೆಡ್ಡೆ ಜಾತಿಯ ಬೆಳೆಗಳು. ಇವು ನೆಲಕ್ಕೆ ಹೊದಿಕೆಯಾಗಿ ತೇವ ಸಂರಕ್ಷಣೆಗೂ
ಸಹಕಾರಿಯಾಗಲಿದೆ. ನಿಸರ್ಗ ಪರಿಪೂರ್ಣವಾಗಿದೆ ಅನ್ನುವ ಮಾತಿದೆ. ಇಲ್ಲಿ ನಾವು ಮಾತ್ರ ಬದುಕಿ, ಇತರ ಪ್ರಾಣಿಪಕ್ಷಿಗಳು ಹಾಳಾಗಬೇಕು ಎನ್ನುವ ಭಾವನೆಯೇ ತಪ್ಪು. ನಾವೂ ಬದುಕಿ, ಇತರರಿಗೂ ಬದುಕಲು ಅವಕಾಶ ನೀಡಬೇಕು. ಆಗ ಸಾಮರಸ್ಯ ಸಾಧ್ಯ. ಕೋತಿಗಳ ಕಾಟ ತಪ್ಪಿಸಲು, ತೋಟದ ಸುತ್ತ ಅವುಗಳಿಗೆಂದೇ ನಾಟಿ ಮಾವು, ಹಲಸು, ನೇರಳೆ ಮರ ಹಾಕಿರುವ ರೈತರಿದ್ದಾರೆ. ಅಳಿಲು, ಇಲಿ, ಹಕ್ಕಿ ಪಕ್ಷಿಗಳಿಗಾಗಿ ಆಲ, ಅತ್ತಿ, ಗೋಣಿ ಮರಗಳನ್ನು ಬೆಳೆಸಿರೋ ಪುಣ್ಯಾತರಿದ್ದಾರೆ. ನಿಮ್ಮ ಆಹಾರ ನೀವು ತಿನ್ನಿ ನಮ್ಮ ಆಹಾರದ ಕಡೆ ಬರಬೇಡಿ ಅಂತಾ ಅವುಗಳಿಗೆ ಪರ್ಯಾಯ ಆಹಾರ ಒದಗಿಸಿದರೆ, ಅವುಗಳೇಕೆ ನಮ್ಮ ಆಹಾರದ ಬೆಳೆಗಳ ತಂಟೆಗೆ ಬರುತ್ತವೆ? ಅಷ್ಟಕ್ಕೂ ಅವೇನು ನಮ್ಮ ವೈರಿಗಳಾ?
ಆಲೋಚನೆ ಮಾಡಿ, (ಅಂಕಣಕಾರರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು) keshavamurthy.n@gmail.com

andolana

Recent Posts

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…

13 mins ago

ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’

ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…

1 hour ago

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

7 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

7 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

7 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

7 hours ago