ಸ್ವಾಮಿ ಪೊನ್ನಾಜಿ…
ಕಿರಣ್ ಗಿರ್ಗಿ ಚಾಮರಾಜನಗರದ ಕಿರಿಯ ವಯಸ್ಸಿನ ಪ್ರತಿಭಾವಂತ ರಂಗ ನಿರ್ದೇಶಕ. ಈ ಹಿಂದೆ ಚಾಮರಾಜನಗರದ ರಂಗತರಂಗ ತಂಡದ ಮೂಲಕ ‘ಮಾದಾರಿ ಮಾದಯ್ಯ’ ನಾಟಕವನ್ನು ಆಡಿದ್ದರು. ಬಹಳ ವರ್ಷಗಳ ನಂತರ ಇದೇ ನಾಟಕವನ್ನು ಹೊಸಬರ ಅಭ್ಯಾಸಿ ತಂಡ ಕಟ್ಟಿಕೊಂಡು ನಾಟಕವನ್ನು ಯಶಸ್ವಿಗೊಳಿಸಿದರು. ಮಾಡಿದ್ದು ಕಿರಣ್ ಗಿರ್ಗಿ. ‘ಮಾದಾರಿ ಮಾದಯ್ಯ’ ನಾಟಕ ವಿಮರ್ಶಕರ ಮನಸ್ಸನ್ನು ಗೆದ್ದು ಕಡಿಮೆ ಅವಧಿಯಲ್ಲಿ ನಾಲ್ಕು ಪ್ರದರ್ಶನವನ್ನು ಕಂಡಿತು.
ಹಾಗೆ ನೋಡಿದರೆ ನಮ್ಮ ಚಾಮರಾಜನಗರದ ಹಳ್ಳಿಹಳ್ಳಿಗಳಲ್ಲೂ ಒಂದು ಕಾಲದಲ್ಲಿ ನಾಟಕದ ಮಾಸ್ಟರ್ಗಳು ಇದ್ದರು. ಶನಿ ಪ್ರಭಾವ, ಸತ್ಯ ಹರಿಶ್ಚಂದ್ರ, ರಾಜ ಸತ್ಯವ್ರತ, ಭಕ್ತ ಪ್ರಹ್ಲಾದ ಮುಂತಾದ ನಾಟಕ ಗಳನ್ನು ಊರು ಊರುಗಳಲ್ಲಿ ಅಭ್ಯಾಸ ಮಾಡಿಸಿ ಪ್ರದರ್ಶನ ನೀಡುತ್ತಿದ್ದರು. ಯಕ್ಷಗಾನದ ವೇಷಭೂಷಣಗಳನ್ನು ಹಾಕದಿದ್ದರೂ ನಾಟಕದ ಶೀರ್ಷಿಕೆ ಮಾತ್ರ ‘ಯಕ್ಷಗಾನ ಪೌರಾಣಿಕ ಬೀದಿ ನಾಟಕ’ ಅಂತಲೇ ಇರುತ್ತಿದ್ದವು. ಹವ್ಯಾಸಿ ರಂಗಭೂಮಿಯ ನಂಟು ಮಾತ್ರ ವಸಿ ಕಡಿಮೆಯೇ! ಬಹಳ ವರ್ಷಗಳಿಂದ ನಿರಂತರವಾಗಿ ನಾಟಕ ಮಾಡಿ ಕೊಂಡು ಬಂದ ‘ಶಾಂತಲಾ’ ಕಲಾವಿದರ ತಂಡ ಬಿಟ್ಟರೆ ರಂಗತರಂಗ, ರಂಗವಾಹಿನಿ ಮುಂತಾದ ತಂಡಗಳು ಹವ್ಯಾಸಿ ರಂಗ ಭೂಮಿಯ ನಾಟಕಗಳನ್ನು ಪ್ರದರ್ಶಿಸಿದರು. ಸದ್ಯ ಚಾಮ ರಾಜನಗರದ ರಂಗಭೂಮಿಯಲ್ಲಿ ಸದಾ ಸಕ್ರಿಯವಾಗಿರುವ ಒಂದು ಹೆಸರೆಂದರೆ ಕಿರಣ್ ಗಿರ್ಗಿ.
ಚಾಮರಾಜನಗರ ಜಿಲ್ಲೆ, ಸಿದ್ದಯ್ಯನಪುರ ಗ್ರಾಮ ದಲ್ಲಿ ಕುಸುಮಲತಾ- ಕಾಂತರಾಜು ದಂಪತಿಗಳ ಮಗನಾಗಿ ಜನಿಸಿದ ಕಿರಣ್ ಕುಮಾರ್ ಬಾಲ್ಯದಲ್ಲಿ ತನ್ನ ಅಣ್ಣ ಮಹಾಲಿಂಗ ಗಿರ್ಗಿ ಹಾರ್ಮೋನಿಯಂ ನುಡಿಸಿಕೊಂಡು ಹಾಡುತ್ತಿದ್ದ ಹಾಡುಗಳನ್ನು ಕೇಳಿ ಬೆಳೆದ ವರು. ಊರ ಮಾರಮ್ಮನ ಹಬ್ಬಗಳಲ್ಲಿ ನಡೆಯುವ ನಾಟಕಗಳಲ್ಲಿ ಇದೇ ಕುಟುಂಬದ ಸದಸ್ಯರು ತಪ್ಪದೇ ಪಾರ್ಟ್ ಮಾಡುವ ಪರಂಪರೆ ಇದ್ದು ಈ ಪರಂಪರೆಯ ಮುಂದುವರಿಕೆಗೆ ಕಿರಣ್ ಗಿರ್ಗಿ ಪಾರ್ಟು ಮಾಡುವಂತೆ ಆಗಿ ಅಽಕೃತವಾಗಿ ರಂಗಭೂಮಿಗೆ ಪದಾರ್ಪಣೆಯಾಯಿತು ಮತ್ತು ಅದೇ ಆಸಕ್ತಿಯ ಕೇಂದ್ರವೂ ಆಯಿತು. ಮುಂದೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಭಾರತೀಯ ರಂಗ ಶಿಕ್ಷಣ ಕೇಂದ್ರ ಮತ್ತು ಮೈಸೂರಿನ ರಂಗಾಯಣ ದಲ್ಲಿ ರಂಗಕಲೆ ಅಭ್ಯಾಸ ಮಾಡಿ ರಂಗಾಯಣ ರೆಪೆರ್ಟರಿಯಲ್ಲಿ ಒಂದು ವರ್ಷ ಕಿರಿಯ ಕಲಾವಿದನಾಗಿ ಕೆಲಸ ಮಾಡಿ ಬೆಂಗಳೂರಿನ ರಂಗಶಂಕರದ ಮೇಕಿಂಗ್ ಥಿಯೇಟರ್ ವರ್ಕ್ಶಾಪ್ನಲ್ಲೂ ಭಾಗವಹಿಸಿ ತರಬೇತಿ ಪಡೆದಿದ್ದಾರೆ. ನಿನಾದ ಮ್ಯೂಸಿಕಲ್ ಟ್ರಸ್ಟ್ ನಲ್ಲಿ ಕೀಬೋರ್ಡ್ ತರಬೇತಿ ಪಡೆದು ಮಕ್ಕಳಿಗೆ ಕೀಬೋರ್ಡ್ ಶಿಕ್ಷಣವನ್ನು ನೀಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಶಿಕ್ಷಣವನ್ನು ಪಡೆದ ಇವರು ಅರಿವು, ದೀನಬಂಧು, ಎಂಸಿಎಸ್ ಪಬ್ಲಿಕ್ ಮುಂತಾದ ಶಾಲೆಗಳಲ್ಲೂ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ೨೦೧೫ರಲ್ಲಿ ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸುವ ‘ಕಾಲೇಜು ರಂಗೋತ್ಸವ’ ಕಾರ್ಯಕ್ರಮಕ್ಕೆ ಸಿದ್ದಲಿಂಗಯ್ಯನವರ ‘ಕತ್ತೆ ಮತ್ತು ಧರ್ಮ’ ಕವಿತೆಯನ್ನು ರಂಗ ರೂಪಕ್ಕಳವಡಿಸಿ ಮೊದಲ ಬಾರಿಗೆ ನಿರ್ದೇಶಕರಾದರು. ಅಲ್ಲಿಯ ವರೆಗೂ ಮಧ್ಯಮ ವ್ಯಾಯೋಗ, ಮಾದರಿ ಮಾದಯ್ಯ, ಚಿಕ್ಕದೇವ ಭೂಪ , ಗೊಂಬೆ, ಸದ್ಯಕ್ಕಿದು ಹುಚ್ಚರ ಸಂತೆ ಮುಂತಾದ ನಾಟಕ ಗಳಲ್ಲಿ ಅಭಿನಯಿಸುತ್ತ ಅನಂತರದಲ್ಲಿ ತಾವೇ ರಂಗಪ್ರಯೋಗಕ್ಕಿಳಿದರು. ಮೈಸೂರು ಮತ್ತು ಚಾಮರಾಜನಗರದ ರಂಗ ತಂಡಗಳಿಗೆ ಕಂಬಾರರ ಜೋಕುಮಾರಸ್ವಾಮಿ, ಶಿವಪ್ರಕಾಶರ ಮಾದರಿ ಮಾದಯ್ಯ, ಮಲ್ಲಮ್ಮನ ಮನೆ ಹೋಟ್ಲು, ತ್ರಿಪುರಾಂತಕ ಅವರ ಪೇಯಿಂಗ್ ಗೆಸ್ಟ್, ಭಾಸ ಮಹಾಕವಿಯ ಮಧ್ಯಮ ವ್ಯಾಯೋಗ, ದೇವನೂರರ ಅಮಾಸ ಕೃತಿಗಳನ್ನು ನಿರ್ದೇಶಿಸಿದರು. ‘ನ್ಯಾಣ’ ಕವಿತೆಗಳ ಸಂಕಲನದ ಮೂಲಕ ಕವಿಯಾಗಿ ಸಾಹಿತ್ಯ ಲೋಕ ಪ್ರವೇಶಿಸಿದ ಕಿರಣ್ ಗಿರ್ಗಿ ಕೋಳಿ ಹೆಸ್ರು, ಚಿರತೆ ಬಂತು ಚಿರತೆ, ಬಂಡಾಯದೊಡೆಯ ಮಂಟೆಸ್ವಾಮಿ ಮುಂತಾದ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
ಸದ್ಯ ಅವರ ಬಹುದೊಡ್ಡ ಕನಸೆಂದರೆ ಚಾಮರಾಜನಗರದಲ್ಲಿ ಸುಸಜ್ಜಿತ ರಂಗಶಾಲೆ ತೆರೆಯುವುದು. ಮಕ್ಕಳಿಗೆ ಮತ್ತು ಯುವಕರಿಗೆ ನಟನೆಯ ಪಾಠಗಳನ್ನು ಹೇಳಿಕೊಡುವುದು. ರಂಗಭೂಮಿಗೆ ಸಂಬಂಧಿಸಿದಂತೆ ವಿಶೇಷ ಪ್ರಯೋಗಗಳನ್ನು ಮಾಡುವುದು. ಇದಕ್ಕೆ ಪೂರಕವಾಗಿ ಅಭ್ಯಾಸಿ ಟ್ರಸ್ಟ್ ಮಾಡಿಕೊಂಡು ಚಾಮರಾಜನಗರದ ಮಕ್ಕಳಿಗೆ ರಂಗತರಬೇತಿ, ಸಂಗೀತ ತರಬೇತಿ ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಆಚೆ ತರುವುದಕ್ಕಾಗಿ ಮತ್ತು ಅನೌಪಚಾರಿಕವಾಗಿ ಕಲೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ‘ಹಟ್ಟಿ ಐಕಳ ಜಗಲಿ’ ಬೇಸಿಗೆ ಶಿಬಿರವನ್ನು ಒಂದು ತಿಂಗಳ ಕಾಲಾವಕಾಶದಲ್ಲಿ ರಂಗಭೂಮಿ ಚಟುವಟಿಕೆ ಅಲ್ಲದೆ ಚಿತ್ರಕಲೆ, ಕವನ ರಚನೆ, ನಾಟಕ, ಕೀಬೋರ್ಡ್ ಕಲಿಸುತ್ತಾ ತಿಂಗಳ ಕೊನೆಯಲ್ಲಿ ಅದೇ ಮಕ್ಕಳಿಂದ ಕಲಾ ಪ್ರದರ್ಶನ ಏರ್ಪಡಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಪೋಷಕರಿಂದ ಮೆಚ್ಚು ಗೆಯ ಮಹಾಪೂರವೇ ಹರಿದುಬಂದಿದ್ದು ರಜೆ ಶುರುವಾಗುವ ಮುಂಚೆಯೇ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿ ಕೊಳ್ಳುತ್ತಿರುವುದು ಈ ಹಳ್ಳಿಹಟ್ಟಿಯ ಜಗಲಿಯ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ. ಜನ್ನಿ, ಮಂಡ್ಯ ರಮೇಶ್, ರವೀಂದ್ರ ಮೇಸ್ಟ್ರು ಮುಂತಾದ ಗುರುಗಳನ್ನು ಸ್ಮರಿಸುತ್ತಾ ಒಬ್ಬ ನಟನಾದವನು ಓದುಗನಾಗಿರಬೇಕು, ಹಾಡುಗಾರನಾಗಿರಬೇಕು, ಚಿತ್ರ ಬರೆಯುವರಾಗಿರಬೇಕು, ಕೊನೆಗೆ ಅವುಗಳ ಕುರಿತ ಆಸಕ್ತಿಯನ್ನಾದರೂ ಕೊನೇ ತನಕ ಉಳಿಸಿಕೊಂಡಿರ ಬೇಕು ಎಂಬ ಕಾರಂತರ ಮಾತಿನ ತತ್ವದಲ್ಲಿ ಕೆಲಸ ಮಾಡುತಿದ್ದೇನೆ ಎನ್ನುತ್ತಾರೆ.
swamyponnachi123@gmail.com
ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಅನ್ನು ಕೂಡಲೇ ಅಮಾನತು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು…
ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು…