ಹಾಡು ಪಾಡು

ಆಷಾಢದ ಮಂಕು ಕಳೆದು ಇದೀಗ ಶ್ರಾವಣದ ಬೆಳಕು

ಶುಭಮಂಗಳ ರಾಮಾಪುರ

ಆಷಾಢ ಮಾಸದಲ್ಲಿ ಹಬ್ಬ ಹರಿದಿನಗಳಾಗಲಿ, ಮದುವೆ ಮುಂಜಿ ಇನ್ನಿತರ ಶುಭ ಸಮಾರಂಭಗಳಾಗಲಿ ನಡೆಯದೆ ಚೈತನ್ಯ ಕಳೆದುಕೊಂಡಿದ್ದ ಮನಸ್ಸು ಶ್ರಾವಣ ಮಾಸದ ಆಗಮನವಾಗುತ್ತಿದ್ದಂತೆ ಸಂಭ್ರಮದಿಂದ ಕುಣಿಯುತ್ತಿದೆ. ಒಂದೆಡೆ ಸಾಲುಸಾಲಾಗಿ ಬರುವ ಹಬ್ಬಗಳಾದರೆ, ಮತ್ತೊಂದೆಡೆ ಮದುವೆ, ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು. ನೆಂಟರಿಷ್ಟರು ಸ್ನೇಹಿತರು ಒಂದೆಡೆ ಕೂಡಿ ಸಂತಸದಿಂದ ದಿನಕಳೆಯಲು ಶ್ರಾವಣ ಮಾಸ ಸಾಕ್ಷಿಯಾಗಿದೆ.

ನಾಗರಪಂಚಮಿ, ರಕ್ಷಾಬಂಧನ, ವರಮಹಾಲಕ್ಷ್ಮೀ, ಶ್ರಾವಣ ಶನಿವಾರ, ಮಂಗಳಗೌರಿ ವ್ರತ ಹೀಗೆ ಒಂದೇ ಎರಡೇ… ಹಬ್ಬಗಳ ಆಚರಣೆ ಒಂದು ಸಂಭ್ರಮವಾದರೆ ಅವುಗಳಿಗಾಗಿ ಪೂರ್ವತಯಾರಿ ಮಾಡಿಕೊಳ್ಳುವುದು ಕೊಂಚ ತ್ರಾಸದಾಯಕವೇ ಸರಿ. ಮನೆಯ ಸ್ವಚ್ಛತೆ (ಹಳ್ಳಿಗಳಲ್ಲಂತೂ ಮಡಿಮಾಡಬೇಕೆಂಬ ಹೆಸರಿನಲ್ಲಿ ಮನೆಕೆಲಸದ ಕಾರುಬಾರು ನೋಡಲಸಾಧ್ಯ), ಪೂಜೆಗೆ ಅಣಿಮಾಡುವುದು, ಹಬ್ಬದೂಟದ ತಯಾರಿ, ಹೀಗೆ ಹೆಂಗಳೆಯರಂತೂ ಕೆಲಸದಲ್ಲೇ ಮುಳುಗಿಬಿಡುತ್ತಾರೆ. ಶ್ರಾವಣ ಮಾಸ ಬಂತೆಂದರೆ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ.

ನನ್ನೂರಲ್ಲಂತೂ ಶ್ರಾವಣ ಮಾಸದ ಶನಿವಾರ ಬಹಳ ವಿಶೇಷ. ಈ ದಿನ ವಿಶೇಷವಾಗಿ ಗಂಡುಮಕ್ಕಳು ಬೆಳ್ಳಂಬೆಳಿಗ್ಗೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ನೊಸಲಿಗೆ ಕೆಂಪು ಬಿಳಿಯ ನಾಮವನ್ನು ಹಾಕಿ, ಹೆಗಲಿಗೆ ಜೋಳಿಗೆಯೊಂದನ್ನು ಸಿಕ್ಕಿಸಿಕೊಂಡು ಅಮ್ಮ ಸಿದ್ಧಪಡಿಸಿಕೊಟ್ಟ ಹುಂಡಿಯನ್ನು (ತಾಮ್ರದ ಚೊಂಬಿಗೆ ತುಳಸಿ ಎಲೆಗಳನ್ನು ಹಾಕಿ, ಜೊತೆಗೆ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ಕಾಣಿಕೆಯನ್ನು ಹಾಕಿ ಅರಿಶಿನದಲ್ಲಿ ಮಿಂದ ಬಿಳಿವಸ್ತ್ರದಿಂದ ಚೊಂಬಿನ ಬಾಯಿಯನ್ನು ಬಂಽಸಿ ಗೋಲಕದಂತೆ ಮಾಡಿದ ಹುಂಡಿ) ತೆಗೆದುಕೊಂಡು ಮನೆಮನೆಗೆ ಹೋಗಿ, ಗೋವಿಂದಾ… ಗೋವಿಂದ! ಗೋವಿಂದಾ… ಗೋವಿಂದ! ಅಂತ ಗೋವಿಂದ ನಾಮಸ್ಮರಣೆ ಮಾಡುತ್ತ ಭಿಕ್ಷೆ ಬೇಡಿದರೆ ದಾಸಯ್ಯನ ಜಾಗಟೆ ಸದ್ದು ಭಿಕ್ಷಾಟನೆಗೆ ಇನ್ನಷ್ಟು ಮೆರುಗು ಕೊಡುತ್ತಿತ್ತು. ಭಕ್ತಾದಿಗಳು ಕೊಟ್ಟ ಹಣದ ರೂಪದ ಕಾಣಿಕೆ ಹುಂಡಿಗೆ ಬಿದ್ದರೆ ಅಕ್ಕಿ ಬೆಲ್ಲ ಜೋಳಿಗೆಯನ್ನು ತುಂಬುತ್ತಿತ್ತು. ಅದರಿಂದ ಆ ದಿನದ ಪ್ರಸಾದ ತಯಾರಿಸಿ ಸಂಜೆ ಮನೆಮಂದಿಯೆಲ್ಲಾ ತಿನ್ನುವುದು, ಕೊನೆಯ ಶ್ರಾವಣ ಕಳೆಯುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ಸಂಗ್ರಹಿಸಿದ ಕಾಣಿಕೆಯನ್ನು ಅರ್ಪಿಸಿದರೆ ಊರಿನವರೇ ತಿಮ್ಮಪ್ಪನ ಆಶೀರ್ವಾದ ಪಡೆದಂತೆ ಅಂತ ನನ್ನಜ್ಜಿ ತಿಮ್ಮಮ್ಮ ಆಗಾಗ ಹೇಳ್ತಾ ಇದ್ರು.

ಮೂವತ್ತು ವರ್ಷಗಳ ಹಿಂದೆ ಒಮ್ಮೆ ಶ್ರಾವಣ ಶನಿವಾರದಲ್ಲಿ ಅಣ್ಣ ಜೋಳಿಗೆ ಮತ್ತು ಹುಂಡಿ ಹಿಡಿದು ಭಿಕ್ಷಾಟನೆಗೆ ಹೊರಟಾಗ ‘ನಾನೂ ಗೋವಿಂದ ಮಾಡ್ತೀನಿ’ ಅಂತ ಹಠಕ್ಕೆ ಬಿದ್ದ ನನ್ನನ್ನ ‘ಗಂಡುಬೀರಿ ಥರ ಆಡ್ತೀಯಲ್ಲ! ಅದೆಲ್ಲಾ ಗಂಡುಮಕ್ಕಳು ಮಾತ್ರ ಮಾಡಬೇಕು, ಹೆಣ್ಮಕ್ಕಳು ಹಂಗೆಲ್ಲಾ ಹೋಗಬಾರದು’ ಅಂತ ಅಮ್ಮ ಗದರಿದರೂ ಬಿಡದೆ ನನ್ನಣ್ಣ ಕದ್ದೂ ಮುಚ್ಚಿ ಜೊತೆಯಲ್ಲಿ ಕರೆದುಕೊಂಡುಹೋಗಿ ಗೋವಿಂದ ಮಾಡ್ಸಿದ್ದು ಇನ್ನೂ ಕಣ್ಣ ಮುಂದೆ ಕಟ್ಟಿದಂತಿದೆ. ಈಗಿನ ಮಕ್ಕಳಿಗೆ ಇದರಲ್ಲಿ ನಂಬಿಕೆ -ಆಸಕ್ತಿ ಎರಡೂ ಇಲ್ಲ. ‘ವರಮಹಾಲಕ್ಷ್ಮೀ ಹಬ್ಬ ಇನ್ನೇನು ಬಂದೇ ಬಿಡ್ತು, ಒಂದೇ ಒಂದು ಕೆಲಸ ಆಗಿಲ್ಲ, ಮನೆಯ ದೂಳು ಹೊಡೆದಿಲ್ಲ, ಗುಡಿಸಿಲ್ಲ, ಒರೆಸಿಲ್ಲ, ಮನೆಗೆ ಕುಂಕುಮಕ್ಕೆ ಅಂತ ಜನ ಬರ್ತಾರೆ, ಮನೆ ಫಳಫಳ ಅನ್ನಬೇಕು, ನೀನೂ ಸ್ವಲ್ಪ ಕೈ ಜೋಡಿಸಬಾರದಾ?’ ಅಂತ ಪಾಪ ನನ್ನಮ್ಮ ಗೋಗರೆದರೆ ಅಯ್ಯೋ ಅನ್ಸುತ್ತೆ.

ಈ ಹಬ್ಬಗಳು ಯಾಕಾದರೂ ಬರುತ್ತೋ ಅಂತ ಒಂದೊಂದ್ಸಲ ಅನ್ನಿಸಿದರೂ ಮನೆಯಲ್ಲಿ ಹಬ್ಬದ ವಾತಾವರಣವಿದ್ದರೆ ಮನಸ್ಸು ಉಲ್ಲಸಿತವಾಗುತ್ತದೆ. ಮೊದಲೆಲ್ಲಾ ಒಂದು ದಿನಕ್ಕೆ ಸೀಮಿತವಾಗಿದ್ದ ವರಲಕ್ಷ್ಮೀ ವ್ರತ ಇತ್ತೀಚೆಗೆ ಮೂರು ದಿನಗಳು, ಕೆಲವೆಡೆ ಮುಂದಿನ ವಾರದವರೆಗೂ ಸಾಗುತ್ತಲೇ ಇರುತ್ತದೆ. ಲಕ್ಷ್ಮೀ ಕೂರಿಸುವುದು ಈ ಹಬ್ಬದ ವಿಶೇಷ. ಕೆಲವೊಬ್ಬರು ಬರೀ ಕಳಸವನ್ನಷ್ಟೇ ಇಟ್ಟು ಹಬ್ಬ ಮಾಡಿದರೆ ಇನ್ನೂ ಬಹುತೇಕ ಜನ ಲಕ್ಷ್ಮೀಯ ವಿಗ್ರಹ ಕೂರಿಸಿ, ಅದಕ್ಕೆ ಸೀರೆ ಉಡಿಸಿ ಅಲಂಕಾರಗೊಳಿಸಿ ಪೂಜೆ ಮಾಡುತ್ತಾರೆ. ಒಬ್ಬರ ಮನೆ ಲಕ್ಷ್ಮೀಗಿಂತ ಮತ್ತೊಬ್ಬರ ಮನೆ ಲಕ್ಷ್ಮೀ ಚಂದವೆಂಬಂತೆ ಅಷ್ಟು ಚಂದವಾಗಿ ಅಲಂಕೃತಳಾಗುತ್ತಾಳೆ ನಮ್ಮ ಲಕ್ಷ್ಮಮ್ಮ. ಕರೆಯದೆ ಯಾರ ಮನೆಗೂ ಹೋಗಬಾರದು ಎಂಬ ಮಾತೊಂದಿದೆ. ಆದರೆ ಈ ಹಬ್ಬಕ್ಕೆ ಈ ಮಾತು ಅಪವಾದವೇ ಸರಿ. ಕುಂಕುಮಕ್ಕೆ ಯಾರೂ ಯಾರನ್ನೂ ಕರೆಯಬೇಕಿಲ್ಲ, ತಾವಾಗಿಯೇ ಬಂದು ಹೋಗಿ ಅರಿಶಿನ ಕುಂಕುಮದ ವಿನಿಮಯವಾಗುತ್ತದೆ. ಇತ್ತೀಚೆಗಂತೂ ವರಮಹಾಲಕ್ಷ್ಮೀ ಆಡಂಬರದ ಪ್ರತೀಕವೇ ಆಗಿಬಿಟ್ಟಿದ್ದಾಳೆ. ಅದ್ಧೂರಿಯಾಗಿ ಸಿದ್ಧಗೊಳಿಸುವುದೇ ಅಲ್ಲದೇ ಬಗೆಬಗೆಯ ತಿಂಡಿತಿನಿಸುಗಳದ್ದೇ ದರ್ಬಾರು. ಬೇಕರಿಯ ತಿಂಡಿತಿನಿಸು ಲಕ್ಷ್ಮೀಗೂ ಪ್ರಿಯವಾಗಿಬಿಟ್ಟಿದೆಯೆಂಬಂತೆ!

ಒಮ್ಮೆ ನಾನೂ ಅಕ್ಕನೂ ಸೇರಿ ಇಪ್ಪತ್ತೊಂದು ಬಗೆಯ ಸಿಹಿತಿಂಡಿಗಳನ್ನು ರಾತ್ರಿಯಿಡೀ ನಿದ್ದೆಗೆಟ್ಟು ಹಬ್ಬದ ಪೂಜೆಗೆಂದು ತಯಾರಿಸಿ, ಅಮ್ಮ ಪೂಜೆ ಮಾಡುವಾಗ ಇಬ್ಬರೂ ತೂಕಡಿಸುತ್ತಾ ಕುಂತಿದ್ದನ್ನು ಮರೆಯಲಾಗುತ್ತಿಲ್ಲ. ಶ್ರಾವಣಮಾಸದಲ್ಲಿ ಎಲ್ಲ ದೇವರ ಪೂಜೆಯೂ ವಿಶೇಷವೇ. ಪ್ರತೀ ಹಬ್ಬಕ್ಕೂ ಹೊಸತೊಂದು ಸಂಕಲ್ಪ. ಈ ಹಬ್ಬಕ್ಕೂ ನನ್ನದೊಂದು ಸಂಕಲ್ಪವಿದೆ. ಪ್ರಯತ್ನ ನಮ್ಮದು; ಫಲಾಫಲ ದೇವರದ್ದು.

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಇಬ್ಬರು ತಲೆಕೆಟ್ಟ ಮಂತ್ರಿಗಳಿದ್ದಾರೆ: ಶಾಸಕ ಜನಾರ್ಧನ ರೆಡ್ಡಿ

ಕೊಪ್ಪಳ: ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಅಧಿಕೃ ಹಸ್ತಾಂತರವಾಗಬಹುದು ಎಂದು ಶಾಸಕ ಜನಾರ್ಧನ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಕೊಪ್ಪಳದಲ್ಲಿ…

8 mins ago

ರಾಜ್ಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕತ್ವ ಗೊಂದಲ ಸೃಷ್ಟಿ ಮಾಡಿಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ: ರಾಜ್ಯದಲ್ಲಿ ನಾಯಕತ್ವ ಗೊಂದಲವನ್ನು ಹೈಕಮಾಂಡ್‌ ಸೃಷ್ಟಿ ಮಾಡಿಲ್ಲ. ಲೋಕಲ್‌ನವರೇ ಮಾಡಿಕೊಂಡಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌…

49 mins ago

ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ

ಬೆಂಗಳೂರು: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ ಘೋಷಿಸಲಾಗಿದ್ದು, ಕರ್ನಾಟಕದ ಕ್ರೀಡಾಪಟುಗಳು ಚಿನ್ನದ ಪದಕ…

1 hour ago

ಯಾರು ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ದುಷ್ಕರ್ಮಿಗಳು

ಮಂಡ್ಯ: ಯಾರು ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಅಮಾನವೀಯ ಕೃತ್ಯ ಪಾಂಡವಪುರ ತಾಲ್ಲೂಕಿನ ಚಿಕ್ಕಕೊಪ್ಪಲು…

2 hours ago

ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್:‌ ನಾಳೆಯಿಂದಲೇ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಹಣ

ಬೆಂಗಳೂರು: ರಾಜ್ಯದ ಪ್ರತಿ ಯಜಮಾನಿಯರಿಗೆ ಹೊಸ ವರ್ಷಕ್ಕೂ ಮುನ್ನವೇ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಸೋಮವಾರದಿಂದಲೇ ಪ್ರತಿ ಮನೆ ಗೃಹಲಕ್ಷ್ಮೀಯರ…

2 hours ago

ಹುಲಿ ಸೆರೆಗೆ ಚಾಮರಾಜನಗರದಲ್ಲಿ ಆಪರೇಷನ್‌ ಬೀಸ್ಟ್‌ ಆರಂಭ: ಡ್ರೋನ್‌ ಮೂಲಕ ಕಾರ್ಯಾಚರಣೆ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.…

2 hours ago