ಹಾಡು ಪಾಡು

ಕಾಲ ಕಾಲಕ್ಕೆ ಬದಲಾಗುವ ಕನ್ನಡ ಸಾಹಿತ್ಯದ ಒಡ್ಡೋಲಗಗಳು

– ಸುರೇಶ ಕಂಜರ್ಪಣೆ

ಬೇರೆ ರಾಜ್ಯಗಳಲ್ಲಿ ಇದೇ ಟ್ರೆಂಡ್ ಇದೆಯಾ ಅಂತ ವಿಚಾರಿಸುವಷ್ಟು ಸಂಪರ್ಕ ನನಗೂ ಇಲ್ಲ. ಆದರೆ
ಕನ್ನಡದ್ದು ಮಾತ್ರ ದಿಗಿಲು ಬೀಳುವಷ್ಟು ಆಕರ್ಷಕವಾಗಿದೆ.

ಕನ್ನಡದ ಶಕ್ತಿಕೇಂದ್ರಗಳು ಯಾವುದು ಅಂತ ಗೆಳೆಯನೊಬ್ಬ ಕೇಳಿದ. ಉತ್ತರ ತಕ್ಷಣ ಹೊಳೆಯಲಿಲ್ಲ.
ಆದರೆ ಸಾಹಿತ್ಯ ಅತಿಶಯ ಪ್ರಮಾಣದಲ್ಲಿ ಈ ಸ್ಪೇಸ್ ಆಕ್ರಮಿಸಿಕೊಂಡಿದ್ದು ಕಂಡಿತು. ಎಷ್ಟೊಂದು ವಿಚಾರಸಂಕಿರಣಗಳು, ಕವಿಗೋಷ್ಠಿಗಳು, ಅಂತಾರಾಜ್ಯ ಸಾಹಿತ್ಯ ಗೋಷ್ಠಿಗಳು, ಈ ನಡುವೆ
ಪುಸ್ತಕ ಬಿಡುಗಡೆ, ಅದರ ಫೇಸ್‌ ಬುಕ್‌ ರಿಲೇ.. ಫೋಟೋ ಸೆಷನ್ಸ್, ಸೆಲ್ಛಿಗಳು.. ಬೇರೆ ರಾಜ್ಯಗಳಲ್ಲಿ ಇದೇ ಟ್ರೆಂಡ್ ಇದೆಯಾ ಅಂತ ವಿಚಾರಿಸುವಷ್ಟು ಸಂಪರ್ಕ ನನಗೂ ಇಲ್ಲ. ಆದರೆ ಕನ್ನಡದ್ದು ಮಾತ್ರ ದಿಗಿಲು ಬೀಳುವಷ್ಟು ಆಕರ್ಷಕವಾಗಿದೆ.

ಉದಾ: ದೆಹಲಿ ಅಥವಾ ಅಂತಾರಾಜ್ಯ ಸಾಹಿತ್ಯಗೋಷ್ಠಿ, ಕವಿಗೋಷ್ಠಿ ಅಂದರೆ ದೆಹಲಿ ವಿರಾಜಿತ ಕಂಬಾರರೋ, ಇನ್ಯಾರೋ ಖಾಯಂ ಆಗಿ ಪ್ರಥಮ ಪೂಜೆ ಪಡೆಯುವಂತೆ ಕಾಣುತ್ತೆ. ಅವರೊಂದಿಗೆ ನಿರೀಕ್ಷಿತ ಕವಿ/ ಸಾಹಿತಿಗಳು. ಇತ್ತೀಚೆಗೆ ದೆಹಲಿ ನಿವಾಸಿ ಕವಯಿತ್ರಿಯೊಬ್ಬರು ಈ ಬಗ್ಗೆ ಖಾರವಾಗಿ ಬರೆದಿದ್ದರು. ಆದರೆ ಖಾರಾಬಾತ್ ರೂಢಿಯಾಗಿರುವ ನಮ್ಮ ಸಂಘಟಕರು ಇದಕ್ಕೆ ಸೊಪ್ಪು ಹಾಕಿದಂತೆ ಕಾಣಿಸಲಿಲ್ಲ. ಹೆಚ್ಚೆಂದರೆ ಸೊಪ್ಪಿನ ಪಲ್ಯ ಉಪ್ಸಾರು ತಯಾರು ಮಾಡಿ ಮುದ್ದೆ ಉಂಡಿರಬಹುದು.

ಈ ಹಿಂದೆಯೂ ಈ ಆಸ್ಥಾನ ಇತ್ತು. ಆಗ ಚಂಪಾ ಅವರಿಂದ ಹಿಡಿದು ಬಹುತೇಕ ಲೇಖಕರು ಯು.ಆರ್.ಎ.
ಮತ್ತು ಗೋಕಾಕರ ಬಗ್ಗೆ ಲೇವಡಿ ಮಾಡಿದ್ದಿತ್ತು. ವೈಯಕ್ತಿಕವಾಗಿ ಭ್ರಷ್ಟರಾದದ್ದೋ, ನಾಲಾಯಕ್‌ಗಳಿಗೆ ಮಣೆ ಹಾಕಿದ್ದೋ ಇತ್ಯಾದಿ ಆರೋಪಗಳಿರಲಿಲ್ಲ. ಅದು ಏನಿದ್ದರೂ ತಮ್ಮ ಅಭಿರುಚಿಗೆ ತಕ್ಕಂತವರ ಆಯ್ಕೆಯ ಮರ್ಜಿ ಎಂದವರಿದ್ದಾರೆ.

ಇದೊಂಥರಾ ಮಠ, ದೇವಸ್ಥಾನಗಳ ದೊಡ್ಡ ಹೋಮಹವನಗಳ ತರಹ. ಮುಖ್ಯ ಪುರೋಹಿತ ತನ್ನ ಪರಿಚಯಸ್ಥರನ್ನೇ ಶಿಫಾರಸು ಮಾಡೋದು.

ರಾಷ್ಟ್ರಮಟ್ಟದ ಯುವ ಕವಿಗೋಷ್ಠಿ ಅಂತ ನಡೆಸುವ ಪರಿಪಾಠ ಈಗಲೂ ಇದೆ ಅಂದುಕೊಂಡಿದೀನಿ. ಹತ್ತು
ಹದಿನೈದು ವರ್ಷಗಳ ಮೊದಲು ಕನ್ನಡದಿಂದ ಹೀಗೆ ಆಯ್ಕೆಯಾದ ಕವಿಗಳು ಆ ಝಗಮಗಕ್ಕೆ ಹೊಂದಲಾರದೇ ಕಾರ್ಯಕ್ರಮ ಮುಗಿಸಿ ಹೊಗೆ ಕೋಣೆಯಿಂದ ಹೊರಗೆ ಬಂದ ಹಾಗೆ ಓಡಿ ಬಂದಿದ್ದೂ ಕಂಡಿದ್ದೇನೆ. ಆದರೆ ಹೀಗೆ ಹೋದವರು ಈ ಝಗಮಗಕ್ಕೆ ಮಾರುಹೋಗಿ ಒಂಥರಾ ಆಡೋದೂ ನೋಡಿದ್ದೇನೆ.

ಇನ್ನು ವಿವಿ ಮಟ್ಟದ ‘ರಾಷ್ಟ್ರೀಯ’ ವಿಚಾರಸಂಕಿರಣಗಳ ಥಳುಕೇ ಬೇರೆ. ನ್ಯಾಕ್ ಕಾರಣಕ್ಕೆ ಇವೆಲ್ಲಾ ರಾಷ್ಟ್ರೀಯ ಎನ್ನುವ ಬ್ಯಾನರ್ ಅಂಟಿಸಿಕೊಂಡರೂ ಅಲ್ಲಿ ಇರುವವರೆಲ್ಲಾ ನಿಲಯದ ಕಲಾವಿದರೇ. ಲಡ್ಡಿಗೆ ಲವಂಗ ಚುಚ್ಚಿದ ಹಾಗೆ ಒಬ್ಬರೋ ಇಬ್ಬರೋ ಮುಂಬೈ, ಹೈದರಾಬಾದ್‌ನಿಂದ ಬಂದರಾಯಿತು. ಬಹುತೇಕ ವಿಷಯಗಳು ನಿರೀಕ್ಷಿತವೇ. ಅದನ್ನು ಮಾಡಿಸುವವರೆಲ್ಲಾ ರಾಜ್ಯದೊಳಗಿನ ಪಂಡಿತ ವಿಮರ್ಶಕರೇ.. ಈ ‘ಡಾ’ಗಳಿಂದಾಚೆ ಕನ್ನಡದ ಹೆಚ್ಚಿನವರು ಈ ವೇದಿಕೆ ಹತ್ತಿಯೇ ಇಲ್ಲ.

ಸರಿಯಾಗಿ ಲೆಕ್ಕ ಹಾಕಿದರೆ ಅಂದಾಜು ಎರಡೋ ಮೂರೋ ಡಜನ್ ಅಕಡೆಮಿಕ್ ವಿಮರ್ಶಕರು ಈ
ಸರ್ಕ್ಯೂಟ್‌ನಲ್ಲಿ ಇರುತ್ತಾರೆ. ಅವರು ರಾಜ್ಯಾದ್ಯಂತ ಭಾಗವಹಿಸುತ್ತಿರುತ್ತಾರೆ. ಫೆಬ್ರವರಿ-ಮಾರ್ಚ್‌ನಲ್ಲಿ ಬಜೆಟ್ ಮುಗಿಸುವ ತರಾತುರಿ ಕಾರಣ ಈ ವಿಚಾರಸಂಕಿರಣಗಳ ಬಾಧೆ ಜಾಸ್ತಿ. ಹೆಚ್ಚಿನ ವಿಚಾರಸಂಕಿರಣಗಳಲ್ಲಿ ಹಾಜರಾತಿ ಮೂರಂಕಿ ದಾಟದು. ಆದರೆ; ವೆಚ್ಚ ಆರಂಕಿ

ಇತ್ತೀಚೆಗೆ ಯುಜಿಸಿ ಕಾಲೇಜು ಮಾಸ್ತರುಗಳಿಗೆ ಪುನರ್ಮನನ ಕಮ್ಮಟದ ಬಗ್ಗೆ ಯುವ ವಿಮರ್ಶಕರೊಬ್ಬರು
ಬರೆದ ಲೇಖನ ನೋಡಿದರೆ ಎದೆ ಹಾರುತ್ತದೆ. ಬಂದ ಹಿರಿಯ ಪಾಠಿಗರು(ಪಾಠ ಮಾಡುವವರು) ಕನಿಷ್ಠ
ತಯಾರಿಯೂ ಮಾಡಿಕೊಂಡಿರಲಿಲ್ಲ. ಅಥವಾ ಹುಳ ಹಿಡಿದ ಒಂದು ತಲೆಮಾರು ಹಿಂದಿನ ವಿಷಯಗಳನ್ನೇ ಮತ್ತೆ ಪ್ರಸ್ತುತಪಡಿಸುತ್ತಿದ್ದ ದುರಂತದ ಬಗ್ಗೆ ಅವರು ಬರೆದಿದ್ದರು. ಕನ್ನಡ ಸಂಶೋಧನಾ ಹೆಜ್ಜೆ ಗತಿಯ ಸ್ಥಾಗಿತ್ಯದ ಬಗ್ಗೆ ಬಿಳಿಮಲೆಯವರು ಹಲವು ಕಡೆ ಪ್ರಸ್ತಾಪಿಸಿದ್ದಿದೆ.

ಇದು ಎಲುಬು ಕಡಿಯುವ ಸುಮ್ಮಾನವಾದರೆ ಹೊಸ ತಲೆಮಾರಿನ ಕತೆಗಾರ/ಕವಿಗಳ ಪ್ರಕಟಣೆ, ಪುಸ್ತಕ ಬಿಡು
ಗಡೆಯ ಸಂಭ್ರಮ ಕಂಡರೆ ಬೇಡರ ಕಣ್ಣಪ್ಪ ಚಿತ್ರದ ಹಾಡಿನ ಮೊದಲ ಸಾಲು ನಮ್ಮ ರಾಷ್ಟ್ರೀಯ ಉದ್ಗಾರವಾಗಬೇಕು.

ಇವು ಸೀಮಂತ, ನಾಮಕರಣಗಳ ಸಂಭ್ರಮಕ್ಕಿಂತ ಮೇಲೆ ಹೋದಂತಿಲ್ಲ. ಅಲ್ಲಿ ಕಾವ್ಯದ ಬಗ್ಗೆಯೋ ಕತಾ ಪ್ರಕಾರದ ಬಗ್ಗೆಯೋ ಏನಾದರೂ ಗಂಭೀರ ಟೇಕ್ ಹೋಮ್ ಸಿಕ್ಕಿತಾ ಎಂಬುದರ ಬಗ್ಗೆ ಒಂದು ಸಾಲೂ ಈ ವರದಿ/ಸ್ವವರದಿಗಳಲ್ಲಿ ಇರುವುದಿಲ್ಲ. ಇದರ ಮುಂದಿನ ಹಂತವಾಗಿ ಕಾಂಪ್ಲಿಮೆಂಟರಿಯಾಗಿ ಕಳಿಸಿದ ಕೃತಿಗೆ ಸಹಜ ಸೌಜನ್ಯದಲ್ಲಿ ಸ್ಪಂದಿಸಿದ್ದನ್ನೂ ಫೇಸ್ಬುಕ್ಕಿನಲ್ಲಿ ಹಾಕಿ ನಮ್ಮನ್ನು ರುಬ್ಬುವ ಪರಿಪಾಠ ಶುರುವಾಗಿದೆ. ಹೊಸಬರ ಈ ಅಭ್ಯಾಸ ಕಂಡು ಕೊಂಚ ಹಿರಿಯರೂ ಈ ಹಾದಿ ತುಳಿದು ಲೈಕುಗಳನ್ನು ಆಸ್ಥೆಯಿಂದ ನೋಡುವ ಚಟಕ್ಕೆ ಬಿದ್ದಿರುವಂತಿದೆ.

ನಾನು ಇತ್ತೀಚೆಗೆ ಹೊಸ ತಲೆಮಾರಿನ ಒಂದಷ್ಟು ಲೇಖಕರ (ಅಂದಾಜು 40 ಲೇಖಕರ) 80 ಪುಸ್ತಕಗಳನ್ನು ಕೊಂಡು ತಂದು ಓದತೊಡಗಿದೆ. ಓದಿದ ಖುಷಿಗೆ ಫೋನು ಮಾಡಿ ಮಾತಾಡಿದಾಗ ಸಿಕ್ಕ ಅಭಿಪ್ರಾಯ ಸುಮಾರಾಗಿ ಒಂದೇ.

‘ಯಾರೂ ಗಂಭೀರವಾಗಿ ನಮ್ಮ ಬರವಣಿಗೆಯ ಮಿತಿ, ಸಾಧ್ಯತೆ ಬಗ್ಗೆ ಹೇಳುತ್ತಿಲ್ಲ ಸಾರ್, ಆದ್ದರಿಂದ ಬರವಣಿಗೆಯ ಮುಂದಿನ ಹೆಜ್ಜೆ ಹಾದಿಯೇ ಗೊತ್ತಾಗ್ತಿಲ್ಲ’ ಎಂದು ಪ್ರಾಮಾಣಿಕವಾಗಿ ಅಲವತ್ತುಕೊಂಡರು. ಇತ್ತೀಚೆಗೆ ಮಯೂರದಲ್ಲಿ ಹೊಸ ತಲೆಮಾರಿನ ಕುರಿತು ಸುದೀರ್ಘ ಲೇಖನ ಒಂದು ಬಿಟ್ಟರೆ ಬೇರೆ ಯಾವ ಲೇಖನಗಳನ್ನೂ ನಾನು ಕಂಡಿಲ್ಲ.

ಆದರೆ ಇಷ್ಟು ಹೇಳಿಕೊಳ್ಳುವಾಗಲೂ ಈ ಲೇಖಕರಿಗೆ ಈ ಸಂಭ್ರಮದ ಝಗಮಗದಿಂದ ಹೊರಗೆ ಬರಬೇಕೆಂಬ
ಇರಾದೆ ಕಡಿಮೆಯಾದಂತೆ ತೋರಲಿಲ್ಲ.

ಈ ಮಧ್ಯೆ ಹೊಸ ಲಿಟ್ ಫೆಸ್ಟ್‌ಗಳ ದಡೂತಿ ವೇದಿಕೆಗಳೂ ಹುಟ್ಟಿಕೊಂಡು ನನ್ನಂತಹವನ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿವೆ.

ಇಲ್ಲೆಲ್ಲಾ ಕನ್ನಡಕ್ಕೆ ಮೊದಲು ಅವಕಾಶ ಇರಲಿಲ್ಲ. ಇತ್ತೀಚೆಗೆ ಕನ್ನಡ ಸೇನೆಗಳ ಭಯಕ್ಕೆ ಈ ಉಪವೇದಿಕೆಗಳನ್ನು ಸೃಷ್ಟಿಸಿರಬಹುದು ಎಂಬುದು ನನ್ನ ಊಹೆ. ಅಗ್ರ ಪಂಕ್ತಿ ಅಲ್ಲದಿದ್ದರೂ ಅಡ್ಡ ಪಂಕ್ತಿ ಹಾಕಿದರೂ ಸಾಕು, ಸದ್ಯಕ್ಕೆ. ಅವರು ವೇದಿಕೆ ಕೊಟ್ಟರೆ ಅದೇನೋ ಪುಳಕ.

ಮೊದಲು ಮಠಗಳ ಸಾಹಿತ್ಯೋತ್ಸವದಲ್ಲಿ ಈ ತರದ ಕರೆ ಬಂದು ಅಲ್ಲಿ ಶಾಲು ಹೊದಿಸಿಕೊಂಡು ಮಂತ್ರಾಕ್ಷತೆ ಪಡೆವ ಯೋಗ ಇರುತ್ತಿತ್ತು! ಈಗ ಅದು ಕೊಂಚ ಮಂಕಾಗಿದೆ. ಈ ಲಿಟ್ ಫೆಸ್ಟ್ ಅದರ ಆಧುನಿಕ ಅವತಾರ ತಾಳಿದಂತಿದೆ.

****
ಇವೆಲ್ಲಾ ಆಧಾರ್ ಕಾರ್ಡ್ ತರಹ. ಅದು ಅಸ್ತಿತ್ವದ ಪುರಾವೆಯೇ ಹೊರತು, ನಾಗರಿಕತ್ವದ ದೃಢೀಕರಣ ಅಲ್ಲ
ಎಂದು ಆಧಾರ್ ಕಾರ್ಡಲ್ಲಿ ಬರೆದಿಲ್ವೇ? ಆದರೂ ಅದಕ್ಕೆಂಥಾ ಮನ್ನಣೆ!!!!

ಈ ಪುಳಕ ನಿಲ್ಲುವವರೆಗೂ ಲೇಖಕ ಆಳವಾಗಲು ಸಾಧ್ಯವೇ ಇಲ್ಲ ಅನ್ಸುತ್ತಪ್ಪಾ.

ಕುಂಟಾಬಿಲ್ಲೆಯಲ್ಲಿ ಕಣ್ಣು ಮುಚ್ಚಿ ಹೆಜ್ಜೆ ಹಾಕುತ್ತಾ ‘ಅಮರೆಟ್’ ಅಂತ ಕೂಗುವಾಗ ಹಿಂದೆ ಇದ್ದವರು
ಹೇಳಬೇಕು.

ಈ ಅಮರೆಟ್ ಮರೆಯಾಗಿದೆ. ನಮ್ಮ ಕಾಲದಲ್ಲಿ ಒಂದು ಪ್ರತಿಕ್ರಿಯೆಗೂ ಇನ್‌ಲ್ಯಾಂಡ್ ಲೆಟರಲ್ಲಿ ಬರೆಯಬೇಕಿತ್ತು. ಇಲ್ಲ ಶೂದ್ರ, ಸಂಕ್ರಮಣಗಳಿಗೆ ಎರಡುಮೂರು ಪುಟ ಬರೆಯಬೇಕಿತ್ತು. ಆ ನರಕವೇ ನಮ್ಮ ಸಂವೇದನೆಯನ್ನು ಎಚ್ಚರದಲ್ಲಿ ಕಾಪಿಡಲು ನೆರವಾಗಿತ್ತು ಅನ್ನಿಸುತ್ತೆ.

kpsuresha@gmail.com

 

ಆಂದೋಲನ ಡೆಸ್ಕ್

Recent Posts

WPL Champions | 2ನೇ ಬಾರಿ ಚಾಂಪಿಯನ್‌ ಆದ ಆರ್‌ಸಿಬಿ

ವಡೋದರ : 2026ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರೋಚಕವಾಗಿ…

6 hours ago

ಸದನದ ಘನತೆಗೆ ಧಕ್ಕೆ ಆರೋಪ : ಶಾಸಕ ಶಿವಲಿಂಗೇಗೌಡ ವಜಾಕ್ಕೆ ಆಗ್ರಹ

ಹಾಸನ : ವಿಧಾನಸಭಾ ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳು ರಾಜ್ಯ ವಿಧಾನಸಭೆಯ…

7 hours ago

ಹುಲಿ ಸಂರಕ್ಷಣೆಗೆ ಅಂತಾರಾಷ್ಟ್ರೀಯ ಶೃಂಗಸಭೆ : ಬಂಡೀಪುರ, ನಾಗರಹೊಳೆಯಲ್ಲಿ ಆಯೋಜನೆ

ಮೈಸೂರು : ಭಾರತದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯನ್ನು ಕರ್ನಾಟಕದ ಬಂಡೀಪುರ, ನಾಗರಹೊಳೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.…

8 hours ago

ಟಿ20 ವಿಶ್ವಕಪ್ | ಭಾರತ ಪಂದ್ಯ ಬಹಿಷ್ಕಾರ ನಿರ್ಧಾರ ಅಚಲ ; ಪಾಕ್‌ ಪುನರುಚ್ಚಾನ

ಇಸ್ಲಾಮಾಬಾದ್ : ಭಾರತದ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಪುನರುಚ್ಚರಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ…

8 hours ago

ಯುಪಿಎಸ್‌ಸಿ ಪರೀಕ್ಷೆಗೆ ಅಧಿಸೂಚನೆ : ಈಗಾಗಲೇ ಪಾಸಾಗಿ ನೇಮಕಗೊಂಡವರಿಗಿಲ್ಲ ಮರು ಪರೀಕ್ಷೆ ಅವಕಾಶ

ಬೆಂಗಳೂರು : ದೇಶದ ಅತ್ಯುನ್ನತ ಹುದ್ದೆಗಳಿಗೆ ನಡೆಯುವ ನಾಗರಿಕ ಸೇವಾ ಪರೀಕ್ಷೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಧಿಸೂಚನೆ ಪ್ರಕಟಿಸಿದೆ.…

9 hours ago

ಹಸುಗಳಿಗೆ ಮಾರಕ ರೋಗ : ರೈತರಲ್ಲಿ ತೀವ್ರ ಆತಂಕ

ನಾಪೋಕ್ಲು : ನಾಪೋಕ್ಲು ಭಾಗದ ಪಾಲೂರು ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆರೋಗ್ಯವಂತ ಹಸುಗಳ ಕಾಲುಗಳು ಕ್ರಮೇಣ ಕೃಶಗೊಂಡು ದುರ್ಬಲಗೊಳ್ಳುತ್ತಿದ್ದು,…

9 hours ago