ದೇಮ ಎಂಬ ನೈತಿಕ ಕೈಮರ 

ಸುರೇಶ ಕಂಜರ್ಪಣೆ

ಅಂದಕಾಲತ್ತಿಲೇ ನಾನು ಅರಕಲಗೂಡಲ್ಲಿ ಪಾಠ ಮಾಡುತ್ತಿದ್ದಾಗ ಅಲ್ಲಿನ ದೇವಸ್ಥಾನದಲ್ಲಿ ಶಿವರಾತ್ರಿಯಂದು ನಡೆದ ಸಾಂಪ್ರದಾಯಿಕ ಪ್ರಸಾದ ವಿತರಣೆಯಲ್ಲಿ ಜಾತಿಭಿನ್ನತೆ ಮಾಡಿದ ಬಗ್ಗೆ ಜನತಾ ಮಾಧ್ಯಮಕ್ಕೆ ನಾನೊಂದು ಪತ್ರ ಬರೆದಿದ್ದೆ. ಅದರಲ್ಲಿ ಒಂದೂರು ಹೆಸರು “ಅ” ಎಂದಿರಲಿ ಎಂದು ಶುರು ಮಾಡಿದ್ದೆ. ಅದು ಗಲಾಟೆ ಆಯಿತು. ಮೈಸೂರಿಗೆ ಬಂದಾಗ ಯು.ಆರ್.ಎ. ಅವರಲ್ಲಿ ಇದರ ಬಗ್ಗೆ ಹೇಳಿದೆ. ಅವರು ಇದನ್ನು ಎದುರಿಸು ಅಂದರು. ದೇಮ ಅಲ್ಲಿದ್ದರು. ಅವರು ನನ್ನ ಪತ್ರ ಇಸಕೊಂಡು ಓದಿ, “ಸುರೇಶ್, ಹೆಸರು ಅ ಎಂದಿರಲಿ ಎಂದು ಬರೆದಿದೀರಿ. ಇದು ಎಸ್ಕೇಪಾಗುವ ಹಾದಿ.

ಯಾವೂರು ಅಂದರೆ ಇದಲ್ಲ ಅನ್ನಬೋದು. ಹಾಗಲ್ಲ, ನೇರ ಹೆಸರು ಹಾಕಿ ಬರಿಬೇಕು. ಇಲ್ಲದಿದ್ದರೆ ಗಾಸಿಪ್ ಆಗುತ್ತೆ. ಧೈರ್ಯ ಇರೋದು ಸತ್ಯ ಬರೆಯೋದರಲ್ಲಿ. ಅದನ್ನ ಸೂಚ್ಯವಾಗಿ ಹೇಳಿದರೆ ಸಾಲದು” ಅಂದಿದ್ದರು. ಇಂದಿನವರೆಗೂ ನಾನು “ಯಾರೋ ಒಬ್ಬ” ಅಂತ ಬರೆದೇ ಇಲ್ಲ!! ಅದಕ್ಕೂ ಮೊದಲು ನಾವು ಓದುವಾಗ ದಸಂಸ ಆತ್ಮ ವಿಮರ್ಶೆಯ ಭಾಗವಾಗಿ ದಲಿತ ಮಂತ್ರಿ ಶಾಸಕರ ಮನೆ ಎದುರು ಧರಣಿ ಎಂಬೋ ಕಾರ್ಯಕ್ರಮ ಸಂಘಟಿಸಿದ್ದರು. ಒಂದಷ್ಟು ಹುಡುಗರು (ನನ್ನ ಸಹಿತ) ಶ್ರೀನಿ ವಾಸ್ ಪ್ರಸಾದ್ ಮನೆ ಎದುರು ಧರಣಿ ಕೂತು ಹೋರಾಟದ ಹಾಡು ಹಾಡುತ್ತಿದ್ದೆವು. ಪ್ರಸಾದ್ ಮನೆಯಲ್ಲಿ ಆ ದಿನ ಅದೇನೋ ಪೂಜೆ. ಅವರ ದಿಂಡಾಳುಗಳಿಗೆ ಸಿಟ್ಟು ಬಂದು ಕೋಲಿಗೆ ಕಟ್ಟಿದ್ದ ನಮ್ಮ ಪ್ಲಾಸ್ಟಿಕ್ ಗೋಣಿಯ ಶಾಮಿಯಾನಾ ಕಿತ್ತು ನಮ್ಮನ್ನು ಓಡಿಸಿದರು. ನಾವು ಸೈಕಲ್ ಹತ್ತಿ ದೇಮ ಅವರಲ್ಲಿಗೆ ಬಂದು ಅರುಹಿದೆವು.

ದೇಮ ಎರಡು ನಿಮಿಷ ಮೌನವಾಗಿದ್ದು, ಹೋಗಿ ನಾನು ಬರ್ತೀನಿ ಎಂದರು. ನಾವು ಮತ್ತೆ ಸ್ಥಾಪನೆಯಾ ಗುವ ವೇಳೆಗೆ ದೇಮ ಬಂದು ನಮ್ಮ ಜೊತೆ ಕೂತರು. ಭೀಕರ ಬಿಸಿಲು, ಶ್ರೀನಿವಾಸ್ ಪ್ರಸಾದ್ ಮನೆಯಿಂದ ಓಡಿ ಬಂದು ದೇಮ ಅವರ ಬಳಿ ವಾದಿಸುತ್ತಾ, “ನಾನೇನೂ ಮಾಡಿಲ್ವಾ? ಹೀಂಗೆ ಇನ್ಸಲ್ಟ್ ಮಾಡಿದರೆ ಬೇಜಾರಾಗಲ್ವಾ?” ಅನ್ನುತ್ತಿದ್ದರು. ದೇಮ ಶಾಂತವಾಗಿ, “ಇದು ಸಾಂಕೇತಿಕ ನಿಮಗೆ ಗೊತ್ತಿರಬೇಕಿತ್ತು. ನಮ್ಮ ಹುಡುಗರಿಗೆ ಹೊಡೆದಿದ್ದಾರೆ, ನಾನು ಏಳಲ್ಲ” ಅಂದರು. ಒಂದಷ್ಟು ನಿಮಿಷ ಏನೋ ವಾದಿಸುತ್ತಾ ಪ್ರಸಾದ್ ಅತ್ತೇ ಬಿಟ್ಟಿದ್ದರು. ಆ ದಿನ ಅವರ ಮನೆಯಲ್ಲಿ ಯಾರೂ ಆ ಹಬ್ಬದ ಊಟ ಮಾಡಲಿಲ್ಲ. ದೇಮ ಸಾರ್ವಜನಿಕ ಭಾಷ್ಯದ ಬಗ್ಗೆ, ಹೋರಾಟದ ನಿಲುವಿನ ಬಗ್ಗೆ ನಮಗೆ ಕಲಿಸಿದ ಪಾಠ ಇಂದೂ ಎದೆಯೊಳಗೆ ಊರಿದೆ.

ಕೇವಲ ಆಕ್ರೋಶದ ಪ್ರತಿಭಟನೆ ಬಗ್ಗೆ ದೇಮ ಕೊಂಚ ಕಸಿವಿಸಿಪಟ್ಟದ್ದಿದೆ. ನಿರ್ದಿಷ್ಟ ಕೇಸುಗಳಾದರೆ ಸರಿ. ಸೈದ್ಧಾಂತಿಕವಾದರೆ ಅದು ನಿಮ್ಮ ಎದುರಾಳಿಯನ್ನು ಬದಲಾಯಿಸುವಂತಿರಬೇಕು ಎಂದು ದೇಮ ಹೇಳುತ್ತಿದ್ದರು.

ಒಂದು ಹಿರಿಯ ತಲೆಮಾರು ಅಂತ ಈಗ ಕರೆಯಬಹುದಾದ ಲಂಕೇಶ್, ತೇಜಸ್ವಿ, ಯು.ಆರ್.ಎ, ಕೃಷ್ಣಪ್ಪ ಅವರು ಕನ್ನಡದಲ್ಲಿ ಸೃಷ್ಟಿಸಿದ ತಾತ್ವಿಕ ಚರ್ಚೆ ಮತ್ತು ಒಳನೋಟಗಳನ್ನು ಹೀರಿಕೊಂಡ ತಲೆಮಾರು ನಮ್ಮದು. ದೇಮ ಅದರ ಕೊನೆಯ ಕೊಂಡಿ. ಕತೆ, ಕಾದಂಬರಿಗಳಲ್ಲಿ ದೇಮ ಸೃಷ್ಟಿಸಿದ ಕಲಾ ಜಗತ್ತನ್ನು ಬಶೀರ್ ಅವರ ಜೊತೆ ಹೋಲಿಸಬಹುದೇನೋ. ಏಕಕಾಲಕ್ಕೆ ಈ ಜಗತ್ತಿನ ಜೊತೆ ಬೆರೆತೂ ಅದನ್ನು ಹೊರಳಿಸುವ ಬರಹ ಅದು. ಅದರಾಚೆಗೆ ದೇಮ ಈ ತಲ್ಲಣದ ಕಾಲದಲ್ಲಿ ಅಂತಸ್ಸಾಕ್ಷಿಯ ದನಿಯಾಗಿ ಮಾತಾಡುತ್ತಲೇ ಬಂದಿದ್ದಾರೆ. ಒಂದು ಫ್ಯಾಸಿಸ್ಟ್ ಎಂದು ಕರೆಯಬಹುದಾದ ಲಕ್ಷಣಗಳನ್ನು ಢಾಳಾಗಿ ಹೊಂದಿರುವ ಪ್ರಭುತ್ವದ ವಿರುದ್ಧ ಪ್ರತಿರೋಧವನ್ನು ಹೇಗೆ ಸೃಷ್ಟಿಸುವುದು ಎಂಬ ಪ್ರಶ್ನೆ ಅದು. ದೇಮ ಅದರ ಸೂಚಿಗಳನ್ನು ಮುಂದಿಡುತ್ತಲೇ ಬಂದಿದ್ದಾರೆ. ಲೌಕಿಕದ ಸುಖಗಳನ್ನು ಗಾಳದಂತೆ ಹಿಡಿವ ಜಾಗತೀಕರಣದ ಹವಣಿಕೆಗೆ ಎಲ್ಲರೂ ಬಲಿ ಬೀಳುವಾಗ ಅದನ್ನೇ ವಿರೋಧಿಸುವುದು ಹೇಗೆ?

ಒಬ್ಬ ಸಾಂಸ್ಕ ತಿಕ ಚಿಂತಕನಾಗಿ ದೇಮ ಆಗಾಗ್ಗೆ ಮುಂದಿಡುವ ಸೂಚಿಗಳನ್ನು ಎತ್ತಿಕೊಂಡು ನಾಡಿನಾದ್ಯಂತ ಪ್ರತಿರೋಧ ಕಟ್ಟುವ ಕಸುವೂ ಇಲ್ಲ. ಸಂಖ್ಯಾಬಲವೂ ಇಲ್ಲದ ದುಸ್ಥಿತಿಯಲ್ಲಿ ನಾವಿದ್ದೇವೆ. ಅಂಬೇಡ್ಕರ್ ಅವರನ್ನು ಆಪೋಶನ ತೆಗೆದುಕೊಂಡು ಗಾಂಧಿಯನ್ನು ಹೂತು ಹಾಕುವ ಅಜೆಂಡಾ ಒಂದರ್ಥದಲ್ಲಿ ಸಾಂಕೇತಿಕ. ಸ್ಪೈನಿನಲ್ಲಿ ಎರಡು ತಲೆಮಾರು ಹೀಗೆ ವಿಸ್ಮೃತಿಯಲ್ಲಿ ಕೂತಿತ್ತು. ಮೊನ್ನೆ ಮೊನ್ನೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನೂ ಇಷ್ಟಿಷ್ಟೇ ಟೊಳ್ಳು ಮಾಡಿ ಹಂಗೇರಿಯಲ್ಲಿ ಸಾಂವಿಧಾನಿಕ ಸರ್ವಾಧಿಕಾರಿಯಾಗಿ ಮೆರೆದಿದ್ದ ಒಬ್ಬನನ್ನು ಅಲ್ಲಿನ ಜನ ಪುಣ್ಯವಶಾತ್ ಕಿತ್ತೆಸೆದರು.

ಆದರೆ ಆತ ಬಳಸಿದ ಒಂದು ನುಡಿಗಟ್ಟು ಉಲ್ಲೇಖನೀಯ iliberal Democracy & – ಉದಾರವಾದಿಯಲ್ಲದ ಪ್ರಜಾಸತ್ತೆ. ಬಹುಸಂಖ್ಯಾತರ ರಾಷ್ಟ್ರೀಯವಾದಿ ಯಜಮಾನಿಕೆ, ಅಲ್ಪ ಸಂಖ್ಯಾತರು, ಚಿಂತಕರ ಬಗ್ಗೆ ಅಸಹನೆ- ಹೀಗೆ ಈ ಪ್ರಜಾಸತ್ತೆಯ ಸೂಚಿಗಳ ಪಟ್ಟಿ ಬೆಳೆಯುತ್ತದೆ.

ದೇಮ ಎದುರಾಗಿರುವುದು ಅಂಥ ಒಂದು ಪ್ರಭುತ್ವಕ್ಕೆ. ಇದರ ಒಂದು ದುರಂತದ ಬಗ್ಗೆ ಅವರು ಇತ್ತೀಚೆಗೆ ನನ್ನನ್ನು ಎಚ್ಚರಿಸಿದರು. ಬ್ರಹ್ಮಸೂತ್ರದ ಒಂದು ಭಾಗದಲ್ಲಿ ಜನ್ಮತಃ ಶೂದ್ರರಿಗೆ ವೇದಾಧ್ಯಯನದ ಹಕ್ಕಿಲ್ಲ ಎಂಬ ಕರ್ಮಠರ ವಾದವನ್ನು ಶಂಕರಾಚಾರ್ಯ ಆತ್ಮವಂಚನೆಯಲ್ಲಿ ಎಂಡೋರ್ಸ್ ಮಾಡಿದ್ದನ್ನು ದೇಮ ತೋರಿಸಿ. ಇಲ್ಲಿಂದ ಅಧಃಪತನ ಶುರುವಾಯಿತು” ಎಂದರು. ಆಮೇಲೆ. “ಶ್ರೇಷ್ಠತೆಯ ಪ್ರತ್ಯೇಕತಾ ಭ್ರಮೆಯಲ್ಲಿ ಬ್ರಾಹ್ಮಣರನ್ನು ನಿಮ್ಮ ಮಠ, ಪುರೋಹಿತರು ಬಂಧಿಸಿದ್ದಾರೆ. ಅವರಿಗೆ ಎಲ್ಲರೊಳ ಗೊಂದಾಗುವ ನಿಜ ಅದ್ವೈತದ ಅರಿವು ನಿಮ್ಮಂಥವರು ಮೂಡಿಸಬೇಕು ಸುರೇಶ್. ಅವರು ವಿಮೋಚನೆಗೊಳ್ಳಬೇಕಾಗಿದೆ” ಎಂದರು.

ದೇಮ ಹೀಗೆ ತೋರುಬೆರಳು ತೋರಿದಲ್ಲಿ ಒಂದು ಹಾದಿಯಿರುತ್ತದೆ. ಒಂದು ಕೈಮರ ಇರುತ್ತದೆ. ಅರಿವಿನ, ವಿವೇಕದ, ನೈತಿಕ ಸ್ಥೈರ್ಯದ ಕೈಮರ ಅದು. ಪಂಪ ಪ್ರಶಸ್ತಿ ದೇಮ ಅವರಿಗೆ ನೀಡಿ ಸರ್ಕಾರ, ನಾಡು ತನ್ನನ್ನು ತಾನೇ ಗೌರವಿಸಿಕೊಂಡಿದೆ. ಆದರೆ ದೇಮ ಈಜುವವನು ನೀರನ್ನು ಹಿಂದೆ ತಳ್ಳಿಮುಂದೆ ಸಾಗುವಂತೆ ಇನ್ನೇನೋ ನಮ್ಮನ್ನು ಬಾಧಿಸುವ ಸಂಸ್ಕ ತಿಯ, ರಾಜಕೀಯದ ಪ್ರಶ್ನೆ ಎದುರಿಗಿಟ್ಟುಕೊಂಡು ಚಡಪಡಿಸುತ್ತಿರುತ್ತಾರೆ. ಅವರು ಹಾಗೇ ಇರಲಿ! ಆರೋಗ್ಯದಿಂದಿರಲಿ

” ದೇಮ ತೋರುಬೆರಳು ತೋರಿದಲ್ಲಿ ಒಂದು ಹಾದಿಯಿರುತ್ತದೆ. ಒಂದು ಕೈಮರ ಇರುತ್ತದೆ. ಅರಿವಿನ, ವಿವೇಕದ, ನೈತಿಕ ಸ್ಥೈರ್ಯದ ಕೈಮರ ಅದು”

ಆಂದೋಲನ ಡೆಸ್ಕ್

Recent Posts

ರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ: ಸರ್ಕಾರಕ್ಕೆ ಎದುರಾಗಿದ್ದ ಕಂಟಕ ತಾತ್ಕಾಲಿಕ ನಿವಾರಣೆ

ಬೆಂಗಳೂರು: ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಸಚಿವ ರಾಮಲಿಂಗ ರೆಡ್ಡಿ…

9 hours ago

ಛತ್ತೀಸ್‌ಗಢದಲ್ಲಿ ಎಬೋಲಾ ಭೀತಿ: ಮೂವರು ಆಫ್ರಿಕಾ ಪ್ರಜೆಗಳಿಗೆ 21 ದಿನ ಕ್ವಾರಂಟೈನ್‌

ರಾಯ್ಪುರ: ಇತ್ತೀಚೆಗೆ ಆಫ್ರಿಕಾದ ಹಲವೆಡೆ ಎಬೋಲಾ ವೈರಸ್‌ ಭೀತಿ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಛತ್ತೀಸ್‌ಗಢದಲ್ಲಿ ಮೂವರು ಆಫ್ರಿಕಾ ಪ್ರಜೆಗಳನ್ನು 21…

9 hours ago

ಬೊಮ್ಮನದೊಡ್ಡಿ ಬಳಿ ಚಿರತೆ ಸಂಚಾರ: ಗ್ರಾಮಸ್ಥರಲ್ಲಿ ಆತಂಕ

ಭಾರತೀನಗರ: ಇಲ್ಲಿಗೆ ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಗುರುದೇವರಹಳ್ಳಿ ಗ್ರಾಮದ ಚೇತನ್‌ಮಾದೇಗೌಡ ಎಂಬವರು ಬೊಮ್ಮನದೊಡ್ಡಿ…

9 hours ago

ಕೇರಳದಲ್ಲಿ ಭಾರೀ ಮಳೆ: ಐದು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ತಿರುವನಂತಪುರಂ: ನೆರೆಯ ಕೇರಳ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ಮಲ್ಲಪುರಂ, ಕೋಯಿಕ್ಕೋಡ್‌, ವಯನಾಡು, ಕಣ್ಣೂರು ಮತ್ತು ಕಾಸರಗೋಡಿನಲ್ಲಿ…

10 hours ago

ಅಣ್ಣಾಮಲೈ ಬೆನ್ನಲ್ಲೇ ಮತ್ತೆರಡು ವಿಕೆಟ್‌ ಪತನ

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಬಿಜೆಪಿಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಮತ್ತೆರಡು ವಿಕೆಟ್‌ ಪತನಗೊಂಡಿದೆ. ರಾಜ್ಯ…

11 hours ago

ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್‌ ಪಡೆಯಲು ಒಪ್ಪಿದ್ದಾರೆ: ರಣದೀಪ್‌ ಸಿಂಗ್‌ ಸುರ್ಜೇವಾಲ

ಬೆಂಗಳೂರು: ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್‌ ಪಡೆದು ಸಚಿವ ಸಂಪುಟದಲ್ಲಿ ಮುಂದುವರೆಯಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌…

11 hours ago