• ಪೂರ್ಣಿಮಾ ಭಟ್ಟ ಸಣ್ಣಕೇರಿ

ಕಾಲಪ್ಪಳಿಸುತ್ತ, ಮುಖವನ್ನೂ ನೋಡದೆ ಮೆಟ್ಟಿಲು ದುಡುದುಡು ಇಳಿದು ಹೋದಳು ನಿಕಿತಾ, ನಾನು ಅರಲುಗದ್ದೆಯಲ್ಲಿ ಕಾಲು ಹುದುಗಿ ಬಿದ್ದಂತೆ ಅಲ್ಲೇ ನಿಂತೆ. ಕಳೆದ ಹತ್ತು ನಿಮಿಷ ನಡೆದ ಜೋರು ಗಲಾಟೆ
ನನ್ನನ್ನು ಆ ಜಾಗದಿಂದ ಅಲ್ಲಾಡಲೂ ಸಾಧ್ಯವಿಲ್ಲದಷ್ಟು ವೀಕಾಗಿಸಿತ್ತು ಕೂಡ. ನಿಕಿತಾ ಮುಂಬಾಗಿಲನ್ನು ದಢಾರನೆ ಎಳೆದುಕೊಂಡಿದ್ದು ಕೇಳಿತು.

ನಡೆದದ್ದು ಮತ್ತೆ ಮನಸ್ಸಿಗೆ ಕಿರಿಕಿರಿ ಕೊಡತೊಡಗಿತು. ನಿಕಿತಾಳ ಕಿವಿ ಕೆಂಪುಕೆಂಪಾಗಿತ್ತು, ಒಂಚೂರೇ ಚೂರು ರಕ್ತ ಬೇರೆ ಜಿನುಗುವಂತೆ ಇತ್ತು ಎನ್ನುವುದು ನೆನಪಾಯಿತು… ಮತ್ತೆ ಎದೆ ಢವಢವ ಹೊಡೆದುಕೊಳ್ಳತೊಡಗಿತು. ‘ಛೇ, ಇಂವ ಇದ್ದಿದ್ದರೇ ಒಳ್ಳೇದಿತ್ತು. ವಿಷಯ ಇಷ್ಟು ಕೈಮೀರುತ್ತಿರಲಿಲ್ಲ’ ನಾನೇ
ಗೊಣಗಿಕೊಂಡೆ.

ಇವತ್ತು ಬೆಳಿಗ್ಗೆ ಏಳೂಮುಕ್ಕಾಲಿಗೆ ಸಂಗೀತ ಕ್ಲಾಸು ಮುಗಿಯುತ್ತಿದ್ದಂತೆ ಶುರುವಾದ ಗಲಾಟೆ ಇದು.
ಪ್ರತಿ ಶುಕ್ರವಾರ ಏಳರಿಂದ ಏಳೂಮುಕ್ಕಾಲು ನಿಕಿತಾಗೆ ಹಿಂದೂಸ್ತಾನಿ ಭಜನೆಗಳ ಆನ್‌ಲೈನ್ ಕ್ಲಾಸು. ಅವಳ ದೊಡ್ಡಮ್ಮ ಅಂದರೆ ನನ್ನ ಅಕ್ಕನೇ ನಿಕಿತಾಳ ಗುರು. ಈ ಕ್ಲಾಸು ಶುರುವಾಗಿ ಸುಮಾರು ಎರಡು ವರ್ಷಗಳಿಗೂ ಮಿಕ್ಕಿತು.

ಆರಂಭದಿಂದಲೂ ಒಂದಿಲ್ಲೊಂದು ವರಾತ ನಿಕಿತಾದು, ನಾಳೆ ಕ್ಲಾಸು ಬೇಡ ಮಾಮ್. ನನಗೆ ಬೇಗ ಸ್ಕೂಲಿಗೆ ಹೋಗಬೇಕು” ಒಂದು ದಿನ ಈ ನೆಪ. “ಓಹ್ ಮಾಮ್, ‘ಎನ್ನ ಪಾಲಿಸೋ ಕರುಣಾಕರ’ ಹಾಡನ್ನು ಪ್ರಾಕ್ಟಿಸ್ ಮಾಡಲು ಮರೆತೆ. ಇವತ್ತು ಕ್ಲಾಸು ಬೇಡ’ ಅಷ್ಟು ರಾಗಬದ್ಧವಾಗಿ ಹಾಡುವ, ಇನ್ನಷ್ಟು ಕೂತು ಕೇಳಬೇಕೆನಿಸುವಷ್ಟು ಇಂಪಾದ ಶಾರೀರವಿರುವ ನಿಕಿತಾಗೆ ದೊಡ್ಡಮ್ಮನ ದೇವರನಾಮದ ಕ್ಲಾಸುಗಳನ್ನು ಅಟೆಂಡ್ ಮಾಡುವುದೆಂದರೆ ಎಂಥದೋ ಅಡ್ಡಿ, ಅಲ್ಲಿ ಭಾರತದಲ್ಲಿ, ಸುಮಾರು ಮೂವತ್ತು ಮಕ್ಕಳಿಗೆ ಸಂಗೀತ ಪಾಠ ಮಾಡುವ ನಿಕಿತಾಳ ದೊಡ್ಡಮ್ಮ, ಸದಾ ಬಿಝಿ. ಆದರೂ ಇಲ್ಲಿ ಇಂಗ್ಲೆಂಡಿನಲ್ಲಿ ಕೂತ ಮಗಳಿಗಾಗಿ ಪ್ರತೀ ಶುಕ್ರವಾರ ತನ್ನ ಚಾಕರಿಯನ್ನೆಲ್ಲ ಮುಗಿಸಿ ಕ್ಲಾಸಿಗಾಗಿ ಲಾಗಿನ್ ಆಗುತ್ತಿದ್ದಳು. ಇವಳು, ಅಮ್ಮನಾದ ನನ್ನ ಒತ್ತಾಯಕ್ಕೆ ಮುಕ್ಕಾಲು ತಾಸು ಕಂಪ್ಯೂಟರಿನ ಎದುರು ಕೂಡುತ್ತಿದ್ದಳು ಮುಖ ಬಾಡಿಸಿಕೊಂಡು, ಹಾಗಂತ ಹಾಡುವುದು ಮಾತ್ರ ಸುಶ್ರಾವ್ಯ ಸಂಗೀತವೇ.

ನಿಕಿತಾಗೆ ಮೊನ್ನೆ ಅಕ್ಟೋಬರಿನಲ್ಲಿ ಹದಿಮೂರು ತುಂಬಿತು. ಇಷ್ಟು ದೊಡ್ಡ ಹುಡುಗಿಗೆ ನಾನು ಯಾಕಾದರೂ ಒತ್ತಾಯ ಮಾಡಬೇಕು? ಮನೆಯಲ್ಲಿ ಓಡಾಡಿಕೊಂಡು ಇರುವಾಗಲೆಲ್ಲ ಹೆಡ್‌ಫೋನನ್ನು ಕಿವಿಗೆ ನೇಲಿಸಿಕೊಂಡು, ಪಾಪ್ ಸಾಂಗಿಗೆ ಧ್ವನಿಗೂಡಿಸಿಕೊಂಡು ತಾಸುಗಟ್ಟಲೇ ಮೈಮರೆಯುತ್ತಾಳೆ.

ಇವತ್ತು ಸಂದರ್ಭ ಬಿಗಡಾಯಿಸಿದ್ದು ನಿಕಿತಾ ತುಟಿ ಮೀರಿ ಮಾತಾಡಿದ್ದಕ್ಕೆ. ಏಳೂ ಮುಕ್ತಾಲಿಗೆ ಕ್ಲಾಸು ಮುಗಿಸಿ ಹೊರ ಬಂದ ನಿಕಿತಾ ‘ಮಾಮ್, ಇವತ್ತು ದಾಸರ ಕೀರ್ತನೆ ಮುಗಿಸಿದೆವು… ನಿನ್ನೊರತು ಪೊರೆವವರ ನಾನರಿಯೇ ಹರಿಯೇ. ಎಂತಹ ಸಭಿಸ್ಸಿವ್ ಸಾಂಗ್ ಅದು ಗೊತ್ತ? ರಬ್ಲಿಶ್..” ಎಂದು ಹೇಳಿ ಭುಜ ಹಾರಿಸಿ ತುಟಿ ನೆರಿಗೆ ಮಾಡಿದಳು. ನಾನೂ ತೀರ ಸೀರಿಯಸ್ಸಾಗದೇ ‘ಯಾಕಮ್ಮ ಅಂದೆ. ಹಾಡಿನಲ್ಲಿ ಒಂದು ಸಾಲಿದೆಯಲ್ಲ ಮಾಮ್ – ಮಾನ ಅಭಿಮಾನ ನಿನ್ನದು ವೇಣು ಗೋಪಾಲಕೃಷ್ಣ! ಇದನ್ನೇ ಇದನ್ನೇ ಸಭಿಸ್ಸಿವ್‌ ಅಂದಿದ್ದು. ಸುಮ್ಮೇ ಓವರ್‌ ಒಬಿಡಿಯನ್ನೇ! ಅದಕ್ಕಾಗಿಯೇ ನಿಮ್ಮನ್ನ ಅಂದರೆ ಇಂಡಿಯನ್ ವುಮೆನ್ ಇದ್ದೀರಲ್ಲ ನಿಮ್ಮನ್ನ ಹಿಗ್ಗಾಮುಗ್ಗಾ ಬಗ್ಗಿಸೋದು. ಅದಕ್ಕಾ ಗಿಯೇ ಈ ಇಂಡಿಯನ್ ಮಹಿಳೆಯರ ಗಂಡಂದಿರು
ಹೆಂಡತಿಯರ ಮೇಲೆ ಅಧಿಕಾರವನ್ನು ಸ್ಥಾಪಿಸೋದು. ನಿನ್ನನ್ನು ಓವರ್ ಪವರ್ ಮಾಡುವುದೇ ನಿನ್ನ ಈ ಸಬ್ಬಿಸ್ಸಿವ್ ನೇಚರಿನಿಂದಾಗಿ’ ಹೇಳುತ್ತ ಹೋದಳು ನಿಕಿತಾ, ಇಂಗ್ಲೆಂಡಿನಲ್ಲಿ ತಳವೂರಿದ್ದ ಭಾರತೀಯ ನಾರಿಯರನ್ನೆಲ್ಲ ಒಂದು ದೊಡ್ಡಿಯಲ್ಲಿ ಕೂಡಿ, ಅಧ್ಯಕ್ಷೀಯ ಭಾಷಣ ಮಾಡುವ ಗತ್ತಿತ್ತು ಈ
ಪೋರಿಯ ಮಾತಿನಲ್ಲಿ.

 

ನನಗೆ ಸುಧಾರಿಸಿಕೊಳ್ಳುಲು ಒಂದರೆಘಳಿಗೆ ಬೇಕಾಯಿತು. “ಯಾಕೆ ಹಾಗೆಲ್ಲ ಹೇಳುವೆ ನಿಕಿ..? ನಮ್ಮ ಮನೆಯಲ್ಲಿ ನಾನು ಫ್ರೀ ಬರ್ಡ್! ಹೋಗುವೆ ದುಡಿಯುವೆ, ನಿನನ ಚೆನ್ನಾಗಿ ಬೆಳೆಸಿರುವೆ. ಇನ್ನೆಂತ ಬೇಕು?” ಮಾತನಾಡುತ್ತ ನನ್ನ ಧ್ವನಿಯೂ ಎತ್ತರವಾಗುತ್ತ ಹೋಯಿತು.

“ಮಾಮ್, ಸುಮ್ಮನೆ ಪ್ರಿಟೆಂಡ್ ಮಾಡಬೇಡ. ನಿನಗೂ ಗೊತ್ತು, ಯೂ ಇಂಡಿಯನ್ಸ್ ಆರ್ ವೆರೀ ಓಲ್ಡ್ ಸ್ಕೂಲ್. ಸೊಸೈಟಿ ದೇವರು ದಿಂಡಿರು ಇವರ ಭಯದಲ್ಲಿಯೂ ಲಿವ್ ಅ ಹಾಫ್ ಲೈಫ್. ಯಾವಾಗಲೂ ಅರ್ಧ
ನದಿಯಲ್ಲಿಯೇ ಈಜಾಡುವವರು ನೈದರ್ ದಿಸ್ ಶೋರ್ ನಾರ್ ದ್ಯಾಟ್ ಶೋರ್” ಎಂದು ಅವಳೂ ಧ್ವನಿಯೇರಿಸಿದಳು. ‘ಯೂ ಇಂಡಿಯನ್’ ಅಂದಾಗ ಚುಚ್ಚಿದ ಆತ್ಮಾಭಿಮಾನವೋ, ಹದಿಮೂರರ ಕೂಸು ಜೀವನದರ್ಶನ ಮಾಡಿಸಿದ ಸಿಟ್ಟೋ, ಮನಸಿನ ಮೂಲೆಯಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿದ್ದ
ಳರಿಮೆಯೋ ಯಾವುದೋ ಒಂದು ನಿಜಕ್ಕೂ ಎದ್ದು ಬಂದ ಎದೆಗಣ್ಣಿಗೆ ಒದ್ದಂತಾಯಿತು… ನಿಕಿತಾಳ ಹತ್ತಿರ ಹೋಗಿ ಬಿಚ್ಚಿದ್ದ ಕೂದಲು ಹಿಡಿದೆಳೆದು ಅವಳ ಎಡಗಿವಿಯನ್ನು ಕೈಲಿ ತೆಗೆದುಕೊಂಡೆ. ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಉಗುರು ನಾಟುವಂತೆ ಹಿಡಿತ ಬಿಗಿ ಮಾಡಿ ಅವಳ ಕಿವಿಯನ್ನು ಚೆನ್ನಾಗಿ ತಿರುವಿದೆ. ಆದಷ್ಟೂ ನೋವನ್ನು ತಡೆದುಕೊಂಡರೂ ಉಗುರಿನ ಹಿಡಿತ ಜೋರಾದಾಗ ಕಿರುಚಲು ಶುರುಮಾಡಿದಳು. ಕಣ್ಣಲ್ಲಿ ದಳದಳ ನೀರು!

ಅವಳ ಜೋರು ಅಳು, ಕಣ್ಣೀರು ನನ್ನನ್ನು ಮತ್ತೆ ಈ ಲೋಕಕ್ಕೆ ಕರೆತಂದವು. ಥಟ್ಟನೆ ಕೈ ಹಿಂದೆಗೆದು “ಐ ಆಮ್ ಸ್ಟಾರೀ ನಿಕೀ… ಹರ್ಟ್ ಮಾಡಬಾರದಿತ್ತು ನಿನಗೆ ದಯವಿಟ್ಟು ಕ್ಷಮಿಸು’ ಎನ್ನುತ್ತ ಅವಳ ಹತ್ತಿರ ಹೋದೆ. ನಿಕಿತಾಳ ಮೈಮೇಲೆ ದುರ್ಗಿ ಅವತರಿಸಿದ್ದಳು. “ಮುಟ್ಟಬೇಡ ನನ್ನನ್ನು, ನಿನ್ನನ್ನ ನೀನು ಸಾಟ್ ೯ಔಟ್ ಮಾಡಿಕೋ ಮೊದಲು. ನನ್ನ ಹತ್ತಿರ ಕೂಡ ಬರಬೇಡ” ಎಂದು ಆರ್ಭಟಿಸಿ ತನ್ನ ಕೋಣೆಗೆ ಧಾವಿಸಿದಳು. ನಾನೂ ತಡೆಯದಾದೆ. ಅವಳ ರೂಮಿಗೆ ಹೋದರೆ ನಿಕಿತಾ ಆಗಲೇ ನಿಕಿತಾ ಚಿಕ್ಕವಳಿದ್ದಾಗಿನಿಂದಲೂ ಮಾತು ಕೇಳದಿದ್ದಾಗ, ಅನವಶ್ಯಕವಾಗಿ ಹಠ ಮಾಡಿದಾಗ, ಬ್ಯಾಕ್ ಆನ್ಸರ್ ಕೊಟ್ಟಾಗ ಮೆತ್ತಗೆ ಒಮ್ಮೆ ‘ಬೇಕಾ ಕಿವಿ ತಿರಪೇಕಾಯಿ..?’ ಎಂದು ಕೇಳಿದರೆ ಪರಿಸ್ಥಿತಿ ಹತೋಟಿಗೆ ಬರುತ್ತಿತ್ತು. ಸ್ಕೂಲ್ ಬ್ಯಾಗನ್ನು ಬೆನ್ನಿಗೇರಿಸಿ ರಬ್ಬರ್ ಬ್ಯಾಂಡ್‌ ಅನ್ನು ಬಾಯಲ್ಲಿ ಕಚ್ಚಿ ರೂಮಿನ ಹೊರಹೊರಟಿದ್ದಳು. ಮುಖವೂ ಎಡಗಿವಿಯೂ ರಕ್ತಗೆಂಪಿಗೆ ತಿರುಗಿತ್ತು. “ನಿಕೀ, ಫೀಸ್ ಇಲ್ಲೇಳು ಮುದ್ದಮ್ಮ… ಲೆಟ್ಸ್ ಟಾಕ್. ನಿಲ್ಲು” ಎನ್ನುತ್ತ ತೋಳಿಗೆ ಕೈ ಹಾಕಿದೆ. ಆಗಲೇ ‘ಮಾಮ್, ಸ್ಟಾಪ್ ಇಟ್. ಐಆಮ್ ನಾಟ್ ಇಂಟೆರೆಸ್ಟೆಡ್ ಟು ಟಾಕ್. ಪೀರಿಯಡ್” ಎಂದು ಕಾಲಪ್ಪಳಿಸುತ್ತ, ಮುಖವನ್ನೂ ನೋಡದೆ ಮೆಟ್ಟಿಲು ದುಡುದುಡು ಇಳಿದು ಹೋದಳು.

ನನ್ನ ಎತ್ತರಕ್ಕೆ ಬೆಳೆದ ಮಗಳ ಮೇಲೆ ಕೈ ಮಾಡಿಬಿಟ್ಟಿದ್ದೆ. ಹಾಗಂತ ಈ ಹದಿಮೂರು ವರ್ಷಗಳಲ್ಲಿ ನಿಕಿತಾಳ ಕಿವಿ ಹಿಂಡಿಯೇ ಇಲ್ಲ, ಪೆಟ್ಟು ಕೊಟ್ಟೇ ಇಲ್ಲ ಎಂದಲ್ಲ. ಮೊದಲೂ ಹಲವಾರು ಸಲ ಮಾಡಿದ್ದಿದೆ. ಆ ಶಿಕ್ಷೆಗೆ ಕೋಡ್ ನೇಮ್ ಕೂಡ ಇದೆ ‘ಕಿವಿ ತಿರಪೇಕಾಯಿ’, ನಿಕಿತಾ ಚಿಕ್ಕವಳಿದ್ದಾಗಿನಿಂದಲೂ ಮಾತು ಕೇಳದಿದ್ದಾಗ, ಅನವಶವಾಗಿ ಹಠ ಮಾಡಿದಾಗ, ಬ್ಯಾಕ್ ಆನ್ಸರ್ ಕೊಟ್ಟಾಗ ಮೆತ್ತಗೆ ಒಮ್ಮೆ ‘ಬೇಕಾ ಕಿವಿ ತಿರಪೇಕಾಯಿ..?” ಎಂದು ಕೇಳಿದರೆ ಪರಿಸ್ಥಿತಿ ಹತೋಟಿಗೆ ಬರುತ್ತಿತ್ತು. ಅದೂ ಮೀರಿ ಹಠ, ಅಳು ಜೋರಾದಾಗ ಮೊದಲು ನಾಟೀಕಾರ್ನರ್, ಅದಕ್ಕೂ ಜಗ್ಗದಿದ್ದರೆ ಒಂದು ಸಣ್ಣ ‘ಕಿವಿ ತಿರಪೇಕಾಯಿ’.

ಮೊನ್ನೆಮೊನ್ನೆಯವರೆಗೂ ನಿಕಿತಾ ಹೀಗೆ ರೆಬೆಲ್ ಆದವಳಲ್ಲ. ಈಗೊಂದು ವರ್ಷದಿಂದ ಮಾತಿಗೆ ಮಾತು ಮುಂದುವರಿಸಿ ವಾದಿಸುತ್ತಾಳೆ. ತನ್ನಪ್ಪನನ್ನು ನನ್ನ ಮೇಲೆ ಎತ್ತಿಕಟ್ಟಲು ನೋಡುತ್ತಾಳೆ. ವಸ್ತುಗಳನ್ನು ಶಾಲೆಯಲ್ಲಿಯೇ ಮರೆತು ಬರುತ್ತಾಳೆ. ಎಷ್ಟೊಂದು ಬಾರಿ ತನ್ನದೇ ಲೋಕದಲ್ಲಿ ಇದ್ದು ನಮ್ಮಿಬ್ಬರನ್ನೂ ಕಡೆಗಣಿಸುತ್ತಾಳೆ. ಸಮಾಜ, ಭಿಡೆ, ಹೆಣ್ಣು ಗಂಡು, ಕುಹಕ, ಗೇಲಿ ಇಂಥದೆಲ್ಲ ಅವಳ ಪರಿಧಿಗೆ ಬಂದಾಗ ಅವುಗಳನ್ನ ಫುಟ್ಬಾಲಿನಂತೆ ಒದ್ದೆಸೆಯು ತ್ತಾಳೆ. ನನಗೋ ಗೊಂಬೆಯಂತಹ ಮಗಳು ಬೆಳೆಯುತ್ತ ಬಂದಂತೆ ಹೀಗೆಲ್ಲ ಆಡಿಬಿಟ್ಟರೆ ಪರಿಮಳವಿಲ್ಲದ ಮಲ್ಲಿಗೆಯಾದಾಳು ಎಂಬ ಆತಂಕ, ಮುಂದಿನ ಒಂದೇ ನಿಮಿಷಕ್ಕೆ ತೀರಾ ಅಡಗೂಲಜ್ಜಿಯಂತಾಡಬೇಡ ಎಂದು ನಾನೇ ನನ್ನನ್ನು ಬೈದುಕೊಳ್ಳುತ್ತೇನೆ. ಅಪರೂಪಕ್ಕೊಮ್ಮೆ ವಿಷಯವನ್ನು ಇವನಲ್ಲಿ ಹಂಚಿಕೊಳ್ಳೋಣ ಎಂದರೆ ‘ಟೀನೇಜಿನಲ್ಲಿ ಮಕ್ಕಳು ಹೀಗೆಯೇ. ಸುಮ್ಮನೆ ಕೊರಗಬೇಡ’ ಎಂದು ತನ್ನ ಕಂಪ್ಯೂಟರ್‌ನಲ್ಲಿ ತಲೆ ಹುದುಗಿಸುತ್ತಾನೆ ಮನು. ಆಗೆಲ್ಲ ನಾನೇ ಆಸೆಪಟ್ಟು ಕಟ್ಟಿಕೊಂಡ ಬದುಕಲ್ಲಿ ನಾನು ತೀರ ಒಬ್ಬಂಟಿ ಅನ್ನಿಸಿ ನಡುಗುತ್ತೇನೆ.

ಇವತ್ತು ಮಾತ್ರ ಕೆಲ ನಿಮಿಷ ಕೋಪದ ಕೈಗೆ ಬುದ್ದಿ ಕೊಟ್ಟುಬಿಟ್ಟಿದ್ದೆ. ಇಂತಹ ಎಷ್ಟೋ ಸಂಗತಿಗಳನ್ನು ಸಾಕಷ್ಟು ಬಾರಿ ಸೂಕ್ಷ್ಮವಾಗಿ ಸುಲಭವಾಗಿ ನಿರ್ವಹಿಸಿದ ನನಗೆ, ನಿಕಿಯ ಮಾತಲ್ಲಿನ ಹೇವರಿಕೆ, ತಾತ್ಸಾರ ನೋಡಿ ಸಿಟ್ಟು ನವರಂಧ್ರಗಳಲ್ಲೂ ಹೊಗೆಯಾಡಿ ಹೊರಬಂದಿತ್ತು. ನಮ್ಮ ಮನೆಯಲ್ಲಿ ನಾನೇ ಮಾಸ್ಟರ್’ ಎಂಬುದನ್ನು ಹೇಗಾದರೂ ಸಾಬೀತು ಮಾಡ ಬೇಕಿತ್ತು. ಅಮ್ಮಯ್ಯಾ, ಇದಕ್ಕಾಗಿ ಮಗಳ ಮೇಲೆ ಕೈ ಮಾಡಲೂ ಹೇಸಲಿಲ್ಲವಲ್ಲ ನಾನು..! ನಿಕಿತಾ ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕಿತ್ತು. ಒಂದೇ ಒಂದು ಕ್ಷಣ ಸಮಾಧಾನ ತೋರಿಸಿಬಿಟ್ಟಿದ್ದರೆ ಈ ಪಶ್ಚಾತ್ತಾಪದ ಅಧ್ಯಾಯವೇ ಇರುತ್ತಿರ ಲಿಲ್ಲ. ಛೇ, ಮಗುವಿಗೆ ಇನ್ನೂ ಹೇಳಿಕೊಳ್ಳುವಂತಹ ದುಗುಡ ವಿತ್ತೋ ಏನೋ… ಹೀಗೇ ನೂರೆಂಟು ಆಲೋಚನೆಗಳೊಂದಿಗೆ ಬೆಳಗಿನ ತಿಂಡಿಯನ್ನೂ ತಿನ್ನದೆ ದುಷ್ಠಾನದಲ್ಲಿ ಆಫೀಸಿಗೆ ಹೋದೆ. ಮಧ್ಯಾಹ್ನದ ಹೊತ್ತಿಗೆ ತಲೆ ಸಿಡಿದೇ ಹೋದೀತು ಅಂತನಿಸಿ ಎರಡು ಗಂಟೆಗೆ ಮನೆಗೆ ಬಂದೆ. ‘ದೇವರೇ, ನಿಕಿಯ ಗೆಳತಿಯರು ಇವತ್ತು ಅವಳ ಕಿವಿಯನ್ನ ನೋಡದೇ ಇರಲಿ ಎಂದು ಮನಸಿನಲ್ಲೇ ಹರಸಿಕೊಂಡೆ.

ಮಧ್ಯಾಹ್ನ ಎರಡೂವರೆಯ ನಂತರ ಒಂದೊಂದು ನಿಮಿಷವೂ ಭಾರವಾಗುತ್ತ ನಡೆದವು. ನಿಕಿತಾ ಶಾಲೆಯಿಂದ ಬರುವ ಸಮಯವಾಗತೊಡಗಿದಂತೆ ನನ್ನ ಕಾಲುಗಳು ಮನೆಯಲ್ಲಿ ನಿಲ್ಲುತ್ತಿಲ್ಲ. ಎದುರಿನ ಡೈವ್‌ವೇದಲ್ಲಿ ಹೋಗಿ ನಿಂತೆ. ಅಲ್ಲಿ ಬಿದ್ದ ಎಲೆಗಳನ್ನು ಕೈಯಲ್ಲೇ ಒಟ್ಟು ಮಾಡತೊಡಗಿದೆ ಬ್ರಶ್ಯು ಪಕ್ಕದಲ್ಲೆ ಇದ್ದರೂ ಕಣ್ಣೆರಡೂ ರಸ್ತೆಯ ಮೇಲೆ ನೆಟ್ಟಿದ್ದೆ. ವಿನಾಕಾರಣ ಕಣ್ಣು ತುಂಬಿಬರುತ್ತಿತ್ತು. ಮಗಳ ಮೇಲೆ ಬೇಷರತ್‌ ಒಲವು ಕೂಡ.

ಆಗ ಕಾಂಪೋಸ್ಟ್ ಪಿಟ್‌ನ ಪಕ್ಕದಲ್ಲಿ ಕೆಂಪಗೆ ಏನೋ ಹೊಳೆದಂತಾಯಿತು. ಹತ್ತಿರ ಹೋದೆ. ನಿಕಿತಾಳ ಬಾಟಲ್. ಮೂರು ದಿನದಿಂದ ಮನೆಯಲ್ಲಿ ಕಾಣುತ್ತಿರಲಿಲ್ಲ. ‘ಅರೇ! ಇಲ್ಲಿ ಮರೆತಿದ್ದಾಳೆ ಮಂಗಣ್ಣ’ ಅಂದುಕೊಳ್ಳುತ್ತ ಹತ್ತಿರ ಹೋದಾಗ ಬಾಟಲಿನ ಪಕ್ಕ ಕ್ಯಾಡ್ರೀ ಸೆಲೆಬ್ರೇಶನ್ನಿನ ಪುಟಾಣಿ ಚಾಕೇಟ್ ಬಾಕ್ಸು ಹಾಗೂ ಅದರ ಮೇಲೊಂದು ಸ್ಟಿಕೀ ನೋಟ್. ‘ರಿಟರ್ನಿಂಗ್ ನಿಕೀಸ್ ಬಾಟಲ್ ವಿಥ್ ಥ್ಯಾಂಕ್ಸ್. ಮೊನ್ನೆ ದಾರಿಯಲ್ಲಿ ನಡೆದು ಹೋಗುವಾಗ ತಲೆ ಸುತ್ತಿ ಬಂತು. ಶಾಲೆಗೆ ಹೊರಟಿದ್ದ ನಿಕೀ ಅವಳ ವಾಟರ್ ಬಾಟಲ್ ಕೊಟ್ಟು ನನಗೆ ಸಹಾಯ ಮಾಡಿದ್ದಳು. ಮನೆಯವರೆಗೂ ಕೈಹಿಡಿದು ನಡೆಸಿಕೊಂಡು ಹೋದಳು. ವಾಟ್ ಅ ವಂಡರ್‌ಫುಲ್ ಕಿಡ್‌. ಬ್ಲೆಸ್ ಹರ್! -ಲವ್, ಡಯಾನ್” ಎಂಬ ಒಕ್ಕಣೆ ಆ ಸ್ಟಿಕ್ ನೋಟಿನಲ್ಲಿ. ನಮ್ಮನೆಯಿಂದ ಮೂರನೆಯ ಮನೆಯ ಡಯಾನ್, ಸೊಂಟ ಬಾಗಿದ ಹಣ್ಣಣ್ಣು ವೃದ್ಧೆ. ಓದಿ ಮುಗಿದ ನಂತರ ಸ್ಟಿಕೀ ನೋಟ್ ಮೇಲೆ ಮತ್ತೊಮ್ಮೆ ಕಣ್ಣು ಕೀಲಿಸಿದೆ. ಎರಡು ಹನಿ ಕಣ್ಣೀರು ಉದುರಿ ಅಲ್ಲಿನ ಅಕ್ಷರಗಳನ್ನು ದಯೆಯಿಲ್ಲದೇ ಕಲಸಿ ಹಾಕಿತು.

ಅದೇ ಸಮಯಕ್ಕೆ ಸರಿಯಾಗಿ ಡ್ರೈವ್‌ವೇ ಹೊಕ್ಕ ನಿಕಿತಾಳತ್ತ ಧಾವಿಸಿ ಒಮ್ಮೆಲೇ ಉಸಿರುಕಟ್ಟುವಂತೆ ಅಪ್ಪಿದೆ.

(ಈ ವರ್ಷದ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ಪಡೆದಿರುವ ಪೂರ್ಣಿಮಾ ಭಟ್ ಅವರ ಕಥಾ ಸಂಕಲನ ‘ಕತೆ ಜಾರಿಯಲ್ಲಿರಲಿ ಮುಂದಿನ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಪ್ರಕಾಶಕರು, ಸಸಿ ಪ್ರಕಾಶನ. ದೂರವಾಣಿ ಸಂಖ್ಯೆ: 9513018456)
poornimaubhat@gmail.com

ಆಂದೋಲನ ಡೆಸ್ಕ್

Recent Posts

ಹೊರವಲಯದ ನಿವೇಶನಗಳಿಗೆ ಹೆಚ್ಚಾಗಲಿದೆ ಮತ್ತಷ್ಟು ಬೇಡಿಕೆ

ಮೈಸೂರು: ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿರುವ ಹಲವು ಪ್ರದೇಶಗಳನ್ನು ಸೇರಿಸಿ ಗ್ರೇಡ್- ೧ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ರಾಜ್ಯಸರ್ಕಾರ…

16 mins ago

ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ

ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…

3 hours ago

ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…

3 hours ago

ಹುಲಿ ಸೆರೆಗೆ ಬಂತು ಥರ್ಮಲ್ ಡ್ರೋನ್‌

ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…

3 hours ago

ಕೃಷಿ ಮೇಳಕ್ಕೆ 10 ಲಕ್ಷ ಜನ ಭೇಟಿ

ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ  ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…

3 hours ago