ಹಾಡು ಪಾಡು

ಎರಿಯೂರಿಂದ ಬರುವ ಸೊಪ್ಪಿನ ಗುಂಡಮ್ಮ

• ಮಧುಕರ ಮಳವಳ್ಳಿ

ತನ್ನ ಬಟ್ಟೆಯ ಚೀಲದಲ್ಲಿ ಬೆರಕೆ ಸೊಪ್ಪಿನ ರಾಶಿಯನ್ನೇ ತುಂಬಿ ತುಳುಕಿಸಿಕೊಂಡು ಬರುವ ಈಕೆ ಒಮ್ಮೊಮ್ಮೆ ಬಿದಿರಿನ ಕಳಲೆ, ಕೆಲವೊಮ್ಮೆ ಕಾಡಿನ ಹೂಗಳನ್ನೂ ತರುವಳು.

ಈ ಮಳೆಗಾಲ ಮತ್ತು ಆಷಾಢದ ಕಾಲದಲ್ಲಿ ಅದರಲ್ಲೂ ನೀರು ಹರಿಯುವ ಕಾಲುವೆಯ ಬಳಿ ಬೆಳೆಯುವ ತಾವರೆಗೆಣಸು (ಇದು ಅಂಬಿನ ರೀತಿಯಲ್ಲಿ ಬೆಳೆದಿರುತ್ತದೆ. ಅದನ್ನು ಕತ್ತರಿಸಿದರೆ ಬೆಂಡೆಕಾಯಿಯಂತೆ ಇರುತ್ತೆ), ಕೊಹ್ಲಿ ಗೆಡ್ಡೆ (ಕಾರಣ ಅದು ಬೆಕ್ಕಿನ ತಲೆಯಂತೆ ಇರುವ ಕಾರಣ ಇದನ್ನ ಕೊತ್ತಿಗೆಡ್ಡೆ ಎನ್ನುವುದು ಎಂದು ಹೇಳುತ್ತಾಳೆ). ಆಷಾಢ ಕಾಲ ಬಲುಮುಖ್ಯವಾಗಿ ನುಗ್ಗೇಸೊಪ್ಪು ಮತ್ತು ಒಂದೆಲಗ (ಇದನ್ನು ಜನಪದರು ತಿಮಿರೆಯೆಂದು ಕರೆಯುವರು) ಮದುವೆಯಾದ ಹೆಣ್ಣು ಮಕ್ಕಳು ಗರ್ಭಧಾರಣಿಯಾಗುವ ಕಾಲಕ್ಕೆ ಮಗುವಿನ ಬುದ್ದಿ ಚಂದಾಗಿ ಇರಲಿ ಎಂಬ ಆಸೆಯಂತೆ. ಮತ್ತೆ ನೂರು ತರಹದ ಸೊಪ್ಪುಗಳನ್ನು ಬಳಸಿ ಸಾರು ಮಾಡುವುದು ವಾಡಿಕೆ. ಹಾಗೆಯೇ ಉದ್ದಿನ ಕಡಬು, ದೋಸೆಗಳಿಗೆ ಈ ಒಂದೆಲಗ ಸೊಪ್ಪನ್ನು ಬಳಸಿ ಮಾಡಿಕೊಡುವುದು ಹೆಣ್ಣುಬಲವಾಗಿ ಇರಲಿ ಅಂತ. ಅದರ ಜೊತೆಗೆ ತುಪ್ಪ ಬೆಣ್ಣೆ ಇದ್ದರೆ ಒಳ್ಳೆಯದು ಎಂದು ತನ್ನಲ್ಲಿರುವ ನಾವು ಶಾಲೆಯಲ್ಲಿ ಕಲಿತ ಮೆದುಳಿನ ಚಿತ್ರದಂತೆ ಇರುವ ಒಂದೆಲಗ ಸೊಪ್ಪನ್ನು ತೋರುವಳು. ಕೀರೆಸೊಪ್ಪು, ಕೀರೆಬೇರು, ನೆಲಗುಂಟೆ, ಅಗಸೆ, ಅಣ್ಣೆಸೊಪ್ಪು, ಗರಿಕೆ ಹಾಲಿನಸೊಪ್ಪು, ಹುತ್ತು ಅಣಬೆ, ಗಣಿಕೆ, ಬಗರ್ ಒಂಟೆ, ಕಲ್ಲಕರಗ, ಹಾಲೇ ಸೊಪ್ಪು, ನಾರಂಬಳ ಗೋಣಿ, ಜಾಲಿ ಸೀಗೆಸೊಪ್ಪು, ಮುಳ್ಳುರೆ, ಗೊರಜ ಸೊಪ್ಪು… ಹೀಗೆ ತನಗೆ ತಿಳಿದಿರುವ ಎಲ್ಲಾ ಸೊಪ್ಪುಗಳ ಕುರಿತು ಹೇಳುತ್ತಾಳೆ.

‘ನೋಡು ಕೂಸೆ… ಈ ಬಗರ್‌ ಒಂಟೆ ಸೊಪ್ಪು ಬೇಳೆಕಾಳು ಜೊತೆಗೆ ಸೀಗಡಿ, ಕರಿಮೀನು, ಅವರೆ ಕಾಳು ಹಾಕಿ ಬಾಣಂತಿಗೆ ಕೊಟ್ಟರೆ ಈ ಕಾಲಕ್ಕೆ ದೇಹ ಶಾಖವಾಗುತ್ತದೆ. ಹೀಗೆ ಮತ್ತೊಂದು ಕಿರುನೆಲ್ಲಿಸೊಪ್ಪು ಔಷಧಿ ಗುಣ ಹೊಂದಿದೆ, ಹೊಟ್ಟೆ ಸರಿಮಾಡುತ್ತದೆ’ ಎಂದು ಬೆರಕೆಸೊಪ್ಪಿನ ಮಹತ್ವ ಹೇಳುತ್ತಾಳೆ. ‘ಬಿದಿರನ ಕಳಲೆ ಎಲ್ಲ ವಿಚಾರಕ್ಕೂ ರಾಮಬಾಣ ಅದರಲ್ಲೂ ಹೊಸದಾಗಿ ಮದುವೆಯಾದ ಗಂಡುಗೆ ಇದಾ ಕೊಡಬೇಕು ತಿಂದು ಮೈ ಬೆಂಕಿಕೆಂಡ ಆಗಬೇಕು’ ಎನ್ನುತ್ತಾ ಕಿರುನಗೆ ಬೀರುತ್ತಾಳೆ. ‘ಕೂಸೇ, ಮಂಟೇಸ್ವಾಮಿಗಳೇ ಹೇಳವರೆ ಆಣೇಸೊಪ್ಪು ಬಡವರದು ಅಂತ. ಹಂಗೆ ಚಳಿಗಾಲಕ್ಕೆ ಕಡಲೆಸೊಪ್ಪಿನ ಜೊತೆಗೆ ಬೇಳೆಕಾಳು ಹಾಕಿ ಸಾರು ಮಾಡಿದ್ರೆ ಈ ದೇಹವಾ ಶಾಖವಾಗಿ ಇಡುತ್ತದೆ’ ಅನ್ನುತ್ತಾಳೆ.

‘ಹಂಗೇ ಈ ಆಷಾಢದ ಕಾಲದಲ್ಲಿ ಹೆಣ್ಣು ಪ್ರಾಯಕ್ಕೆ ಬಂದರೆ, ಅವಳಿಗೆ ಮೊದಲನೇ ಸ್ನಾನಕ್ಕೆ ನೇರಳೆ, ಮಾವು, ಬೇವು, ಅತ್ತಿ, ದಾಸವಾಳ, ಶ್ರೀಗಂಧ ಇವುಗಳ ಬಲಿತ ಎಲೆಗಳನ್ನು ತಂದು ನೀರಿನಲ್ಲಿ ಹಾಕಿ ಬಿಸಿ ನೀರಕಾಯಿಸಿ ಅದರಲ್ಲಿ ಸ್ನಾನ ಮಾಡಿಸಿ ಕೊನೆಗೆ ಅರಿಸಿನದಲ್ಲಿ ಜಳಕ ಮಾಡಿ ಆರತಿ ಮಾಡುತ್ತಿದ್ದರು. ಆದರೆ ಅದೆಲ್ಲ ಈಗ ಎಲ್ಲಿ’ ಎಂದು ನಗೆ ಬೀರುತ್ತಾಳೆ… ‘ಹಂಗೇ ಸ್ಥಾನ ಆದ್ ಮೇಲೆ ಬೆರಕೆ ಸೊಪ್ಪಿಗೆ ಬಾಡು ತಿನ್ನೋ ಜಾತಿಯೋರು ಕೊರ್ ಬಾಡು ಜೊತೆ ಸೀಗಡಿ, ಅವರೆಕಾಳು ಹಾಕಿ ಕೊಟ್ಟರೆ ಎಂಥ ಹೆಣ್ಣು ಒಂದ್ ತಟ್ಟೆ ಅನ್ನ ಉಂಡು ಸುಖ ನಿದ್ದೆ ಮಾಡುತ್ತಾಳೆ’ ಎಂದು ಹಳೆಯವರೆ ನರಸಿಕೊಂಡು ನಸು ನಗುತ್ತಾಳೆ.

‘ಆಮೇಲೆ ಮಾಂಸ ತಿನ್ನೋ ಜಾತಿಯೊಳಗೆ ಅಳಿಯ ಬಂದಾಗ ಎರಡು ದಿನ ಮಾಂಸದ ಅಡುಗೆ ಮಾಡೋರು, ಆಮೇಲೆ ನುಗ್ಗೆಸೊಪ್ಪಿನ ಪಲ್ಯ ದಿನಾ ಕೊಡೋರು, ಯಾಕ ಗೊತ್ತಾ, ದೇಹ ಲಯವಾಗಲಿ ಅಂತ. ಈಗ ಮಕ್ಕಳು ಇನ್ನು ಅಗಲಿಲ್ಲ ಅಂಥ ಏನೂನೋ ಮಾಡುತ್ತಾರೆ ಸ್ಥಾಮಿ ದೇಹ ಲಯವಾಗಿ ಇರಬೇಕು. ಹೆಣ್ಣು-ಗಂಡು ನಾದ-ಲಯವಾಗಿ ಇರಬೇಕು. ಆಗ ಎಲ್ಲ ಸಲೀಸು. ಹಂಗೇ ಚಿರಕುರುಳಿಯ ಬಾಯಾಡಲು ಕೊಡುತ್ತಾ ಇದ್ದರು. ಹುಳ್ಳಿ ಜೊತೆಗೆ ಕುಸುಮ ಅನ್ನು ಹೂವಿನ ಮೊಗ್ಗ ಬೆರೆಸಿ ಕೊಟ್ಟರೆ ಒಂದು ಹಿಡಿ ತಿನ್ನೋ ಬದಲು ನಾಕು ಹಿಡಿ ತಿಂತಾರೆ. ಅಷ್ಟು ಘಮಲು ಅ ಹೂವಿನ ಮೊಗ್ಗು, ಸುಮ್ಮನೆಯಾ ಕೂಸು ಬಿಸಲಗಾಲ ಕಳೆದು ಮಳೆಗಾಲದ ನಾಕು ಹನಿಗೆ ಈ ಗಾಳಿಕಾಲಕ್ಕೆ ಸಕಲೆಂಟು ಸೊಪ್ಪುಗಳು ಹುಟ್ಟಿ ಈ ದೇಹದ ನಾದವಾ ಸರಿಮಾಡತ್ತಾವೆ. ಈಗಲೇ ಅದು-ಇದು ತಿಂದು ನಾವೇ ಇಲ್ಲದ ಕಾಯಿಲೆ ತಂದುಕೊಳ್ಳವುದು. ಇವತ್ತು ಕುಂಬಳದ ಕುಡಿ ಬೆರೆಸಿ ಕೊಡ್ತೀನಿ ಒಣಮೆಣಸಿನ ಕಾಯಿ ಹಾಕಿ ವಗ್ಗರಣೆ ಮಾಡಿಸಿ ತಿನ್ನು ಚೆನ್ನಾಗಿರುತ್ತದೆ ಎಂದು ಹಲವು ಸೊಪ್ಪುಗಳ ಕೈಗಿತ್ತು ಕಳಿಸುತ್ತಾಳೆ.

lokesh

Recent Posts

ಒಳಮೀಸಲಾತಿ ಹಂಚಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಒಳಮೀಸಲಾತಿ ಬಗ್ಗೆ ಹಲವು ವರ್ಷಗಳಿಂದ ಇದ್ದ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ…

2 hours ago

ಸೋಮವಾರಪೇಟೆ: ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ

ಸೋಮವಾರಪೇಟೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿನ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.…

3 hours ago

ಎಎಪಿ ತೊರೆದು ಬಿಜೆಪಿ ಸೇರಿದ 7 ರಾಜ್ಯಸಭಾ ಸದಸ್ಯರು

ನವದೆಹಲಿ: ಆಮ್‌ ಆದ್ಮಿ ಪಕ್ಷಕ್ಕೆ ಬಿಗ್‌ ಶಾಕ್‌ ಎದುರಾಗಿದ್ದು, ರಾಘವ್‌ ಚಡ್ಡಾ ಸೇರಿದಂತೆ ಏಳು ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…

3 hours ago

ಮೈಸೂರು| ಚಲುವಾಂಬ ಆಸ್ಪತ್ರೆಗೆ ಸಂಸದ ಯದುವೀರ್‌ ಒಡೆಯರ್‌ ದಿಢೀರ್‌ ಭೇಟಿ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.…

4 hours ago

ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್‌ಕೆಸಿಸಿಐನ ಪ್ರಯತ್ನ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ…

4 hours ago

ಸಿಇಟಿ ಪರೀಕ್ಷೆ| ಜನಿವಾರ ತೆಗೆಸಿದ ಬೆಂಗಳೂರು ಕಾಲೇಜು: ಪೋಷಕರಿಂದ ಆಕ್ರೋಶ

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬರೆಯುವ ವೇಳೆ ವಿದ್ಯಾರ್ಥಿನಿ ಮೂಗಿಗೆ ಟೇಪ್ ಹಾಕಿದ ಪ್ರಕರಣ ಮಾಸುವ ಮುನ್ನವೇ ಐವರು ವಿದ್ಯಾರ್ಥಿಗಳ…

4 hours ago