• ಪರ್ವೀನ್ ಬಾನು

ನಾವಿರುವ ಬಾಡಿಗೆಯ ಮನೆ ಮುಸ್ಲಿಂ ವಾಲೀಕರಿಗೆ ಸೇರಿದ, ಹಿಂದೂಗಳೇ ಹೆಚ್ಚಾಗಿರುವ ವಠಾರದಲ್ಲಿದೆ. ಹೆಸರೇ ಹೇಳುವ ಹಾಗೆ ನಾವು ಸಹ ಮುಸ್ಲಿಂ ಧರ್ಮಿಯರೇ… ನಮ್ಮ ವಠಾರದ ಉಳಿದ ಮನೆಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದ ಹೊತ್ತಲ್ಲೇ ನಮ್ಮ ಮನೆಯ ತುಂಟ ಮಕ್ಕಳ ಮಿದುಳೊಳಗೆ ಗಣಪನು ಯಾವಾಗ ಹೊಕ್ಕನೊ ನನಗೇ ತಿಳಿಯಲಿಲ್ಲ. ಪಾರ್ವತಿ ದೇವಿಯ ಮಣ್ಣಿನಿಂದ ಬಾಲ ಗಣಪನನ್ನು ತಾಯಾರಿಸಲು ಕಡಿಮೆ ಸಮಯವನ್ನು ತೆಗೆದುಕೊಂಡಿರಬಹುದು, ಆದರೆ ನನ್ನ ಮಕ್ಕಳಿಬ್ಬರು ಬರೋಬ್ಬರಿ ಮೂರು ದಿನಗಳ ಸತತ ಪ್ರಯತ್ನದ ಜೊತೆಗೆ ಮರಳಿ ಯತ್ನವ ಮಾಡು ಎಂಬ ಸೂತ್ರವನ್ನು ಅನುಸರಿಸುತ್ತಾ ಅಂತೂ ಗಣಪನನ್ನು ಮಾಡಲು ಮುಂದಾದರು. ಮೊದಲ ಬಾರಿ ಇಂಥದ್ದೊಂದು ಆಸೆಯ ಬೀಜವನ್ನು ಮಕ್ಕಳಲ್ಲಿ ಹುಟ್ಟು ಹಾಕಿದ ಗಣಪನು, ಅದು ಬೆಳೆದು ಹೆಮ್ಮರವಾಗುವಂತೆ ನೋಡಿಕೊಂಡನು. ತನ್ನ ಪ್ರತಿಷ್ಠಾಪನೆಗೆ ಪ್ರಶಸ್ತವಾದ ಸ್ಥಳವನ್ನೇ ಆಯ್ಕೆ ಮಾಡಿಕೊಂಡ ಗಣಪನಿಗೆ ಕೊಂಚವೂ ಬೇಸರವಾಗಲಿಲ್ಲ ನೋಡಿ… ಯಾಕೆ ಈ ಮಾತನ್ನು ಹೇಳುತ್ತಿರುವೆನೆಂದರೆ ಮಕ್ಕಳಿಬ್ಬರು ಸೇರಿ ಮಾಡಿದ ಗಣಪತಿಯು ಅದೆಷ್ಟು ಬಾರಿ ಮರು ನಿರ್ಮಿತವಾಗಿರುವನೊ ಅವನಿಗೇ ಗೊತ್ತು ಶಿಲ್ಪಿಯೊಬ್ಬನು ಮೂರ್ತಿ ಮಾಡುವಾಗ ಉಳಿಪೆಟ್ಟನ್ನು ಸಹಿಸುವ ಕಲ್ಲಿನೋಪಾದಿಯಲ್ಲಿ ನನ್ನ ಮಕ್ಕಳಿಬ್ಬರು ಸೇರಿ ಮಾಡಿದ ಗಣಪನೇನು ಸಹಜವಾಗಿ ಏಕೆ ಕಾಲಕ್ಕೆ ನಿರ್ಮಿತವಾದವನಲ್ಲ.

ಒಮ್ಮೆ ಕಾಲು ಸರಿ ಇಲ್ಲವೆಂದು, ಮತ್ತೊಮ್ಮೆ ತಲೆತ ಭಾಗ ಸ್ವಲ್ಪ ಸೊಟ್ಟ ಇದೆ ಎಂದು, ಮಗದೊಮ್ಮೆ ಕೈಯಲ್ಲಿ ಮೋದಕವಿಡಲು ಸ್ಥಳವಿಲ್ಲವೆಂದು, ಇನ್ನೊಮ್ಮೆ ಸೊಂಡಿಲು ಬಲಭಾಗಕ್ಕೆ ಅಲ್ಲ, ಎಡಭಾಗಕ್ಕೆ ಎಂದು ಹೀಗೆ ಹಲವು ಬಾರಿ ಗಣಪನು ಮಾಡುವ ಮೊದಲೇ ವಿಸರ್ಜನೆಗೊಳಗಾದದ್ದು ವಿಪರ್ಯಾಸವೇ ಸರಿ. ಅದೇನಾದರೂ ಎಲ್ಲ ಮಕ್ಕಳ ಆಟ. ಅವರ ಕೈಯಲ್ಲಿ ಗಣಪನು ಸಿದ್ಧಗೊಳ್ಳಲು ಮನಸ್ಸು ಮಾಡಿರುವಾಗ ಎಲ್ಲವನ್ನು ಆತನು ತಾಳ್ಮೆಯಿಂದಲೇ ಸಹಿಸಿಕೊಂಡಿದ್ದುದರ ಪ್ರತಿಫಲವಾಗಿ ಬಾಲಕರ ಕರದೊಳು ಬಾಲ ಗಣಪನು ಒಡ ಮೂಡಿದನು. ಅಂತೂ ಇಂತೂ ಚತುರ್ಥಿಯ ಹಿಂದಿನ ದಿನ ರಾತ್ರಿ ಬೆನಕನು ಪೂರ್ಣ ಸಿದ್ಧಗೊಂಡನು. ಅದನ್ನು ಗಾಳಿಗೆ ಬಿಸಿಲಿಗೆ ಒಣಗಿಸಲು ರಾತ್ರಿಯ ಸಮಯ ಏನು ವಾಡುವುದೆಂದು ಯೋಚಿಸಿದ ಮಕ್ಕಳಿಗೆ ಹೊಳೆದ ಬೆಸ್ಟ್ ಐಡಿಯಾ ಅಂತೂ ಸಖತ್ತಾಗಿತ್ತು.

ಇರುಳು ಮಲಗಲು ರೂಮಿಗೆ ತೆರಳಿ ನೋಡಿದರೆ ಮಕ್ಕಳಿಬ್ಬರೂ ಮಲಗಿದ್ದರು. ರಾತ್ರಿ ಎಚ್ಚರವಾದಾಗ ಹಾಲಿನಲ್ಲಿರುವ ಫ್ಯಾನ್ ಜೋರಾಗಿ ತಿರುಗುವ ಶಬ್ದ ಕೇಳಿಸಿತು. ಫ್ಯಾನ್ ಕೆಳಗೆ ಗಣಪನನ್ನು ಇಟ್ಟು ಆತನ ತಲೆಯ ಮೇಲೆ ಒಂದು ಛತ್ರಿಯನಿರಿಸಿ, ಲೈಟ್ ಆರಿಸಿ ಮಲಗಿದ್ದ ಮಕ್ಕಳು ಬೆಳಗಾಗುವ ಹೊತ್ತಿಗೆ ನನಗಿಂತ ಮುಂಚಿತವಾಗಿಯೇ ಎದ್ದು ಗಣಪನಿಗೆ ಬಣ್ಣ ಬಳಿಯುವುದರಲ್ಲಿ ಮಗ್ನರಾಗಿದ್ದರು. ಇಷ್ಟೊತ್ತಿಗಾಗಲೇ ಇನ್ನೊಂದು ಘಟನೆಯೂ ನಡೆದಿತ್ತು. ನಮ್ಮ ಓನರ್ ಆಂಟಿ ಎರಡು ಮೂರು ಬಾರಿ ಮನೆ ಹತ್ತಿರ ಬಂದು, ‘ಏನ್ರೋ ಇದು ಗಲೀಜು, ಕೆಸರು, ಮಣ್ಣು ಎಲ್ಲ ರಾಡಿ ಮಾಡಿಬಿಟ್ಟಿದ್ದೀರಾ? ಮೊದಲು ಇದನ್ನೆಲ್ಲಾ ಸರಿ ವಾಡ್ರಿ. ಇಲ್ಲ ಅಂದ್ರೆ ನೋಡಿ’ ಎಂದು ಆವಾಜ್ ಹಾಕಿ ಹೋಗಿದ್ದರು. ಅಂತೂ ನನ್ನ ಪುಠಾಣಿ ರಾಮರಹೀಮರು. ಹೀಗೆ ಎದುರಾದ ಹತ್ತಾರು ವಿಘ್ನಗಳನ್ನು ದೂರಮಾಡುತ್ತಾ ವಿಘ್ನೇಶ್ವರನು ಮಕ್ಕಳಿಂದ ನಿರ್ಮಿತಗೊಂಡು, ನೆಲೆಗೊಳ್ಳಲು ಒಂದು ಪ್ರಶಸ್ತವಾದ ಸ್ಥಳ ಹುಡುಕಾಟಕ್ಕೆ ಸಿದ್ಧನಾಗಿದ್ದ. ಮನೆಯ ಒಳಗೆ ಪ್ರತಿಷ್ಠಾಪಿಸಲು ಅಮ್ಮನ ಪರವಾನಗಿ ಬೇಕು. ವಠಾರದಲ್ಲಿ ಎಲ್ಲಿಯಾದರೂ ಇಟ್ಟರೆ ಓನರ್ ಆಂಟಿಯ ಆವಾಜ್. ಸರಿ ಕೊನೆಗೂ ಯಾರ ಕಾಟವೂ ಇರದ ಪ್ರಶಸ್ತವಾದ ತಾರಸಿಯನ್ನೇ ಏರಿಬಿಟ್ಟಿದ್ದ.

ಅದಾಗಿ ಸ್ವಲ್ಪ ಹೊತ್ತಲ್ಲೇ ಮಕ್ಕಳಿಬ್ಬರೂ ಅಳುತ್ತಾ ಓಡಿ ಬಂದರು, ‘‘ನಾವು ಮಾಡಿದ ಗಣಪತಿ ಇಲ್ಲ, ಯಾರೋ ಕದ್ದಿದ್ದಾರೆ’’ ಎಂದು ಅವರು ಅಳುತ್ತಿದ್ದರು. ಮಕ್ಕಳು ಮತ್ತೆ ಇನ್ನೊಂದು ಹೊಸ ಗಣಪನನ್ನು ಮಾಡಲು ಮುಂದಾಗುವರೋ ಎಂದು ಭಯವಾಯಿತು. ಇದಕ್ಕೊಂದು ತಾತ್ಕಾಲಿಕ ಪರಿಹಾರವೆಂಬಂತೆ ಮಕ್ಕಳಿಗೆ ಒಂದು ಉಪಾಯ ಹೇಳಿದೆ. ‘‘ದೇವರ ಮನೆಯಲ್ಲಿ ಭಕ್ತಿಯಿಂದ ಕೈಮುಗಿದು, ದೀಪ ಹಚ್ಚಿ ಬೇಡಿಕೊಳ್ಳಿ. ಗಣಪತಿ ಕದ್ದವರು ಅದನ್ನು ಮರಳಿ ತಂದು ಅದೇ ಜಾಗದಲ್ಲಿ ಇಡಬೇಕು ಇಲ್ಲವೇ ಕದ್ದವರಿಗೆ ತಕ್ಕ ಶಿಕ್ಷೆ ಆಗಬೇಕು. ಇದನ್ನು ನೀನು ನೆರವೇರಿಸಿ ಕೊಡಬೇಕೆಂದು ದೇವರನ್ನು ಕೇಳಿರಿ. ಗಣಪತಿ ಚಿಕ್ಕ ಮಕ್ಕಳ ಬೇಡಿಕೆಯನ್ನು ಖಂಡಿತಾ ಈಡೇರಿಸುತ್ತಾನೆ’’. ಸ್ವಲ್ಪ ಹೊತ್ತಲ್ಲೇ ಪಕ್ಕದ ಮನೆಯ ಪೋರಿಯೊಬ್ಬಳು ಓಡಿಬಂದು, ‘ಗಣಪತಿ ಅಲ್ಲಿಯೇ ಇದ್ದಾನೆ’ ಎಂದು ಕೂಗಿಕೊಂಡಳು. ಗಣಪತಿಯ ಮಣ್ಣ ಮೂರ್ತಿಯನ್ನು ಯಾರು ಕದ್ದವರು? ಮತ್ತು ಅದು ಮತ್ತೆ ಅದೇ ಸ್ಥಳಕ್ಕೆ ಹೇಗೆ ಬಂತು? ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ.

lokesh

Recent Posts

ಓದುಗರ ಪತ್ರ: ಜನಪ್ರತಿನಿಧಿಗಳಿಂದಲೇ ಕಾನೂನು ಉಲ್ಲಂಘನೆ

ರಾಜಕಾರಣಿಗಳು ಪ್ರತಿನಿತ್ಯ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ವೈಯಕ್ತಿಕ ಪ್ರಚಾರ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಿ…

2 hours ago

ಓದುಗರ ಪತ್ರ: ಗಗನಕ್ಕೇರುತ್ತಿರುವ ಚಿನ್ನ, ಬೆಳ್ಳಿ ಬೆಲೆ

ಕಳೆದ ೨೫ ವರ್ಷಗಳಲ್ಲಿ ಷೇರುಪೇಟೆ ಸೇರಿದಂತೆ ಉಳಿದೆಲ್ಲ ಸ್ಥಿರಾಸ್ತಿಗಳ ಮೇಲಿನ ಹೂಡಿಕೆಗಿಂತ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಅತಿ…

2 hours ago

ಓದುಗರ ಪತ್ರ: ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಕೋತಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಬಿಲ್ಡಿಂಗ್ ಬಳಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ರೋಗಿಗಳ ಸಂಬಂಧಿಕರು ತರುವ ಊಟ, ತಿಂಡಿ…

2 hours ago

ಓದುಗರ ಪತ್ರ: ಶ್ರೀಕಂಠೇಶ್ವರ ದೇಗುಲದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಇರಲಿ

ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಸರ್ಕಾರಿ ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ…

2 hours ago

ರಾಜಾಸೀಟ್‌ನಲ್ಲಿ ಸ್ಥಾಪನೆಯಾಗಲಿದೆ ಫುಡ್‌ ಕೋರ್ಟ್‌

ನವೀನ್ ಡಿಸೋಜ ಖಾಸಗಿ ಸಹಭಾಗಿತ್ವದಲ್ಲಿ ಆರಂಭಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ; ಟ್ರಾಫಿಕ್ ಕಿರಿಕಿರಿಗೂ ಕಡಿವಾಣ ಮಡಿಕೇರಿ: ನಗರದ ರಾಜಾಸೀಟ್ ಆವರಣದಲ್ಲಿ…

2 hours ago

ಜಲಾಶಯಗಳ ಹಿನ್ನೀರಿನಲ್ಲಿ ರಿವರ್ ಟರ್ನ್ ಪಕ್ಷಿಗಳ ಕಲರವ

ಮಂಜು ಕೋಟೆ ಕೋಟೆ: ಹಿಮಾಲಯ, ಇನ್ನಿತರ ಪ್ರದೇಶಗಳಿಂದ ವಲಸೆ ಬಂದಿರುವ ಹಕ್ಕಿಗಳು; ಪರಿಸರ ಪ್ರಿಯರಲ್ಲಿ ಸಂತ ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿರುವ ಜಲಾಶಯಗಳ…

2 hours ago