ಹಾಡು ಪಾಡು

ಹಿರಿಯ ಅರಣ್ಯಾಧಿಕಾರಿ ಹೇಳಿದ ಕಾಡಿನ ಕಥೆಗಳು

ಕೀರ್ತಿ ಬೈಂದೂರು

ಹೆಚ್.ಸಿ.ಕಾಂತರಾಜ್ ಅವರ ತಾತ ಹುಲಿ ಕೈಗೆ ಸಿಕ್ಕಿ ತೀರಿಹೋಗಿದ್ದರೆಂಬುದು ಆ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು. ಕಾಂತರಾಜ್ ಅವರಿಗೂ ತಾನೊಬ್ಬ ಅರಣ್ಯಾಧಿಕಾರಿ ಆಗಬಹುದೆಂಬ ನಿರೀಕ್ಷೆಗಳೇನೂ ಇರಲಿಲ್ಲ. ಆದರೆ ಇವರ ಬದುಕಿನ ಹಾದಿ ಕಾಡಿನತ್ತ ತಿರುಗಿದ್ದೇ ಅಚ್ಚರಿ!

ಕಾಂತರಾಜ್ ಅವರು ಬೆಳೆದಿದ್ದು ಮಂಡ್ಯದ ಬಿಳಿಗೆರೆ ಹೊಸೂರಿನಲ್ಲಿ. ಹಳ್ಳಿಗಾಡಾದ್ದರಿಂದ ಕಾಡಿನ ಸುತ್ತಮುತ್ತವೇ ಇವರ ಬದುಕು ರೂಪುಗೊಳ್ಳುತ್ತಿತ್ತು. ಪಿಯುಸಿ ಓದು ಮುಗಿದಾಗ ಕಾಂತರಾಜ್ ಅವರನ್ನು ಕೃಷಿ ವಿಭಾಗದಲ್ಲಿ ಬಿ.ಎಸ್ಸಿ ಪದವಿಗೆ ಸೇರಿಸಬೇಕೆಂಬುದು ಅಣ್ಣನ ಹೆಬ್ಬಯಕೆ. ಊರಿನಲ್ಲಿದ್ದ ಶಾಸಕರು ಕೃಷಿ ವಿಭಾಗದಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದರೆಂಬ ಕಾರಣಕ್ಕೆ ತಮ್ಮನೂ ಇದನ್ನೇ ಓದಬೇಕೆಂಬುದು ಅಣ್ಣನ ಕನಸಾಗಿತ್ತು. ಕಾಂತರಾಜ್ ಅವರು ಅದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಈ ನಡುವೆ ಪದವಿ ಓದು ಮುಗಿಯುತ್ತಿದ್ದಂತೆಯೇ ಕೆಲಸಕ್ಕೂ ಸೇರಿದರು. ಬೆನ್ನಲ್ಲೇ ಸ್ನಾತಕೋತ್ತರ ಪದವಿಗೆಂದು ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿಯನ್ನೂ ನಡೆಸತೊಡಗಿದ್ದರು.

೧೯೮೫ರ ಹೊತ್ತಿಗೆ ರಾಜ್ಯದ ಅರಣ್ಯ ಸೇವಾ ಪರೀಕ್ಷೆಯಲ್ಲಿ ಕಾಂತರಾಜ್ ಅವರು ಆಯ್ಕೆಯಾಗಿದ್ದರು. ಕೊಳ್ಳೇಗಾಲದಲ್ಲಿ ಪ್ರೊಬೇಷನರಿ ಅವಧಿಯನ್ನು ಪೂರೈಸುತ್ತಿದ್ದ ಸಂದರ್ಭವದು. ಅಲ್ಲಿನ ಜನ ಬಾವಿ ತೋಡಿ, ಪಂಪ್‌ಸೆಟ್‌ಗಳನ್ನು ಹಾಕಿಕೊಂಡು ವ್ಯವಸಾಯ ಮಾಡುತ್ತಿದ್ದರು. ಗುಂಡಾಲ್ ಡ್ಯಾಮ್ ಕಟ್ಟುತ್ತಿದ್ದಂತೆಯೇ ಜನರಿಗೆಲ್ಲ ಪರಿಹಾರ ನೀಡಿ ಜನರನ್ನು ಅಲ್ಲಿಂದ ಕಳಿಸಲಾಯಿತು. ಈ ಜನರೆಲ್ಲರೂ ತಮ್ಮ ಬೆಲೆಬಾಳುವ ವಸ್ತುಗಳನ್ನೆಲ್ಲ ಕೊಂಡೊಯ್ದರೇ ವಿನಾ ತೋಡಿದ್ದ ಬಾವಿಗಳನ್ನು ಮುಚ್ಚಬೇಕೆಂದು ಯೋಚಿಸಲೇ ಇಲ್ಲ. ಕಾಡು ಪ್ರಾಣಿಗಳೆಲ್ಲ ಡ್ಯಾಮ್ ಬಳಿ ಬಂದು, ನೀರು ಕುಡಿದು ಆಟವಾಡಿ ಹೋಗುತ್ತಿದ್ದವು. ಒಮ್ಮೆ ಎರಡು ಮರಿ ಆನೆಗಳು ನೀರು ಕುಡಿದು ಮರಳುತ್ತಿರುವಾಗ ಅಕಸ್ಮಾತಾಗಿ ಹದಿನೆಂಟು ಅಡಿ ಆಳವಿದ್ದ ಪಾಳುಬಾವಿಗೆ ಬಿದ್ದವು. ಮೇಲೆ ಬರಲು ದಿಕ್ಕುತೋಚದೆ, ನೀರಲ್ಲೇ ಒದ್ದಾಡುತ್ತಿರುವಾಗ, ತಾಯಿ ಆನೆ ಬಂದು ಬಗ್ಗಿ, ಸೊಂಡಿಲಲ್ಲಿ ತನ್ನ ಮರಿಗಳೆರಡನ್ನು ಮೇಲೆತ್ತುವ ಪ್ರಯತ್ನದಲ್ಲಿ ಅದೂ ನೀರಿಗೆ ಬಿದ್ದಿತು. ಎರಡು ದಿನ ಕಳೆದ ಬಳಿಕ ಆನೆ ನೀರಿಗೆ ಬಿದ್ದಿರುವ ಸುದ್ದಿ ತಿಳಿಯಿತು. ೧೯೮೮ರಲ್ಲಿ ಈಗಿನಷ್ಟು ಯಂತ್ರೋಪಕರಣಗಳ ಬಳಕೆ ಇರಲಿಲ್ಲ.

ಮಾರಾಟಕ್ಕೆಂದು ತಂದಿಟ್ಟಿದ್ದ ಎಂಟು ಹತ್ತು ಟ್ರ್ಯಾಕ್ಟರ್‌ಗಳಷ್ಟು ಕಟ್ಟಿಗೆಗಳನ್ನೆಲ್ಲ ಬಾವಿಗೆ ಹಾಕಲಾಯಿತು. ಅದು ಅವನ್ನೆಲ್ಲ ಅಡಿಗೆ ತಳ್ಳಿಕೊಂಡು ಮೇಲೆದ್ದು ಬಂತು. ದುರಂತವೆಂದರೆ ಮರಿ ಆನೆಗಳೆರಡೂ ಸತ್ತಿದ್ದವು! ಕತ್ತಲಾದ್ದರಿಂದ ತಾಯಿ ಆನೆಯನ್ನು ಕಾಡಿಗಟ್ಟಿ, ಕಾಂತರಾಜ್ ಮತ್ತೆ ಉಳಿದ ಸಿಬ್ಬಂದಿಗಳೆಲ್ಲ ತಂತಮ್ಮ ಮನೆಗಳಿಗೆ ತೆರಳಿದರು. ಮರುದಿನ ಬಂದು ನೋಡಿದರೆ, ಮಕ್ಕಳನ್ನರಸುತ್ತಾ ಆ ತಾಯಿ ಆನೆ ಬಾವಿಗೆ ಬಿದ್ದು ಸತ್ತುಹೋಗಿತ್ತು! ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ಎಂದು ಕಾಂತರಾಜ್ ಅವರು ನೆನಪಿಸಿಕೊಳ್ಳುತ್ತಾರೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುವ ಮಾತೃವಾತ್ಸಲ್ಯ ಕಂಡ ಕಾಂತರಾಜ್ ಅವರಿಗೆ ಪ್ರಾಣಿಗಳ ಬಗೆಗಿನ ಆಸಕ್ತಿ ಇನ್ನೂ ಹೆಚ್ಚಾಯಿತು.

ಮುಂದೆ ಅಧಿಕಾರಿಯಾಗಿ ನೇಮಕಗೊಂಡ ಮೇಲೆ ಕಾಂತರಾಜ್ ಅವರು ಕೈಗೊಂಡ ಮಹತ್ವದ ಕಾರ್ಯವನ್ನು ಕಾಡು-ನಾಡು ಸ್ಮರಿಸುವಂಥದ್ದು. ಬೇಸಿಗೆಯ ನೀರ ದಾಹಕ್ಕೆ ಊರಿಗೆ ಬರುತ್ತಿದ್ದ ವನ್ಯ ಮೃಗಗಳ ಉಪಟಳಕ್ಕೆ ಕಡಿವಾಣ ಹಾಕುವುದು ಅಷ್ಟು ಸುಲಭವಿರಲಿಲ್ಲ. ನೈಸರ್ಗಿಕ ಮತ್ತು ಮಾನವ ನಿರ್ಮಿತ ಕೆರೆಗಳಿಗೆ ಪ್ಲಾಸ್ಟಿಕ್ ಹೊದೆಸಿ, ನೀರು ಹಾಯಿಸಿ, ಬೇಸಿಗೆಯಲ್ಲಿ ಕಾಡುಪ್ರಾಣಿಗಳ ಬಾಯಾರಿಕೆ ತಣಿಸಿದ್ದರು. ಕಾಡುಪ್ರಾಣಿಗಳನ್ನು ಉಳಿಸಲು ಹೋದರೆ ನಾಡಜನರು ಸಾಯಬೇಕಾಗುತ್ತದೆ ಎಂದವರೊಂದಷ್ಟು ಮಂದಿ. ಇನ್ನೂ ಕೆಲವರು, ಬಲಾಢ್ಯರು ಬದುಕುಳಿವ ಜೀವವಿಕಾಸದ ಸಿದ್ಧಾಂತವನ್ನೇ ಏರುಪೇರು ಮಾಡುತ್ತಿದ್ದೀರಿ ಎಂದಿದ್ದರು. ಕ್ಯಾರೆ ಎನ್ನದೆ ಮನುಷ್ಯ ಮತ್ತು ಪ್ರಾಣಿ ಜಗತ್ತಿನ ಸಂಘರ್ಷದಾಚೆಗೆ ಜೀವದುಳಿವಿನ ಸೇತುವನ್ನು ಕಾಂತರಾಜ್ ಅವರು ಬೆಸೆದಿದ್ದರು. ಅಚ್ಚರಿ ಎನಿಸಬಹುದು, ಇವರ ಈ ದೂರದೃಷ್ಟಿ ಯೋಚನೆಯನ್ನು ಸರ್ಕಾರವೂ ಬೆಂಬಲಿಸಿತು. ಇಂದಿಗೂ ವನ್ಯ ಜೀವಿಗಳಿಗಾಗಿ ಬೇಸಿಗೆಯ ಸಮಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಫಲಪ್ರದವಾಗಿ ನಡೆಯುತ್ತಿದೆ.

ನಂತರ ಗುಂಡ್ಲುಪೇಟೆಯ ಕಾಡಿಗೆ ಅಧಿಕಾರಿಯಾಗಿದ್ದಾಗ ಗಂಧದ ಮರಗಳ ಕಳ್ಳ ಸಾಗಾಣಿಕೆ ತೀವ್ರವಾಗಿ ನಡೆಯುತ್ತಿತ್ತು. ಐದಾರು ದಿನಗಳ ತನಕ ಹೊರೆಯಾಗಿ ತಲೆ ಮೇಲೆ ಹೊತ್ತುಕೊಂಡು ಸಾಗುತ್ತಿದ್ದರು. ಬೆಳಗಿನ ಘಳಿಗೆಯಲ್ಲಿ ಕಾಡಿನಲ್ಲೇ ವಿಶ್ರಾಂತಿ ಪಡೆದು, ರಾತ್ರಿ ಹೊತ್ತಿನಲ್ಲಿ ಸಂಚರಿಸುತ್ತಿದ್ದರು. ಕೇರಳದಲ್ಲಿ ಆಗ ಶ್ರೀಗಂಧದ ತುಂಡು ಇತರ ಕಟ್ಟಿಗೆಗಳಿಗೆ ಸಮಾನವಾಗಿದ್ದರಿಂದ ಗಂಧದ ವ್ಯವಹಾರ ಅಪರಾಧವಾಗೇನೂ ಇರಲಿಲ್ಲ. ಹಾಗಾಗಿ ಕರ್ನಾಟಕದ ಗಡಿ ದಾಟುವುದಕ್ಕೆ ಕಳ್ಳಕಾಕರು ಹವಣಿಸುತ್ತಿದ್ದರು. ಕಾಂತರಾಜ್ ಅವರು ಮಾಹಿತಿದಾರರ ಮಾತಿಗೆ ಅನುಗುಣವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದವರ ಕೆಲ ಗುಂಪುಗಳನ್ನು ಬಂಧಿಸಿದ್ದರು. ಒಂದೊಂದು ಗುಂಪುಗಳನ್ನು ಸೆರೆಹಿಡಿದಾಗಲೂ ಮೂವತ್ತು, ನಲವತ್ತು ಹೊರೆಯಷ್ಟು ಗಂಧದ ಕಟ್ಟಿಗೆಗಳು ದೊರಕುತ್ತಿದ್ದವು. ಅದೆಲ್ಲವನ್ನು ರೇಂಜ್ ಆಫೀಸಿನ ಬಳಿ ತಂದು ಗುಡ್ಡೆಹಾಕುತ್ತಿದ್ದರು. ಮಹಜರು ಮಾಡುವ ವೇಳೆ ತಡವಾಗುತ್ತದೆ, ಮತ್ತೆ ಮಾಡಿದರಾಯಿತು ಎಂದು ಅಲ್ಲೇ ಮಲಗಿದ್ದರೆ ಬೆಳಗಾಗುವುದರೊಳಗೆ ಗಂಧದ ಕಟ್ಟಿಗೆಗಳ ಸಂಖ್ಯೆಯೇ ಕಡಿಮೆಯಾಗಿತ್ತು. ಉಳಿದವೆಲ್ಲ ಎಲ್ಲಿ ಹೋಯಿತೆಂದು ಕಾಂತರಾಜ್ ಮತ್ತವರ ಬಳಗ ಹುಡುಕುತ್ತಿದ್ದರೆ, ಡ್ರೈವರ್ ಮುರಳಿ ಅವರ ತಂದೆ ಕುಡಿದ ಅಮಲಿನಲ್ಲಿ ಗಂಧದ ಕಟ್ಟಿಗೆಗಳನ್ನು ಸುಟ್ಟು ಬಿಸಿನೀರು ಕಾಯಿಸಿಟ್ಟಿದ್ದರಂತೆ! ಅಷ್ಟು ಯಥೇಚ್ಛವಾಗಿ ಶ್ರೀಗಂಧ ದೊರಕುತ್ತಿತ್ತು.

ಸ್ವಾಭಾವಿಕ ಕಾಡುಗಳೆಲ್ಲ ಮರೆಯಾಗಿ ಈಗ ಬರೀ ನೀಲಗಿರಿ ತೋಪುಗಳಿರುವ ಕಾಡುಗಳಿವೆಯಷ್ಟೆ ಎಂದು ಬೇಸರಿಸುವ ಕಾಂತರಾಜ್ ಅವರಿಗೆ ಕಾಡೆಂದರೆ ಆಸರೆ. ಮೊದಲೆಲ್ಲ ಒಂದೋ ಎರಡೋ ಜಂಗಲ್ ಲಾಡ್ಜ್ಗಳಿರುತ್ತಿದ್ದವು. ಈಗ ಅದನ್ನವಲಂಬಿಸಿ ಹತ್ತಿಪ್ಪತ್ತು ರೆಸಾಟ್ ಗಳಾಗಿವೆ. ಪ್ರಾಣಿಗಳಿಗೆ ಪ್ರೈವೆಸಿ ಎನ್ನುವುದೇ ಇಲ್ಲ. ಬೇಟೆಯಾಡುವ ದೃಶ್ಯ ಸಿಕ್ಕಿದ್ದೇ ಎಲ್ಲಾ ಜೀಪುಗಳು ಅಲ್ಲಿಗೇ ದೌಡಾಯಿಸುತ್ತವೆ

” ಮನುಷ್ಯ ಮತ್ತು ಪ್ರಾಣಿ ಪ್ರಪಂಚದ ನಡುವೆ ಒಂದು ಅಂತರ ಇರಲೇಬೇಕು ಎನ್ನುತ್ತಾರೆ ಹೆಚ್.ಸಿ.ಕಾಂತರಾಜ್ ಅವರು.”

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 23 ಗುರುವಾರ

8 mins ago

ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ; ಬಿಗಿ ಭದ್ರತೆಯಲ್ಲಿ ಮತದಾನ ಆರಂಭ

ಬೆಂಗಳೂರು : ಇಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಪಶ್ಚಿಮ…

57 mins ago

ಹುಣಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ…

10 hours ago

ಹನೂರು| ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆ ಫಲಿಸದೇ ಸಾವು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ…

10 hours ago

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಚುನಾವಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ನಾಳೆ ಉತ್ತರ ಬಂಗಾಳದ ಎಲ್ಲಾ 152…

12 hours ago

24 ಗಂಟೆಯ ಒಳಗಡೆ ಉತ್ತರಿಸಿ: ಮಲ್ಲಿಕಾರ್ಜುನ ಖರ್ಗೆಗೆ ಆಯೋಗ ನೋಟಿಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕಾಗಿ ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ…

12 hours ago