ಜಿ.ಕೃಷ್ಣ ಪ್ರಸಾದ್

‘ಬಿತ್ತಿದಂತೆ ಬೀಜ; ನೂಲಿನಂತೆ ಸೀರೆ’ ಎಂಬುದು ನಾಣ್ಣುಡಿ. ಬಿತ್ತನೆಗೆ ಬಳಸುವ ಬೀಜ ಶುದ್ಧವಾಗಿದ್ದರೆ, ರೋಗ ಮುಕ್ತವಾಗಿದ್ದರೆ ಹುಟ್ಟುವ ಪೈರು ಕೂಡ ಆರೋಗ್ಯ ಪೂರ್ಣವಾಗಿರುತ್ತದೆ. ಸುಗ್ಗಿಯ ನಂತರ ಬಿತ್ತನೆಯವರೆಗೆ ಬೀಜಗಳನ್ನು ಜೋಪಾನವಾಗಿ ಸಂಗ್ರಹಿಸಿಡುವುದು ಬಹಳ ಮುಖ್ಯ.

ಬೀಜಗಳನ್ನು ಬಚ್ಚಿಡುವುದು ಒಂದು ಕಲೆ. ಅಜ್ಜಿಯಂದಿರಿಗೆ ಆ ಕಲೆ ಸಿದ್ಧಿಸಿತ್ತು. ಬೀಜಗಳನ್ನು ಒಣಗಿಸಿ ಬೇವು, ಲಕ್ಕಿ ಸೊಪ್ಪಿನ ಎಲೆಗಳನ್ನು ಸೇರಿಸಿ, ಮಣ್ಣಿನ ಮಡಕೆಗಳಲ್ಲಿ ಜೋಪಾನ ಮಾಡುತ್ತಿದ್ದರು. ಕಾಳುಗಳನ್ನು ಮೂಟೆ ಕಟ್ಟಿಸುತ್ತಿದ್ದರು. ರಾಸಾಯನಿಕಗಳ ಆಗಮನದಿಂದ, ಸಾಂಪ್ರದಾಯಿಕ ಬೀಜ ಸಂಗ್ರಹಣಾ ಪದ್ಧತಿಗಳು ಮರೆಯಾಗಿ ಕೆಮಿಕಲ್ಗುಳಿಗೆ ಮತ್ತು ಬೋರಿಕ್ ಪೌಡರ್‌ಗೆ ರೈತರು ಮೊರೆ ಹೋಗಿದ್ದಾರೆ. ಇದರಿಂದ ಆರೋಗ್ಯವೂ ಹಾಳು; ಬೀಜದ ಜೈವಿಕ ಗುಣವೂ ನಾಶವಾಗುತ್ತದೆ.

ಸಾಂಪ್ರದಾಯಿಕವಾಗಿ ಬೀಜಗಳನ್ನು ಬಚ್ಚಿಡುವ ಹಲವಾರು ಸುಲಭ ವಿಧಾನಗಳಿವೆ. ಬಿತ್ತನೆ ಬೀಜದ ಜೊತೆ ಲಕ್ಕಿ ಮತ್ತು ಬೇವಿನ ಎಲೆ ಅಥವಾ ಬಜೆ ಬೆರೆಸಿಟ್ಟರೆ ಹುಳು ಬೀಳುವುದಿಲ್ಲ. ಕಾಳುಗಳನ್ನು ಸಂಗ್ರಹಿಸಲು, ಮಡಕೆಯ ತಳದಲ್ಲಿ ಒಂದು ಪದರ ರಾಗಿ ಸುರಿದು, ಅದರ ಮೇಲೆ ಅವರೆ, ತೊಗರಿ, ಉದ್ದು, ಹೆಸರು ಮೊದಲಾದ ಕಾಳುಗಳನ್ನು ಸುರಿದು, ಮೇಲೆ ಮತ್ತೆ ರಾಗಿ ಹಾಕಿ ಮುಚ್ಚಳವನ್ನು ಮುಚ್ಚಿ ಸಗಣಿಯಿಂದ ಪ್ಯಾಕ್ ಮಾಡಿದರೆ ಹುಳು ಬೀಳದು. ರಾಗಿಯ ಬದಲು, ನುಣುಪಾದ ಮರಳನ್ನು ಕೂಡ ಬಳಸಬಹುದು. ಬೀಜ ಬೇಕಾದಾಗ ಜರಡಿ ಹಿಡಿದು, ರಾಗಿ ಮರಳನ್ನು ಪ್ರತ್ಯೇಕಿಸಿದರೆ ಆಯಿತು.

ಕಾಳುಗಳನ್ನು ಹುಳು ಬೀಳದಂತೆ ಸಂರಕ್ಷಿಸುವ ಆಸಕ್ತಿದಾಯಕ ವಿಧಾನವೊಂದು ಹೀಗಿದೆ: ಒಂದು ಬಟ್ಟೆ ಬ್ಯಾಗ್ ಅಥವಾ ಗೋಣಿ ಚೀಲ ತೆಗೆದುಕೊಂಡು, ಬಿತ್ತನೆಗೆ ಇಟ್ಟಿರುವ ಅವರೆ, ತೊಗರಿ ಬೀಜಗಳನ್ನು ಚೀಲದ ಅರ್ಧ ಭಾಗ ತುಂಬಿಸಿ. ಅದರ ತುದಿಗೆ ದಾರ ಕಟ್ಟಿ, ಮನೆಯಹೊಸ್ತಿಲ ಬಳಿ ಹಾಕಿ. ಓಡಾಡುವಾಗ ಚೀಲವನ್ನು ತುಳಿಯುತ್ತಿರಬೇಕು. ಇದರಿಂದ ಹುಳು ಬೀಳದು. ಇದರ ಹಿಂದಿನ ವೈಜ್ಞಾನಿಕ ಕಾರಣ ಕುತೂಹಲಕರವಾಗಿದೆ. ಕಾಳು ಕೊರೆಯುವ ಹುಳು, ಕಾಳನ್ನು ಒಂದೇ ಕೋನದಿಂದ ಕೊರೆಯುತ್ತಿರುತ್ತದೆ. ಚೀಲದ ಮೇಲೆ ಕಾಲಿಟ್ಟು, ಕಾಳು ಅಲುಗಾಡಿದಾಗ, ಸಂಗ್ರಹಣಾ ಕೀಟ ಸರಿದು, ಮತ್ತೆ ಕಾಳು ಕೊರೆಯುವ ಕೋನಕ್ಕೆ ಬರಲು ಕನಿಷ್ಠ ಮೂರು ಗಂಟೆ ಬೇಕು. ಅಷ್ಟರಲ್ಲಿ ಇನ್ನೊಬ್ಬರು ಬೀಜದ ಚೀಲ ತುಳಿದಿರುತ್ತಾರೆ. ಹುಳುಗಳ ಕಾಟವಿಲ್ಲದೆ ಬೀಜ ಸುರಕ್ಷಿತವಾಗಿರುತ್ತದೆ!

ಸೋರೆ, ಹೀರೆ, ಕುಂಬಳ, ತುಪ್ಪದ ಹೀರೆಯ ಒಣಗಿದ ಇಡೀ ಕಾಯಿಯನ್ನು ಎತ್ತಿಟ್ಟು, ಬೇಕಾದಾಗ ಒಡೆದು ಬೀಜ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಬೀಜಗಳನ್ನು ಸುಡು ಬಿಸಿಲಿಗೆ ಒಣಗಲು ಹಾಕಬಾರದು. ಮುಂಜಾನೆ ಅಥವಾ ಸಂಜೆಯ ಎಳೆ ಬಿಸಿಲು ಅಥವಾ ನೆರಳಲ್ಲಿ ಬೀಜವನ್ನು ಒಣಗಿಸಬೇಕು. ಸಣ್ಣ ಪ್ರಮಾಣದಲ್ಲಿ ಮನೆ ಬಳಕೆಗೆ ತರಕಾರಿ ಬೀಜಗಳನ್ನು ಸಂಗ್ರಹಿಸಿಡಲು ಮನೆಯಲ್ಲಿ ಬಳಸುವ ರೆಫ್ರಿಜರೇಟರ್‌ನ್ನು ಬಳಸಬಹುದು. ಟೊಮೊಟೋ, ಬದನೆ, ಬೀನ್ಸ್, ಬೆಂಡೆ ಮೊದಲಾದ ತರಕಾರಿ ಬೀಜಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ಪ್ಲಾಸ್ಟಿಕ್ ಡಬ್ಬಿಯೊಂದರಲ್ಲಿ ಇಟ್ಟು ಭದ್ರಪಡಿಸಿ. ಅದನ್ನು ರೆಫ್ರಿಜರೇಟರಿನ ಬಾಗಿಲ ಬಳಿಯ ಬಾಕ್ಸ್‌ನಲ್ಲಿ ಇಡಿ. ಎರಡು-ಮೂರು ವರ್ಷಗಳು ಬಿಟ್ಟರೂ ಬೀಜದ ಮೊಳಕೆ ಸಾಮರ್ಥ್ಯ ಕಡಿಮೆಯಾಗದು.

ಅವರೆ, ಹೆಸರು, ತೊಗರಿ ಮೊದಲಾದ ಕಾಳುಗಳನ್ನು ಬಚ್ಚಿಡಲು ಹರ್ಮೆಟಿಕ್ ಚೀಲಗಳನ್ನು ಬಳಸಬಹುದು. ಈ ಚೀಲದಲ್ಲಿ ಕಾಳುಗಳನ್ನು ಸುರಿದು, ಗಾಳಿಯಾಡದಂತೆ ಕಟ್ಟಿಟ್ಟರೆ ಹುಳುಗಳು ಬೀಳುವುದಿಲ್ಲ. ಹಸಿರು ಬಣ್ಣದ ಈ ಚೀಲಗಳು ಕೈ ಗೆಟುಕುವ ದರದಲ್ಲಿ ಸಿಗುತ್ತವೆ.

ದೊಡ್ಡ ಪ್ರಮಾಣದಲ್ಲಿ ಕಾಳುಗಳನ್ನು ಬಚ್ಚಿಡಲು ಕಕೂನ್ ಬ್ಯಾಗ್‌ಗಳನ್ನು ಬಳಸುವುದು ಹೊಸ ತಲೆಮಾರಿನ ಪದ್ಧತಿ. ದಪ್ಪನಾದ ಎರಡು ಪದರಗಳ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಾಳುಗಳ ಮೂಟೆಗಳನ್ನು ಇಟ್ಟು, ಒಳಗಿನ ಗಾಳಿ ತೆಗೆದು ಕಾರ್ಬನ್ ಡೈ ಆಕ್ಸೆ ಡನ್ನು ತುಂಬುತ್ತಾರೆ. ಇದರಿಂದ ಕಾಳು ಕೊರಕ ಕೀಟ ಮತ್ತು ಮೊಟ್ಟೆಗಳು ನಾಶವಾಗುತ್ತವೆ. ರಾಸಾಯನಿಕಗಳನ್ನು ಬಳಸದೆ ಬೀಜ ಎತ್ತಿಡುವ ಸುಲಭ ವಿಧಾನವಿದು.

ಹಳ್ಳಿ ಮಟ್ಟದಲ್ಲಿ ಸಮುದಾಯ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡರೆ ರೈತ-ರೈತರ ನಡುವೆ ಬೀಜ ವಿನಿಮಯ ಮಾಡಿಕೊಳ್ಳಬಹುದು. ಬಿತ್ತನೆಗೆ ಬೇಕಾದ ಬೀಜಗಳನ್ನು ಉಚಿತವಾಗಿ ಪಡೆದುಕೊಳ್ಳುವ ರೈತರು, ಕೊಯ್ಲಿನ ನಂತರ ತಾವು ಪಡೆದ ಬೀಜದ ಎರಡರಷ್ಟನ್ನು ಬೀಜಬ್ಯಾಂಕಿಗೆ ಹಿಂತಿರುಗಿಸಬೇಕು. ಹೆಗ್ಗಡದೇವನಕೋಟೆಯ ನೂರಲಕುಪ್ಪೆ ಗ್ರಾಮದಲ್ಲಿ ಸಮುದಾಯ ಬೀಜ ಬ್ಯಾಂಕ್ ಇದೆ.

ಬಿತ್ತನೆ ಬೀಜ ಸಮುದಾಯದ ಆಸ್ತಿ; ಒಮ್ಮೆ ಕಳೆದರೆ ಸಿಗಲಾರದ ಮುತ್ತು. ಅದನ್ನು ಜೋಪಾನ ಮಾಡಿ. ಬಿತ್ತಿ, ಬೆಳೆಸಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸುಂಕ ಕದನಕೆ ತೆರೆ!

ಸುಂಕ ಕದನಕೆ ತೆರೆ! ಕೊನೆಗೂ ಭಾರತ ಅಮೆರಿಕ ಜಂಟಿಯಾಗಿ ಒಪ್ಪಂದಕೆ ಬಂದಿವೆ ಆಮದು ಸುಂಕ ಕಡಿತಗೊಳಿಸಲು ತೆರೆ ಬಿದ್ದಿದೆ ಸುಂಕ…

1 hour ago

ಓದುಗರ ಪತ್ರ: ಶಾಲೆಗೆ ಸುತ್ತುಗೋಡೆ ನಿರ್ಮಿಸಿ

ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಶಾಲೆಗೆ ಸುತ್ತುಗೋಡೆ ಇಲ್ಲದ ಕಾರಣ ಶಾಲೆಯಿಂದ…

1 hour ago

ಓದುಗರ ಪತ್ರ: ಜಿಲ್ಲಾ ನ್ಯಾಯಾಲಯಗಳಿಗೆ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಜಿಲ್ಲಾ ನ್ಯಾಯಾಲಯಗಳಿಗೆ ಸಾಕಷ್ಟು ಬಸ್ ಸೌಲಭ್ಯವಿಲ್ಲದೆ ನ್ಯಾಯಾಲಯದ ಕಲಾಪಗಳಿಗೆ ಬರುವ ವಕೀಲರು ಹಾಗೂ ಕಕ್ಷಿದಾರರಿಗೆ ತೀವ್ರ ತೊಂದರೆಯಾಗಿದೆ. ನಗರ…

1 hour ago

ಓದುಗರ ಪತ್ರ: ಬೈಕ್ ವ್ಹೀಲಿಂಗ್ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಿ

ಬೈಕ್ ವ್ಹೀಲಿಂಗ್ ನಿಷೇಧಿಸಿದ್ದರೂ ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಯುವ…

1 hour ago

ಓದುಗರ ಪತ್ರ: ಮಹಾರಾಣಿ ಕಾಲೇಜಿನಲ್ಲಿ ಕ್ಯಾಂಟೀನ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ತರಗತಿಗಳು ಬೆಳಿಗ್ಗೆ ೮ ಗಂಟೆಗೆ ಪ್ರಾರಂಭವಾಗುವುದರಿಂದ ಬಹುತೇಕ…

1 hour ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ: ಸೆರೆಬ್ರಲ್ ಪಾಲ್ಸಿಯನ್ನು ಮಣಿಸಿ ಬದುಕು ಕಟ್ಟಿಕೊಂಡ ಸುಮಿತ್

‘ಪಿ.ಆರ್.ಸಿಗ್ನಲ್’ ಕಂಪೆನಿ ಸ್ಥಾಪಿಸಿ ವಿಶೇಷಚೇತನರಿಗೆ ನೆರವು ೩೪ ವರ್ಷ ಪ್ರಾಯದ ಸುಮಿತ್ ಅಗರ್ವಾಲ್ ಏಳನೇ ತಿಂಗಳಲ್ಲಿ ಅವಧಿಗೆ ಮೊದಲೇ ಹುಟ್ಟಿದವರು.…

1 hour ago