ಅನಿಲ್ ಅಂತರಸಂತೆ
ನಾವು ಎಷ್ಟೇ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ, ವಿದ್ಯಾಭ್ಯಾಸ ಪಡೆದು ಬದುಕಿನ ನಿರ್ವಹಣೆ ಗಾಗಿ ವಿವಿಧ ವೃತ್ತಿಗಳನ್ನು ಅನುಸರಿಸುತ್ತಿದ್ದರೂ ನಮ್ಮ ಮೂಲ ಕಸುಬಾದ ಕೃಷಿಯನ್ನು ಮರೆಯಬಾರದು. ವೃತ್ತಿಯಲ್ಲಿ ಉಪನ್ಯಾಸಕನಾಗಿ ದ್ದರೂ ನಮ್ಮ ಮೂಲ ಕಸುಬು ಕೃಷಿ ಎಂದು ಬಲವಾಗಿ ನಂಬಿ ಇಂದಿಗೂ ಕೃಷಿ ಕಾಯಕವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಚ್. ಡಿ. ಕೋಟೆ ತಾಲ್ಲೂಕಿನ ಚಕ್ಕೋಡನಹಳ್ಳಿ ಗ್ರಾಮದ ರೈತ ಉಪನ್ಯಾಸಕ ಸಿ. ಆರ್. ಪ್ರಸನ್ನ ಕುಮಾರ್.
ಸಿ. ಆರ್. ಪ್ರಸನ್ನ ಕುಮಾರ್ ವೃತ್ತಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂಎ ಪದವಿ ಪಡೆದಿರುವ ಇವರು, ಮೈಸೂರಿನ ಅಮೃತಾನಂದಮಯಿ ಕಾಲೇಜಿನಲ್ಲಿ ಬಿ.ಇಡಿ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಕೆ-ಸೆಟ್ ಮತ್ತು ಟಿಇಟಿ ಪ್ರವೇಶಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಎಚ್.ಡಿ.ಕೋಟೆ ತಾಲ್ಲೂಕಿನ ತುಂಬಸೋಗೆ ಗ್ರಾಮದಲ್ಲಿರುವ ಎಂಎಂಕೆ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಕ್ಕೋಡನಹಳ್ಳಿಯ ರಾಮಚಂದ್ರೇಗೌಡ ಮತ್ತು ಪುಟ್ಟತಾಯಮ್ಮ ದಂಪತಿಯ ಒಬ್ಬನೇ ಮಗನಾ ಗಿರುವ ಪ್ರಸನ್ನ, ತಮ್ಮ ೭ ಎಕರೆ ಕೃಷಿ ಭೂಮಿಯಲ್ಲಿ ಕೃಷಿ ಕಾಯಕವನ್ನು ಮಾಡುತ್ತಾ, ಇತ್ತ ಉಪನ್ಯಾಸಕ ರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ತಂದೆಯೊಂದಿಗೆ ಜಮೀನಿಗೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಕೃಷಿ ಕಾಯಕದ ಜತೆಗೆ ಓದಿನಲ್ಲಿಯೂ ಆಸಕ್ತಿ ಹೊಂದಿದ್ದ ಪ್ರಸನ್ನ ಎಂಎ ಪದವಿ ಪಡೆದರು. ನಾನು ಉನ್ನತ ವ್ಯಾಸಂಗ ಮಾಡಿದ್ದೇನೆ, ಉದ್ಯೋಗ ಮಾಡಿ ಜೀವನ ಸಾಗಿಸಬಹುದು ಎಂದುಕೊಳ್ಳದ ಇವರು, ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರೂ ಕೃಷಿ ಕಾಯಕವನ್ನು ಕೈಬಿಡದೆ ಮುಂದುವರಿಸಿಕೊಂಡು ಬಂದಿದ್ದಾರೆ.
ಬೆಳಿಗ್ಗೆ ೬ ಗಂಟೆಯಿಂದ ೮. ೩೦ರವರೆಗೆ ಜಮೀನಿನಲ್ಲಿ ಕೆಲಸ ಮಾಡಿ ಬಳಿಕ ೯. ೩೦ಯಿಂದ ಸಂಜೆ ೩. ೩೦ರವರೆಗೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನಿಂದ ಬಂದ ಬಳಿಕವೂ ಸಂಜೆ ೫. ೦೦ರಿಂದ ೬.
೩೦ರವರೆಗೆ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ತಮ್ಮ ೭ ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ, ನೇಂದ್ರ ಬಾಳೆ, ಶುಂಠಿ, ಹತ್ತಿ, ಜೋಳ, ಭತ್ತ, ಗೆಣಸು ಹೀಗೆ ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿರುವ ಇವರು ಪ್ರತಿ ವರ್ಷ ೧೨-೧೫ ಲಕ್ಷ ರೂ. ಆದಾಯ ಗಳಿಸುವ ಮೂಲಕ ಮಾದರಿ ಕೃಷಿಕರೆನಿಸಿಕೊಂಡಿದ್ದಾರೆ.
ವಿದ್ಯಾಭ್ಯಾಸ ಮಾಡಿದ್ದೇವೆ ಎಂಬ ಕಾರಣ ಮುಂದಿಟ್ಟುಕೊಂಡು ಇಂದಿನ ಯುವ ಜನತೆ ಕೃಷಿ ಕಾಯಕವನ್ನು ಬಿಟ್ಟು ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಬೇಕು ಎಂದು ಪಟ್ಟಣಗಳನ್ನು ಸೇರುತ್ತಾರೆ. ಆದರೆ ನಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸ್ಥಳೀಯವಾಗಿ ದೊರಕುವ ಉದ್ಯೋಗಗಳನ್ನು ಮಾಡುತ್ತಾ ಬಿಡುವಿನ ಸಮಯದಲ್ಲಿ ಕೃಷಿ ಕಾಯಕವನ್ನು ಮಾಡಬಹುದು. ಇದರಿಂದ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಜತೆಗೆ ಆರ್ಥಿಕವಾಗಿಯೂ ಸಬಲರಾಗ ಬಹುದು ಎಂಬುದು ಪ್ರಸನ್ನರ ಮಾತು. ಸದ್ಯ ನಾನು ಕೃಷಿಯಲ್ಲಿ ಮಿಶ್ರ ಬೇಸಾಯ ಮಾಡುತ್ತಿರುವುದರಿಂದ ಒಂದಲ್ಲ ಒಂದು ಬೆಳೆ ಲಾಭ ತಂದುಕೊಡುತ್ತದೆ. ನಷ್ಟವನ್ನು ಸರಿದೂಗಿಸಿ ಉತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ ಪ್ರಸನ್ನ.
ಇದರೊಂದಿಗೆ ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಪ್ರಸನ್ನ ನೆರವಾಗುತ್ತಲಿದ್ದಾರೆ. ರಜೆ ದಿನಗಳಲ್ಲಿ ಅವರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಕ್ರೀಡೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಇವರು ತಮ್ಮ ಕಾಲೇಜಿನ ಮಕ್ಕಳು ಸತತವಾಗಿ ಎರಡು ಬಾರಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಲು ನೆರವಾಗಿದ್ದಾರೆ.
ನನ್ನ ನೆಚ್ಚಿನ ವೃತ್ತಿ ಬೋಧನೆ. ಇದ ರೊಂದಿಗೆ ಕೃಷಿ ಮಾಡುವುದು ನಾನು ಚಿಕ್ಕ ವಯಸ್ಸಿನಿಂದ ರೂಢಿಸಿಕೊಂಡು ಬಂದ ಹವ್ಯಾಸ. ಓದಿದ್ದೇನೆ ಎಂದು ಕೃಷಿ ಯಿಂದ ವಿಮುಖರಾಗುವುದು ತಪ್ಪು. ಕೃಷಿ ನಮ್ಮ ಮೂಲ. ಆದ್ದರಿಂದ ನಾನು ಕೃಷಿ ಮಾಡುತ್ತಲೇ ಉಪನ್ಯಾಸಕ ವೃತ್ತಿಯನ್ನೂ ಮಾಡುತ್ತಿದ್ದೇನೆ. ಸಮಗ್ರ ಕೃಷಿ ಮಾಡುತ್ತಿರುವುದರಿಂದ ಉತ್ತಮ ಆದಾಯವೂ ಬರುತ್ತಿದೆ. ಜೀವನ ಮಟ್ಟವೂ ಸುಧಾರಣೆಯಾಗಿದೆ. -ಸಿ. ಆರ್. ಪ್ರಸನ್ನ ಕುಮಾರ್
ನಿಕೋಟಿನ್, ಪಾನ್ ಮಸಾಲಾ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಆರೋಗ್ಯ ಮತ್ತು…
ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…
ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಹೆಸರಿಸಲಾಗಿದ್ದ ಸರ್ಕಾರಿ ಕಾರ್ಯಾಲಯಗಳು ಮತ್ತು ರಸ್ತೆಗಳ ಹೆಸರುಗಳನ್ನು ಕೇಂದ್ರದಲ್ಲಿ…
ಕೆ.ಬಿ.ರಮೇಶನಾಯಕ ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ…
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…