ಅನ್ನದಾತರ ಅಂಗಳ

ಸೊಪ್ಪು ಬೆಳೆದು ಬದುಕು ಕಟ್ಟಿಕೊಂಡ ಚಿನ್ನಮ್ಮ

ಜಿ.ಕೃಷ್ಣ ಪ್ರಸಾದ್.

“ಯಾಕೆ ಹೆದ್ರಿಕೋಬೇಕು ಸಾ? ಸೊಪು ಮಾರಾದ್ರೂ ಬದುಕಬಹುದು’-ಚಿನ್ನಮ್ಮ ಆತ್ಮವಿಶ್ವಾಸದಿಂದ ನುಡಿದರು. ಕೃಷಿ ಬದುಕು ಮೂರಾ ಬಟ್ಟೆಯಾಗಿ, ಸ್ಥಿತಿವಂತ ರೈತರೇ ಹೈರಾಣಾಗಿ ಕುಂತಿರುವ ಈ ಹೊತ್ತಲ್ಲಿ ಸಾಮಾನ್ಯ ಹಳ್ಳಿಗಾಡಿನ ಮಹಿಳೆ ಚಿನ್ನಮ್ಮ. ‘ಕೃಷಿಯಿಂದ ಬದುಕು ಕಟ್ಟಿಕೊಳ್ಳ ಬಹುದು’ ಎಂದು ಧೈರ್ಯದಿಂದ ಹೇಳುತ್ತಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ‘ಸಿ’ ನೂರಲಕುಪ್ಪೆ ಗ್ರಾಮದ ಚಿನ್ನಮ್ಮ ಮನೆಯಲ್ಲಿ ಅಡುಗೆಯನ್ನೂ ಮಾಡುತ್ತಾ, ಕೃಷಿಯಲ್ಲಿಯೂ ಶ್ರಮಿಸುವ ಕಾಯಕಜೀವಿ.

ಚಿನ್ನಮ್ಮ ಅವರ ಪತಿ ಪುಟ್ಟಶೆಟ್ಟಿ ಕೃಷಿ ನೆಚ್ಚಿಕೊಂಡ ವರು. ತಮ್ಮ ಒಂದೂವರೆ ಎಕರೆಯ ಒಣಭೂಮಿ ಜಮೀನಿನಲ್ಲಿ ರಾಗಿ, ಹತ್ತಿ, ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಮನೆಯಲ್ಲಿ ಸಾಕಷ್ಟು ದನಕರು ಗಳಿದ್ದವು. ಕೊಟ್ಟಿಗೆ ಗೊಬ್ಬರಕ್ಕೆ ಬರವಿರಲಿಲ್ಲ. ಸರ್ಕಾರಿ ಗೊಬ್ಬರ ಸೋಕಿಸಿರಲಿಲ್ಲ. ರಾಸಾಯನಿಕ ಗೊಬ್ಬರ, ಔಷಧಿ ಬಂತು. ಊರಿನ ಇತರರಂತೆ ಇವರೂ ರಾಸಾಯನಿಕ ಗೊಬ್ಬರ ಬಳಸಲು ಶುರು ಮಾಡಿದರು.

ಹತ್ತು ವರ್ಷಗಳ ಹಿಂದೆ ಕೇರಳದವರು ಇವರ ಹೊಲವನ್ನು ಭೋಗ್ಯಕ್ಕೆ ಪಡೆದು, ಕೊಳವೆ ಬಾವಿ ಕೊರೆಸಿ ಶುಂಠಿ ನೆಟ್ಟರು. ವರ್ಷದ ನಂತರ ಅವರು ಹೊಲವನ್ನು ಮರಳಿ ಕೊಟ್ಟರು. ಶುಂಠಿ ಕೃಷಿಗೆ ರಾಸಾಯನಿಕಗಳನ್ನು ಸುರಿದ ಪರಿಣಾಮ ಮುಂದಿನ 2-3 ವರ್ಷಗಳ ಕಾಲ ಫಸಲು ಸರಿಯಾಗಿ ಬರಲಿಲ್ಲ. ಸಾಕಷ್ಟು ಕೊಟ್ಟಿಗೆ ಗೊಬ್ಬರ ಹಾಕಿ, ನೆಲದ ಫಲವತ್ತತೆಯನ್ನು ಮೊದಲಿನ ಸ್ಥಿತಿಗೆ ತರಬೇಕಾ ಯಿತು. ಈ ವೇಳೆ ಕೃಷಿಯಲ್ಲಿ ಆದಾಯಕ್ಕಿಂತ ಖರ್ಚೆ ಹೆಚ್ಚಾಗಿತ್ತು.

ಬದುಕು ಬದಲಿಸಿದ ಸಂಘ: 2 ವರ್ಷಗಳ ಹಿಂದೆ, ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗ, ಈ ಭಾಗದ ಸಣ್ಣ ರೈತರನ್ನು ಸಾವಯವ ಕೃಷಿಗೆ ಪರಿವರ್ತಿಸುವ ಯೋಜನೆ ಆರಂಭಿಸಿತು. ಯೋಜನೆಯ ಭಾಗವಾಗಿ ಶ್ರೀ ಕಾಮಧೇನು ಸಾವಯವ ಕೃಷಿಕರ ಸ್ವ-ಸಹಾಯ ಸಂಘ ರಚನೆ ಯಾಯಿತು. ಸಂಘದ ಸದಸ್ಯರಾಗಿ ಜೊತೆಯಾದ ಚಿನ್ನಮ್ಮ, ಉಳಿತಾಯವನ್ನು ಕಟ್ಟಲು ಆರಂಭಿಸಿ ದರು. ಸಾವಯವ ಕೃಷಿಯ ತರಬೇತಿಯನ್ನೂ ಪಡೆದರು.

ತಮ ಒಂದೂವರೆ ಎಕರೆ ಹೊಲ ವನ್ನು ಸಂಪೂರ್ಣ ಸಾವಯವಕ್ಕೆ ಪರಿ ವರ್ತಿಸಿ, ಏಕಬೆಳೆ ಬೆಳೆ ಕೈ ಬಿಟ್ಟು ಸಣ್ಣ ಪ್ರಮಾಣದಲ್ಲಿ ವೈವಿಧ್ಯಮಯ ತರಕಾರಿ, ಸೊಪ್ಪುಗಳನ್ನು ಬೆಳೆಸುವುದನ್ನು ಕಲಿತರು.

ಆರಂಭದಲ್ಲಿ ಜೀವಾಮೃತದ ಬಳಕೆ ಶುರು ಮಾಡಿದ ಮೇಲೆ ಸಸಿಗಳು ಹುಲುಸಾಗಿ ಬೆಳೆಯಲಾರಂಭಿಸಿದವು. ಕೀಟ ಮತ್ತು ರೋಗ ನಿಯಂತ್ರಣಕ್ಕೆ ‘ಪೂಚಿ ಮರುಂದು’ ಬಳಸಿ ಗೆದರು. ಸಾಕಷ್ಟು ಕೊಟ್ಟಿಗೆ ಗೊಬ್ಬರ ಹಾಕಿದ ಪರಿಣಾಮ, ನೆಲ ಫಲವತ್ತಾಯಿತು.

“ಸರ್ಕಾರಿ ಗೊಬ್ಬರ ಹಾಕಿದ್ರೆ, ಊಟ ರುಚಿ ಬರಲ್ಲ. ಹೊಟ್ಟೆ ಉರಿ, ಕಳೆ ತೆಗೆಯೋಕೆ ಬದುಗಳಿಗೆ ರೌಂಡಪ್ ಹಾಕ್ತಾರೆ. ದನಕರು ತಿನ್ತಾವೆ. ಮಕ್ಕಳು ಮರಿ ತಿನ್ತಾವೆ. ಯಾರಿಗೂ ಕ್ಷೇಮ ಅಲ್ಲ’ ಪುಟ್ಟಶೆಟ್ಟಿ ಮಡದಿಯ ಸಾವಯವ ಕೃಷಿ ಪ್ರಯತ್ನವನ್ನು ಬೆಂಬಲಿಸುತ್ತಾರೆ.

‘ಊರಲ್ಲಿ ಮಾರಿದ್ರೆ ಸೊಪು ಕಂತೆಗೆ 5 ರೂ. ಸಿಗ್ತದೆ. ಮೈಸೂರಲ್ಲಿ ಕಂತೆಗೆ 10 ರೂಪಾಯಿ ಸಿಗ್ತದೆ. ಹೋಗಿ ಬರೋ ಬಸ್ ಚಾರ್ಜ ಗೆ ಹೆಣ್ಮಕ್ಕಳು ದುಡ್ಡು ಕೊಡಬೇಕಿಲ್ಲ. ನಾವು ಬೆಳೆದಿದ್ದನ್ನು ನಾವೇ ಮಾರಿದ್ರೆ ಲಾಭ ಇದೆ’ ಎಂಬುದು ಚಿನ್ನಮ್ಮರ ಮಾತು.

ತರಕಾರಿಗೆ ಬೇಡಿಕೆ ಹೆಚ್ಚಿದ ಪರಿಣಾಮ, ಪಕ್ಕದ ಎರಡು ಎಕರೆಯನ್ನು ಭೋಗ್ಯಕ್ಕೆ ಪಡೆದು ಮೆಣಸಿನ ಕಾಯಿ, ಟೊಮೊಟೊ, ಬದನೆ, ಕ್ಯಾರೆಟ್, ಬೀನ್ಸ್ ಮೊದಲಾದ ತರಕಾರಿಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ. ಇದರೊಂದಿಗೆ ಚೆಂಡು ಹೂ, ಧನಿಯಾವನ್ನೂ ಬೆಳೆಸುತ್ತಾರೆ. ಇವು ಕೀಟಗಳನ್ನು ದೂರವಿರಿಸುತ್ತವೆ. ಚಿನ್ನಮ್ಮ ಬೀಜ ಸಂರಕ್ಷಕಿ ಕೂಡ ಬಿಳಿ ಮುದ್ದುಗ ರಾಗಿ, ಕೆಂಪು ಬೆಂಡೆ ಮೊದಲಾದ ಹತ್ತಾರು ದೇಸಿ ತಳಿಗಳನ್ನು ಸಂರಕ್ಷಿಸುತ್ತಿದ್ದಾರೆ.

ಕಳೆದ ವರ್ಷ, ಜಿಐಜಡ್ ಜರ್ಮನಿ ಗುರುತಿಸಿದ ಭಾರತದ ಹದಿನಾಲ್ಕು ಸಾಧಕ ರೈತ ಮಹಿಳೆಯರ ಪೈಕಿ ಚಿನ್ನಮ್ಮ ಅವರೂ ಒಬ್ಬರು. ಅಂತರಸಂತೆ ಭಾಗದ ಸಾವಯವ ತರಕಾರಿ ಬೆಳೆಗಾರರು ಒಂದಾಗಿ ‘ಹುಲಿಕಾಡು ರೈತ ಉತ್ಪಾದಕರ ಕಂಪೆನಿ’ ರಚಿಸಿಕೊಂಡು ಮಾರುಕಟ್ಟೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಚಿನ್ನಮ್ಮ ಈ ರೈತ ಕಂಪೆನಿಯ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದಾರೆ. ಮೈಸೂರಿನ ಬಿಎಂ ಹ್ಯಾಬಿಟಾಟ್ ಮಾಲ್ ಸಮೀಪದ ‘ನಮ್ಮ ರೈತ ಮಾರುಕಟ್ಟೆ ಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯುವ ‘ರೈತ ಸಂತೆ’ಯಲ್ಲಿ ಚಿನ್ನಮ್ಮ ಸಿಗುತ್ತಾರೆ. ಒಮ್ಮೆ ಭೇಟಿ ಮಾಡಿ, ಬೆಂಗಳೂರಿನ ಅಶೋಕ ಹೋಟೆಲಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೃಷಿ ಮಂತ್ರಿ ಎನ್.ಚಲುವರಾಯ ಸ್ವಾಮಿ ಚಿನ್ನಮ್ಮರನ್ನು ಸನ್ಮಾನಿಸಿದ್ದಾರೆ. ಈ ಸಂದರ್ಭ ದಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರ ಮತ್ತು ಇಂಗ್ಲೀಷ್ ಪುಸ್ತಕದಲ್ಲಿ ಚಿನ್ನಮ್ಮನ ಸಾಧನೆ ದಾಖಲಾಗಿದೆ.

ಚಿನ್ನಮ್ಮನವರ ಸಂಪರ್ಕ ಸಂಖ್ಯೆ: 77603 47617
prasadgk12@gmail.com

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

49 mins ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

51 mins ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

54 mins ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

56 mins ago

ಕೆರೆ ನೀರಿಗಾಗಿ ಎರಡು ಗ್ರಾಮಸ್ಥರ ತಿಕ್ಕಾಟ!

ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ  ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…

1 hour ago

ಅಪಾಯಕಾರಿ ರೈಲ್ವೆ ಅಂಡರ್‌ಪಾಸ್ ಫುಟ್‌ಪಾತ್

ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…

1 hour ago