ಆಂದೋಲನ ಪುರವಣಿ

ಅಂಚೆಯಣ್ಣ ತರುತ್ತಿದ್ದ ಭಾವಗಳ ಹೂಗುಚ್ಛ

ಸೌಮ್ಯ ಕೋಠಿ, ಮೈಸೂರು

ಚಿಕ್ಕವರಿದ್ದಾಗ ಅಂಚೆ ಅಣ್ಣ ‘ಪೋಸ್ಟ್’ ಎಂದು ಕೂಗಿ ಕೊಡುತ್ತಿದ್ದ ಆ ಪತ್ರಗಳ ಮಾತು ನಿಜಕ್ಕೂ ಮಧುರ. ಪತ್ರದ ಆರಂಭದಲ್ಲಿ ತೀರ್ಥರೂಪು ಅಥವಾ ಮಾತೃ ಸ್ವರೂಪಿ ಎಂದು ಆರಂಭಿಸಿ ನಾನು ಕ್ಷೇಮ, ನೀನು ಕ್ಷೇಮವೆಂದು ಭಾವಿಸುವೆ ಎಂದು ಓದುವಾಗ ಪತ್ರ ಬರೆದವರು ಕ್ಷೇಮವಾಗಿದ್ದಾರೆ ಎಂದು ಒಂದು ಸಣ್ಣ ನಿಟ್ಟುಸಿರು.ಅದಕ್ಕಿಂತ ಹೆಚ್ಚಾಗಿ ಪತ್ರವನ್ನು ಕೈಯಲ್ಲಿ ಹಿಡಿದು ಯಾರಿಂದ ಬಂದಿತು ಎಂದು ನೋಡುವ ಆ ಖುಷಿಯ ಅನುಭವವನ್ನು ಸವಿದವರಿಗೇ ಗೊತ್ತು. ಪತ್ರವನ್ನು ಓದುವಾಗ ಸಿಗುತ್ತಿದ್ದ ಆನಂದ ಈಗ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡಿದರೂ ನಿಜಕ್ಕೂ ಸಿಗುವುದಿಲ್ಲ. ಬರೆಯುವ ವ್ಯಕ್ತಿಯ ಎಲ್ಲ ಭಾವನೆಯೂ ಆ ಪತ್ರದಲ್ಲಿ ತುಂಬಿರುತ್ತಿತ್ತು.

ಅದರಲ್ಲೂ ಮಗ ಬರೆದ ಪತ್ರವನ್ನು ತಾಯಿ ಕೈಯಲ್ಲಿ ಹಿಡಿದು ಓದುವಾಗ, ಅಮ್ಮ ನೀನು ಮಾಡುವ ಅಡುಗೆಯ ನೆನಪಾಯಿತು ಎಂಬ ಸಾಲನ್ನು ನೋಡಿದರೆ ಸಾಕು ಅಮ್ಮನ ಕಣ್ಣಂಚಲ್ಲಿ ನೀರು ತುಂಬುತ್ತಿತ್ತು. ತಂಗಿ ಓಡಿ ಬಂದು ನನ್ನ ಬಗ್ಗೆ ಅಣ್ಣ ಏನೂ ಬರೆದಿಲ್ವಾ, ನನ್ನ ಹೆಸರೇ ಬರೆದಿಲ್ಲ ಎಂದು ಗೋಳಾಡುವಾಗ ಕೊನೆಯ ಸಾಲಲ್ಲಿ ತಂಗಿಯ ಹೆಸರು, ತಮ್ಮನ ಹೆಸರು ನೋಡಿ ಅಣ್ಣ ನಮ್ಮನ್ನು ನೆನಪಿಸಿಕೊಂಡ ಎನ್ನುವ ಖುಷಿ ಈಗ ನಮಗೆ ಸಿಗದು. ಅಲ್ಲೇ ಕುಳಿತಿದ್ದ ಅಪ್ಪ, ಏನು ಮಗನ ಪತ್ರ ಬಂದಿದೆ. ಹಣ ಬೇಕಂತ ಏನು? ಅಂತ ದರ್ಪದಿಂದ ಮಾತನಾಡಿದರೂ, ಎಲ್ಲರೂ ಹೋದ ಮೇಲೆ ರಾತ್ರಿ ಮಲಗುವಾಗ ಮಗನ ಪತ್ರವನ್ನು ಓದುತ್ತ ಕಣ್ಣು ನೆನೆಯಲು ಅಮ್ಮ ಸುಮ್ಮನಿರಿ ಸಾಕು ಎಂದು ಬೈಯುತ್ತಿದ್ದಳು.

ಮೂರು ನಾಲ್ಕು ಪುಟದ ಕಾಗದದಲ್ಲಿ ಒಂದು ಚಿಕ್ಕ ಹೆಸರು ಬರೆದಿದ್ದೆ ಎಷ್ಟು ಖುಷಿ ಕೊಡುತ್ತಿತ್ತು ಅಂದರೆ ಆ ಹೆಸರಲ್ಲೇ ಎಲ್ಲ ಭಾವನೆಗಳೂ ಅಡಗಿರುತ್ತಿದ್ದವು. ಕಾಗದದಲ್ಲಿ ಹೆಸರು ಬರೆಯುವಾಗ ಅವರ, ನಮ್ಮ ಸಂಬಂಧ-ಪ್ರೀತಿ ಎಲ್ಲವೂ ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತಿತ್ತು. ಪತ್ರ ಬರೆಯುವಾಗ ಮನೆಯ ಹಿರಿಯ ಸದಸ್ಯರಿಂದ ಹಿಡಿದು ಕಿರಿಯ ಸದಸ್ಯರವರೆಗೆ ಎಲ್ಲರನ್ನೂ ವಿಚಾರಿಸುತ್ತಿದ್ದ ಆ ಪರಿಯೇ ಚೆಂದ. ಇವೆಲ್ಲವುಗಳ ಮಧ್ಯೆ ತಮಾಷೆ ವಿಷಯ ಎಂದರೆ ಎಷ್ಟೋ ಬಾರಿ ಊರಿನಿಂದ ಅಮ್ಮ ನಾನು ರಜಕ್ಕೆ ಮನೆಗೆ ಬರುತ್ತಿದ್ದೇನೆ ಎಂದು ಮಗ ಬರೆದ ಪತ್ರವು ಮಗ ಮನೆಗೆ ಬಂದು ಅವನೇ ಆ ಪತ್ರ ಹಿಡಿದು ಓದುತ್ತಿದ್ದ ಸಂದರ್ಭಗಳು ಹಾಸ್ಯಮಯವಾಗಿರುತ್ತಿತ್ತು.

ಎಷ್ಟೋ ಬಾರಿ ಹೆಣ್ಣು ಮಕ್ಕಳು ಅವರ ಯೋಗಕ್ಷೇಮವನ್ನು ತಿಳಿಸಲು ತಂದೆ ತಾಯಿಗೆ ಕದ್ದು ಮುಚ್ಚಿ ಪತ್ರವನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಬಾರಿ ನಮಗೆ ಬಂದ ಪತ್ರವನ್ನು ಕೊಡದೆ ದೂರವನ್ನು ಹೆಚ್ಚು ಮಾಡಿದ ಸಂದರ್ಭಗಳೂ ಇವೆ. ಬರೆದ ಪತ್ರಗಳೇ ಕೈ ಸೇರುತ್ತಿರಲಿಲ್ಲ. ಅದರಿಂದಾಗಿ ಎಷ್ಟೋ ಸಂಬಂಧಗಳು ಮುರಿದುಬಿದ್ದ ಉದಾಹರಣೆಗಳಿವೆ. ಅದರಲ್ಲೂ ಆಷಾಢಕ್ಕೆ ಬಂದ ಮಗಳನ್ನು ನೆನೆದು ಅಳಿಯ ಬರೆಯುತ್ತಿದ್ದ ಪತ್ರಗಳು, ಅದನ್ನು ಮಗಳು ಕದ್ದು ಮುಚ್ಚಿ ಓದುತ್ತಿದ್ದ ಪರಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ.

ಎಷ್ಟೋ ಬಾರಿ ಮಗನಿಂದ ಪತ್ರ ಬಾರದೆ ಇದ್ದಾಗ ಅಮ್ಮ ಅಂಚೆ ಅಣ್ಣನನ್ನು ಅಣ್ಣ ಪತ್ರ ಬಂತಾ ಅಂತ ಕೇಳಿದಾಗ ಅಂಚೆ ಅಣ್ಣ ಬೈದದ್ದೂ ಉಂಟು. ಆತ ಯಾರಿಗೂ ನೆಂಟನಲ್ಲದಿದ್ದರೂ ಎಲ್ಲರ ಮನೆಯ ಸದಸ್ಯನಾಗಿದ್ದ. ಅಷ್ಟೇ ಅಲ್ಲದೆ ಎಷ್ಟೋ ಜನರಿಗೆ ಓದಲು ಬಾರದೆ ಇದ್ದಾಗ ಆ ಪತ್ರವನ್ನು ತಾನೇ ಓದಿ ಹೇಳುತ್ತಿದ್ದ. ಪತ್ರಗಳ ಬಗ್ಗೆ ಮಾತನಾಡುವಾಗ ಪ್ರೇಮ ಪತ್ರದ ಬಗ್ಗೆ ಮಾತನಾಡದಿದ್ದರೆ ಹೇಗೆ? ಅದನ್ನು ಬರೆದವರಿಗೇ ಗೊತ್ತು ಅದರ ಸವಿ ಹಾಗೂ ಓದಿದವರಿಗೇ ಗೊತ್ತು ಅದರ ಸಿಹಿ. ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ… ಎನ್ನುವ ಹಾಡು ಈಗಲೂ ಕಿವಿಯಲ್ಲಿ ಗುಂಯ್ ಗುಟ್ಟುತ್ತದೆ. ಆ ಪ್ರೇಮ ಭಾವನೆಗಳನ್ನು ಈಗಿನ ಪ್ರೇಮಿಗಳು ನಿಜಕ್ಕೂ ಕಳೆದುಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈಗಲೂ ಎಷ್ಟೋ ಮನೆಗಳಲ್ಲಿ ಆ ಎಲ್ಲಾ ಪ್ರೇಮ ಪತ್ರಗಳು ಜೋಪಾನವಾಗಿವೆ. ಅದನ್ನು ಈಗ ಓದಿದರೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಹಾಗೆ ಅದರ ಸವಿ ಈಗಲೂ ಅಷ್ಟೇ ಇದ್ದು, ಇನ್ನೂ ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ.

ಆದರೆ ಈಗಿನ ಮಕ್ಕಳು ಹಾಯ್, ಹಲೋದಲ್ಲೇ ಎಲ್ಲಾ ಮಾತನ್ನು ಮುಗಿಸಿಬಿಡುತ್ತಾರೆ. ಪುಟಗಟ್ಟಲೆ ಪತ್ರವೂ ಇಲ್ಲ; ಗಂಟೆಗಟ್ಟಲೆ ಮಾತೂ ಇಲ್ಲ. ಆ ಪತ್ರದ ಒಂದೊಂದು ಪದವೂ ನಮ್ಮೊಂದಿಗೆ ಮಾತನಾಡುತ್ತಿದ್ದವು ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ಭಾವನೆಗಳ ಆಗರ ಆ ಪತ್ರವಾಗಿತ್ತು. ಪತ್ರ ಬರೆಯುವಾಗಲೂ ನಗು, ಅಳು ಸೇರಿದಂತೆ ಎಲ್ಲಾ ಭಾವನೆಗಳನ್ನು ಆ ಪತ್ರ ಹೊಂದಿರುತ್ತಿತ್ತು. ನನಗೆ ಈಗಲೂ ನೆನಪಿದೆ. ನಾನು ಪತ್ರ ಬರೆಯುವಾಗ ನಾನು ಅಳುತ್ತಾ ಈ ಪತ್ರ ಬರೆಯುತ್ತಿದ್ದೇನೆ ಎಂದು ಬರೆದ ಸಾಲುಗಳು. ಈಗ ಅದನ್ನು ಓದಿದರೆ ನಗು ಬರುತ್ತದೆ. ನಿಮ್ಮ ಬಳಿಯೂ ಆ ನೆನಪಿನ ಖಜಾನೆ ಇದ್ದರೆ ದಯಮಾಡಿ ಇಂದೇ ಅದನ್ನು ಹುಡುಕಿ ಓದಿ. ಈಗಿನ ಪೀಳಿಗೆಗೆ ಪತ್ರದ ರುಚಿ ಗೊತ್ತಿಲ್ಲ ಅಂದರೆ ತಪ್ಪಾಗುವುದಿಲ್ಲ. ಹಾಗಾಗಿ ನಿಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆಯಿರಿ. ನಿಮ್ಮ ಸ್ನೇಹಿತರೊಂದಿಗೆ ಪತ್ರದಲ್ಲಿ ಮಾತನಾಡಿ ನೋಡಿ, ಬಹಳ ಚೆನ್ನಾಗಿರುತ್ತೆ.

ಆಂದೋಲನ ಡೆಸ್ಕ್

Recent Posts

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆ ದರೋಡೆ; ಆರೋಪಿ ಬಂಧನ

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…

8 hours ago

ಮಹದೇಶ್ವರ ಬೆಟ್ಟ : ವಿವಿಧ ಸೇವೆಗಳಿಂದ 1.16 ಕೋಟಿ ಸಂಗ್ರಹ

ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ…

9 hours ago

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…

9 hours ago

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…

10 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ; ಪ್ರತಿಭಟನೆ

ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…

10 hours ago

2 ಸಾವಿರ ಬೋಧಕ ಹುದ್ದೆಗಳಿಗೆ ನೇಮಕಾತಿ : ಉನ್ನತ ಶಿಕ್ಷಣ ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…

10 hours ago