• ಸಿ.ಎಂ.ಸುಗಂಧರಾಜು
ಕೇರಿಯೊಳಗಿನ ಅಜ್ಜ ಅಜ್ಜಿಯ ಪರಸಂಗ, ಒಗಟುಗಳು, ಕಥೆ, ಗಾದೆಗಳು ಈಗ ಕಣ್ಮರೆಯಾಗುತ್ತಿವೆ. ಬಹುಪಾಲು ಮಕ್ಕಳು ತಮ್ಮ ಬಾಲ್ಯವನ್ನು ಅಜ್ಜ ಅಜ್ಜಿಯರೊಂದಿಗೆ ಕಳೆಯದಿರುವುದೇ ಇವುಗಳು ಪ್ರಸ್ತುತದ ಪೀಳಿಗೆಯಿಂದ ದೂರಾಗಲು ಕಾರಣ.
ನಾವು ಸಣ್ಣವರಿದ್ದಾಗ ನಮ್ಮ ತಾತ ಪರಸಂಗ ಹೇಳುತ್ತಾನೆ ಎಂದು ಬೇಗ ಊಟ ಮುಗಿಸಿ ಮನೆಯ ಮುಂದಿನ ಜಗಲಿಕಟ್ಟೆಯ ಮೇಲೆ ಇಲ್ಲವೇ ಅಂಗಳದಲ್ಲಿ ಚಾಪೆ ಹಾಸಿಕೊಂಡು ತಯಾರಾಗಿ ಕುಳಿತಿರುತ್ತಿದ್ದೆವು. ಊಟ ಮುಗಿಸಿಬಂದ ತಾತ ಪರಸಂಗ ಹೇಳಲು ಆರಂಭಿಸಿದ ಅಂದರೆ ನಮಗೆಲ್ಲ ನಗು ಆರಂಭವಾಗುತ್ತಿತ್ತು.
ತಾತನ ಹಾಸ್ಯಭರಿತ ಕಥೆಗಳನ್ನು ಕೇಳಿಕೊಂಡು ನಿದ್ದೆಗೆ ಜಾರುತ್ತಿದ್ದೆವು. ಇವುಗಳೊಟ್ಟಿಗೆ ಒಂದಿಷ್ಟು ನೀತಿ ಕಥೆಗಳು, ಗಾದೆಗಳು ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ನಮ್ಮನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡಿದವು ಎಂದರೆ ತಪಾಗಲಾರದು.
ಇವೆಲ್ಲದರ ನಡುವೆ ನಮಗೆ ಕೆಲವೊಂದಿಷ್ಟು ಪರೀಕ್ಷೆಗಳನ್ನು ನಮ್ಮ ಮುಂದೆ ತಾತ ಇಡುತ್ತಿದ್ದ. ಕೆಲವೊಂದಿಷ್ಟು ಒಗಟುಗಳನ್ನು ಹೇಳಿ ಅವುಗಳನ್ನು ಬಿಡಿಸಿ ಎನ್ನುವುದು ನಮ್ಮ ತಾತನ ಚಾಳಿ ಎಂದೇ ಹೇಳಬೇಕು. ಕೇಳಿದ ಒಗಟನ್ನು ಮರುದಿನದವರೆಗೆ ಸಮಯ ತೆಗೆದುಕೊಂಡು ಬಿಡಿಸಬೇಕಿತ್ತು ನಾವು. ಬಹುಶಃ ಹಾಗೆಲ್ಲ ಮೊಬೈಲ್ ಗೀಳು ಇಲ್ಲದಿರುವುದೇ ನಾವು ನಮ್ಮ ಬಾಲ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಸಾಧ್ಯವಾಯಿತು ಎನ್ನಬಹುದು.
ಈಗ ಅಜ್ಜ-ಅಜ್ಜಿ ಹಳ್ಳಿಯಲ್ಲಿದ್ದರೆ, ಮೊಮ್ಮಕ್ಕಳು ನಗರಗಳಲ್ಲಿದ್ದಾರೆ. ಒಂದು ವೇಳೆ ಅವರೂ ಮೊಮ್ಮಕ್ಕಳೊಂದಿಗೆ ಒಂದೇ ಮನೆಯಲ್ಲಿದ್ದರೂ ಮೊಬೈಲ್ ಗೀಳಿಗೆ ಅಂಟಿಕೊಂಡು ಮೊಮ್ಮಕ್ಕಳು ಅಜ್ಜ-ಅಜ್ಜಿಯರೊಟ್ಟಿಗೆ ಸಮಯ ಕಳೆಯುತ್ತಿಲ್ಲ. ಇದು ಪ್ರಸ್ತುತ ಪೀಳಿಗೆಯ ವಿಪರ್ಯಾಸ.
ವರ್ಷಕ್ಕೆ ಒಂದು ಬಾರಿ ತಾತ ಊರಿನ ಜನರೊಂದಿಗೆ ಭತ್ತದ ಕೊಯ್ಲಿಗೆ ಹೋಗುತ್ತಿದ್ದಾಗ ನಾವೂ ಅವರೊಟ್ಟಿಗೆ ಹೋಗುತ್ತಿದ್ದೆವು. ಅವರೆಲ್ಲ ಕೆಲಸ ಮುಗಿಸಿ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ಊರಿಗೆ ಊರೇ ಕಿತ್ತು ತಿನ್ನುವ ಬಡತನದಲ್ಲಿದ್ದರೂ, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದ್ದರೂ ಅಲ್ಲಿ ಹಂಚಿ ಉಣ್ಣುವ ಬಾಂಧ್ಯವಕ್ಕೇನೂ ಕೊರತೆ ಇರುತ್ತಿರಲಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಗೇಯ್ದ ಭತ್ತವನ್ನು ಹಂಚಿಕೊಳ್ಳುತ್ತಿದ್ದರು. ಬೆವರು ಸುರಿಸಿ ತಂದ ಅನ್ನದ ಕೂಳನ್ನು ಮಕ್ಕಳಿಗೆಲ್ಲಾ ಹಂಚಿ ತಾವೂ ತಿನ್ನುತ್ತಿದ್ದರು. ಇವೆಲ್ಲ ನಮಗೆ ಒಂದೊಂದು ಜೀವನದ ಪಾಠವನ್ನು ಕಲಿಸಿವೆ. ಒಟ್ಟಿಗೆ ಉಂಡು, ಒಟ್ಟಿಗೆ ಬೆಳೆದ ನಮ್ಮ ಗೆಳೆಯರೆಲ್ಲ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಹಬಾಳ್ವೆ ನಡೆಸಲು ನಮಗೆ ಹಿರಿಯೊಂದಿಗೆ ಬೆರೆತು ಕಲಿತ ಪಾಠವೇ ಬುನಾದಿಯಾಗಿವೆ.
ತಾತ ಕಥೆ, ಗಾದೆ, ಪರಸಂಗ ಹೇಳಿದ್ದು ಮಾತ್ರವಲ್ಲ ಅದರೊಟ್ಟಿಗೆ ಬಾಡಿಗೆ ಸೈಕಲ್ ಪಡೆದು ಊರೂರು ಸುತ್ತಿಸಿದ್ದು, ಅಜ್ಜಿಯೊಂದಿಗೆ ಸೇರಿ ಕೈತುತ್ತು ತಿನಿಸಿದ್ದು, ಎಂತಹದ್ದೇ ಸಮಸ್ಯೆ ಎದುರಾದರೂ ಮೊಮ್ಮಕ್ಕಳ ಮುಂದೆ ತೋರಿಸಿಕೊಳ್ಳದೆ ನಮ್ಮನ್ನು ಜೋಪಾನ ಮಾಡಿ ಬೆಳೆಸಿದ ತಾತನನ್ನು ಮರೆಯಲಾಗದು.
ಈಗ ಕುಳಿತು ಕಥೆ ಕೇಳಲು ಮನೆಯ ಮುಂದೆ ಜಗುಲಿಗಳಿಲ್ಲ. ಅಂಗಳ ಈಗ ರಸ್ತೆಯಾಗಿ ವಾಹನ ಸಂಚಾರದಿಂದ ತುಂಬಿದೆ. ಕೈಯಲ್ಲಿ ಮೊಬೈಲ್ ಹಿಡಿದ ಎಲ್ಲರೂ ಅವರವರ ಲೋಕದಲ್ಲಿ ಮುಳುಗಿದ್ದಾರೆ. ಈ ಕಾಲಘಟದಲ್ಲಿ ಅಜ್ಜ ಅಜ್ಜಿಯರ ಪರಸಂಗವಿಲ್ಲ, ಒಗಟುಗಳಿಲ್ಲ, ಕಥೆಗಳಿಲ್ಲ, ಗಾದೆಯ ಮಾತುಗಳಂತೂ ಈ ಪೀಳಿಗೆ ಕೇಳಿರುವ, ಕೇಳಿಸಿಕೊಳ್ಳುವ ಉದಾಹರಣೆಗಳಿಲ್ಲ. ಇದು ಪ್ರಸ್ತುತ ಪೀಳಿಗೆಯ ದೌರ್ಭಾಗ್ಯವೇ ಸರಿ.
ಮಾಸ್ಕೋ: ಉಕ್ರೇನ್ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಈ ವೈಮಾನಿಕ…
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…
ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್ಪಿಜಿಯನ್ನು ಹೊತ್ತ…