ಬೇಸಿಗೆ ಕಾರಣ ಗ್ರಾಮಮಟ್ಟದ ಸಿಮೆಂಟ್ ತೊಟ್ಟಿಗಳಿಗೆ ನೀರು ತುಂಬಿಸಲು ಜಿಲ್ಲಾಧಿಕಾರಿ, ಸಿಇಒ ಸೂಚನೆ
ಚಾಮರಾಜನಗರ: ಬೇಸಿಗೆಯ ಈ ದಿನಗಳಲ್ಲಿ ಜಾನುವಾರುಗಳಿಗೆ ಆದಷ್ಟು ಕುಡಿಯುವ ನೀರು ಲಭ್ಯವಾಗುವಂತೆ ಗ್ರಾಮಮಟ್ಟದಲ್ಲಿರುವ ಸಿಮೆಂಟ್ ತೊಟ್ಟಿಗಳಲ್ಲಿ ನೀರು ತುಂಬಿಸಲು; ತಾಪಮಾನದ ಕಾರಣಕ್ಕೆ ಯಾವುದೇ ಕ್ಷಣ ತಲೆದೋರ ಬಹುದಾದ ಚರ್ಮಗಂಟು ರೋಗ, ಕಾಲು ಬಾಯಿ ಜ್ವರ ತಡೆಯಲು ಸದ್ಯದಲ್ಲೇ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.
ಕಳೆದ ಗಣತಿ ಪ್ರಕಾರ ಜಿಲ್ಲೆಯಲ್ಲಿ ೨.೨೦ ಲಕ್ಷ ದನಕರು, ಸುಮಾರು ೨.೯೦ ಲಕ್ಷ ಕುರಿ, ಮೇಕೆಗಳಿದ್ದು ಕುಡಿಯುವ ನೀರು ಹಾಗೂ ಸತ್ವಯುತ ಮೇವಿನ ಕೊರತೆಯಿಂದ ಬೇಸಿಗೆಯ ಈ ದಿನಗಳಲ್ಲಿ ಇವುಗಳಿಗೆ ವಿವಿಧ ರೋಗಗಳು ಬಾಧಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ದಶಕಗಳ ಹಿಂದೆಯೇ ಗ್ರಾಮಗಳಲ್ಲಿ ನಿರ್ಮಿಸಿರುವ ಸಿಮೆಂಟ್ ತೊಟ್ಟಿಗಳಿಗೆ ಕಡ್ಡಾಯವಾಗಿ ದಿನಾಲೂ ನೀರು ತುಂಬಿಸಿ ಜಾನುವಾರುಗಳಿಗೆ ಕುಡಿಯಲು ನೀರು ಲಭ್ಯ ಆಗುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ಆಯಾ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳಿಗೆ ಪಶುಪಾಲನಾ ಇಲಾಖೆ ಕೋರಿಕೆ ಮೇರೆಗೆ ಈಗಾಗಲೇ ಸೂಚನೆ ನೀಡಿದ್ದಾರೆ.
೩ ಅಡಿ ಎತ್ತರ, ೬ರಿಂದ ೭ಅಡಿ ಉದ್ದದ ಈ ನೀರಿನ ತೊಟ್ಟಿಗಳಲ್ಲಿ ಒಮ್ಮೆಗೆ ನೀರು ತುಂಬಿದರೆ ಆರೇಳು ದಿನಗಳು ಉಪಯೋಗಿಸಬಹುದು. ಇಂತಹ ಸಿಮೆಂಟ್ ತೊಟ್ಟಿಗಳು, ನೀರಾವರಿ ವ್ಯವಸ್ಥೆ ಇರುವ ಕಡೆ ಹೊರತುಪಡಿಸಿ ಉಳಿದಂತೆ ಬಹುತೇಕ ಕಡೆ ಊರ ಹೊರವಲಯದಲ್ಲಿದ್ದು, ಎಲ್ಲಿಯಾದರೂ ನೀರು ಸಂಗ್ರಹ ಆಗದೇ ಇದ್ದರೆ ಇಲಾಖೆ ಗಮನಕ್ಕೆ ತರುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಏಪ್ರಿಲ್ ಮೂರನೇ ವಾರ ಕಾಲುಬಾಯಿ ಜ್ವರ ತಡೆ ಲಸಿಕೆ ನೀಡಲು, ಅದೇ ವೇಳೆ ಅಥವಾ ೧೦ ದಿನಗಳ ಅಂತರದಲ್ಲಿ ಚರ್ಮಗಂಟು ರೋಗ ತಡೆ ಲಸಿಕೆ ಹಾಕಲು ಅದಕ್ಕೆ ಬೇಕಾದ ಲಸಿಕೆಗಳನ್ನು ಸಂಗ್ರಹಿಸಿ ಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೇಸಿಗೆಯ ನಡುವೆಯೂ ಮುಂದಿನ ೧೮ವಾರಗಳಿಗೆ ಆಗುವಷ್ಟು ಮೇವು ಜಿಲ್ಲೆಯಲ್ಲಿ ಲಭ್ಯ ಇರುವುದಾಗಿ ಪಶು ಇಲಾಖೆ ವರದಿ ಹೇಳುತ್ತದೆ. ನೀರಾವರಿ ವ್ಯವಸ್ಥೆಯಲ್ಲಿ ಬೆಳೆದಿರುವ, ದೊಡ್ಡ ದೊಡ್ಡ ರೈತರು ಸಂಗ್ರಹ ಮಾಡಿಕೊಂಡಿರುವ ಮೇವನ್ನು ಆಧರಿಸಿ ಈ ವರದಿ ನೀಡಲಾಗಿದೆ. ಆದರೆ, ವಾಸ್ತವ ಪರಿಸ್ಥಿತಿ ಇಲಾಖೆ ನೀಡಿರುವ ವರದಿಯಂತಿಲ್ಲ!
ಮಳೆ ಆಶ್ರಿತ ರೈತರು,ಜಮೀನೇ ಇಲ್ಲದೇ ಹೈನುಗಾರಿಕೆ ಮಾಡುವವರು ತಮ್ಮ ದನಕರು ಸಾಕಲು ಬಹಳ ಕಷ್ಟ ಪಡುತ್ತಿದ್ದಾರೆ. ಮೇವು ಖರೀದಿಸಿ ಹೇಗೋ ಸಾಕಾಣಿಕೆ ಮಾಡುತ್ತಿದ್ದು, ಇಂತಹ ರೈತರು ಮಳೆ ಬೇಡುತ್ತಿದ್ದು ಪದೇ ಪದೇ ಮಳೆಯಾದರೆ ಬಯಲು ಮೇವು ಹುಟ್ಟುತ್ತದೆ. ಇದರಿಂದ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂಬುದು ಗೋಪಾಲಕರ ಅನಿಸಿಕೆ.
ಹೆಣ್ಣು ಕರುಗಳಿಗೆ ಮಾತ್ರ ಲಸಿಕೆ; ೧೫ಸಾವಿರ ಪತ್ತೆ ಬ್ರುಸೆಲ್ಲಾ ರೋಗದಿಂದ ಹೆಣ್ಣು ಕರುಗಳಲ್ಲಿ ಗರ್ಭಪಾತ ಮತ್ತು ಬಂಜೆತನ ಸಂಭವಿಸುತ್ತದೆ. ಇದರ ತಡೆಗೆ ೪ ರಿಂದ ೮ ತಿಂಗಳ ವಯಸ್ಸಿನ ಹೆಣ್ಣು ಕರುಗಳಿಗೆ ಬ್ರುಸೆಲ್ಲಾ ಲಸಿಕೆಯನ್ನು ವರ್ಷದಲ್ಲಿ ಮೂರು ಬಾರಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ೧೫ಸಾವಿರ ಹೆಣ್ಣು ಕರುಗಳಿಗೆ ಈ ಲಸಿಕೆ ಕೊಡಲಾಗಿದ್ದು ಇನ್ನು ೩ ತಿಂಗಳಲ್ಲಿ ಮತ್ತೆ ಈ ಲಸಿಕೆ ಕಾರ್ಯ ಶುರುವಾಗಲಿದೆ. ಈ ರೋಗ ಮನುಷ್ಯರಿಗೂ ಬರಬಹುದಾದ್ದರಿಂದ ಪ್ರತಿ ವರ್ಷ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಪಶು ಇಲಾಖೆ ಉಪನಿರ್ದೇಶಕರು ತಿಳಿಸಿದರು.
ಹಂದಿ ಜ್ವರ ಲಸಿಕೆ ಇನ್ನೂ ೧ ವಾರ ವಿಸ್ತರಣೆ:
ಹಂದಿ ಜ್ವರದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮ ಸೋಮವಾರ (ಮಾ.೩೦) ಮುಗಿದಿದ್ದು ಇನ್ನೂ ಒಂದುವಾರ ಇದನ್ನು ವಿಸ್ತರಣೆ ಮಾಡಿದ್ದು ಬಿಟ್ಟು ಹೋಗಿದ್ದರೆ ತಿಳಿದು ಲಸಿಕೆ ಹಾಕಲಾಗುತ್ತದೆ. ಮಾ.೧೬ರಿಂದ ಲಸಿಕೆ ನೀಡಲಾಗುತ್ತಿದ್ದು ಮಾ.೩೦ರ ತನಕ ಜಿಲ್ಲೆಯಲ್ಲಿ ೨,೫೦೦ ಹಂದಿಗಳಿಗೆ ಲಸಿಕೆ ನೀಡಲಾಗಿದೆ. ಹಂದಿಯಿಂದ ಮನುಷ್ಯರಿಗೂ ಜ್ವರ ಬರುವ ಅಪಾಯ ಅರಿತು ಬಿಟ್ಟು ಹೋಗಿರುವ ಹಂದಿಗಳಿಗೆ ನೀಡಲು ಲಸಿಕೆ ಹಾಕುವ ಅವಧಿ ವಿಸ್ತರಣೆ ಮಾಡಲಾಗಿದೆ. ಹಂದಿಗಳಿಗೆ ಲಸಿಕೆ ನೀಡುವುದು ಸವಾಲಿನ ಕೆಲಸ. ಕೆಲವೊಂದು ಕಡೆ ಹಂದಿ ಮಾಲೀಕರಿಗೇ ತರಬೇತಿ ನೀಡಿ ಅವರ ನೆರವಿನೊಂದಿಗೆ ಲಸಿಕೆ ಹಾಕಲಾಗುತ್ತಿದೆ.
” ಜಾನುವಾರುಗಳಿಗೆ ನೀರು, ನೆರಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಿಸಿಲು ಜಾಸ್ತಿ ಇದ್ದಾಗ ಬಯಲಿಗೆ ಬಿಡಬಾರದು. ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ತಪ್ಪದೇ ಲಸಿಕೆ ಹಾಕಿಸಬೇಕು.”
ಡಾ.ಮಂಜುನಾಥ್, ಉಪನಿರ್ದೇಶಕರು, ಪಶುಪಾಲನಾ ಇಲಾಖೆ
ಹನೂರು : ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹನೂರು…
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ…
ಬೆಂಗಳೂರು: ಎಲ್ಲಾ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು,…
ಬೆಂಗಳೂರು: ಬೇಸಿಗೆಯ ಉಷ್ಣತೆ ಹೆಚ್ಚಾದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಅಂತರರಾಜ್ಯ ಪಾಲಾರ್ ಚೆಕ್ಪೋಸ್ಟ್ನಲ್ಲಿ ಒಂಟಿ ಸಲಗದ ದಾಂಧಲೆಗೆ ಅರಣ್ಯ…
ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಎಂದು…