Andolana originals

ಯುದ್ಧ: ಕಟ್ಟಡ ನಿರ್ಮಾಣ ವಲಯಕ್ಕೆ ಬೆಲೆ ಏರಿಕೆಯ ಬಿಸಿ

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜನಸಾಮಾನ್ಯರಿಗೆ ನಿತ್ಯ ಒಂದಲ್ಲಾ ಒಂದು ಬಿಸಿ ತಟ್ಟುತ್ತಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳ ಇದೀಗ ಸ್ವಂತ ಮನೆ ನಿರ್ಮಿಸುವ ಕನಸಿಗೆ ಬರೆ ಎಳೆಯುತ್ತಿದೆ.

ಯುದ್ಧದ ಪರಿಣಾಮದಿಂದ ಟೈಲ್ಸ್ ಉದ್ಯಮಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಪೂರೈಕೆಯಾಗದ ಜೊತೆಗೆ ಎಲ್‌ಪಿಜಿ ಅನಿಲ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಹೊಡೆತ ಬಿದ್ದಿದೆ. ಯುದ್ಧ ಆರಂಭಕ್ಕೂ ಮುಂಚಿನ ದಿನಗಳಲ್ಲಿ ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ ಸೇರಿ ಎಲ್ಲಾ ವಸ್ತುಗಳ ಬೆಲೆಯೂ ಬಹುತೇಕ ಹೆಚ್ಚಾಗಿದೆ. ಅದರಲ್ಲೂ ಕೇವಲ ಒಂದು ತಿಂಗಳ ಅವಧಿಯಲ್ಲಿ ಶೇ.೧೦ ರಿಂದ ೨೦ರಷ್ಟು ದರ ಏರಿಕೆಯಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ.

ಹಲವಾರು ವರ್ಷಗಳಿಂದ ಕೂಡಿಟ್ಟಿರುವ ಹಣ, ಕೈ ಸಾಲ, ಬ್ಯಾಂಕ್ ಸಾಲ ಎಲ್ಲವನ್ನು ಲೆಕ್ಕಾಚಾರ ಮಾಡಿ ಮನೆ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡು, ಪಾಯ ತೊಡಿಸಿದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಕಟ್ಟುವ ಕನಸು ಕಂಡವರಿಗೆ ಬೆಲೆ ಏರಿಕೆ ದುಸ್ವಪ್ನವಾಗಿ ಕಾಡುತ್ತಿದೆ. ಇನ್ನೂ ಕೆಲವರು ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ಸ್ಥಗಿತಗೊಳಿಸಿ ಮುಂದೆ ನೋಡೋಣ ಎನ್ನುವ ಹಂತಕ್ಕೂ ತಲುಪಿದ್ದಾರೆ.

ಗ್ಯಾಸ್ ಕೊರತೆ ಟೈಲ್ಸ್ ಉದ್ಯಮಕ್ಕೆ ಹೊಡೆತ: ಟೈಲ್ಸ್ ತಯಾರಿಕೆಯಲ್ಲಿ ಎಲ್‌ಪಿಜಿ ಅನಿಲ ಪ್ರಮುಖ ಪಾತ್ರ ವಹಿಸುತ್ತಿದ್ದು, ಯುದ್ಧದ ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯವಾಗಿದೆ. ಇದರ ಪರಿಣಾಮವಾಗಿ ಉತ್ಪಾದನೆ ಕುಸಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಟೈಲ್ಸ್ ದರ ಏರಿಕೆಗೆ ಕಾರಣವಾಗಿದೆ. ಒಂದು ಚದರ ಅಡಿಗೆ ೫೫ ರೂ.ಇದ್ದ ಟೈಲ್ಸ್ ಈಗ ೬೫ರೂ.ಗಳಿಗೆ ಏರಿಕೆಯಾಗಿದೆ. ಕಟ್ಟಡ ಸಾಮಗ್ರಿಗಳ ದರ ಏರಿಕೆಯ ಪರಿಣಾಮ ರಿಯಲ್ ಎಸ್ಟೇಟ್ ವಲಯವೂ ಸಂಕಷ್ಟಕ್ಕೆ ಸಿಲುಕಿದೆ. ನಿರ್ಮಾಣ ವೆಚ್ಚ ಏರಿಕೆಯಿಂದಾಗಿ ಡೆವಲಪರ್‌ಗಳು ಹೊಸ ಯೋಜನೆಗಳನ್ನು ಆರಂಭಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಅಂದಾಜು ಮಾಡಿದ ಬಜೆಟ್‌ನಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದೇ, ಹಲವಾರು ಪ್ರಾಜೆಕ್ಟ್‌ಗಳು ವಿಳಂಬವಾಗುತ್ತಿವೆ. ಇದರಿಂದ ಮನೆ ಖರೀದಿದಾರರು ಕೂಡ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದಲ್ಲದೆ, ನಿರ್ಮಾಣ ವೆಚ್ಚ ಹೆಚ್ಚಾದ ಕಾರಣ ಮನೆಗಳ ಬೆಲೆಯನ್ನೂ ಹೆಚ್ಚಿಸಬೇಕಾದ ಪರಿಸ್ಥಿತಿ ನಿರ್ಮಾ ಣವಾಗಿದೆ. ಆದರೆ, ಬೆಲೆ ಏರಿಕೆಯಾದರೆ ಖರೀದಿದಾರರು ಕಡಿಮೆಯಾಗುವ ಭೀತಿ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕಾಡುತ್ತಿದೆ.

ನಿರ್ಮಾಣ ವೆಚ್ಚದಲ್ಲಿ ಭಾರೀ ಏರಿಕೆ: ಕಟ್ಟಡ ನಿರ್ಮಾಣದ ಮೂಲವಾದ ಕಬ್ಬಿಣದ ದರವೂ ನಿರಂತರವಾಗಿ ಏರಿಕೆಯಾಗುತ್ತಿದೆ. ಹಿಂದೆ ಕೆಜಿಗೆ ೫೮ ರೂ. ಇದ್ದ ದರ ಈಗ ೬೮ರೂ.ಗಳಿಗೆ ಏರಿಕೆಯಾಗಿದೆ. ಯುದ್ಧಕ್ಕೂ ಮುನ್ನ ಟನ್‌ಗೆ ೫೮-೫೯ ಸಾವಿರ ರೂ.ಇದ್ದ ಕಬ್ಬಿಣ ಈಗ ೬೧-೬೨ ಸಾವಿರ ರೂ.ಗೆ ಏರಿಕೆಯಾಗಿದೆ. ಇದು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.

ಸುಡುತ್ತಿರುವ ಸಿಮೆಂಟ್: ಸಿಮೆಂಟ್ ಬೆಲೆಯಲ್ಲಿಯೂ ಏರಿಕೆ ಮುಂದುವರಿದಿದೆ. ೫೦ ಕೆಜಿ ಚೀಲಕ್ಕೆ ಈಗಾಗಲೇ ೧೫-೨೦ ರೂ.ಹೆಚ್ಚಳವಾಗಿದ್ದು, ಶೀಘ್ರದಲ್ಲೇ ೪೦ ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಸಿಮೆಂಟ್ ದರವು ೩೮೦ ರೂ. ರವರೆಗೆ ಏರಬಹುದು ಎಂಬ ಅಂದಾಜು ವ್ಯಕ್ತವಾಗಿದೆ.

ಇಟ್ಟಿಗೆ ದರ ನಿಧಾನವಾಗಿ ಏರಿಕೆ: ಮಣ್ಣಿನ ಇಟ್ಟಿಗೆಗಳ ದರವೂ ನಿಧಾನವಾಗಿ ಏರಿಕೆಯಾಗುತ್ತಿದ್ದು, ೮ ರೂ. ಇದ್ದದ್ದು ಈಗ ೯ ರಿಂದ ೯.೫೦ ರೂ.ರವರೆಗೆ ಮಾರಾಟವಾಗುತ್ತಿದೆ. ಹಾಲೋಬ್ರಿಕ್ಸ್‌ಗಳು ಈಗಾಗಲೇ ಸಂಗ್ರಹಣೆಯಲ್ಲಿ ಇರುವುದರಿಂದ ಹಳೆಯ ದರದಲ್ಲೇ ಲಭ್ಯವಿದ್ದರೂ, ಮುಂದಿನ ದಿನಗಳಲ್ಲಿ ದರ ಏರಿಕೆ ಅನಿವಾರ್ಯವಾಗಿದೆ. ಈಗ ಆರು ಇಂಚಿನ ಇಟ್ಟಿಗೆ ೩೫ ರೂ.ಇದ್ದು, ನಾಲ್ಕು ಇಂಚಿನ ಇಟ್ಟಿಗೆಗೆ ೨೫ ರೂ. ಸಿಮೆಂಟ್ ದರ ಹೆಚ್ಚಳವಾದ ಬಳಿಕ ಒಂದು ಇಟ್ಟಿಗೆ ೨ ರಿಂದ ೩ ರೂ.ರವರೆಗೆ ದರ ಹೆಚ್ಚಳವಾಗಲಿದೆ. ಸಿಮೆಂಟ್ ಹೆಚ್ಚಳವೇ ಇದಕ್ಕೆ ನೇರ ಕಾರಣವಾಗಲಿದೆ.

ಸಂಗ್ರಹಣೆಯ ಆತಂಕ: ಮಾರುಕಟ್ಟೆಯಲ್ಲಿ ಕೃತಕ ಕೊರತೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವ್ಯಾಪಾರಿ ಗಳು ಮುಂಚಿತವಾಗಿ ಸಂಗ್ರಹಣೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಉಂಟಾಗಿದೆ.

” ಯುದ್ಧದ ಪರಿಣಾಮ ನೇರವಾಗಿ ನಿರ್ಮಾಣ ಕ್ಷೇತ್ರಕ್ಕೆ ತಟ್ಟಿದೆ. ದಿನದಿಂದ ದಿನಕ್ಕೆ ವೆಚ್ಚ ಹೆಚ್ಚುತ್ತಿದ್ದು, ಹೊಸ ಯೋಜನೆಗಳನ್ನು ಆರಂಭಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕಟ್ಟಡ ಕಾಮಗಾರಿಗಳ ನಿರ್ಮಾಣ ಹೆಚ್ಚಾಗಬೇಕಾದ ಋತುಮಾನದಲ್ಲಿ ಕಾಮಗಾರಿಗಳು ಹೆಚ್ಚು ನಡೆಯುತ್ತಿಲ್ಲ.”

– ಸುಧಿ ಎಸ್.ಶೆಟ್ಟಿ, ಮಾಲೀಕರು, ಸುಮಯ ಪ್ರಾಪರ್ಟೀಸ್

” ಈಗಾಗಲೇ ಪ್ರಾರಂಭಿಸಿದ ಯೋಜನೆಗಳು ನಷ್ಟದ ಭೀತಿಯಲ್ಲಿದ್ದು, ಲಾಭಾಂಶ ಕಡಿಮೆಯಾಗುತ್ತಿದೆ. ಸಾಮಗ್ರಿಗಳ ದರ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇದರಿಂದ ಯೋಜನೆಗಳ ಖರ್ಚು ಅಂದಾಜು ಮಾಡಲು ಕಷ್ಟವಾಗುತ್ತಿದೆ. ಹಳೆಯ ಯೋಜನೆಯ ಮಾಲೀಕರ ಮತ್ತು ಬಿಲ್ಡರ್‌ಗಳ ನಡುವೆ ಮಾತುಕತೆಗೆ ಕಾರಣವಾಗಲಿವೆ.”

– ಶ್ರೀನಾಥ್, ಬಿಲ್ಡರ್

” ಇದು ಮನೆ ಮತ್ತು ಕಟ್ಟಡಗಳ ನಿರ್ಮಾಣದ ಕಾಲ. ಆದರೆ, ವ್ಯಾಪಾರ ನಿರೀಕ್ಷಿತಮಟ್ಟದಷ್ಟು ನಡೆಯುತ್ತಿಲ್ಲ. ಇಂಧನ ದರ ಏರಿಕೆ, ಕಚ್ಚಾ ವಸ್ತುಗಳು ಸಮರ್ಪಕವಾಗಿ ಪೂರೈಕೆಯಾಗದೆ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಇದು ಸಾರ್ವಜನಿಕರು ರಿಯಲ್ ಎಸ್ಟೇಟ್ ಉದ್ಯಮಿಗಳು, ನಿರ್ಮಾಣ ಸಾಮಗ್ರಿ ಮಾರಾಟ ಮಳಿಗೆಗಳ ಮೇಲೆ ಹೊಡೆತ ಬಿದ್ದಿದೆ.”

– ಕೃಷ್ಣ ಕುಮಾರ ಸಾಗರ್, ಮಾಲೀಕರು, ಸುಮಿತ್ರ ಸ್ಟೀಲ್ಸ್

” ಕೂಡಿಟ್ಟಿದ್ದ ಹಣದ ಜೊತೆಗೆ ಬ್ಯಾಂಕ್ ಸಾಲದಲ್ಲಿ ಕೆಲಸ ಮುಗಿಯಲಿದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಮನೆ ಪೂರ್ಣಗೊಳಿಸಲು ಕಂಡ ಕಂಡವರ ಬಳಿ ಸಾಲ ಕೇಳುವಂತಾಗಿದೆ. ಮನೆ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕಿ ನೆಮ್ಮದಿ ಹಾಳಾಗಿದೆ.”

ಮಧು

ಆಂದೋಲನ ಡೆಸ್ಕ್

Recent Posts

ಮಾದಕ ವಸ್ತು ಮಾರಾಟ, ಬಳಕೆ ವಿರುದ್ಧ ಕಾರ್ಯಾಚರಣೆ

ನವೀನ್ ಡಿಸೋಜ ೩ ತಿಂಗಳಲ್ಲಿ ೧೩೮ ಎನ್‌ಡಿಪಿಎಸ್ ಪ್ರಕರಣ ದಾಖಲು; ೬ ಕೆ.ಜಿ. ೬೬೪ ಗ್ರಾಂ ಗಾಂಜಾ, ೩೫.೬೬ ಗ್ರಾಂ…

29 mins ago

ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ ೨೧ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೪೭ ಶುದ್ಧ ಕುಡಿಯುವ ನೀರಿನ…

34 mins ago

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಅಪಘಾತಗಳಿಗೆ ಆಹ್ವಾನ

ಎಸ್.ನಾಗಸುಂದರ್ ರೈತನಿಗೆ ಕೈಮೂಳೆ ಮುರಿತ: ಪಾಂಡವಪುರದಲ್ಲಿ ಅವಗಢ, ಸಾರ್ವಜನಿಕರ ಆಕ್ರೋಶ ಪಾಂಡವಪುರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿ ಮತ್ತು…

38 mins ago

ಅರ್ಜುನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಎರಡನೇ ಬಾರಿ ಪ್ರಶಸ್ತಿ ಪಡೆದು ಗಮನಸೆಳೆದ ಪಂಚಾಯಿತಿ ಭೇರ್ಯ ಮಹೇಶ್ ಕೆ.ಆರ್.ನಗರ : ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮೀಣಾಭಿವೃದ್ಧಿ…

42 mins ago

ಊರ ಜಾತ್ರೆ ಒಂದು ನೆನಪು…

ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆ ಉಳಿಸಿಕೊಂಡಿದೆ  ಡಾ.ಹೆಚ್.ಸಿ.ಮಹದೇವಪ್ಪ, ಸಚಿವರು ನಂಜನಗೂಡಿನಿಂದ ಕೆಲವೇ ಮೈಲಿಗಳ…

46 mins ago