ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆ ಉಳಿಸಿಕೊಂಡಿದೆ
ಡಾ.ಹೆಚ್.ಸಿ.ಮಹದೇವಪ್ಪ, ಸಚಿವರು
ನಂಜನಗೂಡಿನಿಂದ ಕೆಲವೇ ಮೈಲಿಗಳ ದೂರದಲ್ಲಿರುವ ನಮ್ಮೂರು ಹದಿನಾರು. ಇದರ ಜೊತೆಗೆ ಕಪಿಲಾ ನದಿ ದಡದ ಪಕ್ಕದಲ್ಲೇ ಇರುವ ಹೆಜ್ಜಿಗೆ ಕೂಡ ನಮ್ಮ ಸಂಬಂಧಿಗಳ ಊರಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಹೆಜ್ಜಿಗೆಗೆ ಬರುತ್ತಿದ್ದ ಸಂದರ್ಭದಲ್ಲಿ ನಂಜನಗೂಡು ಜಾತ್ರೆಗೆ ಬಹು ಸಂಭ್ರಮದಿಂದ ಹೋಗುತ್ತಿದ್ದೆವು. ಬಡತನ ಹೆಚ್ಚಾಗಿದ್ದ ಆ ಕಾಲದಲ್ಲಿ ಉಡುವ ಬಟ್ಟೆಗಳೂ ಕಡಿಮೆ ಇದ್ದದ್ದರಿಂದ ಅಮ್ಮ ಹೊಲಿಸಿಕೊಟ್ಟ ಅಪರೂಪದ ಪ್ಯಾಂಟು ಶರ್ಟನ್ನೇ ಜೋಪಾನವಾಗಿ ಇಟ್ಟುಕೊಂಡು ಜಾತ್ರೆಗೆ ಹೋಗುತ್ತಿದ್ದ ನೆನಪು. ಆದರೆ ಈಗಿನಂತೆ ಆಗ ನದಿಯನ್ನು ದಾಟಲು ಸೇತುವೆ ಇಲ್ಲದ ಕಾರಣ, ನಾವು ನದಿಯನ್ನೇ ದಾಟಬೇಕಾಗುತ್ತಿತ್ತು. ಬೇಸಿಗೆ ಸಂದರ್ಭದಲ್ಲಿ ನೀರು ಕಡಿಮೆ ಇರುತ್ತಿದ್ದ ಕಾರಣ, ನಾವು ಹೊಸ ಪ್ಯಾಂಟು ಯಾವ ಕಾರಣಕ್ಕೂ ನೆನೆಯಬಾರದು ಎಂದು ಹೆಚ್ಚು ಕಡಿಮೆ ಮೊಣಕಾಲಿಗಿಂತಲೂ ಮೇಲಿನವರೆಗೂ ಅದನ್ನು ಮಡಿಚಿಕೊಂಡು, ನದಿ ದಾಟುತ್ತಿದ್ದೆವು.
ಕೆಲವೊಮ್ಮೆ ನೀರು ಸ್ವಲ್ಪ ಹೆಚ್ಚಾಗಿದೆ ಎನಿಸಿದಾಗ ಪ್ಯಾಂಟನ್ನು ತಲೆ ಮೇಲೆ ಹೊತ್ತು ಆ ಕಡೆ ದಡಕ್ಕೆ ಹೋದ ಮೇಲೆ ಹಾಕಿಕೊಳ್ಳುತ್ತಿದ್ದೆವು. ಇನ್ನು ಆಗ ನಮ್ಮ ಕೈಲಿ ಇರುತ್ತಿದ್ದ ೨-೩ ರೂಪಾಯಿಯಲ್ಲಿ ಜಾತ್ರೆಯಲ್ಲಿ ಬೆಂಡು ಬತ್ತಾಸು ಮತ್ತು ಕಳ್ಳೆಪುರಿಯನ್ನು ಕೊಂಡು ಅಲ್ಲೇ ಸ್ವಲ್ಪ ತಿಂದು ಮಿಕ್ಕಿದ್ದನ್ನು ಸ್ವಲ್ಪವೂ ನೆನೆಯದ ಹಾಗೆ ನದಿ ದಾಟಿಕೊಂಡು ಮನೆಗೆ ಒಯ್ಯುತ್ತಿದ್ದ ನೆನಪು ಈಗಲೂ ಮಾಸಿಲ್ಲ. ನಮ್ಮೂರು ನಂಜನಗೂಡಿನ ಜಾತ್ರೆ ಇಡೀ ಮೈಸೂರು ಚಾಮರಾಜ ನಗರ ಭಾಗಕ್ಕೆ ಬಹಳ ಜನಪ್ರಿಯವಾದ ಜಾತ್ರೆ. ಇಂತಹ ಜಾತ್ರೆಯಲ್ಲಿ ಈ ದಿನ ಪಾಲ್ಗೊಂಡಾಗ ನನ್ನೊಳಗೆ ಬಾಲ್ಯದ ನೆನಪುಗಳು ಮತ್ತೆ ಆವರಿಸಿದವು. ಬಹು ಮುಖ್ಯವಾಗಿ ನಾನು ಸಚಿವನಾದ ನಂತರದಲ್ಲಿ ಇಲ್ಲಿನ ಜನರು ಸುಲಭವಾಗಿ ನದಿ ದಾಟಲು ಅನುಕೂಲ ಅಗುವ ರೀತಿಯಲ್ಲಿ ನಂಜನಗೂಡು-ಹೆಜ್ಜಿಗೆ ಸೇತುವೆ ಮತ್ತು ನದಿಯ ಇಕ್ಕೆಲಗಳಲ್ಲಿ ಸುಸಜ್ಜಿತ ಮೆಟ್ಟಿಲುಗಳು, ಹಾಗೂ ಪರಶುರಾಮ ದೇವಾಲಯದ ಸುತ್ತ ಮಳೆ ಮತ್ತು ನದಿ ಪ್ರವಾಹದಿಂದ ಆಗುತ್ತಿದ್ದ ಕೆಸರನ್ನು ತಪ್ಪಿಸಲು ಸುತ್ತ ಕಾಂಕ್ರೀಟ್ ಹೊದಿಕೆ ನಿರ್ಮಾಣ ಹಾಗೂ ನಂಜನಗೂಡಿನ ದೇವಾಯದ ಸುತ್ತಲೂ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾಂಕ್ರೀಟ್ ಹಾಸಿನ ವ್ಯವಸ್ಥೆಯನ್ನು ಮಾಡಿಸುವ ಅವಕಾಶ ನನ್ನದಾಗಿತ್ತು. ಬಾಲ್ಯದ ನೆನಪುಗಳನ್ನು ಹಾಗೆ ಕಾಪಾಡಿಕೊಂಡು ಅವಕಾಶ ಸಿಕ್ಕಾಗ ಅವುಗಳನ್ನು ಸಾಕಾರಗೊಳಿಸುವ ಸಂದರ್ಭ ಇದೆಯಲ್ಲಾ ಅದಕ್ಕೆ ಎಂದೂ ಬೆಲೆ ಕಟ್ಟಲು ಆಗದು. ಅದರಲ್ಲೂ ಜಾತಿ ಧರ್ಮ ಭೇದವಿಲ್ಲದೇ ಒಂದು ಮುಗ್ಧ ಆಚರಣೆಯಾಗಿ ಆಚರಿಸಲ್ಪಡುವ ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆಯನ್ನು ಉಳಿಸಿಕೊಂಡಿದೆ. ಊರ ಜಾತ್ರೆಗೆ ಈ ದಿನ ಹೋದ ಕಾರಣ ಮನಸ್ಸಿನಲ್ಲಿ ಇದ್ದ ನೆನಪನ್ನು ಒಮ್ಮೆ ಹೇಳಿಕೊಳ್ಳಬೇಕು ಎನಿಸಿತು.
ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…