Andolana originals

ಗಾನ ಸರಸ್ವತಿಯ ವಿನಮ್ರ ಸೇವಕ ವೀರಭದ್ರಯ್ಯ

ಮೈಸೂರಿನಲ್ಲಿ ಉತ್ತರಾದಿ ಸಂಗೀತ ಪರಿಮಳ ಹರಡಲು ಪರಿಶ್ರಮ

-ಡಾ.ರಮಾ ವಿ ಬೆಣ್ಣೂರ್

ಮೈಸೂರು ಮತ್ತು ಹಿಂದುಸ್ತಾನೀ ಸಂಗೀತದ ನಂಟು ಇಂದು ನೆನ್ನೆಯದಲ್ಲ. ಯಾವ ಒಳ್ಳೆಯ ಸಂಗೀತವನ್ನಾದರೂ ಆನಂದಿಸುತ್ತಿದ್ದ ಒಡೆಯರರ ಅಗಾಧ ಸಂಗೀತಾಸಕ್ತಿಯಿಂದಾಗಿ ಅವರ ಕಾಲದಲ್ಲೇ ಉತ್ತರಾದಿ ಸಂಗೀತವು ಮೈಸೂರಿಗೆ ಕಾಲಿಟ್ಟಿದ್ದಿತು. ಉತ್ತರಾದಿ ಸಂಗೀತ ಕಲಾವಿದರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಹಾಡುವುದು, ಮಹಾರಾಜರಿಂದ ಗೌರವಿಸಲ್ಪಡುವುದು ಒಂದು ಹೆಮ್ಮೆಯ ಸಂಗತಿಯೇ ಆಗಿತ್ತು. ಅಬ್ದುಲ್ ಕರೀಂ ಖಾನ್, ಮೌಲಾನ ಭಕ್ಷ್ ಮುಂತಾದವರೆಲ್ಲ ತಮ್ಮ ಸಂಗೀತದ ಪ್ರಭೆಯನ್ನು ಇಲ್ಲಿ ಬೆಳಗಿದವರೇ.

ಒಡೆಯರರ ಕಾಲಾನಂತರ ಏಕೋ ಏನೋ ಮೈಸೂರಿನಲ್ಲಿ ಈ ಹಿಂದೂಸ್ತಾನೀ ಸಂಗೀತದ ಹರಿವು ಕಡಿಮೆ ಆಗತೊಡಗಿತು. ಹಾಗೆ ನೋಡಿದರೆ, ಉತ್ತರಾದಿ ಸಂಗೀತ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ ಎಂದೇ ಹೇಳಬಹುದು. (ಅಂದಿನ ಮುಂಬಯಿಗೆ ಸೇರಿದ್ದ) ಉತ್ತರ ಕರ್ನಾಟಕದಲ್ಲಿ ಆ ಸಂಗೀತದ ಮೋಡಿಗೆ ಮರುಳಾಗಿ ಅದರಲ್ಲಿ ನಿಷ್ಣಾತರಾಗಿ, ದೇಶಕ್ಕೆ ಕೀರ್ತಿ ತಂದ ಹಲವಾರು ಮಹನೀಯರಲ್ಲಿ ಸವಾಯಿ ಗಂಧರ್ವ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಮುಂತಾದವರೆಲ್ಲ ಇದ್ದಾರೆ. ಅಷ್ಟಾಗಿ ಉತ್ತರಾದಿಯ ಗಂಗೆ ಗುಪ್ತಗಾಮಿನಿಯಾಗಿದ್ದ ಮೈಸೂರಿನಲ್ಲಿ ಅದು ಮತ್ತೆ ತಲೆಯೆತ್ತಿ, ಪ್ರವಹಿಸುವಂತೆ ಮಾಡಿದ ಅನೇಕರು ಇದ್ದಾರೆ. ಅದರಲ್ಲಿ ಎದ್ದು ಕಾಣುವ ಮೊದಲ ತಲೆಮಾರಿನ ಹೆಸರೆಂದರೆ ಹುನಗುಂದ ಮತ್ತು ಅವರ ಗೆಳೆಯರು. ಸೋಮಶೇಖರರು, ಕೇಶವ ಭಾದ್ರಿಯವರೂ ಇದರಲ್ಲಿ ಸೇರುತ್ತಾರೆ.

ಇಲ್ಲಿಂದ ಮುಂದೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ತಯಾರಾದ ಹಲವು ಪ್ರತಿಭೆಗಳು ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಇಲ್ಲಿ ಹಿಂದುಸ್ತಾನೀ ಸಂಗೀತವು ಹುಲುಸಾಗಿ ಬೆಳೆಯುವಂತೆ ನೋಡಿಕೊಂಡವು. ಆ ಪುಣ್ಯಾಶ್ರಮದ ಪ್ರತಿಭೆಗಳಲ್ಲಿ ಎದ್ದು ಕಾಣುವ ಹೆಸರೇ ವೀರಭದ್ರಯ್ಯ ಹಿರೇಮಠ್ ಅವರದು. ಗಾಯನ ಮತ್ತು ವಾದನ ಎರಡರಲ್ಲೂ ಪಳಗಿದುದು ಅವರಿಗೆ ಬಹಳ ಸಹಾಯವಾಯಿತು.

ವೀರಭದ್ರಯ್ಯ ಅವರನ್ನು ಹತ್ತಿರದಿಂದ ಬಲ್ಲವರೆಲ್ಲರ ಅನುಭವಕ್ಕೆ ಬರುವ ಒಂದು ಸಂಗತಿ ಎಂದರೆ, ಅವರ ಗುರುಭಕ್ತಿ ಮತ್ತು ಆ ಗುರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆವ ಛಲ. ಆಶ್ರಮದಲ್ಲಿ ಅವರು ಕಲಿತ ಸಂಗೀತ ಮತ್ತು ಶಿಸ್ತು ಅವರ ಕೈ ಹಿಡಿದು ನಡೆಸುವ ದಾರಿದೀಪವಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಆ ಗುರುವಿನ ಪ್ರಭಾವವು ಅವರ ಇಡೀ ವ್ಯಕ್ತಿತ್ವವನ್ನು ರೂಪಿಸಿದೆ ಎಂದರೆ ತಪ್ಪಾಗಲಾರದು. ಅದೇ ಅವರನ್ನು ಕೈಹಿಡಿದು ನಡೆಸುತ್ತಿರುವ ದಾರಿದೀಪ, ಶ್ರೀರಕ್ಷೆ.

ಮೈಸೂರಿನಲ್ಲಿಯೇ ನೆಲಸುವ ನಿರ್ಧಾರವನ್ನು ಅವರು ಕೈಗೊಂಡ ನಂತರ ಕೆಲಕಾಲ ಅವರು ಸೋಮಶೇಖರ್ ಅವರೊಂದಿಗೂ ಸೇರಿ ಸಂಗೀತ ಕಲಿಸುವ ಕೈಂಕರ್ಯವನ್ನು ಮಾಡಿದ್ದುಂಟು. ಮುಂದೆ ಅವರೇ ಸ್ವತಂತ್ರವಾಗಿ ಮೈಸೂರಿನಲ್ಲಿ ಉತ್ತರಾದಿ ಸಂಗೀತದ ಪರಿಮಳವನ್ನು ಹರಡುವ ಕಾರ್ಯಕ್ಕೆ ಕಟಿಬದ್ಧರಾಗಿ ನಿಂತರು. ಅವರಲ್ಲಿ ಉತ್ತಮ ಶಾರೀರ ಸಂಪತ್ತು, ಸೊಗಸಾದ ಮನೋಧರ್ಮ ಮಿಳಿತವಾಗಿವೆ. ಒಳ್ಳೆಯ ಹಾರ್ಮೋನಿಯಂ ವಾದಕರೂ ಹೌದು. ಹೀಗಾಗಿ ಮೈಸೂರಿಗೆ ಯಾವುದೇ ಹಿಂದುಸ್ತಾನೀ ಕಲಾವಿದರು ಬಂದರೂ ಅವರಿಗೆ ವೀರಭದ್ರಯ್ಯನವರದೇ ಹಾರ್ಮೋನಿಯಂ ಸಾಥ್ ಒದಗಿ ಬರುತ್ತಿತ್ತು. ಇದರಿಂದ ಅವರ ಸಂಗೀತವೂ ಕೂಡ ಮತ್ತಷ್ಟು ಪಕ್ವವಾಗಿ, ಹಲವು ಕಲಾವಿದರ ಉತ್ತಮ ಅಂಶಗಳು ಇವರ ಸಂಗೀತದಲ್ಲೂ ಸೇರ್ಪಡೆ ಆಯಿತು. ಕೆಲವು ಕಾಲ ಅವರ ಕಂಠವು ಅವರಿಗೆ ಸಾಥ್ ನೀಡದಿದ್ದಾಗ, ಛಲ ಬಿಡದ ತ್ರಿವಿಕ್ರಮನಂತೆ ಮೌನದಿಂದ, ಶುಶ್ರೂಷೆಯಿಂದ ಅವರು ಅದನ್ನು ಗೆದ್ದು ಬಂದು, ಮತ್ತೆ ಹಾಡಲು ಉಪಕ್ರಮಿಸಿದರು. ಅದು ವೀರಭದ್ರಯ್ಯ ಅವರ ಸಂಗೀತ ಪ್ರೀತಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ಮೈಸೂರಿನಲ್ಲಿ ನೆಲೆಸಿದ್ದ ಹಿರಿಯ ಸಂಗೀತ ವಿದ್ವಾಂಸ ಪಂಡಿತ್ ಇಂದೂಧರ್ ನಿರೋಡಿ ಅವರಲ್ಲಿ ತಮ್ಮ ಸಂಗೀತವನ್ನು ಮತ್ತಷ್ಟು ಉತ್ತಮಗೊಳಿಸುತ್ತಲೇ ಅಧ್ಯಾಪನವನ್ನೂ ತಮ್ಮದಾಗಿಸಿಕೊಂಡರು.

ಇಂದು ವೀರಭದ್ರಯ್ಯನವರ ಗರಡಿಯಲ್ಲಿ ತಯಾರಾಗಿರುವ ಅನೇಕ ಶಿಷ್ಯರು ಇದ್ದಾರೆ. ಅವರ ಶಿಷ್ಯರ ಸಂಖ್ಯೆಯನ್ನು ನೋಡಿದಾಗ, ಮೈಸೂರಿನಲ್ಲಿ ಉತ್ತರಾದಿ ಸಂಗೀತ ಗಟ್ಟಿಯಾಗಿ ನೆಲೆಯೂರುವುದರಲ್ಲಿ ಸಂದೇಹವೇ ಇಲ್ಲ ಎಂದೆನಿಸದಿರದು. ಸ್ವರ ಸಂಕುಲ ಎಂಬ ಸಂಗೀತ ವಿದ್ಯಾಲಯವು ಅವರ ಕನಸಿನ ಕೂಸು. ಸಂಗೀತ ಶಿಕ್ಷಣ ಒಂದೇ ಅಲ್ಲದೆ ಹಲವಾರು ಉತ್ತಮ ಗಾಯಕ, ವಾದಕರನ್ನು ಮೈಸೂರಿಗೆ ಕರೆಸಿ, ಅವರ ಕಛೇರಿಗಳನ್ನು ಏರ್ಪಾಡು ಮಾಡುವುದರಲ್ಲಿಯೂ ಈ ಸಂಸ್ಥೆ ಮುಂದಾಗಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತವರು ಡಾ.ಭಾಸ್ಕರ್ ಅವರು. ಪ್ರತಿ ವರ್ಷ ತಮ್ಮ ಎಲ್ಲ ಸ್ತರಗಳ ಶಿಷ್ಯರನ್ನೂ ಸೇರಿಸಿಕೊಂಡು ಅವರು ನಡೆಸುವ ವಾರ್ಷಿಕೋತ್ಸವವು ಮೈಸೂರಿನ ಕಲಾಪ್ರೇಮಿಗಳು ಕಾತುರದಿಂದ ಎದುರು ನೋಡುವ ಒಂದು ಉತ್ಸವವಾಗಿ ಮಾರ್ಪಟ್ಟಿದೆ. ಉತ್ತರಾದಿ ಸಂಗೀತದ ಎಲ್ಲ ಮಜಲುಗಳನ್ನೂ ಈ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಪರಿಚಯಿಸುವುದು ಅದರ ವೈಶಿಷ್ಟ್ಯ. ವೀರಭದ್ರಯ್ಯ ಅವರ ಮಗಳು ಸುನಿತಾ ಸಹ ಭರವಸೆಯ ಹಿಂದುಸ್ತಾನೀ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಅವರ ಪತ್ನಿ ಕೂಡ ಎಲ್ಲ ರೀತಿಯಿಂದಲೂ ಪತಿಯ ಸಂಗೀತ ಕೈಂಕರ್ಯಕ್ಕೆ ತಮ್ಮ ಸಹಾಯಹಸ್ತವನ್ನು ಜೋಡಿಸುತ್ತಾರೆ. ಸಂಗೀತವನ್ನೇ ಉಸಿರಾಡುತ್ತಿರುವ ಇಂತಹ ಸಾರ್ಥಕ ಬದುಕನ್ನು ನಡೆಸುತ್ತಿರುವ ಈ ಕಲಾಯೋಗಿಗೆ ಇದೀಗ ಅರವತ್ತರ ಸಂಭ್ರಮ. ಕಲಾದೇವಿಯು ಅವರಿಗೆ ಸಕಲ ಸನ್ಮಂಗಳವನ್ನು ಉಂಟುಮಾಡಲಿ ಎಂಬುದಾಗಿ ಈ ಲೇಖನ ಮೂಲಕ ಹಾರೈಕೆ.

 

  • ನಾಳೆ ಅಭಿನಂದನಾ ಸಮಾರಂಭ
    ಪಂ.ವೀರಭದ್ರಯ್ಯ ಹಿರೇಮಠ ರವರಿಗೆ ೬೦ ವರ್ಷಗಳು ತುಂಬಿದ ಪ್ರಯುಕ್ತ ಅವರ ಆಪ್ತ ಬಳಗದ ವತಿಯಿಂದ ಅಭಿನಂದನಾ ಸಮಾರಂಭವನ್ನು ಜೂ.೭ರಂದು ಸಂಜೆ ೬ಕ್ಕೆ ಮೈಸೂರಿನ ಶ್ರೀರಾಂಪುರದ ಎಸ್‌ಬಿಎಂ ಕಾಲೋನಿಯ ೨ನೇ ಹಂತದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶಿವಭವನದಲ್ಲಿ ಆಯೋಜಿಸಲಾಗಿದೆ.
ಆಂದೋಲನ ಡೆಸ್ಕ್

Recent Posts

ಸಿಜೆಪಿ ಪ್ರತಿಭಟನೆ ; ಜಂತರ್‌ ಮಂತರ್‌ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ; ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯ

ಹೊಸದಿಲ್ಲಿ : ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದೆ. ‘ಕಾಕ್ರೋಚ್…

28 mins ago

ಮುಚ್ಚಿದ್ದ ಶಾಲೆ ಗ್ರಾಮಸ್ಥರಿಂದಲೇ ಆರಂಭ!

ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿದ್ದೇ ಪೋಷಕರಿಗೆ ಪ್ರೇರೇಪಣೆ ಮಂಜು ಕೋಟೆ ಎಚ್‌.ಡಿ.ಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು, ಜಿಲ್ಲೆಯಲ್ಲಿ…

1 hour ago

ಗಾಂಧಿ ಅಭಿಯಾನ ಅರಿವಿನಯಾನ | ಹುಟ್ಟೂರು ಕಲ್ಲಹಳ್ಳಿಗೆ ಗಾಂಧಿ ಮಾರ್ಗ ತಂದ ಚದುರಂಗ

• ವಿಕ್ರಂ ಚದುರಂಗ, ಮೈಸೂರು ಪ್ರಸಿದ್ಧ ಕನ್ನಡ ಲೇಖಕ ಚದು ರಂಗರು, ಗಾಂಧೀಜಿ ಅವರನ್ನು ಅವರ ಒಳ ಮನಸ್ಸಿಗೆ ತೆರೆದು…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಕಳ್ಳತನ ಮತ್ತು ಪ್ರಾಯಶ್ಚಿತ ; ತಂದೆಯಿಂದ ಅಹಿಂಸೆಯ ನೇರ ಪಾಠ

ಮಾಂಸಾಹಾರ ಮಾಡುತ್ತಿದ್ದ ಕಾಲದ ಮತ್ತು ಅದಕ್ಕೆ ಹಿಂದಿನ ನನ್ನ ಕೆಲವು ದೋಷಗಳನ್ನು ಹೇಳಬೇಕಾದುದು ಇನ್ನೂ ಬಾಕಿಯಿದೆ. ಅವು ನನ್ನ ಮದುವೆಯಾದ…

2 hours ago

ಗ್ರಾಮೀಣ ಕುಡಿಯುವ ನೀರಿಗೆ ಪ್ರಥಮ ಆದ್ಯತೆ:ಈಶ್ವರ ಖಂಡ್ರೆ

ಬೆಂಗಳೂರು : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ತಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು…

14 hours ago

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ : ಮತ್ತೊಮ್ಮೆ ಶೇ.50 ರಿಯಾಯಿತಿ

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಶೇ.50ರಷ್ಟು…

20 hours ago