Andolana originals

ಅಕಾಲಿಕ ಮಳೆ; ಮಾವು ಇಳುವರಿ ಕುಂಠಿತ

ಚಿರಂಜೀವಿ ಸಿ. ಹುಲ್ಲಹಳ್ಳಿ

ಬೆಳೆಗಾರ ಕಂಗಾಲು; ನಷ್ಟಕ್ಕೆ ಪರಿಹಾರ ಕಲ್ಪಿಸಲು ರೈತರ ಒತ್ತಾಯ

ಮೈಸೂರು: ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವು ಬೆಳೆಯ ಇಳುವರಿ ಕುಂಠಿತವಾಗಿದ್ದು, ಬೆಳೆಗಾರರು, ರೈತರನ್ನು ಕಂಗಾಲು ಮಾಡಿದೆ.

ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಉಷ್ಣಾಂಶ ಏರಿಕೆಯಾಗಿರುವುದು, ಅಕಾಲಿಕ ಮಳೆ ಸುರಿದ ಪರಿಣಾಮದಿಂದಾಗಿ ಮಾವು ಬೆಳೆಗೆ ಹಾನಿಯಾಗಿ ರೈತರನ್ನು ನಷ್ಟಕ್ಕೆ ದೂಡಿದೆ. ಕೆಲವು ಬೆಳೆಗಾರರಿಗೆ ಬಂಪರ್ ಬೆಳೆ ಸಿಕ್ಕರೂ ಸೂಕ್ತ ಬೆಲೆ ಇಲ್ಲದೆ ಪರಿತಪಿಸುವಂತಾಗಿದೆ.

ಕೆಲವು ಕಡೆಗಳಲ್ಲಿ ಮಳೆ, ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ಮಾವು ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ಕೆಲವೆಡೆ ಕೀಟ ನಾಶಕಗಳ ಸಿಂಪಡಣೆಯೂ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಬಾರಿ ೩೦-೪೦ ರೂ. ಇದ್ದ ಕೆಜಿ ಬಾದಾಮಿ ೧೦ರಿಂದ ೧೨ ರೂ.ಗೆ, ರಸಪುರಿ ಕೆಜಿಗೆ ೭ರಿಂದ ೮ ರೂ.ಗೆ ಖರೀದಿಸಲಾಗುತ್ತಿತ್ತು. ರೈತ ಕಟಾವು ಮಾಡಿ ದಲ್ಲಾಳಿಗೆ ಮಾರಾಟ ಮಾಡಿದರೆ ಈ ಬೆಲೆ ಸಿಗುತ್ತಿದೆ. ಇಲ್ಲ, ದಲ್ಲಾಳಿ ಕಟಾವಿಗೆ ಕೊಟ್ಟರೆ ೬ ರೂ. ಕೊಡುತ್ತಿದ್ದಾರೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಇಳುವರಿ ಬಂದವರಿಗೂ ಬೆಲೆ ಇಲ್ಲ: ಜಿಲ್ಲೆಯ ಹಲವಾರು ರೈತರಿಗೆ ಮಾವು ಬೆಳೆ ಕೈಗೆ ದಕ್ಕಿದರೂ ಬೆಲೆ ಕುಸಿತದಿಂದ ಕಂಗಾಲಾಗಿರುವುದು ಒಂದೆಡೆಯಾದರೆ, ಮಾವಿನ ಸೀಸನ್‌ಗೂ ಮುಂಚೆಯೇ ಬೇರೆಡೆಯಿಂದ ತಂದ ಕೃತಕವಾಗಿ ಮಾಗಿಸಿದ ಮಾವಿನ ಹಣ್ಣು ಮಾರಾಟ ಮಾಡುತ್ತಿರುವುದು ಸ್ಥಳೀಯ ರೈತರ ನಷ್ಟಕ್ಕೆ ಮತ್ತೊಂದು ಕಾರಣವಾಗಿದೆ.

ಸ್ಥಳೀಯ ಎಪಿಎಂಸಿ, ಹಾಪ್‌ಕಾಮ್ಸ್‌ಗಳು, ತೋಟಗಾರಿಕೆ ಇಲಾಖೆಯ ಜತೆಗೂಡಿ ರೈತರಿಂದಲೇ ನೇರವಾಗಿ ಮಾವಿನ ಹಣ್ಣುಗಳನ್ನು ಖರೀದಿಸುವ ಕೆಲಸವಾದರೆ ರೈತರ ಉತ್ಪನ್ನಕ್ಕೆ ಬೆಲೆ ಸಿಗಲಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೊದಲು ಸಭೆ ನಡೆಸಿ ಕಾರ್ಯರೂಪಕ್ಕೆ ತರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಗ್ರಾಹಕರಿಗೆ ಬೆಲೆ ಕಡಿಮೆಯಾಗಿಲ್ಲ: ಇಳುವರಿ ಕುಸಿತದಿಂದ ಗ್ರಾಹಕರಿಗೆ ಮಾರುವ ಮಾವಿನ ಹಣ್ಣಿನ ದರದಲ್ಲಿ ವ್ಯತ್ಯಾಸವಿಲ್ಲ. ರೈತರಿಂದ ಅತಿ ಕಡಿಮೆ ಬೆಲೆಗೆ ಖರೀದಿಸಿ ಕೆಜಿಗೆ ೭೦-೮೦ ರೂ.ವರೆಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ರೈತರಿಗೆ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ಯಾವ ಇಲಾಖೆಗೂ ಸಾಧ್ಯವಾಗಿಲ್ಲ ಎಂದು ರೈತ ಮುಖಂಡ ಬರಡನಪುರ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ಮಾವಿನ ಬೆಳೆ ಸರಿಯಾಗಿ ಕೈಗೆ ಸಿಗಲಿಲ್ಲ. ಸಿಕ್ಕ ಬೆಳೆಯಲ್ಲಿಯೇ ನಷ್ಟದ ಹೊರೆಯನ್ನು ತಪ್ಪಿಸಿಕೊಂಡೆವು. ಈ ಬಾರಿ ಮಾವು ಬೆಳೆ ಚೆನ್ನಾಗಿ ಬಂದಿತ್ತು. ಆದರೆ, ಅಕಾಲಿಕ ಮಳೆ ಮತ್ತು ಬಿಸಿಲಿನ ತಾಪದಿಂದ ಇಳುವರಿ ಕುಂಠಿತವಾಯಿತು. ಕೀಟ ನಾಶಕ ಹೆಚ್ಚಾಗಿ ಸಿಂಪಡಿಸಿ ಮಾವು ಹೂ ಕಟ್ಟುವಾಗಲೇ ನಶಿಸಿ ಹೋಯಿತು. ಕೆಲ ದಿನಗಳ ಹಿಂದೆ ರಸಪುರಿ ಕೆಜಿಗೆ ೨೨ ರೂ.ಗೆ ಖರೀದಿಸುತ್ತಿದ್ದರು. ಆದರೆ, ಈಗ ಕೇವಲ ೧೨ ರೂ. ಗೆ ಖರೀದಿಸುತ್ತಿದ್ದಾರೆ. ಇದೇ ದರಕ್ಕೆ ಒಂದು ಟನ್ ಮಾರಾಟ ಮಾಡಿ ನಷ್ಟ ಅನುಭವಿಸಿದ್ದೇವೆ ಎಂದು ಚಮ್ಮಾಳಿಯ ಮಹದೇವು ನೋವು ತೋಡಿಕೊಂಡರು.

” ಅಕಾಲಿಕ ಮಳೆ, ಕೀಟ ನಾಶಕದ ಯಥೇಚ್ಛ ಬಳಕೆಯಿಂದ ಹೂವು ಉದುರಿದ್ದರಿಂದ ಈ ಬಾರಿ ಮಾವು ಇಳುವಳಿ ಕಡಿಮೆಯಾಗಿದೆ. ಬೆಳೆ ಕಚ್ಚಿದರೂ ಮಾವಿನ ಕಾಯಿ ದಪ್ಪ ಆಗಲಿಲ್ಲ. ಕೇವಲ ಕೆಜಿಗೆ ೧೨ ರೂ.ನಂತೆ ಒಂದು ಟನ್ ಹಣ್ಣು ಮಾರಾಟ ಮಾಡಿದ್ದೇನೆ. ನಾವು ವರ್ಷವಿಡೀ ಶ್ರಮ ಹಾಕಿ ಮಾವು ಬೆಳೆಯುತ್ತೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ.”

ಮಹದೇವ್, ಮಾವು ಬೆಳೆಗಾರ

೧ ಮರಕ್ಕೆ ೧೦ ಸಾವಿರ ರೂ. ಪರಿಹಾರ ಕೊಡಿ: 

” ತೆಂಗಿನ ಮರದ ಕೆಳಗೆ ಇತರೆ ಬೆಳೆಗಳನ್ನು ಬೆಳೆಯ ಬಹುದು. ಆದರೆ, ಮಾವಿನ ಗಿಡದಡಿ ಅಂತರ ಬೆಳೆ ಸಾಧ್ಯವಾಗುವುದಿಲ್ಲ. ಮಾವಿನ ಬೆಳೆ ರೈತನ ಆಧಾರವಾಗಿರುತ್ತದೆ. ಹೀಗಾಗಿ ಸರ್ಕಾರ ರೈತರಿಗೆ ಪರಿಹಾರ ಕೊಡಬೇಕು. ಕನಿಷ್ಠ ೧ ಮರಕ್ಕೆ ೧೦ ಸಾವಿರ ರೂ.ನಂತೆ ಪರಿಹಾರ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು.”

ಬರಡನಪುರ ನಾಗರಾಜು, ರೈತ ಮುಖಂಡ 

ಆಂದೋಲನ ಡೆಸ್ಕ್

Recent Posts

ಖ್ಯಾತ ಗಾಯಕಿ ಎಸ್.ಜಾನಕಿ ನಿಧನ

ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.…

2 hours ago

ಗುಂಡ್ಲುಪೇಟೆ: ಮನೆಯೊಳಗೆ ನುಗ್ಗಿದ್ದ ನಾಗರಹಾವಿನ ರಕ್ಷಣೆ

ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಳಗೆ ನುಗ್ಗಿದ್ದ ನಾಗರಹಾವನ್ನು ಉರಗಪ್ರೇಮಿ ಸ್ವಾಮಿ ಅವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.…

5 hours ago

ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ

ಮಡಿಕೇರಿ: ತಾಲ್ಲೂಕಿನ ಕೆದಕಲ್ ಸಮೀಪದ ಕೋಟೆಕಾಡು ಪ್ರದೇಶದಲ್ಲಿ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ನಡೆದಿದೆ. ಕಕ್ಕಬ್ಬೆ…

6 hours ago

ಹನೂರು: ಹುಚ್ಚು ನಾಯಿ ದಾಳಿಗೆ ಹಲವರು ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಮಹದೇಶ್ವರಬೆಟ್ಟ ಮುಖ್ಯರಸ್ತೆಯ ಸಮೀಪ ಶನಿವಾರ ಬೆಳಿಗ್ಗೆ ಹುಚ್ಚು ನಾಯಿಯೊಂದು…

6 hours ago

ರೀಲ್ಸ್‌ಗಾಗಿ ಡ್ರಿಫ್ಟಿಂಗ್:‌ ಜಾನುವಾರುಗಳ ಮೇವನ್ನು ಮಣ್ಣುಪಾಲು ಮಾಡಿದ ಪ್ರವಾಸಿಗರು

ಹಾಸನ: ಜಿಲ್ಲೆಯ ಸಕಲೇಶಪುರ ಗವಿಬೆಟ್ಟದಲ್ಲಿ ಪ್ರವಾಸಿಗರು ರೀಲ್ಸ್‌ಗಾಗಿ ಥಾರ್‌ ಕಾರನ್ನು ಡ್ರಿಫ್ಟಿಂಗ್‌ ಮಾಡಿದ್ದಾರೆ. ಇದರಿಂದ ಜಾನುವಾರುಗಳ ಮೇವು ಹಾಗೂ ರಸ್ತೆಗೆ…

7 hours ago

ವಿಯೆಟ್ನಾಂ ದ್ವೀಪದಲ್ಲಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್‌ ಮುಳುಗಡೆ: 15 ಮಂದಿ ಸಾವು

ಹನೋಯ್:‌ ವಿಯೆಟ್ನಾಂ ಫು ಕ್ವಾಕ್‌ ದ್ವೀಪದ ಬಳಿ 32 ಮಂದಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ ಬೋಟ್‌ ಮುಳುಗಡೆಯಾಗಿದ್ದು, ಕನಿಷ್ಠ…

7 hours ago