ಚಿರಂಜೀವಿ ಸಿ. ಹುಲ್ಲಹಳ್ಳಿ
ಬೆಳೆಗಾರ ಕಂಗಾಲು; ನಷ್ಟಕ್ಕೆ ಪರಿಹಾರ ಕಲ್ಪಿಸಲು ರೈತರ ಒತ್ತಾಯ
ಮೈಸೂರು: ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವು ಬೆಳೆಯ ಇಳುವರಿ ಕುಂಠಿತವಾಗಿದ್ದು, ಬೆಳೆಗಾರರು, ರೈತರನ್ನು ಕಂಗಾಲು ಮಾಡಿದೆ.
ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಉಷ್ಣಾಂಶ ಏರಿಕೆಯಾಗಿರುವುದು, ಅಕಾಲಿಕ ಮಳೆ ಸುರಿದ ಪರಿಣಾಮದಿಂದಾಗಿ ಮಾವು ಬೆಳೆಗೆ ಹಾನಿಯಾಗಿ ರೈತರನ್ನು ನಷ್ಟಕ್ಕೆ ದೂಡಿದೆ. ಕೆಲವು ಬೆಳೆಗಾರರಿಗೆ ಬಂಪರ್ ಬೆಳೆ ಸಿಕ್ಕರೂ ಸೂಕ್ತ ಬೆಲೆ ಇಲ್ಲದೆ ಪರಿತಪಿಸುವಂತಾಗಿದೆ.
ಕೆಲವು ಕಡೆಗಳಲ್ಲಿ ಮಳೆ, ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ಮಾವು ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ಕೆಲವೆಡೆ ಕೀಟ ನಾಶಕಗಳ ಸಿಂಪಡಣೆಯೂ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಬಾರಿ ೩೦-೪೦ ರೂ. ಇದ್ದ ಕೆಜಿ ಬಾದಾಮಿ ೧೦ರಿಂದ ೧೨ ರೂ.ಗೆ, ರಸಪುರಿ ಕೆಜಿಗೆ ೭ರಿಂದ ೮ ರೂ.ಗೆ ಖರೀದಿಸಲಾಗುತ್ತಿತ್ತು. ರೈತ ಕಟಾವು ಮಾಡಿ ದಲ್ಲಾಳಿಗೆ ಮಾರಾಟ ಮಾಡಿದರೆ ಈ ಬೆಲೆ ಸಿಗುತ್ತಿದೆ. ಇಲ್ಲ, ದಲ್ಲಾಳಿ ಕಟಾವಿಗೆ ಕೊಟ್ಟರೆ ೬ ರೂ. ಕೊಡುತ್ತಿದ್ದಾರೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಇಳುವರಿ ಬಂದವರಿಗೂ ಬೆಲೆ ಇಲ್ಲ: ಜಿಲ್ಲೆಯ ಹಲವಾರು ರೈತರಿಗೆ ಮಾವು ಬೆಳೆ ಕೈಗೆ ದಕ್ಕಿದರೂ ಬೆಲೆ ಕುಸಿತದಿಂದ ಕಂಗಾಲಾಗಿರುವುದು ಒಂದೆಡೆಯಾದರೆ, ಮಾವಿನ ಸೀಸನ್ಗೂ ಮುಂಚೆಯೇ ಬೇರೆಡೆಯಿಂದ ತಂದ ಕೃತಕವಾಗಿ ಮಾಗಿಸಿದ ಮಾವಿನ ಹಣ್ಣು ಮಾರಾಟ ಮಾಡುತ್ತಿರುವುದು ಸ್ಥಳೀಯ ರೈತರ ನಷ್ಟಕ್ಕೆ ಮತ್ತೊಂದು ಕಾರಣವಾಗಿದೆ.
ಸ್ಥಳೀಯ ಎಪಿಎಂಸಿ, ಹಾಪ್ಕಾಮ್ಸ್ಗಳು, ತೋಟಗಾರಿಕೆ ಇಲಾಖೆಯ ಜತೆಗೂಡಿ ರೈತರಿಂದಲೇ ನೇರವಾಗಿ ಮಾವಿನ ಹಣ್ಣುಗಳನ್ನು ಖರೀದಿಸುವ ಕೆಲಸವಾದರೆ ರೈತರ ಉತ್ಪನ್ನಕ್ಕೆ ಬೆಲೆ ಸಿಗಲಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೊದಲು ಸಭೆ ನಡೆಸಿ ಕಾರ್ಯರೂಪಕ್ಕೆ ತರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಗ್ರಾಹಕರಿಗೆ ಬೆಲೆ ಕಡಿಮೆಯಾಗಿಲ್ಲ: ಇಳುವರಿ ಕುಸಿತದಿಂದ ಗ್ರಾಹಕರಿಗೆ ಮಾರುವ ಮಾವಿನ ಹಣ್ಣಿನ ದರದಲ್ಲಿ ವ್ಯತ್ಯಾಸವಿಲ್ಲ. ರೈತರಿಂದ ಅತಿ ಕಡಿಮೆ ಬೆಲೆಗೆ ಖರೀದಿಸಿ ಕೆಜಿಗೆ ೭೦-೮೦ ರೂ.ವರೆಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ರೈತರಿಗೆ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ಯಾವ ಇಲಾಖೆಗೂ ಸಾಧ್ಯವಾಗಿಲ್ಲ ಎಂದು ರೈತ ಮುಖಂಡ ಬರಡನಪುರ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿಯೂ ಮಾವಿನ ಬೆಳೆ ಸರಿಯಾಗಿ ಕೈಗೆ ಸಿಗಲಿಲ್ಲ. ಸಿಕ್ಕ ಬೆಳೆಯಲ್ಲಿಯೇ ನಷ್ಟದ ಹೊರೆಯನ್ನು ತಪ್ಪಿಸಿಕೊಂಡೆವು. ಈ ಬಾರಿ ಮಾವು ಬೆಳೆ ಚೆನ್ನಾಗಿ ಬಂದಿತ್ತು. ಆದರೆ, ಅಕಾಲಿಕ ಮಳೆ ಮತ್ತು ಬಿಸಿಲಿನ ತಾಪದಿಂದ ಇಳುವರಿ ಕುಂಠಿತವಾಯಿತು. ಕೀಟ ನಾಶಕ ಹೆಚ್ಚಾಗಿ ಸಿಂಪಡಿಸಿ ಮಾವು ಹೂ ಕಟ್ಟುವಾಗಲೇ ನಶಿಸಿ ಹೋಯಿತು. ಕೆಲ ದಿನಗಳ ಹಿಂದೆ ರಸಪುರಿ ಕೆಜಿಗೆ ೨೨ ರೂ.ಗೆ ಖರೀದಿಸುತ್ತಿದ್ದರು. ಆದರೆ, ಈಗ ಕೇವಲ ೧೨ ರೂ. ಗೆ ಖರೀದಿಸುತ್ತಿದ್ದಾರೆ. ಇದೇ ದರಕ್ಕೆ ಒಂದು ಟನ್ ಮಾರಾಟ ಮಾಡಿ ನಷ್ಟ ಅನುಭವಿಸಿದ್ದೇವೆ ಎಂದು ಚಮ್ಮಾಳಿಯ ಮಹದೇವು ನೋವು ತೋಡಿಕೊಂಡರು.
” ಅಕಾಲಿಕ ಮಳೆ, ಕೀಟ ನಾಶಕದ ಯಥೇಚ್ಛ ಬಳಕೆಯಿಂದ ಹೂವು ಉದುರಿದ್ದರಿಂದ ಈ ಬಾರಿ ಮಾವು ಇಳುವಳಿ ಕಡಿಮೆಯಾಗಿದೆ. ಬೆಳೆ ಕಚ್ಚಿದರೂ ಮಾವಿನ ಕಾಯಿ ದಪ್ಪ ಆಗಲಿಲ್ಲ. ಕೇವಲ ಕೆಜಿಗೆ ೧೨ ರೂ.ನಂತೆ ಒಂದು ಟನ್ ಹಣ್ಣು ಮಾರಾಟ ಮಾಡಿದ್ದೇನೆ. ನಾವು ವರ್ಷವಿಡೀ ಶ್ರಮ ಹಾಕಿ ಮಾವು ಬೆಳೆಯುತ್ತೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ.”
ಮಹದೇವ್, ಮಾವು ಬೆಳೆಗಾರ
೧ ಮರಕ್ಕೆ ೧೦ ಸಾವಿರ ರೂ. ಪರಿಹಾರ ಕೊಡಿ:
” ತೆಂಗಿನ ಮರದ ಕೆಳಗೆ ಇತರೆ ಬೆಳೆಗಳನ್ನು ಬೆಳೆಯ ಬಹುದು. ಆದರೆ, ಮಾವಿನ ಗಿಡದಡಿ ಅಂತರ ಬೆಳೆ ಸಾಧ್ಯವಾಗುವುದಿಲ್ಲ. ಮಾವಿನ ಬೆಳೆ ರೈತನ ಆಧಾರವಾಗಿರುತ್ತದೆ. ಹೀಗಾಗಿ ಸರ್ಕಾರ ರೈತರಿಗೆ ಪರಿಹಾರ ಕೊಡಬೇಕು. ಕನಿಷ್ಠ ೧ ಮರಕ್ಕೆ ೧೦ ಸಾವಿರ ರೂ.ನಂತೆ ಪರಿಹಾರ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು.”
ಬರಡನಪುರ ನಾಗರಾಜು, ರೈತ ಮುಖಂಡ
ಎಸ್.ಸಿ. ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು ಕಾಕ್ರೋಚ್ ಜನತಾ ಪಾರ್ಟಿ ನಮ್ಮ ದೇಶದ ಯುವಜನರ ಹತಾಶೆ, ಸಿಟ್ಟು, ಆಕ್ರೋಶಕ್ಕೆ ಹಿಡಿದ…
ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ (ಟಾಟಾ ಏಸ್) ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು,…
ಹಾಸನ: ಮಗನನ್ನು ಶಾಲೆಗೆ ಸೇರಿಸಲಯ ಪತ್ರಕ್ಕಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ಅತಿಬೇಗ ಮತ್ತು ನಿರ್ಲಕ್ಷ್ಯದಿಂದ ಪಲ್ಟಿಯಾದ ಪರಿಣಾಮ ಅಮ್ಮ…
ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟದ…
ಬೆಂಗಳೂರು: ಇಂದು ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು…