Andolana originals

ಇಂದು ಬಿಳಿಕೆರೆ ಮಹದೇಶ್ವರ ದೇಗುಲ ಲೋಕಾರ್ಪಣೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ತಾಯಿಯ ಕನಸಿನಂತೆ ದೇಗುಲ ನಿರ್ಮಾಣ

ಜನರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹ, ಜಾತ್ರೆ, ವಿಶೇಷ ಪೂಜೆಗೆ ಮೈದಳೆದು ನಿಂತ ಕಲ್ಯಾಣಿ

ಮೈಸೂರು: ಯದುವಂಶದ ಅರಸರ ಕಾಲದಲ್ಲಿ ಯದುನಾಡು ಎಂದೇ ಕರೆಯಿಸಿಕೊಂಡಿದ್ದ ಹದಿನಾರು ಗ್ರಾಮದಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಗೆ ಸಜ್ಜಾಗಿದ್ದು, ಧಾರ್ಮಿಕ, ಪ್ರವಾಸಿ ತಾಣವಾಗಿ ರೂಪುಗೊಂಡಿದೆ.

ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟು ಧಾರ್ಮಿಕ ವಿಚಾರಗಳಿಂದ ದೂರವಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಮ್ಮ ತಾಯಿಯ ಆಶಯ ಹಾಗೂ ಗ್ರಾಮಸ್ಥರ ಕೋರಿಕೆಯಂತೆ ಆಸಕ್ತಿ ವಹಿಸಿ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ದೇವಾಲಯದ ಮಾದರಿಯಲ್ಲೇ ಹುಟ್ಟೂರಿನ ದೇವಾಲಯದ ಪುನರ್ ನಿರ್ಮಾಣಕ್ಕೆ ಮೂಲ ಕಾರಣವಾಗಿದ್ದಾರೆ.

ದೇವಸ್ಥಾನವು ಪುರಾತನ ಶೈಲಿಯಲ್ಲೇ ಪುನರ್ ನಿರ್ಮಾಣಗೊಂಡು ಸಾರ್ವಜನಿಕರ ಆಕರ್ಷಣೆಗೆ ಸಜ್ಜಾಗಿದ್ದು, ಗುರುವಾರದಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭವಾಗಿವೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸ್ವಗ್ರಾಮವಾಗಿರುವ ಹದಿನಾರು ಗ್ರಾಮವನ್ನು ರಾಜರ ಕಾಲದಲ್ಲಿ ಯದುನಾಡು ಎಂದು ಕರೆಯಲಾಗುತ್ತಿತ್ತು. ನಂತರ ಯದುನಾಡು ಹದಿನಾರು ಗ್ರಾಮವಾಗಿ ಪರಿವರ್ತನೆಯಾಯಿತು. ಈ ಗ್ರಾಮದಲ್ಲಿ ಜನಿಸಿದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಲೋಕೋಪ ಯೋಗಿ ಸಚಿವರಾಗಿದ್ದಾಗ ಸುತ್ತಮುತ್ತಲಿನ ಗ್ರಾಮಗಳ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಂತೆ ಅಭಿವೃದ್ಧಿಗೊಳಿಸಿದ್ದರು.

ಅದೇ ರೀತಿ ತಮ್ಮ ತಾಯಿ ಅವರು ಗ್ರಾಮದ ದೇವಸ್ಥಾನವನ್ನು ಪುನರ್ ನವೀಕರಣ ಮಾಡಿಸುವ ಬಗ್ಗೆ ಬಯಕೆ ಹೊಂದಿದ್ದರು. ಇದೇ ವೇಳೆ ಗ್ರಾಮದ ಮುಖಂಡರು, ಮಹದೇಶ್ವರನ ಒಕ್ಕಲಿನವರು ಕೋರಿಕೊಂಡಿದ್ದರು. ಇದನ್ನು ಪರಿಗಣಿಸಿದ್ದ ಮಹದೇವಪ್ಪ ತಾವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿ ೭ ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಈ ಹಣದಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಜತೆಗೆ, ಹೊಸ ದೇವಸ್ಥಾನದಲ್ಲಿ ರಾಜಗೋಪುರ, ಮದುವೆ, ಶುಭ ಸಮಾರಂಭಗಳನ್ನು ನಡೆಸಲು ಕಲ್ಯಾಣಮಂಟಪ, ಭಕ್ತರ ವಾಸ್ತವ್ಯಕ್ಕೆ ವಿಶ್ರಾಂತಿಗೃಹ ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ.

ಕಾರ್ತಿಕ ಮಾಸದಲ್ಲಿ ದೊಡ್ಡ ಜಾತ್ರೆ ನಡೆಯುವ ಕಾರಣ ತೆಪ್ಪೋತ್ಸವ ನಡೆಸಲುಕಲ್ಯಾಣಿಗೆ ಹೊಸ ರೂಪ ನೀಡಿ ಶುದ್ಧ ನೀರು ನಿಲ್ಲುವಂತೆ ಮರು ನಿರ್ಮಾಣ ಮಾಡಲಾಗಿದೆ. ಸಂಜೆ ಹೊತ್ತು ಕಲ್ಯಾಣಿಯ ಸುತ್ತಲೂ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಬಿಳಿಕೆರೆ ಶ್ರೀ ಮಹದೇಶ್ವರಸ್ವಾಮಿ, ಗಣಪತಿ ಸುಬ್ರಹ್ಮಣ್ಯ ವಿಗ್ರಹ ಪ್ರತಿಷ್ಠಾಪನೆ, ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ದೇವಸ್ಥಾನದ ಸಂಪ್ರೋಕ್ಷಣೆ ಕಾರ್ಯ ಗುರುವಾರದಿಂದಲೇ ಆರಂಭವಾಗಿದ್ದು, ಶುಕ್ರವಾರ ಬೆಳಿಗ್ಗೆ ಪ್ರಧಾನ ಹೋಮ, ಕಲಾಹೋಮ, ಪೂರ್ಣಾಹುತಿ, ಕುಂಭಾಭಿಷೇಕ, ನೇತ್ರದ ಮಿಲನ, ಮಹಾ ನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ. ನ.೧೬ರಂದು ಸಾವಿರಾರು ಜನರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನ.೧೭ರಂದು ಮುಂಜಾನೆ ಶ್ರೀ ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಉಪಚಾರ ಪೂಜೆ, ೧೦.೨೦ಕ್ಕೆ, ಹಾಲ್ಹರವಿ ಸೇವೆಹಾಗೂ ರಥೋತ್ಸವ ವೈಭವದಿಂದ ಜರುಗಲಿದೆ.  ಬೆಳಿಗ್ಗೆ ೧೦.೩೦ಕ್ಕೆ, ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಲಿಂಗಸ್ವಾಮಿ, ಮಹಾಂತ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಕೆ.ವೆಂಕಟೇಶ್, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನಿಲ್ ಬೋಸ್, ಶಾಸಕರಾದ ಜಿ.ಟಿ.ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ ಇತರೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

” ಬಿಳಿಕೆರೆ ಮಹದೇಶ್ವರ ದೇವಾಲಯದ ಪುನರ್ನಿರ್ಮಾಣ ಕಾರ್ಯವು ಕೇವಲ ಕಟ್ಟಡದ ಬದಲಾವಣೆ ಅಲ್ಲ, ಅದು ಒಂದು ಸಾಂಸ್ಕೃತಿಕ ಪುನರ್ ಜೀಣೋದ್ಧಾರದ ಸಂಕೇತವಾಗಿದೆ. ದೇವಾಲಯದ ಹೊಸ ರೂಪವು ಗ್ರಾಮಸ್ಥರ ಹೆಮ್ಮೆಯ ತಾಣವಾಗಿದ್ದು, ಮೈಸೂರು ಜಿಲ್ಲೆಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು.”

ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು

ಅಪರೂಪದ ಪಕ್ಷಿಗಳ ತಾಣ: 

ಹದಿನಾರು ಕೆರೆಯು ಹಲವಾರು ಪಕ್ಷಿಗಳ ನೆಚ್ಚಿನ ತಾಣವಾಗಿದೆ. ಪ್ರತಿವರ್ಷ ಈ ಕೆರೆಗೆ ಅಪರೂಪದ ನೂರಾರು ಪಕ್ಷಿಗಳು ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವುದರಿಂದ ಸಾರ್ವಜನಿಕರ ಗಮನ ಸೆಳೆದಿದೆ.

ಆಂದೋಲನ ಡೆಸ್ಕ್

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

7 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

9 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

10 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

10 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

13 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

14 hours ago