Andolana originals

ಇವ ನಮ್ಮವ ಮಸೂದೆ; ಅಮಾಯಕ ಯುವ ಜೀವಗಳ ರಕ್ಷಣೆ

ಜಾತಿ ಆಧಾರಿತ ಅಪರಾಧಕ್ಕೆ ತಡೆ, ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಒದಗಿಸುವ ಮಹತ್ವಪೂರ್ಣವಾದ ‘ಇವ ನಮ್ಮವ ಇವ ನಮ್ಮವ’ ಮಸೂದೆಯನ್ನು ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಮಂಡಿಸಿದೆ. ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಅನ್ಯ ಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಗಳನ್ನು ತಂದೆಯೇ ಕೊಂದು ಹಾಕಿದ ದಾರುಣ ಘಟನೆ ವರದಿಯಾಗಿತ್ತು.

ಇದೊಂದು ನಿದರ್ಶನ ಮಾತ್ರ, ಇಂತಹ ಕ್ರೂರ ಹಾಗೂ ಅಮಾನವೀಯ ಪ್ರಕರಣಗಳು ಅಲ್ಲಲ್ಲಿ ಸದ್ದು ಮಾಡುತ್ತಲೇ ಇವೆ. ಪ್ರಮುಖವಾಗಿ ಮರ್ಯಾದೆಗೇಡು ಹತ್ಯೆಗಳಿಗೆ ಕಡಿವಾಣ ಹಾಕುವ ತುರ್ತು ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ವಿಧೇಯಕವನ್ನು ಮಂಡನೆ ಮಾಡಿದೆ.

ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆ ಮತ್ತು ಹಲ್ಲೆಗಳನ್ನು ತಡೆಗಟ್ಟಲು ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಹಾಗೂ ನಿಷೇಧಕ (ಇವ ನಮ್ಮ ಇವ ನಮ್ಮವ) ೨೦೨೬’ ವಿಧೇಯಕ ಮಂಡನೆಯಾಗಿದೆ. ಸಾಂವಿಧಾನಿಕವಾಗಿ ಅಂತರ್ಜಾತಿ ವಿವಾಹಗಳಿಗೆ ಮನ್ನಣೆ ಇದೆ. ಆದರೂ ಸಂಪ್ರದಾಯ, ಜಾತೀಯತೆ, ಮೌಢ್ಯ, ಕಂದಾಚಾರದ ಜಾಲಕ್ಕೆ ಸಿಲುಕಿದ ಪ್ರತಿಷ್ಠೆಯ ಮನಸ್ಸುಗಳು ಜಾತಿ ವಿನಾಶ,  ಅಸಮಾನತೆಯ ನಾಶಕ್ಕೆ ಮೂಲವಾಗಬಹುದಾದ ಈ ಜಾತ್ಯತೀತ ಮದುವೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೆಲ ಅಪರೂಪದ ಪ್ರಕರಣಗಳು ಈ ಆರೋಪಕ್ಕೆ ಹೊರತಾಗಿವೆ. ಅದೆಷ್ಟೋ ಯುವಕ, ಯುವತಿಯರು ಈ ಅಂಧಾನುಕರಣೆಯ ಜಾತೀಯತೆಗೆ ಜೀವ ಕಳೆದುಕೊಂಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರು ಜಾತಿಯ ತರತಮಗಳ ವಿರುದ್ಧ ಕ್ರಾಂತಿಯನ್ನೇ ನಡೆಸಿದರು. ‘ಜಾತಿ ಹೀನನ ಮನೆಯ ಜ್ಯೋತಿ ತಾನವ್ವ’, ‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎನ್ನುವ ಮೂಲಕ ಸಹಬಾಳ್ವೆ, ಸಾಮರಸ್ಯದ ಸಂದೇಶವನ್ನು ಸಾರಿದ್ದರು. ರಾಜ್ಯ ಸರ್ಕಾರ ಇದೇ ಆಶಯವನ್ನು ಇಟ್ಟುಕೊಂಡು ‘ಇವ ನಮ್ಮವ ಇವ ನಮ್ಮವ’ ಕಾಯಿದೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ೭೮ ವರ್ಷಗಳ ನಂತರವೂ ಜಾತೀಯತೆ, ಕೋಮುವಾದದಂತಹ ಅಮಾನುಷತೆಯನ್ನು ಮಟ್ಟಹಾಕಲು ಇಂತಹದೊಂದು ಕಾಯ್ದೆ ತರಬೇಕಾಗಿದೆ ಎಂಬುದು ಮನುಷ್ಯತ್ವ ಇರುವ ಮನಸ್ಸುಗಳು ತಲೆತಗ್ಗಿಸುವಂತಹ ಸಂಗತಿ. ೧೮ ವರ್ಷ ವಯಸ್ಸು ತುಂಬಿದ ಯುವತಿ, ೨೧ ವರ್ಷ ವಯಸ್ಸು ಪೂರ್ಣಗೊಂಡ ಯುವಕ ಪರಸ್ಪರ ಒಪ್ಪಿ ಮದುವೆಯಾಗುವುದಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಸಲ್ಲದು ಎಂಬುದನ್ನು ನ್ಯಾಯಾಂಗ ಕೂಡ ಹೇಳುತ್ತದೆ. ಆದರೆ, ಜಾತಿಯ ಅಹಮಿಕೆಗೆ ಅಥವಾ ನೆರೆಹೊರೆಯವರ ಅವಹೇಳನಕ್ಕೆ ಗುರಿಯಾಗಬೇಕಲ್ಲ ಎಂಬ ಆಕ್ರೋಶಕ್ಕೆಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಹೆತ್ತವರು ಅಥವಾ ಒಡಹುಟ್ಟಿದವರು ಅಥವಾ ಸಂಬಂಧಿಕರು ಇಂತಹ ದಾರುಣ ಕೃತ್ಯಗಳಿಗೆ ಕಾರಣರಾಗುತ್ತಿದ್ದಾರೆ. ಬದುಕಿನಲ್ಲಿ ಸಂತಸ, ಸಂಭ್ರಮಗಳನ್ನು ಸವಿಯಬೇಕಾದ ಯುವ ಜೋಡಿಗಳು ಹಾದಿಬೀದಿಯಲ್ಲಿ ಹೆಣವಾಗುವುದು, ರಕ್ತಪಾತವೇ ನಡೆದುಹೋಗುವುದನ್ನು ಅತ್ಯಂತ ಕಟ್ಟುನಿಟ್ಟಾಗಿ ತಡೆಯಲು ಬಹುಶಃ ಇಂತಹದೊಂದು ಮಸೂದೆ ಕಾಯ್ದೆಯಾಗುವುದು ಆವಶ್ಯಕ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರವನ್ನೇ ಕೈಗೊಂಡಿದೆ. ಈ ಮಸೂದೆ ವಿಧಾನಮಂಡಲದ ಕೆಳಮನೆ ಮತ್ತು ಮೇಲ್ಮನೆಗಳಲ್ಲಿ ಅಂಗೀಕಾರವಾದ ನಂತರ ಕಾಯ್ದೆಯಾಗಲಿದೆ. ಆದರೆ, ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವುದು ಅತ್ಯಗತ್ಯ. ‘ಮಾನ- ಮಾರ್ಯಾದೆ ಹೋಯಿತು’ ಎಂಬ ಕಾರಣಕ್ಕೆ ಕೊಲೆ ಮಾಡಲು ಹೇಸದ ಜನರಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ದುಷ್ಕೃತ್ಯಗಳಿಗೆ ಉತ್ತೇಜನ ನೀಡುವ ಜಾತಿವಾದ ಮನಸ್ಥಿತಿಯವರಿಗೂ ಶಿಕ್ಷೆಯಾಗಬೇಕು. ಇದರಿಂದ ಮರ್ಯಾದೆಯನ್ನು ಪತ್ರಿಷ್ಠೆಯಾಗಿ ಪರಿಗಣಿಸಿ ಜೀವಗಳನ್ನು ಹಣಿಯುವುದಕ್ಕೂ ಹಿಂಜರಿಯದ ಮತಿಗೇಡು ಜನರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ.

ಮಸೂದೆಯಲ್ಲಿ ಮರ್ಯಾದೆಗೇಡು ಹತ್ಯೆ ಅಪರಾಧಕ್ಕೆ ಕನಿಷ್ಠ ಐದು ವರ್ಷಗಳು ಜೈಲು ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಅಂತರ್ಜಾತಿ ಅಥವಾ ಅಂತರ್ಧರ್ಮೀಯ ವಿವಾಹವಾದವರ ಮೇಲೆ ಹಲ್ಲೆ ನಡೆಸಿದರೆ, ಅಪರಾಽಗಳಿಗೆ ೩ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೩ ಲಕ್ಷ ರೂ. ಜುಲ್ಮಾನೆಯನ್ನು ವಿಧಿಸಲು ಅವಕಾಶ ಇದೆ. ಈಗಾಗಲೇ ಜಾರಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ- ೧೯೮೯ ನಿರೀಕ್ಷೆಯಷ್ಟು ಯಶಸ್ವಿಯಾಗಿಲ್ಲ. ಪರಿಶಿಷ್ಟರ ಮೇಲಿನ ಜಾತಿ ದೌರ್ಜನ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಈ ಕಾಯ್ದೆ ದುರುಪಯೋಗ ಆಗುತ್ತಿವೆ ಎಂಬ ಆಕ್ಷೇಪಗಳೂ ಇವೆ. ಈಗ ಜಾರಿಗೆ ತರಲು ಮುಂದಾಗಿರುವ ‘ಇವ ನಮ್ಮವ ಇವ ನಮ್ಮವ’ ಕಾಯ್ದೆಯೂ ಇದೇ ರೀತಿ ವಿಫಲವಾಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕಾಗುತ್ತದೆ.

” ಮರ್ಯಾದೆ ಹೆಸರಿನಲ್ಲಿ ಹತ್ಯೆ ಮತ್ತು ಹಲ್ಲೆಗಳನ್ನು ತಡೆಗಟ್ಟಲು ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಮಾರ್ಯಾದೆಯ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಹಾಗೂ ನಿಷೇಧಕ (ಇವ ನಮ್ಮ ಇವ ನಮ್ಮವ) ೨೦೨೬’ ವಿಧೇಯಕ ಮಂಡನೆಯಾಗಿದೆ. ಸಾಂವಿಧಾನಿಕವಾಗಿ ಅಂತರ್ಜಾತಿ ವಿವಾಹಗಳಿಗೆ ಮನ್ನಣೆ ಇದೆ.”

 

 

ಆಂದೋಲನ ಡೆಸ್ಕ್

Recent Posts

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…

39 mins ago

ಬಲೂಚಿಸ್ತಾನ | ಸೇನಾ ಸಿಬ್ಬಂದಿ ಇದ್ದ ರೈಲು ಗುರಿಯಾಗಿಸಿ ಸ್ಫೋಟ ; 24 ಸಾವು

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…

3 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

5 hours ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

5 hours ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

6 hours ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

6 hours ago