Andolana originals

ಜಂಬೂ ಸವಾರಿ ಮಾರ್ಗದ ಮರದ ಕಾಂಡ ತೆರವಾಗುತ್ತಾ..?

 

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ವಿಜಯದಶಮಿಯಂದು ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂ ಸವಾರಿ ಮೆರವಣಿಗೆ ಸಾಗುವ ಸಯ್ಯಾಜಿರಾವ್ ರಸ್ತೆಯ ಬಂಬೂ ಬಜಾರ್‌ನ ಪಾದಚಾರಿ ಮಾರ್ಗದಲ್ಲಿ ಉರುಳಿ ಬಿದ್ದಿರುವ ಮರದ ಬೃಹತ್ ಕಾಂಡವನ್ನು ಕಳೆದ ಎರಡು ವರ್ಷಗಳಿಂದ ತೆರವುಗೊಳಿಸದೇ ಇರುವುದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಜನ ಸಾಗರ ಇದ್ದೇ ಇರುತ್ತದೆ. ಲಕ್ಷಾಂತರ ಜನರು ಮಹೋತ್ಸವದ ಅಂತಿಮ ದಿನದ ಆ ಒಂದು ವೈಭವವನ್ನು ಕಣ್ಣುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ.

ಇಂಥ ವಿಶೇಷ ದಿನಗಳಲ್ಲಿ ನಗರದ ಸ್ವಚ್ಛತೆ ಬಗ್ಗೆ ಗಮನ ಹರಿಸಿದರಷ್ಟೇ ಸಾಲದು, ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಒಣಗಿದ ಮರದ ರೆಂಬೆಗಳ ತೆರವು, ರಸ್ತೆ ಮಗ್ಗುಲಲ್ಲೇ ಬಿದ್ದಿರುವ ಮರಗಳು, ಬಂಬೂ ಬಜಾರ್‌ನಲ್ಲಿರುವ ಮೆಟ್ಟಿಲುಗಳ ಮೇಲೆ ಬೆಳೆದಿರುವ ಕುರುಚಲು ಹಾಗೂ ಮುಳ್ಳಿನ ಗಿಡಗಳನ್ನೂ ತೆರವು ಗೊಳಿಸಬೇಕಾಗಿದೆ.

ಅಪಾಯಕಾರಿಯಾಗಿರುವ ಒಣಗಿದ ರೆಂಬೆಗಳು: ಜಂಬೂ ಸವಾರಿ ಸಾಗುವ ಮಾರ್ಗದ ಎರಡೂ ಕಡೆಗಳಲ್ಲಿ ಸಾಲು ಮರಗಳಿದ್ದು, ಅವುಗಳಲ್ಲಿ ಒಣಗಿದ ರೆಂಬೆಗಳೂ ಇವೆ. ದಸರಾ ಮೆರವಣಿಗೆಗೂ ಮುನ್ನ ಈ ರೆಂಬೆಗಳ ತೆರವು ಕಾರ್ಯ ಪೂರ್ಣಗೊಳ್ಳಬೇಕಿದೆ. ಆಕಸ್ಮಿಕವಾಗಿ ಯಾವುದೇ ಒಂದು ಸಣ್ಣ ಕೊಂಬೆ ಜಂಬೂ ಸವಾರಿ ವೀಕ್ಷಕರ ಮೇಲೆ ಬಿದ್ದರೂ ಅನಾಹುತ ಸಂಭವಿ ಸುತ್ತದೆ. ಹೀಗಾಗದಿರಲು ಪಾಲಿಕೆಯಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಇದಲ್ಲದೇ ಸಯ್ಯಾಜಿರಾವ್ ರಸ್ತೆಯಲ್ಲಿ ಮೋಟು ಮರವೊಂದಿದ್ದು, ಅದು ಕೂಡ ಚಿಗುರಿ ರೆಂಬೆಯೊಂದು ಎತ್ತರಕ್ಕೆ ಬೆಳೆದಿದ್ದು, ಇದನ್ನು ತೆರವುಗೊಳಿಸುವ ಬಗ್ಗೆಯೂ ಸಂಬಂಧಪಟ್ಟವರು ಗಮನ ಹರಿಸುವುದು ಅಗತ್ಯ.

ಮೆಟ್ಟಿಲುಗಳು ಸ್ವಚ್ಛವಾಗಬೇಕು: ದಸರಾ ಜಂಬೂ ಸವಾರಿಯನ್ನು ಸಾರ್ವಜನಿಕರು ಆರಾಮವಾಗಿ ಕುಳಿತು ನೋಡಬೇಕೆಂದೇ ಬಂಬೂ ಬಜಾರಿನ ಮೆಟ್ಟಿಲುಗಳ ಮೇಲೆ ಮಧ್ಯಾಹ್ನ 12 ಗಂಟೆಯಿಂದಲೇ ಜಾಗ ಹಿಡಿದುಕೊಂಡು ಕೂರುತ್ತಾರೆ. ಈ ಮೆಟ್ಟಿಲುಗಳ ಹಿಂಭಾಗದಲ್ಲಿ ಎತ್ತರದ ಮುಳ್ಳಿನ ಗಿಡಗಳು ಬೆಳೆದಿವೆ. ಜನರು ಈ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಿಂದ ದಸರಾ ವೇಳೆಯಲ್ಲಿ ಮಾತ್ರವಲ್ಲದೆ, ಬೇರೆ ಸಮಯದಲ್ಲೂ ಸ್ವಚ್ಛತೆ ಮಾಡುವುದು ಅಗತ್ಯ ಎನ್ನುತ್ತಾರೆ.

ಒಣಗಿದ ಮರಗಳ ತೆರವು: ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಡಬಲ್ ಡೆಕ್ಕರ್ ಬಸ್ ಕೂಡ ಓಡಾಡುವುದರಿಂದ ಕೆಳಕ್ಕೆ ಬಾಗಿರುವ ರೆಂಬೆಗಳನ್ನೂ ತೆರವು ಮಾಡುತ್ತೇವೆ. ಮರದ ಬೃಹತ್ ಕಾಂಡವನ್ನು ನಾಳೆಯೇ ತೆರವು ಮಾಡಿಸುತ್ತೇನೆ. ಅರಮನೆಯಿಂದ ಬನ್ನಿಮಂಟಪದ ವರೆಗೂ ಇರುವ ಮರಗಳಲ್ಲಿನ ಒಣಗಿದ ಹಾಗೂ ರಸ್ತೆಗೆ ಬಾಗಿರುವ ರೆಂಬೆಗಳ ತೆರವು ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು, ದಸರಾ ಒಂದು ವಾರ ಇರುವಂತೆಯೇ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕರಾದ ಮೋಹನ್‌ ತಿಳಿಸಿದ್ದಾರೆ.

ಜಂಬೂ ಸವಾರಿ ಮಾರ್ಗದಲ್ಲಿ ಫುಟ್ಬಾತ್ ಮೇಲೆ ಬಿದ್ದಿರುವ ಮರದ ದೊಡ್ಡ ಕಾಂಡ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ. ಕೂಡಲೇ ತೆರವು ಮಾಡಿಸುತ್ತೇನೆ. ಇದು ಮಾತ್ರವಲ್ಲ ಈ ಮಾರ್ಗದ ಮರಗಳಲ್ಲಿ ಒಣಗಿರುವ ರೆಂಬೆಗಳನ್ನು ಗಮನಿಸಿ ಕಟಾವು ಮಾಡಿಸುತ್ತೇವೆ. ಈಗ ಕುರುಬಾರಹಳ್ಳಿ ಹಾಗೂ ಚಾಮುಂಡಿ ಬೆಟ್ಟದ ಮಾರ್ಗದಲ್ಲಿರುವ ಮರಗಳ ಒಣಗಿರುವ ರೆಂಬೆಗಳನ್ನು ತೆರವು ಮಾಡುತ್ತಿದ್ದೇವೆ. ದಸರಾ ಆರಂಭಕ್ಕೂ ಮುನ್ನ ಈ ಕೆಲಸ ಮಾಡಿ ಮುಗಿಸುತ್ತೇವೆ.

-ಮೋಹನ್, ಸಹಾಯಕ ನಿರ್ದೇಶಕರು, ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗ

ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಉರುಳಿ ಬಿದ್ದಿರುವ ಮರವನ್ನು ಪಾಲಿಕೆಯವರು ಈ ವರೆಗೂ ತೆರವು ಮಾಡಿಲ್ಲ. ವಲಯ ಕಚೇರಿಗೆ ಅನೇಕ ಬಾರಿ ದೂರು ನೀಡಿದ್ದೇವೆ. ನೆಪಕ್ಕೆ ಒಂದು ಪತ್ರ ಬರೆದು ಕೊಡಿ ಎಂದು ಕೇಳುತ್ತಾರೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದಾರೆ. ಈ ವರ್ಷವಾದರೂ ಮರ ತೆರವು ಮಾಡಿ ಫುಟ್ಬಾತ್‌ನಲ್ಲಿರುವ ಮರದ ಬೇರು ತೆಗೆದು ಇಂಟರ್ಲಾಕ್ ಹಾಕುತ್ತಾರಾ ನೋಡಬೇಕು.

-ಶ್ರೀಕಾಂತ್, ಮಂಡಿ ಮೊಹಲ್ಲಾ ನಿವಾಸಿ

ಆಲ್‌ಫ್ರೆಡ್‌ ಸಾಲೋಮನ್

ಮೂಲತಃ ಮೈಸೂರಿನವನಾದ ನಾನು ಮಹಾರಾಜ ಕಾಲೇಜಿನಲ್ಲಿ ಪದವಿ ಮುಗಿಸಿ, ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಬೆಂಗಳೂರಿನ ಅಭಿಮಾನ ಪ್ರಕಾಶನದ ಅಭಿಮಾನಿ, ಅರಗಿಣಿ, ಪತ್ರಿಕೆ ಮೂಲಕ 1988ರಲ್ಲಿ ಪತ್ರಕರ್ತನಾಗಿ ವೃತ್ತಿ ಆರಂಭಿಸಿ, ರೂಪತಾರ, ಉದಯವಾಣಿ, ಗೃಹಶೋಭ, ಉಷಾಕಿರಣ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುತ್ತೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

4 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

4 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

6 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

7 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

8 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

8 hours ago