ಗ್ರಾಮಸ್ಥರು, ಪಕ್ಷಿ ಪ್ರಿಯರಲ್ಲಿ ಹೆಚ್ಚಿದ ಆತಂಕ; ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲು ಸಾರ್ವಜನಿಕರು ಒತ್ತಾಯ
ಅಣ್ಣೂರು ಸತೀಶ್
ಭಾರತೀನಗರ: ರಾಜ್ಯದ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾದ ಸಮೀಪದ ಕೊಕ್ಕರೆ ಬೆಳ್ಳೂರಿಗೆ ವಂಶಾಭಿವೃದ್ಧಿಗಾಗಿ ಬರುವ ಪಕ್ಷಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.
ಪ್ರತಿ ವರ್ಷ ಸಂತಾನೋತ್ಪತ್ತಿಗಾಗಿ ನೆರೆಯ ಬಾಂಗ್ಲಾ, ಮಯನ್ಮಾರ್(ಬರ್ಮಾ), ಶ್ರೀಲಂಕಾ ದೇಶಗಳಿಂದ ಹಾಗೂ ವಿವಿಧ ಪ್ರಭೇದಗಳ ಕೊಕ್ಕರೆಗಳು ಬೆಳ್ಳೂರಿಗೆ ವಲಸೆ ಬಂದು ಸಂತಾನೋತ್ಪತ್ತಿಯ ಬಳಿಕ ಸ್ವಸ್ಥಾನಕ್ಕೆ ತೆರಳುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮಕ್ಕೆ ವಲಸೆ ಬರುವ ಕೊಕ್ಕರೆಗಳು ಮೊಟ್ಟೆಗಳನ್ನು ಇಟ್ಟು ಮರಿ ಮಾಡದೆ, ಗೂಡಿನಲ್ಲಿಯೇ ಬಿಟ್ಟು ವಾಪಸ್ಸಾಗುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ವನ್ಯಜೀವಿ, ಅರಣ್ಯ ಮತ್ತು ಪಶು ಇಲಾಖೆ ಅಧಿಕಾರಿಗಳು ಪಕ್ಷಿಗಳು ವಾಸಿಸುವ ಪ್ರತಿ ಮರಗಳ ಬಳಿ ಖುದ್ದಾಗಿ ಹೋಗಿ ಅವುಗಳ ಈಗಿನ ಜೀವನ ಶೈಲಿ, ಕ್ರಿಯಾಶೀಲತೆ ಬಗ್ಗೆ ಪರಿಶೀಲನೆ ನಡೆಸಿ ಪಕ್ಷಿಗಳ ಸಂತಾನಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕೆಂದು ಪಕ್ಷಿ ಪ್ರಿಯರು ಒತ್ತಾಯಿಸಿದ್ದಾರೆ.
ವಂಶಾಭಿವೃದ್ಧಿಗೆ ದೂರದ ದೇಶಗಳಿಂದ ಕೊಕ್ಕರೆ ಬೆಳ್ಳೂರಿಗೆ ಬರುವ ಪೆಯಿಂಟೆಡ್ ಸ್ಟಾರ್ಕ್, ವೈಟ್ ಐಬಿಸ್, ನೈಟ್ಹೆರಾನ್, ಪಾಂಡ್ಹೆರಾನ್, ಕಾರ್ಮೋರೆಂಟ್, ಪೆಲಿಕಾನ್, ಇಗ್ರೇಟ್ ಮುಂತಾದ ಹಕ್ಕಿಗಳು ಕೂಡ ಈ ಅವಧಿಯಲ್ಲಿ ಇಲ್ಲಿ ಗೂಡುಕಟ್ಟಿಕೊಂಡು ಮರಿ ಮಾಡುತ್ತವೆ. ಕೆಲ ದಿನಗಳ ನಂತರ ಮರಿಯು ಹಾರುವ ಚೈತನ್ಯ ಪಡೆದ ಕೂಡಲೇ ಮತ್ತೆ ಬಂದ ಹಾದಿಯಲ್ಲೇ ತಮ್ಮ ತಮ್ಮ ದೇಶಗಳನ್ನು ಸೇರಿಕೊಳ್ಳುವುದು ಸಹಜ ಪ್ರಕ್ರಿಯೆ.
ನಾಲ್ಕೈದು ವರ್ಷಗಳಿಂದಲೂ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿ ಕೊಕ್ಕರೆ(ಫೆಲಿಕಾನ್)ಗಳು ಸಾವನ್ನಪ್ಪುತ್ತಿದ್ದವು. ಇದರಿಂದ ಪಕ್ಷಿಪ್ರಿಯರಲ್ಲಿ ಆತಂಕ ಮನೆಮಾಡಿತ್ತು. ಆದರೆ, ಈ ವರ್ಷ ಕೊಕ್ಕರೆಗಳು ಮೊಟ್ಟೆಗಳನ್ನು ಇಟ್ಟು ಬೇರೆಡೆ ಹೊರಟು ಹೋಗುತ್ತಿರುವುದರಿಂದ ಮತ್ತಷ್ಟು ಆತಂಕ ತಂದಿದೆ.
ವಿದೇಶದಿಂದ ಸಂತಾನಕ್ಕಾಗಿ ಇಲ್ಲಿಗೆ ವಲಸೆ ಬರುವ ಪೆಲಿಕಾನ್ಗಳು, ಗ್ರಾಮದ ಮಧ್ಯಭಾಗದ ಮರಗಳ ಮೇಲೆ ಗೂಡು ಕಟ್ಟಿ ವಾಸಿಸುವುದು ವಿಶೇಷ. ೪ ವರ್ಷಗಳಿಂದಲೂ ಪೆಲಿಕಾನ್ ಹಕ್ಕಿಗಳು ಮರದ ಮೇಲಿಂದ ಉರುಳಿ ಬಿದ್ದು ಸಾವನ್ನಪ್ಪುತ್ತಿದ್ದವು. ಇದುವರೆಗೆ ಸುಮಾರು ೧೨೫ಕ್ಕೂ ಹೆಚ್ಚು ಪೆಲಿಕಾನ್ಗಳು ಮೃತಪಟ್ಟಿವೆ.
ಅರಣ್ಯ, ಪಶು ಹಾಗೂ ಹಲವು ಪಕ್ಷಿ ತಜ್ಞರು ಪೆಲಿಕಾನ್ಗಳ ಸಾವಿಗೆ ಸಂಬಂಧಿಸಿದಂತೆ ಹಲವು ಪರೀಕ್ಷೆಗಳನ್ನು ಕೈಗೊಂಡಿದ್ದರೂ ಕೂಡ ಗ್ರಾಮದಲ್ಲಿ ಪೆಲಿಕಾನ್ಗಳ ಸಾವು ಸಂಭವಿಸುತ್ತಲೇ ಇದೆ. ಜೊತೆಗೆ ಈಗ ಹಕ್ಕಿಗಳು ಮೊಟ್ಟೆಗಳನ್ನಿಟ್ಟು ಬಿಟ್ಟು ಹೊರಟು ಹೋಗುತ್ತಿವೆ.
” ಗ್ರಾಮದಲ್ಲಿ ಜಾಗದ ಕೊರತೆಯಿಂದ ಮರಗಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಕೊಕ್ಕರೆಗಳು ಮೊಟ್ಟೆಗಳನ್ನು ಬಿಟ್ಟುಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಕಳೆದ ಎರಡು-ಮೂರು ವರ್ಷಗಳಿಂದಲೂ ಕೊಕ್ಕರೆಗಳಿಗೆ ಯಾವುದೇ ಸಮಸ್ಯೆಯಾದರೂ ರಕ್ಷಿಸಲು ಮುಂದಾಗಿದ್ದೇವೆ. ಕೆಲವು ಹಕ್ಕಿಗಳು ತಮಗೆ ಅಗತ್ಯವಿರುವ ಸ್ಥಳಗಳಿಗೆ ಮೊಟ್ಟೆಗಳನ್ನು ಬಿಟ್ಟುಹೋಗಿರುವುದನ್ನು ಕಂಡು ಮೊಟ್ಟೆಗಳನ್ನು ಸಂರಕ್ಷಿಸಿ ಅವುಗಳನ್ನು ಮರಿಯಾಗಿಸಿ, ಅವು ಹಾರುವವರೆಗೂ ನಾವು ನೋಡಿಕೊಂಡಿದ್ದೇವೆ.”
ರಾಜೇಶ್ವರಿ, ವಲಯ ಅರಣ್ಯಾಧಿಕಾರಿ, ವನ್ಯಜೀವಿ ಇಲಾಖೆ, ಮೇಲುಕೋಟೆ
” ಕೊಕ್ಕರೆಗಳು ಹಾಗೂ ಮರಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡುವ ಕೆಲಸ ಹೆಜ್ಜಾರ್ಲೆ ಬಳಗದ ಸದಸ್ಯರು ಹಾಗೂ ಪಕ್ಷಿಪ್ರಿಯರಿಂದ ನಡೆಯುತ್ತಿದೆ. ಪ್ರತಿ ವರ್ಷವೂ ವಿವಿಧ ಜಾತಿಯ ಪಕ್ಷಿಗಳ ಮರಿಗಳನ್ನು ರಕ್ಷಿಸಿ ನಂತರ ಸ್ವತಂತ್ರವಾಗಿ ಹಾರಾಡಲು ಬಿಡಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಯವರ ಸಹಕಾರ ಅತ್ಯವಶ್ಯ.”
ದಿವ್ಯ ರಾಮಚಂದ್ರಶೆಟ್ಟಿ, ಗ್ರಾ.ಪಂ. ಸದಸ್ಯೆ
” ಬೆಳ್ಳೂರಿನಲ್ಲಿನ ವಿವಿಧ ಜಾತಿಯ ಸುಮಾರು ೨೫೦ ಮರಗಳಲ್ಲಿ, ಅದರಲ್ಲೂ ಹುಣಸೆ, ಆಲದ ಮರಗಳಲ್ಲಿ ಹೆಚ್ಚಾಗಿ ಬೀಡುಬಿಟ್ಟು ಗೂಡುಕಟ್ಟಿ, ಮೊಟ್ಟೆಗಳನ್ನಿಟ್ಟು ಮರಿ ಮಾಡಿ ಪೋಷಿಸಿ, ನಂತರ ಮರಿಗಳೊಟ್ಟಿಗೆ ಸ್ವಸ್ಥಾನಕ್ಕೆ ವಾಪಸಾಗುವುದು ಹಕ್ಕಿಗಳ ಜೀವನ ಕ್ರಮ. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ಮರಗಳನ್ನು ಬೆಳೆಸುವುದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.”
ಕೃಷ್ಣ, ಗ್ರಾಮದ ಮುಖಂಡ
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…