Andolana originals

ದಿ ಕೇರಳ ಸ್ಟೋರಿ-2 : ಸತ್ಯ V/S ಅಜೆಂಡಾ..!

ವಿವಾದಾಸ್ಪದ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಲನಚಿತ್ರ ಪ್ರದರ್ಶನಕ್ಕೆ ಕೇರಳದ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ಹಸಿರು ನಿಶಾನೆ ತೋರಿದ್ದು, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಈಗ ಪ್ರದರ್ಶನಗೊಳ್ಳುತ್ತಿದೆ. ಪ್ರೀತಿ- ಪ್ರೇಮ, ಮದುವೆಯ ನಾಟಕವಾಡಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ (ಲವ್ ಜಿಹಾದ್) ದುರುದ್ದೇಶ ಹೊಂದಿರುವ ವ್ಯವಸ್ಥಿತ ಅಜೆಂಡಾವೊಂದು ದೇಶದಲ್ಲಿ ಜಾರಿಯಲ್ಲಿದೆ ಎಂದು ಬಿಂಬಿಸುವ ಸಿನಿಮಾ ಇದು. ಈ ಚಿತ್ರದ ಟೀಸರ್ ರಿಲೀಸ್ ಆದ ದಿನದಿಂದಲೇ ವಿವಾದ ಉಂಟಾಗಿತ್ತು. ಇಂಥ ಸಿನಿಮಾಗಳನ್ನು ನಿಷೇಽಸಬೇಕು ಎಂಬ ಕೂಗು ಸಹ ಕೇಳಿಬಂದಿತ್ತು. ದೇಶದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಸಿನಿಮಾ ಜಗತ್ತಿನ ದಿಗ್ಗಜರು, ರಾಜ ಕೀಯ ಪಕ್ಷಗಳ ಮುಖಂಡರು ಸಿನಿಮಾ ಪರ ಮತ್ತು ವಿರುದ್ಧವಾಗಿ ಮಾತಿನ ಯುದ್ಧದಲ್ಲಿ ನಿರತರಾಗಿದ್ದರು. ಈ ಸಿನಿಮಾಕ್ಕೆ ತಡೆವೊಡ್ಡುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮತ್ತು ಸಂವಿಧಾನ ಬಾಹಿರ ಕೆಲಸ ಎಂದು ಸಿನಿಮಾದ ಪರವಾ ಗಿದ್ದವರು ವಾದಿಸಿದರೆ, ಸಮಾಜವನ್ನು ಒಡೆಯುವ, ದ್ವೇಷ ಬಿತ್ತುವ, ಕೋಮು ಸಾಮರಸ್ಯ ಹಾಳು ಮಾಡುವ ಮತ್ತು ಭಾರತೀಯ ಜನತಾ ಪಾರ್ಟಿಯ ರಾಜಕೀಯ ಅಜೆಂಡಾ ವಿಸ್ತರಣೆಯ ದುರುದ್ದೇಶದಿಂದ ಈ ಸಿನಿಮಾ ನಿರ್ಮಿಸಲಾಗಿದೆ. ಇಂಥ ಸಿನಿಮಾಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡಲಿವೆ ಎಂದು ಸಿನಿಮಾದ ವಿರೋಧಿಗಳು ವಾದಿಸುತ್ತಿದ್ದಾರೆ.

ಶ್ರೀದೇವ್ ನಂಬೂದರಿ ಎಂಬವರು ‘ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಮತ್ತು ಸಾಮಾಜಿಕ ಸೌಹಾರ್ದವನ್ನು ಮಣ್ಣುಪಾಲು ಮಾಡುವ ಉದ್ದೇಶದಿಂದ ಈ ಸಿನಿಮಾವನ್ನು ನಿರ್ಮಿಸಲಾಗಿದೆ, ಇದೊಂದು ನಿರ್ದಿಷ್ಟ ರಾಜಕೀಯ ಅಜೆಂಡಾವನ್ನು ಪ್ರಚಾರ ಮಾಡುವಂಥ (ಪ್ರೊಪಗೆಂಡಾ) ಸಿನಿಮಾ. ಇಂಥ ವಿಭಜನಕಾರಿ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಬಾರದು, ಇಂಥ ಚಿತ್ರಗಳು ಬಿಡುಗಡೆಯಾದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಬಹುದು’ ಎಂದು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಈ ಚಿತ್ರಕ್ಕೆ ‘ದಿ ಕೇರಳ ಸ್ಟೋರಿ-೨’ ಎಂದು ಹೆಸರಿಟ್ಟಿರುವ ಔಚಿತ್ಯವನ್ನೂ ಪ್ರಶ್ನಿಸಿದ್ದರು. ಕಳೆದ ಗುರುವಾರ ಅರ್ಜಿಯ ವಿಚಾರಣೆ ನಡೆಸಿ ದ ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಅವರಿದ್ದ ಏಕಸದಸ್ಯ ಪೀಠ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಿತ್ರಕ್ಕೆ ಹದಿನೈದು ದಿನಗಳ ತಡೆಯಾಜ್ಞೆ ನೀಡಿತ್ತು. ಆದರೆ, ಸಿನಿಮಾದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರು ಅದೇ ದಿನ ಈ ತಡೆಯಾಜ್ಞೆಯನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಽಕಾರಿ ಮತ್ತು ಪಿ.ವಿ.ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ನಿರ್ಮಾಪಕರ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ಸಿನಿಮಾ ಪ್ರದರ್ಶನಕ್ಕೆ ಹಸಿರು ನಿಶಾನೆ ತೋರಿತು. ‘ಈ ಸಿನಿಮಾದ ಕೆಲವೇ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಲಾಗಿದೆ, ಸಮಗ್ರವಾಗಿ ಚಿತ್ರವನ್ನು ನೋಡಿದರೆ ತಡೆಯಾಜ್ಞೆ ನೀಡುವ ಅಗತ್ಯ ಕಾಣುವುದಿಲ್ಲ, ಮೇಲಾಗಿ ಸೆನ್ಸಾರ್ ಬೋರ್ಡ್ ಅನುಮತಿ ನೀಡಿರುವುದರಿಂದ ತಡೆಯಾಜ್ಞೆ ತೆರವುಗೊಳಿಸಲಾಗುತ್ತದೆ.] ಈ ಸಿನಿಮಾದಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ’ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತ್ತು.

‘ದಿ ಕೇರಳ ಸ್ಟೋರಿ-೨’ ಕಥೆಯಲ್ಲೇನಿದೆ?: ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ‘ದಿ ಕೇರಳ ಸ್ಟೋರಿ-೨’ ‘ಲವ್ ಜಿಹಾದ್’ ಕಥಾ ವಸ್ತುವನ್ನು ಹೊಂದಿರುವ ಸಿನಿಮಾ. ಕೇರಳ, ರಾಜಸ್ಥಾನ್ ಮತ್ತು ಮಧ್ಯ ಪ್ರದೇಶದ ಮೂರು ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಪ್ರೀತಿಸಿ ಮದುವೆಯಾಗುವ ಮತ್ತು ಮದುವೆಯ ನಂತರ ಆ ಮುಸ್ಲಿಂ ಯುವಕರು ತಮ್ಮ ಹಿಂದೂ ಪತ್ನಿಯರ ಬದುಕನ್ನು ನರಕವನ್ನಾಗಿಸಿ, ಅವರಿಗೆ ಚಿತ್ರಹಿಂಸೆ ಕೊಟ್ಟು ಒತ್ತಾಯಪೂರ್ವಕವಾಗಿ ಅವರನ್ನು ಇಸ್ಲಾಂಗೆ ಧರ್ಮಾಂತರ ಮಾಡಿಸುವ ಕಥೆಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ‘ಧರ್ಮಾಂತರ ಮಾಡುವ ಹಿಡನ್ ಅಜೆಂಡಾ ಇಟ್ಟುಕೊಂಡೇ ಪ್ರೀತಿ-ಪ್ರೇಮದ ನಾಟಕವಾಡಿ ಹಿಂದೂ ಯುವತಿಯರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತದೆ, ಇಂಥ ಸಾವಿರಾರು ಪ್ರಕರಣಗಳು ದೇಶದಲ್ಲಿ ನಡೆಯುತ್ತಿವೆ’ ಎಂದು ಪ್ರೇಕ್ಷಕರನ್ನು ನಂಬಿಸುವ ಪ್ರಯತ್ನವನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಮಾಡಿದ್ದಾರೆಂಬ ಟೀಕೆಗಳು ಕೇಳಿಬರುತ್ತಿವೆ.

‘ಮುಸ್ಲಿಮರಲ್ಲಿ ಸಾಸಿವೆ ಕಾಳಿನಷ್ಟೂ ಮನುಷ್ಯತ್ವ ಎಂಬುದು ಇರುವುದಿಲ್ಲ, ಎಲ್ಲ ಮುಸ್ಲಿಮರು ಕೆಟ್ಟವರು, ಮುಂದಿನ ೨೫ ವರ್ಷಗಳಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಿ, ಷರಿಯಾ ಕಾನೂನುಗಳನ್ನು ಜಾರಿಗೊಳಿಸುವುದು ಪ್ರತಿಯೊಬ್ಬ ಮುಸ್ಲಿಂನ ಉದ್ದೇಶವಾಗಿದೆ’ ಎಂದು ಈ ಸಿನಿಮಾದ ಮೂಲಕ ನಿರ್ದೇಶಕರು ಹೇಳಲು ಹೊರಟಂತಿದೆ. ಸಿನಿಮಾದ ಒಂದು ದೃಶ್ಯದಲ್ಲಿ ಸಂಪೂರ್ಣವಾಗಿ ಹಸಿರು ಬಣ್ಣದ ಭಾರತದ ನಕ್ಷೆಯೆದುರು ನಿಂತ ಒಬ್ಬ ಪಾತ್ರಧಾರಿಯಿಂದ ಈ ಡೈಲಾಗ್‌ನ್ನು ಸಹ ನಿರ್ದೇಶಕರು ಹೇಳಿಸಿದ್ದಾರೆ. ಹಿಂದೂ ಯುವತಿಯರನ್ನು ಧರ್ಮಭ್ರಷ್ಟರನ್ನಾಗಿ ಮಾಡು ವುದಕ್ಕಾಗಿ ಒತ್ತಾಯಪೂರ್ವಕವಾಗಿ ಅವರಿಗೆ ಬೀಫ್ ತಿನ್ನಿಸುವ ದೃಶ್ಯಗಳನ್ನೂ ಹಸಿಹಸಿಯಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಟೀಸರ್‌ನಲ್ಲಿ ಈ ದೃಶ್ಯಗಳನ್ನು ನೋಡಿದ ನಂತರ ಕೇರಳದಲ್ಲಿ ಚಿತ್ರದ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.  ಬೀಫ್ ಕೇರಳದಲ್ಲಿ ಬಹು ತೇಕ ಜನರ ಆಹಾರವಾಗಿದೆ,  ಒತ್ತಾಯಪೂರ್ವಕವಾಗಿ ಬೀಫ್ ತಿನ್ನಿಸುವ ಅಗತ್ಯವಿಲ್ಲ, ಬೀಫ್ ತಿನ್ನಲು ಸ್ವಯಂಪ್ರೇರಿತರಾಗಿಯೇ ಜನರು ಸರದಿ ಮೊದಲ ಚಿತ್ರವೂ ವಿವಾದಾಸ್ಪದವೇ:‘ದಿ ಕೇರಳ ಸ್ಟೋರಿ’ ಹೆಸರಿನ ಚಿತ್ರ ೨೦೨೩ರಲ್ಲಿ ಬಿಡುಗಡೆಯಾದಾಗಲೂ ಭಾರಿ ವಿವಾದ ಸೃಷ್ಟಿಯಾಗಿತ್ತು. ಆ ಚಿತ್ರದ ನಿರ್ಮಾಪಕರೂ ವಿಪುಲ್ ಶಾ ಅವರೇ ಆಗಿದ್ದರು. ಆದರೆ, ಆಗ ಸಿನಿಮಾವನ್ನು ಸುದಿಪ್ತೋ ಸೇನ್ ನಿರ್ದೇಶಿಸಿದ್ದರು. ಹಿಂದೂ ಯುವತಿಯರನ್ನು ಮೋಸದಿಂದ ಇಸ್ಲಾಂಗೆ ಮತಾಂತರ ಮಾಡುವ, ‘ಈ ಜಗತ್ತಿನಲ್ಲಿ ಇರುವುದು ಒಂದೇ ಧರ್ಮ ಮತ್ತು ಒಬ್ಬನೇ ದೇವರು.

ಆ ಧರ್ಮ ಮತ್ತು ದೇವರಲ್ಲಿ ನಂಬಿಕೆ ಇರದವರಿಗೆ ಮುಕ್ತಿ ಸಿಗುವುದು ಅಸಾಧ್ಯ’ ಎಂದು ಬ್ರೇನ್‌ವಾಶ್ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಆ ರೀತಿ ಬ್ರೇನ್‌ವಾಶ್ ಮಾಡಿ ಆ ಯುವತಿಯರನ್ನು ಭಯೋತ್ಪಾದಕರನ್ನಾಗಿ ತಯಾರು ಮಾಡುವುದು ಹಾಗೂ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಪರವಾಗಿ ‘ಧರ್ಮಯುದ್ಧ’ಕ್ಕೆಂದು ಮೋಸದಿಂದ ಕಳಿಸುವುದು ಚಿತ್ರದ ಕಥಾ ವಸ್ತುವಾಗಿತ್ತು. ಶಾಲಿನಿ ಉನ್ನಿಕೃಷ್ಣನ್ ಎಂಬ ಯುವತಿ ಇದೇ ರೀತಿ ಜಿಹಾದಿಗಳ ಸಂಚಿಗೆ ಒಳಗಾಗಿ ಭಯೋತ್ಪದಕಳಾಗಿ ಫಾತಿಮಾ ಎಂಬ ಹೆಸರಿಟ್ಟುಕೊಂಡಿರುತ್ತಾಳೆ. ಆಫ್ಘನ್ -ಇರಾನ್ ಗಡಿಯನ್ನು ಅಕ್ರಮವಾಗಿ ದಾಟುವಾಗ ಈ ಫಾತಿಮಾ ಸಿಕ್ಕಿಬೀಳುತ್ತಾಳೆ. ಆಗ ವಿಚಾರಣೆ ನಡೆಸಿದಾಗ ಅವಳ ನಿಜವಾದ ಹೆಸರು ಮತ್ತು ಆಕೆ ಭಯೋತ್ಪಾದಕಳಾಗಿದ್ದು ಹೇಗೆ ಇತ್ಯಾದಿ ವಿವರಗಳು ಹೊರಬೀಳುತ್ತವೆ. ಕೇರಳದಲ್ಲಿ ಸುಮಾರು ೩೨ ಸಾವಿರ ಹಿಂದೂ ಹಾಗೂ ಕ್ರಿಶ್ಚಿಯನ್ ಯುವತಿಯರುನಾಪತ್ತೆಯಾಗಿದ್ದು, ಆ ಪೈಕಿ ಶಾಲಿನಿ ಉನ್ನಿಕೃಷ್ಣನ್ ಕೂಡ ಒಬ್ಬಳು ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಈ ಸಿನಿಮಾ ಕೂಡ ವಿವಾದಕ್ಕೆ ತುತ್ತಾಗಿ ನ್ಯಾಯಾಲಯದ ಮೆಟ್ಟಿಲೇರಿದಾಗ, ‘೩೨ ಸಾವಿರ ಯುವತಿಯರು ನಾಪತ್ತೆಯಾಗಿದ್ದಾರೆ’ ಎಂಬ ಮಾಹಿತಿ ನಿಮಗೆ ಸಿಕ್ಕಿದ್ದು ಹೇಗೆ? ಅದಕ್ಕೆ ಸಾಕ್ಷಿ ಆಧಾರಗಳೆಲ್ಲಿವೆ? ಎಂದು ಕೋರ್ಟ್ ಕೇಳಿತ್ತು. ಆಗಲೂ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರ ಬಳಿ ಉತ್ತರವಿರಲಿಲ್ಲ.

ಕೊನೆಗೆ, ಅಂಥ ಕೇವಲ ಮೂರು ಪ್ರಕರಣಗಳ ಕುರಿತು ಮಾತ್ರ ತಮಗೆ ಮಾಹಿತಿ ಇರುವುದಾಗಿ ಚಿತ್ರತಂಡಒಪ್ಪಿಕೊಂಡಿತ್ತು. ಈಗ ಬಿಡುಗಡೆಯಾಗಿರುವ ‘ದಿ ಕೇರಳ ಸ್ಟೋರಿ-೨’ ಸಿನಿಮಾಕ್ಕೂ ೨೦೨೩ರಲ್ಲಿ ಬಿಡುಗಡೆಯಾದ ‘ದಿಕೇರಳ ಸ್ಟೋರಿ’ಗೂ ಏನೂ ಸಂಬಂಧವಿಲ್ಲ. ಕೇವಲಕೇರಳಕ್ಕೆ ಕಳಂಕ ತರುವ ಮತ್ತು ಹಣ ಮಾಡುವ ಉದ್ದೇಶದಿಂದ ಸಿನಿಮಾಕ್ಕೆ ಕೇರಳದ ಹೆಸರಿಡಲಾಗಿದೆ ಎಂದು ಕೇರಳ ಸರ್ಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಮೊದಲನೇ ಸಿನಿಮಾದ ನಿರ್ದೇಶಕ ಸುದಿಪ್ತೋ ಸೇನ್ ಕೂಡ ‘ದಿ ಕೇರಳ ಸ್ಟೋರಿ-೨’ನ್ನು ವಿರೋಽಸಿದ್ದಾರೆ. ‘೨೦೨೩ರಲ್ಲಿ ನಾನು ಸಿನಿಮಾ ಮಾಡುವ ಮುನ್ನ ಹತ್ತು ವರ್ಷಗಳ ಕಾಲ ಸಂಶೋಧನೆ ಮಾಡಿದ್ದೆ. ಕೇವಲ ವಾಟ್ಸ್‌ಆಪ್‌ನಲ್ಲಿ ಬಂದಿರುವ ಮಾಹಿತಿ ಆಧರಿಸಿ ಸಿನಿಮಾ ಮಾಡಿರಲಿಲ್ಲ’ ಎಂದು ಟೀಕಿಸಿದ್ದಾರೆ.

‘ಉತ್ತರ ಪ್ರದೇಶ ಫೈಲ್ಸ್’ ಎಂದು ಹೆಸರಿಟ್ಟಿಲ್ಲವೇಕೆ?

ಮಾಧ್ಯಮ ಪ್ರತಿನಿಧಿಗಳ ನೇರ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ್ದ ಚಿತ್ರತಂಡ: 

‘ದಿ ಕೇರಳ ಸ್ಟೋರಿ-೨’ ಸಿನಿಮಾದ ಪ್ರಮೋಷನ್ಗಾಗಿ ನಿರ್ಮಾಪಕ ವಿಪುಲ್ ಶಾ ಮತ್ತು ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್ ಅವರು ಫೆ.೨೩ರಂದು ದೆಹಲಿಯಲ್ಲಿ ಮೂವತ್ತು ‘ಲವ್ ಜಿಹಾದ್’ ಸಂತ್ರಸ್ತ ಯುವತಿಯರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಎಲ್ಲ ಯುವತಿ ಯರು ಮುಸ್ಲಿಂ ಯುವಕರ ‘ಲವ್ ಜಿಹಾದ್’ ಷಡ್ಯಂತ್ರಕ್ಕೆ ಬಲಿಯಾಗಿ ನರಕಯಾತನೆ ಅನುಭವಿಸಿದವರು ಎಂದು ಮಾಧ್ಯಮ ಪ್ರತಿನಿಧಿಗಳೆದುರು ಅವರನ್ನು ಹಾಜರುಪಡಿಸಿದರು. ಆದರೆ, ಆ ಮೂವತ್ತು ಯುವತಿಯ ರಲ್ಲಿ ಒಬ್ಬ ಸಂತ್ರಸ್ತೆಯೂ ಕೇರಳದವಳಾಗಿರಲಿಲ್ಲ. ಎಲ್ಲರೂ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ ಮತ್ತಿತರ ಉತ್ತರ ಭಾರತದ ರಾಜ್ಯಗಳ ಯುವತಿಯರೇ ಆಗಿದ್ದರು. ಹೀಗಿರುವಾಗ ಸಿನಿಮಾಕ್ಕೆ ‘ದಿ ಕೇರಳ ಸ್ಟೋರಿ-೨’ ಎಂದು ಹೆಸರಿಟ್ಟಿರುವುದು ಏಕೆ? ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ನಿರ್ಮಾಪಕರು ಮತ್ತು ನಿರ್ದೇಶಕರ ಬಳಿ ಸಮರ್ಪಕ ಉತ್ತರವಿರಲಿಲ್ಲ.

‘ಲವ್ ಜಿಹಾದ್’ ಎಂಬುದು ಕೇವಲ ಕೇರಳಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಲ್ಲಿ ವ್ಯಾಪಕವಾಗಿ ‘ಲವ್ ಜಿಹಾದ್’ ನಡೆಯುತ್ತಿದೆ ಎಂದು ಹೇಳುವುದು ಸಿನಿಮಾದ ಉದ್ದೇಶವಾಗಿದೆ, ಪತ್ರಿಕಾಗೋಷ್ಠಿಗೆ ಬಂದಿರುವ ಯುವತಿಯರೂ ಉತ್ತರ ಭಾರತದವರೇ ಆಗಿದ್ದಾರೆ. ಹೀಗಿರುವಾಗ ಸಿನೆಮಾಕ್ಕೆ ‘ಉತ್ತರ ಪ್ರದೇಶ ಫೈಲ್ಸ್’, ‘ಮಧ್ಯ ಪ್ರದೇಶ ಫೈಲ್ಸ್ ಅಥವಾ ‘ಬಿಹಾರ ಫೈಲ್ಸ್’ ಎಂದು ಹೆಸರಿಟ್ಟಿಲ್ಲವೇಕೇ? ಮುಂಬರುವ ಕೇರಳ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇರಳದ ಹೆಸರಿಗೆ ಕಳಂಕ ತರುವುದಕ್ಕಾಗಿ ಸಿನಿಮಾಕ್ಕೆ ಈ ರೀತಿ ಹೆಸರಿಡಲಾಗಿದೆಯೇ? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಹ ಚಿತ್ರತಂಡ ತಿಣುಕಾಡಬೇಕಾಯಿತು. ಕೊನೆಗೆ, ಇದೇ ವಿಷಯವಾಗಿ ಗದ್ದಲ ನಡೆದಿದ್ದರಿಂದ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್  ಆಟೋ ಕೌಂಟರ್ ಆರಂಭಿಸಿ

ಮೈಸೂರು ರೈಲು ನಿಲ್ದಾಣದಲ್ಲಿ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಪ್ರೀಪೇಯ್ಡ್ ಆಟೋ ಕೌಂಟರ್ ಇಲ್ಲದೆ ಬೆಳಗಿನ ಜಾವ ಬೇರೆ ಊರುಗಳಿಂದ…

2 hours ago

ಓದುಗರ ಪತ್ರ: ನ್ಯಾಯಾಂಗದ ಬಗ್ಗೆ ಗೌರವ ಮೂಡಿಸಿ

ಕೇಂದ್ರೀಯ ಪಠ್ಯಕ್ರಮದ (ಎನ್ ಸಿಇಆರ್ ಟಿ) ೮ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ಇದೆ…

2 hours ago

ಓದುಗರ ಪತ್ರ: ಅಂಬೇಡ್ಕರ್ ಸಮುದಾಯ ಭವನ ಅಭಿವೃದ್ಧಿಪಡಿಸಿ

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡಾ.ಬಿ .ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಅಂದಿನ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್…

2 hours ago

ಓದುಗರ ಪತ್ರ: ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಸರಗೂರು ತಾಲ್ಲೂಕಿನ ಮುಳ್ಳೂರು, ಚಾಮಲಾಪುರ, ಕುಂದೂರು, ಕಲ್ಲಂಬಾಳು, ನಂಜೀಪುರ, ಕಟ್ಟೆಹುಣಸೂರು ಈ ಗ್ರಾಮಗಳ ಮಾರ್ಗವಾಗಿ ಹೆಚ್ಚಿನ ಸರ್ಕಾರಿ ಬಸ್ಸುಗಳ ಸಂಚಾರವಿಲ್ಲದೆ…

2 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕಾವೇರುತ್ತಿರುವ ತಮಿಳುನಾಡು ವಿಧಾನಸಭೆ ಚುನಾವಣೆ

ತಮಿಳುನಾಡಿನಲ್ಲಿ ಬೇಸಿಗೆಯ ಸುಡು ಬಿಸಿಲಿಸಿನ ನಡುವೆ ವಿಧಾನಸಭೆಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಚುನಾವಣೆಯು ಏಪ್ರಿಲ್ ಕೊನೆಯ ವಾರದೊಳಗೆ…

2 hours ago

ರಂಜಾನ್ ಅಂದರೆ ಹಬ್ಬವಲ್ಲ ; ಹಬ್ಬದ ಮೊದಲಿನ ಉಪವಾಸ

ಖದೀಜಾ ಉಮೈರಾ ರಂಜಾನಿಗೆ ಒಂದು ಹಬ್ಬದ ಗುಣವಿದೆ. ಹಾಗಾಗಿ ನಮಗೆಲ್ಲಾ ಅದು ಹಬ್ಬದಂತೆ ಭಾಸವಾಗುವುದು ಸಹಜ. ಇದು ಇಸ್ಲಾಮಿಕ್ ಕ್ಯಾಲೆಂಡರಿನ…

2 hours ago