Andolana originals

ದ ಗ್ರೇಟ್‌ ನಿಕೋಬಾರ್‌ ಯೋಜನೆ : ವಿಕಾಸವೋ? ವಿನಾಶವೋ?

ಶುಭಾ ಖಟಾವಕರ ಮ್ಹೆತ್ರಸ್‌

72,000 ಕೋಟಿ ರೂ.ಗಳಿಂದ 90,000 ಕೋಟಿ ರೂ.ವೆಚ್ಚದ ಯೋಜನೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ‘ದ ಗ್ರೇಟ್ ನಿಕೋಬಾರ್ ಯೋಜನೆ’ಯ ಬಗೆಗಿನ ಇತ್ತೀಚಿನ ವಿಡಿಯೋವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಯ ಬಗ್ಗೆ ವಿವಾದದ ಕಿಡಿ ಹೊತ್ತಿಸಿದೆ. ಮಲಕ್ಕಾ ಜಲಸಂಧಿಯ ಅಂಚಿನಲ್ಲಿ ಸುಮಾರು ೭೨,೦೦೦ ಕೋಟಿ ರೂ. ಗಳಿಂದ ೯೦,೦೦೦ ಕೋಟಿ ರೂ. ವೆಚ್ಚದ ‘ಮೆಗಾ-ಹಬ್’ ಯೋಜನೆಗೆ ಭಾರತ ಸಜ್ಜಾಗಿದೆ. ರಾಹುಲ್ ಗಾಂಧಿಯವರು ಈ ಯೋಜನೆಯು ಅಗಾಧವಾದ ಪರಿಸರ ಹಾನಿ ಉಂಟುಮಾಡಬಹುದು ಹಾಗೂ ಆದಿವಾಸಿ ಸಮುದಾಯಗಳಿಗೆ ಬೆದರಿಕೆಯಾಗಬಹುದು ಎಂದು ವಾದಿಸುತ್ತಿದ್ದರೆ, ಸರ್ಕಾರವು ಇದು ಭಾರತದ ದೀರ್ಘಕಾಲೀನ ಆರ್ಥಿಕ ಮತ್ತು ಕಾರ್ಯತಾಂತ್ರಿಕ ಗುರಿಗಳಿಗೆ ಅತ್ಯಂತ ಅವಶ್ಯಕ ಎಂದು ಹೇಳುತ್ತಿದೆ.

ಏನಿದು ದ ಗ್ರೇಟ್ ನಿಕೋಬಾರ್ ಯೋಜನೆ?
ದ ಗ್ರೇಟ್ ನಿಕೋಬಾರ್ ಯೋಜನೆ ಒಂದು ಮೂಲಸೌಕರ್ಯ ಯೋಜನೆಯಾಗಿದ್ದು, ಅಂಡ ಮಾನ್ ಮತ್ತುನಿಕೋಬಾರ್ ದ್ವೀಪಗಳ ದಕ್ಷಿಣ ತುದಿಯಲ್ಲಿರುವ ಗ್ರೇಟ್ ನಿಕೋಬಾರ್ ದ್ವೀಪದ ಗಲಾ ಥಿಯಾ ಕೊಲ್ಲಿಯ ಬಳಿ ಇದನ್ನು ಉದ್ದೇಶಿಸಲಾಗಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಚೀನಾದ ವಿಸ್ತರಿಸುತ್ತಿರುವ ಪ್ರಭಾವದ ಹಿನ್ನೆಲೆಯಲ್ಲಿಯೇ, ಇಲ್ಲಿ ವ್ಯಾಪಾರ, ಪ್ರವಾಸೋದ್ಯಮವಷ್ಟೇ ಅಲ್ಲದೆ, ಒಂದು ಆರ್ಥಿಕ ಹಾಗೂ ಕಾರ್ಯತಂತ್ರಾತ್ಮಕ ರಕ್ಷಣಾ ಕ್ಷೇತ್ರವನ್ನಾಗಿಯೂ ಅಭಿವೃದ್ಧಿಪಡಿಸುವ ಯೋಜನೆಯಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮಗ್ರ ಅಭಿವೃದ್ಧಿ ನಿಗಮದ ಅಡಿಯಲ್ಲಿ, ಒಂದು ಅಂತಾರಾಷ್ಟ್ರೀಯ ಮಟ್ಟದ ಸರಕು ಸಾಗಣೆ ಬಂದರು, ಸುಮಾರು ೬. ೫ ಲಕ್ಷ ಕೆಲಸಗಾರರಿಗೆ ಮತ್ತು ರಹಿವಾಸಿಗಳಿಗಾಗಿ ಒಂದು ಪಟ್ಟಣ, ಇದಕ್ಕೆ ವಿದ್ಯುಚ್ಛಕ್ತಿ ಪೂರೈಸಲು ಒಂದು ಗ್ಯಾಸ್ ಹಾಗೂ ಸೋಲಾರ್ ಪವರ್ ಘಟಕ, ನಾಗರಿಕ ಹಾಗೂ ಸೇನಾ ವಿಮಾನ ನಿಲ್ದಾಣಗಳನ್ನು ಇಲ್ಲಿ ಪ್ರಮುಖವಾಗಿ ಯೋಜಿಸಲಾಗಿದೆ. ಪ್ರಸ್ತುತ, ಭಾರತದ ಸರಕು ಸಾಗಣೆಯ ಹೆಚ್ಚಿನ ಭಾಗವು ಸಿಂಗಾಪುರ ಮತ್ತು ಕೊಲಂಬೊ ಮೊದಲಾದ ಬಂದರುಗಳ ಮೂಲಕ ಸಾಗುತ್ತಿದ್ದು, ಇದರಿಂದ ವರ್ಷಕ್ಕೆ ಅಂದಾಜು ೧,೯೦೦ ಕೋಟಿ ರೂಪಾಯಿಗಳ ಆದಾಯನಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತಾವಿತ ಕಂಟೈನರ್ ಸಾಗಣೆ ಕೇಂದ್ರ ಈ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತವನ್ನು ಪ್ರಾದೇಶಿಕ ಸಾಗಣೆ ಕೇಂದ್ರವಾಗಿ ಸ್ಥಾಪಿಸುವ ಉದ್ದೇಶ ಹೊಂದಿದೆ.

ಆದರೆ, ಪರಿಸರಕ್ಕೆ ಉಂಟಾಗಬಹುದಾದ ಹಾನಿಕಾರಕ ಪರಿಣಾಮಗಳು ಹಾಗೂ ಆದಿವಾಸಿ ಸಮುದಾಯಗಳಿಗೆ ಉಂಟಾಗುವ ಬೆದರಿಕೆಗಳ ಕಾರಣದಿಂದ ಈ ಯೋಜನೆಗೆ ಪರಿಸರ ವಿಜ್ಞಾನಿಗಳು, ನೀತಿತಜ್ಞರು ಮತ್ತು ನಾಗರಿಕ ಸಮಾಜ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ನಿಸರ್ಗ ಮತ್ತು ಬುಡಕಟ್ಟು ಸಮುದಾಯಗಳ ಮೇಲಿನ ದುಷ್ಪರಿಣಾಮ
ನಿಕೋಬಾರ್ ದ್ವೀಪವು ಸುಮಾರು ೯೨೦ ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ಇದರ ಸುಮಾರು ಐದನೇ ಒಂದು ಭಾಗದಷ್ಟು ಪ್ರದೇಶದಲ್ಲಿ ಈ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಅಂದರೆ ಸುಮಾರು ೧೬೬ ಚದರ ಕಿ. ಮೀ. ವಿಸ್ತೀರ್ಣದ ಪ್ರದೇಶದಲ್ಲಿ ೮. ೫ ಲಕ್ಷ ಮರಗಳನ್ನು ಕಡಿಯಲಾಗಬಹುದು ಎಂದು ಅಂದಾ ಜಿಸಲಾಗಿದೆ. ಇವುಗಳಲ್ಲಿ ದ್ವೀಪದ ಶ್ವಾಸಕೋಶ ಗಳೆಂದು ಕರೆಯಲ್ಪಡುವ ಮ್ಯಾಂಗ್ರೂವ್ ಮರಗಳೂ ಒಳಗೊಂಡಿವೆ.

ಇದರ ಬದಲಾಗಿ ಹರಿಯಾಣಾದ ಅರಾವಳಿ ಪರ್ವತದ ತಪ್ಪಲಿನಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ಆಶ್ವಾಸನೆ ನೀಡಲಾಗಿದೆ. ನಿಕೋಬಾರ್ ದ್ವೀಪಗಳಲ್ಲಿ ಮರಗಳನ್ನು ಕಡಿದರೆ ಅದರ ಬದಲಾಗಿ ಬೇರೆಲ್ಲೋ ಸಸಿಗಳನ್ನು ನೆಡುವುದು ಎಷ್ಟು ಸಮರ್ಥ ನೀಯ? ಅಷ್ಟಾಗಿಯೂ ಈ ಸಸಿಗಳು ನೆಡಲ್ಪಡದಿದ್ದರೆ ಅದಕ್ಕೆ ಹೊಣೆ ಯಾರು?

ಲಕ್ಷಾಂತರ ಮರಗಳೊಂದಿಗೆ ಅಪರೂಪದ ಜೀವಜಂತುಗಳೂ ನಶಿಸಿ ಹೋಗುವ ಭಯವಿದೆ. ಈ ಯೋಜನೆ ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಯೋಜಿತ ಸರಕು ಸಾಗಣೆ ಬಂದರು ಭಾರತೀಯ ಮಹಾಸಾಗರದಲ್ಲಿನ ಅಪಾಯದಲ್ಲಿರುವ ದೈತ್ಯ ಲೆದರ್ ಬ್ಯಾಕ್ ಆಮೆಗಳ ಅತ್ಯಂತ ಪ್ರಮುಖ ಗೂಡು ಕಟ್ಟುವ ಸ್ಥಳಗಳಲ್ಲಿ ಒಂದಾದ ಗಲಾಥಿಯಾ ಕೊಲ್ಲಿಯಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ರಜಾತಿಯು ಭಾರತ ದಲ್ಲಿನ ವನ್ಯಜೀವಿ ಸಂರಕ್ಷಣಾ ಚೌಕಟ್ಟಿನ ಶೆಡ್ಯೂಲ್-೧ ಅಡಿಯಲ್ಲಿ ಪಟ್ಟಿಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ‘ಅಪಾಯಕ್ಕೊಳಗಾಗುವ ಸಾಧ್ಯತೆಯಿರುವ’ ಪ್ರಜಾತಿಯಾಗಿ ವರ್ಗೀಕರಿಸಲಾಗಿದೆ.

ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿ ಪ್ರಕಾರ, ಬಂದರು ನಿರ್ಮಾಣ, ಸಮುದ್ರ ತಳ ತೋಡುವ ಕಾರ್ಯ ಹಾಗೂ ಬ್ರೇಕ್‌ವಾಟರ್ ಅಭಿವೃದ್ಧಿಯಿಂದ ಪ್ರಸ್ತುತ ಸುಮಾರು ೩. ೮ ಕಿಲೋ ಮೀಟರ್ ಇರುವ ಕೊಲ್ಲಿಯ ಪ್ರವೇಶ ಅಗಲವು ಕಡಿಮೆಯಾಗಲಿದೆ. ಇದರಿಂದ ಆಮೆಗಳ ಗೂಡು ಕಟ್ಟುವ ಪ್ರವೇಶಕ್ಕೆ ನೇರ ಪರಿಣಾಮ ಉಂಟಾಗುತ್ತದೆ.

ಅಷ್ಟೇ ಅಲ್ಲದೆ ಈ ಯೋಜನೆ ಆದಿವಾಸಿ ಜನಸಂಖ್ಯೆಯ ಮೇಲೆ, ವಿಶೇಷವಾಗಿ ಶೊಂಪೆನ್ ಜನಾಂಗ ಮತ್ತು ನಿಕೋಬಾರಿ ಸಮುದಾಯದ ಮೇಲೆ, ಮಹತ್ತರ ಪರಿಣಾಮಗಳನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಅತೀ ದುರ್ಬಲ ಜನಾಂಗೀಯ ಗುಂಪು (ಪಿವಿಟಿಜಿ) ಎಂದು ವರ್ಗೀಕರಿಸಲ್ಪಟ್ಟಿರುವ ಬೇಟೆಯಾಡಿ ಸಂಗ್ರಹಿಸುವ ಶೊಂಪೆನ್ ಆದಿವಾಸಿ ಗಳು, ಅಲೆಮಾರಿ ಜೀವನಶೈಲಿಯನ್ನು ಅನುಸರಿ ಸುತ್ತಿದ್ದು, ಹೊರ ಜಗತ್ತಿನೊಂದಿಗೆ ಅತಿ ಕಡಿಮೆ ಸಂಪರ್ಕ ಹೊಂದಿದ್ದಾರೆ. ನಿಕೋಬಾರ್ ದ್ವೀಪದ ಈಗಿನ ಜನಸಂಖ್ಯೆ ಸುಮಾರು ೮,೦೦೦ ಎಂದು ಅಂದಾಜಿಸಲಾಗಿದೆ. ಆದಿವಾಸಿ ಮೀಸಲು ಭೂಮಿ ಯನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸುವುದು ಹಾಗೂ ಭಾರೀ ಪ್ರಮಾಣದ ಹೊರಗಿನ ಜನರು (ಈಗಿರುವ ಜನಸಂಖ್ಯೆಯ ಸುಮಾರು ಎಂಬತ್ತು ಪಟ್ಟು) ಇಲ್ಲಿ ಬರುವುದು, ರೋಗಗಳ ಸಂಪರ್ಕ, ಸಂಸ್ಕೃತಿಕ ಅಸ್ತವ್ಯಸ್ತತೆ ಮತ್ತು ವಾಸಸ್ಥಳ ನಷ್ಟದ ಅಪಾಯಗಳನ್ನು ಉಂಟುಮಾಡಬಹುದು. ಇಐಎ ವರದಿಯು ಸ್ಪಷ್ಟವಾಗಿ ಶೊಂಪೆನ್ ಜನರು ಮತ್ತು ಹೊರಗಿನವರ ನಡುವಿನ ಸಂಪರ್ಕ ಅಪೇಕ್ಷಣೀ ಯವಲ್ಲ ಎಂದು ಹೇಳಿದೆ. ಸರ್ಕಾರವು ಇದಕ್ಕಾಗಿ ಅನೇಕ ಪರಿಹಾರ ಕ್ರಮಗಳನ್ನು ಪ್ರಸ್ತಾಪಿಸಿದ್ದರೂ, ಅಭಿವೃದ್ಧಿಯ ನಂತರ ಉಂಟಾಗಲಿರುವ ಗಂಡಾಂತರ ಗಳನ್ನು ಊಹಿಸುವುದು ಈಗಿನಿಂದಲೇ ಸಾಧ್ಯವಿಲ್ಲ.

ಗ್ರೇಟ್ ನಿಕೋಬಾರ್ ಪ್ರದೇಶವು, ೨೦೦೪ರಲ್ಲಿ ಹಿಂದೂ ಮಹಾಸಾಗರ ಸುನಾಮಿಯಿಂದ ಭಾರೀ ಪ್ರಮಾಣದಲ್ಲಿ ಪರಿಣಾಮಕ್ಕೊಳಗಾಯಿತು. ಆ ವಿಪತ್ತಿನಿಂದ ಭೂಮಿಯ ಶಾಶ್ವತ ಕುಸಿತ ಹಾಗೂ ಕರಾವಳಿಯ ರೂಪರೇಖೆಯಲ್ಲಿ ಬದಲಾವಣೆ ಉಂಟಾಯಿತು. ಇದರ ಹೊರತಾಗಿಯೂ, ಭವಿಷ್ಯ ದಲ್ಲಿ ಸಂಭವಿಸಬಹುದಾದ ಭೂಕಂಪ ಘಟನೆಗಳ ಕುರಿತು ಇಐಎ ವರದಿಯಲ್ಲಿ ಸಮಗ್ರ ಅಪಾಯದ ಮೌಲ್ಯಮಾಪನ ಇಲ್ಲ ಎಂದು ವಿಮರ್ಶಕರು ವಾದಿಸುತ್ತಿದ್ದಾರೆ. ತೈಲ ನಿರ್ವಹಣಾ ಸೌಲಭ್ಯಗಳು ಮತ್ತು ವಿದ್ಯುತ್ ಘಟಕಗಳನ್ನು ಒಳಗೊಂಡ ಮಹತ್ತರ ಮೂಲಸೌಕರ್ಯ ನಿರ್ಮಾಣವನ್ನು ಪರಿಗಣಿಸಿದರೆ, ಇಂತಹ ವಿಶ್ಲೇಷಣೆಯ ಕೊರತೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿದರೆ ಭಾರೀ ಆರ್ಥಿಕ ನಷ್ಟದ ಜೊತೆಗೆ ಸಮುದ್ರ ಮಾಲಿನ್ಯ ಸೇರಿದಂತೆ ವ್ಯಾಪಕ ಪರಿಸರ ಹಾನಿಯೂ ಸಂಭವಿಸಬಹುದು.

ಸಾಮರ್ಥ್ಯ ಪ್ರದರ್ಶನಕ್ಕಾಗಿ ಭೌಗೋಳಿಕ ಆಧಾರ
ನಿಕೋಬಾರ್ ದ್ವೀಪವು ಮಲಕ್ಕಾ ಜಲಸಂಧಿಯ ಸನಿಹದಲ್ಲಿರುವುದು ಮತ್ತು ಅದರ ಭೌಗೋಳಿಕ ಸ್ಥಳವು ಒಂದು ಕಾರ್ಯತಾಂತ್ರಿಕ ಯೋಜನೆಗೆ ಸಹಾಯಕಾರಿಯಾಗಬಲ್ಲದು ಎಂದು ಹೇಳಲಾಗಿದೆ. ಇದು ಮುಖ್ಯವಾಗಿ ಚೀನಾವನ್ನು ಗಮನದಲ್ಲಿಟ್ಟು ಕೊಂಡು ಸರ್ಕಾರವು ಹೇಳಿದ ಮಾತು. ಆದರೆ ಈಗಿನ ಸರ್ಕಾರವು ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಚೀನಾವನ್ನು ಆಕ್ರಮಣಕಾರಿ ರೀತಿಯಲ್ಲಿ ಎದುರಿಸಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಇನ್ನೂ ತೋರಿಸಿಲ್ಲ. ಇನ್ನು ಮುಂದೆಯಾದರೂ ಈ ರೀತಿ ಯಾಗಿ ಸರ್ಕಾರವು ಕ್ರಮ ತೆಗೆದುಕೊಳ್ಳಬಲ್ಲದೆಂದು ಹೇಳಲು ಯಾವುದೇ ಆಧಾರಗಳಿಲ್ಲ.

ಒಂದು ಸರಕು ಸಾಗಾಣಿಕಾ ಬಂದರು ಆರ್ಥಿಕವಾಗಿ ಲಾಭದಾಯಕವಾಗಿರಲು ಅದರ ಸುತ್ತಮುತ್ತ ಚುರುಕಿನ ಆರ್ಥಿಕ ಕೇಂದ್ರಗಳು ಇರಬೇಕು. ಭಾರತ ಮತ್ತು ಕೆಲವು ಮಟ್ಟಿಗೆ ಬಾಂಗ್ಲಾದೇಶವನ್ನು ಹೊರತು ಪಡಿಸಿದರೆ, ಈ ಬಂದರಿನಿಂದ ಸೇವೆ ಪಡೆಯ ಬಹುದಾದ ಪ್ರಮುಖ ಆರ್ಥಿಕ ಕೇಂದ್ರಗಳು ಇಲ್ಲ. ಈ ಎರಡೂ ದೇಶಗಳಿಗೂ ಈಗಾಗಲೇ ತಮ್ಮ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸಮುದ್ರ ಬಂದರುಗಳಿವೆ. ವಾಣಿಜ್ಯ ದೃಷ್ಟಿಯಿಂದ ಇದು ಮತ್ತೊಂದು ಹಂಬಂಟೋಟಾ ಬಂದರಿನಂತಾಗಬಾರದು. ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಯಾದ ‘ದ ಗ್ರೇಟ್ ನಿಕೋಬಾರ್’ ಯೋಜನೆಯಲ್ಲಿ ಇನ್ನೂ ತುಂಬಬೇಕಾದ ಹಲವು ಕೊರತೆಗಳಿವೆ. ಸರ್ಕಾರ ನೀಡಿರುವ ಭರವಸೆಗಳು ಸಮರ್ಪಕವಾಗಿವೆ ಎಂಬ ಭಾವನೆ ಮೂಡುವುದಿಲ್ಲ. ಈ ಯೋಜನೆಯು ಬಂಡವಾಳಶಾಹಿತ್ವದ ಉದಾಹರಣೆಯಾಗಿದ್ದು, ಕೆಲವೇ ಉದ್ಯಮಿಗಳಿಗೆ ಮಾತ್ರ ಇದರ ಲಾಭ ಸಿಗಲಿದೆ ಎಂಬ ವಾದಗಳೂ ಇವೆ. ಇನ್ನೂ ತೃಪ್ತಿಕರ ಉತ್ತರಗಳಿಲ್ಲದ ಅನೇಕ ಪ್ರಶ್ನೆಗಳು ಉಳಿದಿವೆ. ಇದು ಮಹತ್ತರ ಯಶಸ್ವಿ ಯೋಜನೆಯಾಗುತ್ತದೆಯೋ ಅಥವಾ ಭಾರೀ ವಿಪತ್ತಾಗುತ್ತದೆಯೋ ಎಂಬುದನ್ನು ಕಾಲವೇ ತೀರ್ಮಾನಿಸಲಿದೆ.

shubha.mhetras@gmail.com

 

ಆಂದೋಲನ ಡೆಸ್ಕ್

Recent Posts

ಕಳೆದ ಚುನಾವಣೆ : ಇಬ್ಬರು ಪರಿಣಿತರ ವಿಶ್ಲೇಷಣೆ

ರಾಜಕಾರಣಿಗಳು ಕೊನೆಗೂ ಕೇಳಿಕೊಳ್ಳಬೇಕಿರುವುದು ನೀವು ಯಾರೋ ಒಬ್ಬರ ಬದುಕು ಚಂದವಾಗಲು ಕಾರಣವಾದಿರಾ ಎಂಬ ಪ್ರಶ್ನೆ ಮಾತ್ರವೇ. ಅದೊಂದೇ ಸತ್ಯ. ಉಳಿದದ್ದೆಲ್ಲ…

34 mins ago

ತಾಯಂದಿರ ದಿನ ವಿಶೇಷ | ನನ್ನ ಕರುಳ ಕುಡಿ ನನ್ನದೇ ಆಯ್ಕೆ

ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ      ನಿಮ್ಮ ವೃತ್ತಿಪರ ಒತ್ತಡಗಳ ನಡುವೆ…

1 hour ago

ಮಡಿಕೇರಿ | ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ; ಸಾರ್ವಜನಿಕೆ ಕೆಲಸ ವಿಳಂಬ

ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಗರಸಭೆಯಲ್ಲಿ ಖಾಯಂ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು,…

1 hour ago

ಎಚ್.ಡಿ.ಕೋಟೆ | ಉತ್ತಮ ಮಳೆ ; ಕೃಷಿ ಚಟುವಟಿಕೆ ಚುರುಕುಗೊಳಿಸಿದ ರೈತರು

ಎಚ್.ಡಿ.ಕೋಟೆ: ಅರೆ ಮಲೆನಾಡು ಎಂದೇ ಹೆಸರಾದ ತಾಲ್ಲೂಕಿನಲ್ಲಿ ತಡವಾಗಿ ಮಳೆ ಪ್ರಾರಂಭವಾದರೂ ಕಳೆದ ಒಂದು ವಾರದಿಂದ ಬೀಳುತ್ತಿರುವ ಉತ್ತಮ ಮಳೆಯಿಂದ…

2 hours ago

ಚಾ.ನಗರ ವಿ.ವಿ | ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಿಎಚ್‌.ಡಿಗೆ ಅವಕಾಶ

ಚಾಮರಾಜನಗರ : ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಪಿಎಚ್. ಡಿ. ಸಂಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿ…

2 hours ago

ಪಿಯುಸಿ : ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಳದ ನಿರೀಕ್ಷೆ

ಮಕ್ಕಳೊಂದಿಗೆ ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದ ಪೋಷಕರು ಗಿರೀಶ್‌ ಹುಣಸೂರು ಮೈಸೂರು : ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ…

4 hours ago