Andolana originals

ಸುಗ್ಗಿಯ ಸೊಬಗಿನ ಸಂಕ್ರಾಂತಿ

ಸಾಲು ಸಾಲು ಹೊಸ ಹೂಗಳ ಚಲುವಿನ ಪರಿ

ದೇವು ಶಿರಮಳ್ಳಿ
ಎತ್ತೆತ್ತಲು ತೆನೆ ಚೆಲ್ಲಿ ಹಾಲ ಚಿಲಿಪಿಲಿ ಹರಿಸಿತು ಹಕ್ಕಿಯ ಮೇಳ ಕಣಕಣಸಲಿ ಬಂಗಾರ ಜಾಲ ಬೆರಗಾಗಿ ನಿಂತಿತೊ ಚಲಿಸದೆ ಕಾಲ – ಕೆ. ಎಸ್. ನಿಸಾರ್ ಅಹಮದ್

ಇಡೀ ಜಗತ್ತೇ ಇಂದು ಒಂದು ಹಳ್ಳಿಯಾಗಿರಲು ಪ್ರತಿ ಹಳ್ಳಿಯ ಸುಗ್ಗಿಯ ಸೊಬಗಿಂದು ಎಲ್ಲಿದೆ ? ಹಳ್ಳಿಗರ ಸುಗ್ಗಿಯ ಹಬ್ಬ ಮರೆಯಾಗಿ ಇಂದು ನಗರಿಗರ ಸಂಕ್ರಾಂತಿಯೇ ಆಗಿಬಿಟ್ಟಿದೆ. ಸಂಕ್ರಾಂತಿ ಎಂದರೆ ಡಿಜಿಟಲ್ ಶುಭಾಶಯಗಳ ವಿನಿಮಯ, ಬಣ್ಣದ ಬಟ್ಟೆಗಳ ಮೆರವಣಿಗೆ, ಪ್ಲಾಸ್ಟಿಕ್ ಪೊಟ್ಟಣದಲ್ಲಿ ಕಂಡ ಎಳ್ಳು ಬೆಲ್ಲ, ಹಳ್ಳಿಯಂತೆ ತೋರಲೊಂದು ತುಂಡು ಕಬ್ಬು. ಮಧ್ಯಾಹ್ನಕ್ಕೆ ಹಬ್ಬ ಮುಗಿದು ಒಂದು ಗಡದ್ದು ನಿದ್ದೆ.

ಸಂಕ್ರಾಂತಿ ಎಂದರೆ ಹಳ್ಳಿಗರ ಸುಗ್ಗಿ ಹಬ್ಬ, ಬಸವನ ಹಬ್ಬ – ಎತ್ತುಗಳ ಹಬ್ಬ, ಜಾನುವಾರುಗಳ ಹಬ್ಬ . “ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ” ಎಂಬ ಕುವೆಂಪು ಅವರ ಕವಿತೆಯ ಸಾಲೊಂದು ಕಿವಿಯ ತಾಗಲು ರೈತನೊಟ್ಟಿಗೆ ಎತ್ತುಗಳ ಚಿತ್ರವೊಂದು ನಮ್ಮ ಮನದಲಿ ಮೂಡದೆ ಹೋಗಲು ಸಾಧ್ಯವೆ? ಊರಿಗೊಂದು ಮಾರಮ್ಮನ ಗುಡಿಯಿದ್ದಂತೆ ಬಸವನ ಗುಡಿಯು ಎಲ್ಲೆಡೆಯುಂಟು. ಕೆಲವು ಊರುಗಳಲ್ಲಿ ಬಸವ -ಮಾರಮ್ಮ ಅಣ್ಣ – ತಂಗಿ ಎಂಬ ಪ್ರತೀತಿ ಇದೆ. ಬಸವನೆಂದರೆ ಎತ್ತುಗಳು, ರೈತರ ದೇವರು (ಬಸವನ ಗುಡಿ ಬದಲಾದ ಕಾಲದಲ್ಲಿ ಬಸವೇಶ್ವರ ದೇವಾಲಯಗಳು ಆಗಿಬಿಟ್ಟಿವೆ! ) ರೈತರ ಬದುಕಿನಲ್ಲಿ ಹಸು, ಎತ್ತುಗಳೆಂದರೆ ಅತ್ಯಮೂಲ್ಯ ಜೀವಗಳು. ಹಳ್ಳಿಗರ ಬಾಳ ಬಂಡಿ ನಡೆಸುವವರು ಎತ್ತು, ಹಸುಗಳೇ ಅಲ್ಲವೇ. ಹಸುಗಳಿಲ್ಲದೆ ಮಕ್ಕಳಿಗೆ ಹಾಲಿಲ್ಲ, ಎತ್ತುಗಳಿಲ್ಲದೆ ಹೊಲದ ಕಾಳಿಲ್ಲ.

ಸಂಕ್ರಾಂತಿ ಎಂದರೆ ಚಳಿಗಾಲದ ಸೊಬಗು, ಸೂರ್ಯ ಪಥ ಬದಲಿಸುತ್ತ ಬಂದ ಕಾಲದಲ್ಲಿ ಧರೆಯ ತುಂಬಾ ಮಂಜು ಮುಸುಕು. ಅವರೆ, ತೊಗರಿ, ಹುರುಳಿ, ತುಂಬೆ ಸಾಲು ಸಾಲು ಹೊಸ ಹೂಗಳ ಚಲುವಿನ ಪರಿ, ಹಕ್ಕಿ-ಪಿಕ್ಕಿಗಳ ಇಂಚರ. ಭುವಿಯ ಸೊಬಗ ನಾವು ಕಣ್ಣ ತೆರೆದು ನೋಡಿ ಸಂಭ್ರಮಿಸಬೇಕು.

ಭೂಮಿಯು ನಮ್ಮ ತಾಯಿ ತಂದೆಯು ಬಸವಣ್ಣ ಅವರಿತ್ತ ಸಿರಿಯ ನೋಡ ಬನ್ನಿ ಸುಗ್ಗಿ ಬಂದಿದೆ ಬನ್ನಿ ಹಿಗ್ಗ ತಂದಿದೆ ಬನ್ನಿ ಸಗ್ಗವಾಗಿದೆ ಭೂಮಿ ನೋಡ ಬನ್ನಿ ನಮ್ಮ ಜನಪದರು ಭೂಮಿಯು ತಾಯಿ, ತಂದೆ ಬಸವಣ್ಣ. ಇವರಿತ್ತ ಸಿರಿಯೇ ಸುಗ್ಗಿಯಾಗಿದೆ ಎಂದು ಹಾಡುತ್ತಾರೆ. ಸುಗ್ಗಿಯಿಂದ ಭೂಮಿ ಸಗ್ಗವಾಗಿದೆ.

ಕೊಟ್ಟಿಗೆಯ ತುಂಬಾ ಕರುಗಳು ಅಂಬಾ ಎನ್ನಲು ಅದಕೂ ಮಿಗಿಲು ಸಿರಿ ಯಾವುದು? ಹಟ್ಟಿಯ ಬಡತನವ ತೊಡೆದು ಬಿಡುವ ಹಸುಗಳೇ ಹಳ್ಳಿಗರ ಸಂಪತ್ತು. ವರುಷವಿಡೀ ಬೆವರ ಹರಿಸಿ ಗಳಿಸಿದ ಶ್ರಮದ ಫಸಲು ಮನೆಯಲ್ಲಿ ತುಂಬಿರಲು ಮನವು ತುಂಬಿ ಬರದೆ. ಬೆವರ ಹನಿಯೇ ಹಸಿರ ಹಬ್ಬವಾಗಿ ಜನರಿಗೆ ಉಸಿರು ಬಂದಂತಾಗಿದೆ.

ಕನಕಪುರ ಭಾಗದಲ್ಲಿ ಸಂಕ್ರಾಂತಿ ಹಬ್ಬ ಕ್ಯಾಲೆಂಡರ್ ತೋರುವ ಕೆಂಪು ದಿನದಂದು ಅಲ್ಲ. ಈ ದಿನದಂದು ಅವರೆ ಕಾಳು ಒಕ್ಕಣೆ ಮುಗಿಯದು, ಹಬ್ಬವೆಂದರೆ ಎಲ್ಲಾ ಬೆಳೆಗಳ ಒಕ್ಕಣೆ ಮುಗಿದು ದನಕರುಗಳು ಬೆಳೆ ಇಲ್ಲದ ಹೊಲದಲ್ಲಿ ಒಂದಷ್ಟು ದಿನಗಳು ಕಾಲಾಡಿ ಬರಬೇಕು. ಹಾಗಾಗಿ ಎಲ್ಲರೂ ಜನವರಿ ತಿಂಗಳಲ್ಲಿ ಸಂಕ್ರಾಂತಿ ಆಚರಿಸಿದರೆ ಇಲ್ಲಿಯ ಜನ ಫೆಬ್ರವರಿಯಲ್ಲಿ ಸುಗ್ಗಿ ಸಂಕ್ರಾಂತಿ ಆಚರಿಸು ತ್ತಾರೆ. ಫೆಬ್ರವರಿಯಲ್ಲಿ ಕೂಡ ಬುಧವಾರದಂದೇ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ. ಸೋಮವಾರ ರೈತರು ಆರು ಕಟ್ಟುವುದಿಲ್ಲ. ಅಂದು ಬಸವನಿಗೆ ವಿಶ್ರಾಂತಿಯ ದಿನ, ಪೂಜಿಸಲ್ಪಡುವ ದಿನ. ಸೋಮವಾರ ದಂದು ಬಸವನ ಗುಡಿಯಲ್ಲಿ ಊರ ಜನರೆಲ್ಲ ಒಟ್ಟಾಗಿ ಪೂಜೆಯ ಸಲ್ಲಿಸುತ್ತಾರೆ. ಅನಂತರ ಬರುವ ಬುಧವಾರ ದಂದೇ ಸಂಕ್ರಾಂತಿ ಆಚರಿಸುವುದು ವಾಡಿಕೆ. ಸಂಕ್ರಾಂತಿಯನ್ನು ‘ಸಂಕ್ರಣ್ಣ ಬಂದ’ ಎಂದೇ ಕರೆಯುವ ಇಲ್ಲಿಯ ಜನರು ತಮ್ಮ ಮನೆಯ ಹಸು, ಕರು, ಎತ್ತುಗಳನ್ನು ಊರಾಚೆ, ಮಣ್ಣಿನ ಗುಡಿ ಕಟ್ಟಿದ ಬಯಲಲ್ಲಿ ಸಾಲು ಸಾಲು ನಿಲ್ಲಿಸಿ ಪೂಜಿಸುತ್ತಾರೆ. ಸುಣ್ಣ, ಕೆಮ್ಮಣ್ಣು ಮೆತ್ತಿಕೊಂಡು ನಿಂತ ಗುಡಿಗೆ ಚೆಂದದೊಂದು ಮಣ್ಣಿನ ಹಣತೆ ಇರಿಸಿ, ಕಾರೆಮುಳ್ಳು, ಉಗನಿ ಹೂವು, ತುಂಬೆ ಹೂವಿನಿಂದ ಅಲಂಕರಿಸುತ್ತಾರೆ.

ಒಂದೆಡೆ ಕಲೆತ ದನ, ಎತ್ತುಗಳಿಗೆ ಧೂಪ ಹಾಕಿ ಉನ್ನಿ ಸಮೇತ ಬೇಯಿಸಿದ ಅನ್ನದಿಂದ ದೃಷ್ಟಿ ನಿವಾಳಿಸುತ್ತಾರೆ. ಪೂಜಿಸಲು ಬಂದು ಧೂಪ ಹಿಡಿದ ಕೈ ಇಂಡೆಚ್ಚಲೋ (ದನಗಳ ಹಿಂಡು ಹೆಚ್ಚಲಿ) ಎಂದು ಕೂಗಿ ಹರಸುತ್ತದೆ. ಮತ್ತೊಂದು ಕೈ ಪಂಗಳೋ (ಹಾಲ ಕುಂಭಗಳು ಉಕ್ಕಿ ಹರಿಯಲಿ) ಎಂದು ನಮಿಸುತ್ತದೆ. ಊರ ದನಗಳೆಲ್ಲ ಅಂದು ವಂದಿಸಲ್ಪಡುವ ಗಳಿಗೆಯೇ ಸುಗ್ಗಿಯ ಹಬ್ಬವಾಗಿ ಸಂಕ್ರಾಂತಿ ಆಗಿದೆ. ಹೀಗೆ ಪೂಜೆಗೊಂಡ ದನಕರು, ಎತ್ತುಗಳು ಸಂಜೆ ಕಿಚ್ಚಾದು ಮನೆ ಮುಂದಣ ಒನಕೆ, ಕೆಂಪು ನೀರು (ರತ್ನೀರು- ದೃಷ್ಟಿ ನಿವಾಳಿಸುವ ನೀರು, ಕೆಲವು ಮನೆಗಳಲ್ಲಿ ಕೋಳಿಗಳ ರಕ್ತವನ್ನು ಎತ್ತುಗಳ ಕಾಲಿಗೆ ಹಾಕುತ್ತಾರೆ) ದಾಟಿ ಮನೆಯಂಗಳಕ್ಕೆ ಬರುತ್ತವೆ. ಹಾಗಾಗಿ ಸುಗ್ಗಿ ಹಬ್ಬವೆಂದರೆ ಇಲ್ಲಿ ದನಕರು – ಎತ್ತುಗಳ ಹಬ್ಬ. ರೈತರ ಹಬ್ಬ

ಪಕ್ಕದ ತಮಿಳುನಾಡಿನ ಪೊಂಗಲ್ ಪ್ರಭಾವವೋ ಇಲ್ಲ, ಇಲ್ಲಿನ ಜನರ ಪದ್ಧತಿಯೋ ಜಲ್ಲಿಕಟ್ಟು ನೆನಪಿಸುವ ಕ್ರೀಡೆಯೂ ಜರುಗುತ್ತದೆ. ಊರ ಮಧ್ಯೆದಲ್ಲಿ ಹಸು, ಕರುಗಳ ಜೊತೆ ಜನರೂ ಓಡುತ್ತಾ ಸಂಭ್ರಮಿಸುತ್ತಾರೆ. ರಾಜ್ಯದ ಬಹು ಭಾಗಗಳಲ್ಲಿ ಸಾಮಾನ್ಯವಾಗಿ ಹೊಲಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ತೊಗರಿ, ಹುರುಳಿ ಫಸಲು ರಾಶಿಗೆ ಪೂಜಿಸಿ, ಹೆಚ್ಚೊಕ್ಕ ಲಾಗಲಿ ಎಂದು ಹರಸಿ, ಹಾಡಿ, ಕುಣಿದ ಹಬ್ಬ ಸುಗ್ಗಿಯಾಗಿದೆ. ವರುಷಕೊಮ್ಮೆ ಬರುವ ಸಂಕ್ರಮಣದ ಹಬ್ಬ ಎಳ್ಳು ಬೆಲ್ಲದಂತಹ ಒಳಿತನ್ನೇ ತಾರಲಿ.

ಆಂದೋಲನ ಡೆಸ್ಕ್

Recent Posts

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ತಲೆತಗ್ಗಿಸುವ ಘಟನೆ: ಅರಗ ಜ್ಞಾನೇಂದ್ರ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸುವ ಘಟನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ…

26 mins ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಮತ್ತೆ ಕುಸಿತ: ಹೆಚ್ಚಾದ ಚಳಿಯ ತೀವ್ರತೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮತ್ತೆ ಕುಸಿತವಾಗಿದ್ದು, ಚಳಿಯ…

32 mins ago

ಏಪ್ರಿಲ್‌ನಿಂದ ಮೊದಲ ಹಂತದ ಜನಗಣತಿ ಆರಂಭ

ನವದೆಹಲಿ: 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಕಾರ್ಯ ಈ ವರ್ಷದ ಏಪ್ರಿಲ್‌ 1 ರಿಂದ ಸೆಪ್ಟೆಂಬರ್.‌30ರವರೆಗೆ ಎಲ್ಲಾ…

35 mins ago

ಬಳ್ಳಾರಿ ಫೈರಿಂಗ್‌ ಪ್ರಕರಣ ಸಿಬಿಐಗೆ ಕೊಡುವ ಅಗತ್ಯವಿಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಫೈರಿಂಗ್‌ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ. ಈ…

52 mins ago

ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್‌ ವಿಲೀನ: ಡಿಸಿಎಂ ಡಿ.ಕೆ.ಶಿವಕುಮಾರ್‌ ಭವಿಷ್ಯ

ಬೆಂಗಳೂರು: ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್‌ ವಿಲೀನ ಆಗಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ…

1 hour ago

ಮದ್ದೂರು| ಪೊಲೀಸ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆ: ಸಹೋದ್ಯೋಗಿ ವಿರುದ್ಧ ದೂರು ದಾಖಲು

ಮದ್ದೂರು: ಮದ್ದೂರು ಪಟ್ಟಣದ ಪೊಲೀಸ್‌ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೇಬಲ್‌ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ…

2 hours ago