‘ದೇಶ ವಿದೇಶಗಳ ಪ್ರವಾಸಿಗರಿಗೆ ಕಲೆ, ಸಂಸ್ಕೃತಿ ಪರಿಚಯಿಸಿದ ಕಲಾವಿದರು
ಮೈಸೂರು: ಕಿವಿಗಪ್ಪಳಿಸುವ ತಮಟೆ, ನಗಾರಿ ಸದ್ದು… ಗಾಳಿಯಲ್ಲಿ ತೇಲಿಬಂದ ನಾದಸ್ವರ, ಡೊಳ್ಳು ಕುಣಿತದ ಝಲಕ್… ಏಣಿ ಮೇಲೆ ಪೂಜಾ ಕುಣಿತ,, ಬುಡಕಟ್ಟು ಮಹಿಳೆಯರ ಹಕ್ಕಿ ಪಿಕ್ಕಿ ನೃತ್ಯ… ಬೆಂಕಿಯ ಉಂಡೆಗಳನ್ನು ಉಗುಳಿದ ಸಾಹಸಿಗರು.
ಹೀಗೆ ಸಾಂಸ್ಕೃತಿಕ ನಗರಿ ಮೈಸೂರಿನ ರಾಜ ಮಾರ್ಗದಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಲೆಗಳ ವೈಭೋಗದ ಸಿರಿ ಗರಿಬಿಚ್ಚಿತು. ವಿವಿಧ ಕಲಾಸಂಸ್ಕೃತಿಯ ಸಿರಿತನದ ದಿಬ್ಬಣ ಲಕ್ಷಾಂತರ ಜನರ ಕಣ್ಣು ಕೋರೈಸಿತು. ಬರೋಬ್ಬರಿ 90ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ಕಲಾವಿದರು ಜಂಬೂಸವಾರಿಗೆ ಕಳೆತಂದರು.
ನಂದಿಧ್ವಜಕ್ಕ ಪೂಜೆ ಸಲ್ಲಿಕೆಯಾಗುತ್ತಿದ್ದಂತೆ ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆ ಆರಂಭಗೊಂಡಿತು. ಜಂಬೂ ಸವಾರಿಗೆ ಹಿಮ್ಮೇಳದಂತೆ ಕಲಾವಿದರು ಮಳೆ ಬಿಸಿಲನ್ನೂ ಲೆಕ್ಕಿಸದೇ ಕುಣಿದು ಕುಪ್ಪಳಿಸಿದರು.
ವೀರಗಾಸೆ: ಕೈಯಲ್ಲಿ ಒಂದು ಕತ್ತಿ ಗುರಾಣಿ ಹಿಡಿದ ವೀರಗಾಸೆ ಕಲಾವಿದರು ಕುಣಿಯುತ್ತಿದ್ದರೆ ನೆರೆದಿದ್ದ ಪ್ರೇಕ್ಷಕರ ಎದೆ ಝಲ್ಲಿಂದಿತು.
ನವಿಲಿನ ನೃತ್ಯ ವೀಕ್ಷಣೆ: ಬೆಂಗಳೂರಿನ ಶ್ರೀ ಕೃಷ್ಣ ಜಾನಪದ ನವಿಲು ನೃತ್ಯ ಕಲಾತಂಡವು ನವಿಲಿನ ನೃತ್ಯವನ್ನು ಪ್ರಸ್ತುತಪಡಿಸಿ ಎಲ್ಲರ ಗಮನಸೆಳೆಯಿತು. ನವಿಲಿನ ನಡೆಯನ್ನೇ ಅನುಕರಿಸುವ ಈ ನೃತ್ಯದಲ್ಲಿ ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಹುಲಿ ವೇಷ ಕುಣಿತ, ಹುಲಿ ವೇಷಧಾರಿಗಳು ಗಗಿರಕಿ ಹೊಡೆಯುತ್ತಾ, ಕುಪ್ಪಳಿಸುತ್ತಾ, ಲಾಗ ಹಾಕುತ್ತಾ, ಪದೇ ಪದೇ ಪ್ರೇಕ್ಷಕರ ಬಳಿ ಬಂದು ರಂಜಿಸಿದರು.
ಏಣಿ ಮೇಲೆ ಪೂಜಾ ಕುಣಿತ: ಮೈಸೂರು, ಮಂಡ್ಯ ಜಿಲ್ಲೆಗಳ ವಿವಿಧ ಕಲಾ ತಂಡಗಳು ಪ್ರಸ್ತುತ ಪಡಿಸಿದ ಪೂಜಾ ಕುಣಿತವನ್ನು ಸಹಸ್ರಾರು ಜನರು ಕತ್ತುಂಬಿಕೊಂಡರು. ಏಣಿ ಮೇಲೆ ಹತ್ತಿ ಪ್ರದರ್ಶಿಸಿದ ಪೂಜಾ ಕುಣಿತ ರೋಚಕವಾಗಿತ್ತು.
ದೈವಿ ಶಕ್ತಿಯನ್ನು ಸಾರುವ ಸೋಮನ ಕುಣಿತ, ಕೇರಳದ ಕಾಸರಗೋಡಿನ ಆದಿಶಕ್ತಿ ಕಲಾಕ್ಷೇತ್ರದ ಕೋಳಿನೃತ್ಯ ಎಲ್ಲರ ಗಮನ ಸೆಳೆಯಿತು.
ಬೆಂಕಿಯೊಂದಿಗೆ ಕಲಾವಿದರ ಸರಸ: ಐದಾರು ಕಲಾವಿದರು ಬಾಯಿಯಲ್ಲಿ ಸೀಮೆ ಎಣ್ಣೆ ತುಂಬಿಕೊಂಡು ಬೆಂಕಿ ಉಗುಳುತ್ತಿದ್ದರು. ಬೆಂಕಿಯ ಜ್ವಾಲೆ ಆಕಾಶದತ್ತ ಚಿಮ್ಮುತ್ತಿದ್ದಂತೆಯೇ ಸಭಿಕರ ಸಾಲಿನಲ್ಲಿ ಕುಳಿತ ಕೆಲವರು ಆಶ್ಚರ್ಯಚಕಿತರಾದರೆ, ಇನ್ನೂ ಕೆಲವರು ಗಾಬರಿಗೊಂಡರು.
ಮೆರುಗು ತಂದ ಕಲಾ ತಂಡಗಳು:
ಚಾಮರಾಜನಗರ, ಮಂಡ್ಯ, ಶಿರಾದ ಕಲಾತಂಡಗಳ ಕೊಂಬುಕಹಳೆ, ಮೈಸೂರಿನ ವಿದ್ಯಾರಣ್ಯಪುರ, ಜೆ.ಪಿ.ನಗರ, ನಂಜನಗೂಡು ತಂಡಗಳ ಬೀಸು ಕಂಸಾಳೆ, ತಿ.ನರಸೀಪುರದ ಬೀಡನಹಳ್ಳಿ, ಪಾಂಡವಪುರದ ಸುಂಕಾತೊಣ್ಣೂರಿನ ಪಟಕುಣಿತ, ಕೋಲಾರದ ಕೀಲು ಕುದುರೆ, ಶಿರವಾಳದ ಕೋಲಾಟ, ಹಾಸನ ಜಿಲ್ಲೆಯ ಪನ್ನಸಮುದ್ರದ ಚಿಟ್ಮೇಳ, ರಾಯಚೂರಿನ ಅಮದಿಹಾಳದ ವೃದ್ದರು ನಡೆಸಿದ ಕಣಿ ವಾದನ ಮನ ರಂಜೆಸಿತು.
ಬಾಗಲಕೋಟೆಯ ಹೂವಿನ ನೃತ್ಯದ ಮೈಸೂರಿನ ತಮಟೆ ನಗಾರಿಯ ಅಬ್ಬರ, ಸ್ಥಳೀಯ ಕಲಾವಿದರ ಯಕ್ಷಗಾನ ಗೊಂಬೆಯ ಗಾಂಭೀರ್ಯ, ಯಾದಗಿರಿ, ವಿಜಯನಗರ, ಬೀದರ್, ಕಲಬುರ್ಗಿ ಜಿಲ್ಲೆಯ ಲಂಬಾಣಿ ಸಾಂಪ್ರದಾಯಿಕ ಲಂಬಾಣಿ ನೃತ್ಯದ ಸಿರಿ ಮೇಳೈಸಿತು.
ಕೋಲಾರ, ದಾವಣಗೆರೆ ತಂಡದ ಕಮಟೆ ವಾದನದ ಹಿನ್ನಲೆ ಸಂಗೀತ, ಕೊಪ್ಪಳ, ಸಂಡೂರಿನ ತಂಡದ ಹಗಲುವೇಷದಲ್ಲಿ ಶ್ರೀರಾಮ, ಲಕ್ಷ್ಮಣ, ಹನುಮಂತನ ದರ್ಶನವಾಯಿತು. ಗೋಕಾಕ್ ತಂಡದ ದಟ್ಟಿ ಕುಣಿತ, ಉಡುಪಿಯ ಕುಡುಬಿ ಜಾನಪದ ನೃತ್ಯ ಆಕರ್ಷಕವಾಗಿತ್ತು.
ಭಟ್ಕಳದ ಗೊಂಡರ ಢಕ್ಕೆ ಸೊಗಸು, ತಲಕಾಡಿನ ಚಿಲಿಪಿಲಿ ಗೊಂಬೆ ಪ್ರದರ್ಶನದ ಕಚಗುಳಿ, ನಂಜನಗೂಡು ತಾಲ್ಲೂಕು ತಾಯೂರಿನ ಮರಗಾಲು ಕುಣಿತ, ಮದ್ದೂರಿನ ದೊಣ್ಣೆವರಸೆ ಆಕರ್ಷಣೀಯವಾಗಿತ್ತು.
ರಾಮದುರ್ಗ, ಧಾರವಾಡದ ಜಗ್ಗಲಿಗೆ ಮೇಳ, ಯಳಂದೂರಿನ ಗೇರ್ ನೃತ್ಯ, ಅರಸೀಕರೆ, ವಿಜಯನಗರದ ನಂದಿಕೋಲು, ಚಳ್ಳಕೆರೆಯ ಉರುವ ವಾದ್ಯ ಇಲ್ಲಿ ಸಂಭ್ರಮವನ್ನು ಹಿಗ್ಗಿಸಿತು. ಸೋಮವಾರಪೇಟೆಯ ಲೆನಾಡು ಸುಗ್ಗಿ ಕುಣಿತ, ವಿರಾಜಪೇಟೆಯ ಕೊಡವರ ನೃತ್ಯ ಜನಸಮೂಹವನ್ನು ರಂಜಿಸಿತು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಕ್ಕಿ-ಪಿಕ್ಕಿ ಬುಡಕಟ್ಟು ಮಹಿಳೆಯರ ಹಕ್ಕಿ-ಪಿಕ್ಕಿ ನೃತ್ಯ, ಮೈಸೂರಿನ ನಾಸಿಕ್ ಡೋಲು, ಕೊಪ್ಪಳ, ಬಾಗಲಕೋಟೆ, ಗದಗ ಜಿಲ್ಲೆಗಳ ಕರಡಿ ಮಜಲು, ಬಾಗಲಕೋಟೆ, ಅಥಣಿಯ ಝಾಂಜ್ ಪಥಕ್ ನೃತ್ಯ,
ಯಾದಗಿರಿ, ರಾಯಚೂರು, ದಾವಣಗೆರೆ, ಸಾಗರ, ಶಿಕಾರಿಪುರ ತಂಡದ ಡೊಳ್ಳು ಕುಣಿತ ರೋಮಾಂಚನ ತಂದಿತು.
ಮಲೆಮಹದೇಶ್ವರರನ್ನು ಸ್ಮರಿಸುವ ಚಾಮರಾಜನಗರದ ಗೊರವರ ಕುಣಿತ, ಡೊಳ್ಳುಕುಣಿತ ಮನ ಸೆಳೆಯಿತು. ನಾಗಮಂಗಲದ ಮೂಡಲಪಾಯ ಯಕ್ಷಗಾನ ನೃತ್ಯ, ವಿಜಯಪುರದ ಸತ್ತಿಗೆ ಕುಣಿತ, ರಾಮನಗರದ ಕರಗ ನೃತ್ಯ, ಸುಳ್ಯದ ಕಂಗೀಲು ನೃತ್ಯ ಜನಾಕರ್ಷಣೆಯಾಗಿತ್ತು.
ಅನ್ಯರಾಜ್ಯಗಳ ಕಲೆಯ ದರ್ಶನ:
ಅನ್ಯ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಶ್ರೀಮಂತಿಕೆ ಕೂಡ ಅನಾವರಣಗೊಂಡಿತು. ಕೇರಳದ ಸಿಂಗಾರಿ ಮೇಳಂ, ತಮಿಳುನಾಡಿನ ಕರಗಂ, ಕಪಾಡಿ ರಾಜಸ್ಥಾನದ ಜಾಕ್ರೀ ನೃತ್ಯ, ಉತ್ತರಖಂಡದ ತಡಿಯಾದಲ್ಲಾ ನೃತ್ಯ, ಹರಿಯಾಣದ ಫೆಗ್, ಗೂಮೆರ್ ನೃತ್ಯ ಆಕರ್ಷಿಸಿದವು. ಕೋಲಾರ ಜಿಲ್ಲೆಯ ಗಾರುಡಿ ಗೊಂಬೆ ನರ್ತನ ಮನ ಸೆಳೆಯಿತು.
ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…
ಆನೇಕಲ್ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…
ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…
ನವದೆಹಲಿ : ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ. ಈ…
ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…
ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…