Andolana originals

ಸಕ್ಕರೆ ಬೆಲೆ ಗಗನಮುಖಿ; ಗ್ರಾಹಕರಿಗೆ ಬರೆ

ಚಿರಂಜೀವಿ ಸಿ ಹುಲ್ಲಹಳ್ಳಿ

ಸ್ಥಳೀಯ ಮಾರುಕಟ್ಟೆ ದರ ೭೨ರಿಂದ ೭೫ರೂ. ಒಂದೇ ತಿಂಗಳ ಅಂತರದಲ್ಲಿ ದುಪ್ಪಟ್ಟು

ಚಹ- ಕಾಫಿ, ಸಿಹಿ ತಿನಿಸುಗಳ ದರ ಹೆಚ್ಚಳ ಸಾಧ್ಯತೆ 

ಮೈಸೂರು: ದಿನದಿಂದ ದಿನಕ್ಕೆ ಏರುತ್ತಿರುವ ಸಕ್ಕರೆ ಬೆಲೆ ಸಾಮಾನ್ಯರ ಮನೆಯ ಅಡುಗೆ ಖರ್ಚಿನ ಲೆಕ್ಕವನ್ನೇ ಬದಲಾಯಿಸುತ್ತಿದೆ. ಒಂದು ಕಡೆ ಸಕ್ಕರೆಯ ದರ ಏರಿಕೆಯಿಂದ ಗೃಹಬಳಕೆದಾರರ ಜೇಬಿಗೆ ಹೊರೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಸಿಹಿ ತಿನಿಸು, ಬೇಕರಿ ಉತ್ಪನ್ನ, ಚಹ-ಕಾಫಿ ಸೇರಿದಂತೆ ಸಕ್ಕರೆಯನ್ನು ಅವಲಂಬಿಸಿರುವ ಆಹಾರ ಪದಾರ್ಥಗಳ ಬೆಲೆಯೂ ಏರುವ ಆತಂಕ ಎದುರಾಗಿದೆ.

ಕಳೆದ ಕೆಲ ವಾರಗಳಲ್ಲಿ ದೇಶದಾದ್ಯಂತ ಸಕ್ಕರೆ ದರದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಜುಲೈ ೨೦ರಂದು ಕೆ.ಜಿ.ಗೆ ೪೮.೧೮ ರೂ.ಗಳಷ್ಟಿದ್ದ ಸರಾಸರಿ ಸಕ್ಕರೆ ಚಿಲ್ಲರೆ ದರ ಆಗಸ್ಟ್ ೨೦ರಂದು ೫೫.೭೦ ರೂ.ಗೆ ಏರಿಕೆಯಾಗಿದೆ. ಅಂದರೆ ಒಂದೇ ತಿಂಗಳಲ್ಲಿ ಕೆ.ಜಿ.ಗೆ ಸುಮಾರು ೭.೫೦ ರೂ.ಗಳಷ್ಟು ಹೆಚ್ಚಳವಾಗಿದೆ. ಆಗಸ್ಟ್ ೨೧ರಂದು ಸರಾಸರಿ ದರ ೫೮.೨೦ ರೂ. ಇದೀಗ ೬೫ ರೂ.ಏರಿಕೆ ಇದೆ. ಆದರೆ, ಕೆಲವರು ಸಕ್ಕರೆ ಅಭಾವವನ್ನು ಬಂಡವಾಳ ಮಾಡಿಕೊಂಡು ದುಪ್ಪಟ್ಟು ದರಕ್ಕೆ ಗ್ರಾಹಕರಿಗೆ ಮಾರುತ್ತಿದ್ದಾರೆ ಎಂದು ಎಪಿಎಂಸಿ ಸಕ್ಕರೆ ಡೀಲರ್‌ವೊಬ್ಬರು ‘ಆಂದೋಲನ’ ದಿನಪತ್ರಿಕೆಗೆ ಮಾಹಿತಿ ನೀಡಿದರು.

ಸಕ್ಕರೆ ಅಭಾವವನ್ನು ಮನಗಂಡಿದ್ದ ಕೆಲ ಡೀಲರ್‌ಗಳು ಮುಂಚಿತವಾಗಿ ೧೦-೨೦ ಲೋಡ್ ಅನ್ನು ಕಾರ್ಖಾನೆಯಿಂದ ತೆಗೆದುಕೊಂಡಿದ್ದು, ಅದನ್ನು ಶೇಖರಿಸಿಟ್ಟುಕೊಂಡಿದ್ದರು. ಇದೀಗ ೭೨-೭೫ ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವವರು ಯಾರು? ಎಂದು ಅವರು ಪ್ರಶ್ನಿಸಿದರು.

ಕಬ್ಬಿನ ಬೆಳೆ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ, ನಿರೀಕ್ಷೆಗಿಂತ ಕಡಿಮೆಯಾದ ಸಕ್ಕರೆ ಉತ್ಪಾದನೆ, ಹಬ್ಬದ ದಿನಗಳಲ್ಲಿ ಹೆಚ್ಚಾಗುವ ಬೇಡಿಕೆ, ಮಾರುಕಟ್ಟೆಯಲ್ಲಿನ ಊಹಾಪೋಹ, ಸಕ್ಕರೆ ಅಕ್ರಮ ದಾಸ್ತಾನು ಸೇರಿದಂತೆ ಹಲವು ಕಾರಣಗಳಿಂದ ಬೆಲೆ ಏರಿಕೆಯಾಗಿದೆ ಎಂದು ಕಬ್ಬು ಬೆಳೆಗಾರರೊಬ್ಬರು ಮಾಹಿತಿ ನೀಡಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆರಂಭಿಕ ಅಂದಾಜಿನ ೩೪೩ ಲಕ್ಷ ಟನ್‌ಗಳ ಬದಲಿಗೆ ಸುಮಾರು ೩೦೬ ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಕರ್ನಾಟಕ ಸೇರಿದಂತೆ ಪ್ರಮುಖವಾಗಿ ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಹವಾಮಾನ ಪರಿಸ್ಥಿತಿಯೂ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಸಿಹಿ ತಿನಿಸಿಗೂ ಬೆಲೆ ಬರೆ: ಸಕ್ಕರೆ ಬೆಲೆ ಏರಿಕೆಯ ನೇರ ಪರಿಣಾಮ ಸಿಹಿ ತಿನಿಸು ತಯಾರಕರ ಮೇಲಿದೆ. ಮೈಸೂರು ಪಾಕ್, ಜಿಲೇಬಿ, ಲಡ್ಡು, ಪೇಡಾ, ಬಾದೂಷಾ ಸೇರಿದಂತೆ ವಿವಿಧ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಸಕ್ಕರೆ ಪ್ರಮುಖ ಕಚ್ಚಾ ವಸ್ತುವಾಗಿದೆ. ಹಾಗಾಗಿ ಸಿಹಿ ತಿಂಡಿಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

ಪಡಿತರ ಅಂಗಡಿಯಲ್ಲಿ ಸಕ್ಕರೆ ಇಲ್ಲ: ಇದರ ನಡುವೆ ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ಕರೆ ವಿತರಣೆ ಸ್ಥಗಿತಗೊಂಡಿರುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮಧ್ಯಮ ವರ್ಗದ ಜನರ ಜೇಬಿಗೆ ಮತ್ತಷ್ಟು ಹೊರೆ ಹೆಚ್ಚಾಗಲಿದೆ. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ವ್ಯವಸ್ಥೆಯಲ್ಲಿ ಸಕ್ಕರೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬೆಲ್ಲ ಕೂಡ ಗ್ರಾಹಕರಿಗೆ ಕಹಿ: 

ಸಕ್ಕರೆ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಲ್ಲದ ದರವೂ ಗ್ರಾಹಕರಿಗೆ ಕಹಿಯಾಗುತ್ತಿದೆ. ೧ ಸಾವಿರ ಅಚ್ಚುಬೆಲ್ಲಕ್ಕೆ ೫೦೦ ರೂ.ಹೆಚ್ಚಳವಾಗಿದೆ. ಕಳೆದ ಕೆಲ ದಿನಗಳ ಹಿಂದೆ ೪,೨೦೦ ರೂ. ಇದ್ದ ಬೆಲ್ಲದ ದರ ೪,೫೦೦ ರೂ.ಗಳಿಗೆ ಹೆಚ್ಚಳವಾಗಿದೆ ಎಂದು ಬೆಲ್ಲದ ಕ್ರಷರ್ ಮಾಲೀಕ ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

” ಎಥೆನಾಲ್ ಉತ್ಪಾದನೆಯಿಂದ ಸಕ್ಕರೆಯ ಬೆಲೆ ಏರಿಕೆಯಾಗಿಲ್ಲ. ಏಕೆಂದರೆ ಎಥೆನಾಲ್ ಉತ್ಪಾದನೆಯ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕಬ್ಬಿನ ಇಳುವರಿ ಕುಂಠಿತವಾಗಿ ಸಕ್ಕರೆ ಅಭಾವ ಸೃಷ್ಟಿಯಾಗಿದೆ. ಕೆಲವು ಡೀಲರ್‌ಗಳು ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು ಶೇಖರಿಸಿದ್ದ ಸಕ್ಕರೆಯನ್ನು ಹೆಚ್ಚಿನ ಬೆಲೆಗೆ ಮಾರುತ್ತಾರೆ.”

ಕುರುಬೂರು ಶಾಂತಕುಮಾರ್, ಅಧ್ಯಕ್ಷ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ

” ಸಕ್ಕರೆ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಹಳ ತೊಂದರೆಯಾಗಲಿದೆ. ನಿತ್ಯ ಚಹ-ಕಾಫಿ, ಹಾಲು ಸೇರಿದಂತೆ ಇತರೆ ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿಯೂ ಸಕ್ಕರೆ ಬಳಸುತ್ತೇವೆ. ಕೆಜಿಗೆ ೭೫ ರೂ. ಕೊಟ್ಟು ಸಕ್ಕರೆ ಖರೀದಿಸಬೇಕೋ? ಅಥವಾ ಸಕ್ಕರೆ ಬಳಸುವುದನ್ನು ಬಿಡಬೇಕೋ ತಿಳಿಯುತ್ತಿಲ್ಲ.”

ಸತೀಶ್, ಗ್ರಾಹಕ

 

 

ಆಂದೋಲನ ಡೆಸ್ಕ್

Recent Posts

ಫ್ಲೈಓವರ್ ಕಾಮಗಾರಿ ಕುಂಟುತ್ತಿದೆಯೇಕೆ?

ಎಂ.ಕೇಶವ ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಹಾಗೂ ನಂಜನಗೂಡು ರಸ್ತೆಯ ಎಪಿಎಂಸಿ ಬಳಿ ನಿರ್ಮಾ ಣವಾಗುತ್ತಿರುವ ಫ್ಲೈ…

1 min ago

ಮಣ್ಣಿನ ಘಮ, ನಾಟಿ ಸಂಭ್ರಮ, ಗ್ರಾಮೀಣ ಕ್ರೀಡೆಗಳ ಉತ್ಸಾಹ

ಲಕ್ಷ್ಮೀಕಾಂತ್ ಕೊಮಾರಪ್ಪ ಮಣ್ಣಿನೊಂದಿಗೆ ಯುವಜನರ ನಂಟು ಬೆಸೆಯುವ ಉದ್ದೇಶ  ನಾಳೆ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಗದ್ದೆ ನಾಟಿ…

14 mins ago

ಮಳೆ ಕೊರತೆ; ರೈತರ ಕೈ ಸೇರದ ಬೆಳೆಗಳು

ಎಂ.ನಾರಾಯಣ ತಿ.ನರಸೀಪುರ: ಹೂ ಕಚ್ಚದ ಕಡಲೆಕಾಯಿ, ಸೂರ್ಯಕಾಂತಿ, ಮುಸುಕಿನ ಜೋಳದ ಬೆಳೆಗಳು ತಿ.ನರಸೀಪುರ: ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಬಾರದಿರುವುದರಿಂದ ರೈತರು…

19 mins ago

ದುಬಾರಿ ಬಾಡಿಗೆ: ಬಾಡಿಗೆದಾರರಿಲ್ಲದೆ ಖಾಲಿ ಬಿದ್ದ ಮಳಿಗೆಗಳು

ಭೇರ್ಯ ಮಹೇಶ್ ಭೇರ್ಯ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಳಿಗೆಗಳು ತೆರೆಯದೆ ಪ್ರಯಾಣಿಕರಿಗೆ ಸಮಸ್ಯೆ ಭೇರ್ಯ: ಭೇರ್ಯ ಗ್ರಾಮದ ಬಸ್ ನಿಲ್ದಾಣದಲ್ಲಿ…

23 mins ago

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

10 hours ago