ಲಾಭ- ನಷ್ಟ ಎಣಿಸದೆ ಜಯಶಂಕರ್ ಕುಟುಂಬ ಕಾಯಕನಿಷ್ಠೆ
ಹೇಮಂತ್ಕುಮಾರ್ ಜಿ.ಜೆ
ಮೈಸೂರು: ಆ ಮನೆಗೆ ಕಾಲಿಡುತ್ತಿದ್ದಂತೆ ಮಣ್ಣಿನ ಘಮಲು ಹೃದಯ ಆಹ್ಲಾದತೆಯಿಂದ ಹಿಗ್ಗಿದಂತಾಗುತ್ತದೆ… ಉಸಿರಿಗೆ ತಾಜಾತನ ಬಂದಂತಾಗುತ್ತದೆ… ಕಂಗಳನ್ನು ಒಳಭಾಗದಲ್ಲಿ ಕೀಲಿಸಿದರೆ, ವಿವಿಧ ಭಂಗಿಗಳಲ್ಲಿರುವ ಗಣಪತಿ ಮೂರ್ತಿಗಳು ಆಕರ್ಷಿಸುತ್ತವೆ. ಮುಖ್ಯವಾಗಿ ಅವು ಪರಿಸರಕ್ಕೆ ಪೂರಕವಾದ ವಿಗ್ರಹಗಳು… ತಲೆ ತಲಾಂತರದಿಂದ ಮಣ್ಣಿನಿಂದ ಗಣಪನ ಮೂರ್ತಿಗಳನ್ನು ತಯಾರಿಸುವ ಕಾಯಕ ಮಾಡುತ್ತಿರುವ ಕುಟುಂಬದ ಸದಸ್ಯರ ಶ್ರಮ ಕಣ್ಣಿಗೆ ರಾಚುತ್ತದೆ.
ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿರುವ ಜಯಶಂಕರ್ ಕುಟುಂಬ 5 ದಶಕಗಳಿಗೂ ಹೆಚ್ಚು ಕಾಲದಿಂದ ಗೌರಿ ಗಣೇಶ ಹಬ್ಬದ ವೇಳೆ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದೆ. ಇದು ಅವರ ವಂಶಪಾರಂಪರ್ಯದ ಕಸುಬು. ಹಿಂದೆ ಮಣ್ಣಿನ ವಿಗ್ರಹಗಳಿಗೆ ಭಾರಿ ಬೇಡಿಕೆ ಇತ್ತು. ಜೀವನಕ್ಕೆ ಆಧಾರವಾಗಿತ್ತು. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ರಾಸಾಯನಿಕ ಬಣ್ಣಗಳ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬರುವುದು ಆರಂಭವಾದಂತೆ ಮಣ್ಣಿನ ಮೂಲದ ಗಣಪತಿಗಳಿಗೆ ಬೇಡಿಕೆ ಕಡಿಮೆಯಾಯಿತು.
ಗಣೇಶ ಮೂರ್ತಿ ತಯಾರಿಕೆಯ ಕಲೆಯು ಜಯಶಂಕ ವಂಶದ ಹಿರಿಯರಿಂದ ಬಳುವಳಿಯಾಗಿ ಬಂದಿದೆ. ಐಟಿ ವ್ಯಾಸಂಗ ಮಾಡಿರುವ ಜಯಶಂಕರ್ ಅವರು ಕೆಲಸದ ಬಿಡುವಿನ ವೇಳೆಯಲ್ಲಿ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಕೆಲಸ ಕೊನೆಯಾದ ನಂತರ ಮೂರ್ತಿಗಳ ತಯಾರಿಕೆಯಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಮಣ್ಣು ತಂದು ಹದಗೊಳಿಸುವುದೇ ಸಾಹಸ
ಹಿಂದಿನ ಕಾಲದಲ್ಲಿ ಗಣಪತಿ ತಯಾರಿಕೆಗಾಗಿ ಮಣ್ಣು ಎಲ್ಲಿ ಬೇಕಾದರೂ ಸುಲಭವಾಗಿ ಸಿಗುತ್ತಿತ್ತು, ಆದರೆ, ಇಂದಿನ ದಿನಗಳಲ್ಲಿ ಬೇರೆ ಜಾಗದಲ್ಲಿ ಒಂದು ಹಿಡಿ ಮಣ್ಣನ್ನು ತೆಗೆಯುವುದು ಅಸಾಧ್ಯ. ಪ್ರಸ್ತುತ ಚಾಮುಂಡಿಬೆಟ್ಟದ ತಳಭಾಗದಲ್ಲಿ ಮಣ್ಣು ತರುತ್ತೇವೆ ಎನ್ನುತ್ತಾರೆ ಜಯಶಂಕರ್.
ಗಣಪತಿ ಪ್ರತಿಮೆ ತಯಾರಿಸಲು ಸೂಕ್ತವಾಗಿ ಮಣ್ಣನ್ನು ಹದ ಮಾಡುವುದು ಒಂದು ರೀತಿಯ ಸಾಹಸ. ಮಣ್ಣನ್ನು ಮೊದಲು ಸ್ವಚ್ಛಗೊಳಿಸಬೇಕು. ಅದನ್ನು ನೀರಿನಲ್ಲಿ ನೆನೆಸಿ, ಮತ್ತೆ ಶುದ್ದೀಕರಿಸಿ ಚೆನ್ನಾಗಿ ಹದ ಮಾಡಬೇಕು. ನಂತರ ಅದನ್ನು ಗಾಳಿಯಾಡದಂತೆ ಮುಚ್ಚಿಡಬೇಕು. ಮಣ್ಣು ಮುಗ್ಗುತ್ತದೆ. ಅದನ್ನು ಗಣೇಶನ ವಿಗ್ರಹವಾಗಿ ಸಿದ್ಧಪಡಿಸಲು ಅಗತ್ಯವಿದ್ದಷ್ಟು ಮಾತ್ರ ಹೊರತೆಗೆಯಬೇಕು. ಉಳಿದ ಮಣ್ಣಿಗೆ ಗಾಳಿ ತಾಗದಂತೆ ಮತ್ತೆ ಭದ್ರಪಡಿಸಬೇಕು ಎಂಬುದಾಗಿ ಅವರು ಕಾಯಕಮಗ್ನ ಮನದಿಂದ ಹೇಳುತ್ತಾರೆ.
ನಮ್ಮಲ್ಲಿ ಮಣ್ಣಿನ ಗಣಪ ಮಾತ್ರ
ವರ್ಷವಿಡೀ ಗಣಪತಿಯ ಹಲವು ಮೂರ್ತಿಗಳನ್ನು ಸಿಮೆಂಟ್ ಪೇಪರ್ ಮೋಡ್ ಮುಂತಾದವುಗಳಲ್ಲಿ ತಯಾರಿಸುತ್ತೇವೆ. ಆದರೆ, ಗೌರಿ ಗಣೇಶ ಹಬ್ಬಕ್ಕೆ ಮಣ್ಣಿನ ಗಣಪತಿಯನ್ನು ಮಾತ್ರ ತಯಾರಿಸುತ್ತೇವೆ. ವಿಶಿಷ್ಟ ಶೈಲಿಯ ಪಿಒಪಿ, ಸಿಮೆಂಟ್ ಗಣಪತಿಗಳನ್ನು ಬಳಸಿದರೆ ಪರಿಸರಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಸಾರ್ವಜನಿಕರು ಮಣ್ಣಿನ ಗಣಪತಿಯನ್ನೇ ಬಳಸುವುದು ಸೂಕ್ತ. -ಜಯಶಂಕರ್, ಮಣ್ಣಿನ ಗಣಪತಿ ತಯಾರಕರು.
ಮಣ್ಣು ಗಣಪನಾಗುವ ಚಮತ್ಕಾರ!
ಹದಗೊಳಿಸಿದ ಮಣ್ಣನ್ನು ಚೆನ್ನಾಗಿ ಕಲಸಿ ಅದನ್ನು ವಿಗ್ರಹ ಮಾಡುವ ಮಾಡೆಲ್ (ಅಚ್ಚು)ಗೆ ಹಾಕಿ ಗಾತ್ರ ಮತ್ತು ಅಳತೆಗೆ ತಕ್ಕಂತೆ ಹೊಂದಿಕೊಳ್ಳಲು ಬಿಡಲಾಗುತ್ತದೆ. ಚಿಕ್ಕ ವಿಗ್ರಹವಾದರೇ 1 ದಿನ, 4 ರಿಂದ 5 ಅಡಿ ಇದ್ದರೆ ಹತ್ತು ದಿನಗಳವರೆವಿಗೂ ಸಮಯ ತೆಗೆದುಕೊಳ್ಳುತ್ತದೆ. ಈ ರೀತಿಯಾಗಿ ಮೂಲ ಮೂರ್ತಿಯನ್ನು ಮಾಡಿಕೊಂಡು ನಂತರ ಅದಕ್ಕೆ ಬೇಕಾದ ಕೈ ಕೈಯಲ್ಲಿ ಹಿಡಿಯುವ ಲಾಡು, ಮೋದಕ, ಆಯುಧಗಳು ಮುಂತಾದ ವಸ್ತುಗಳನ್ನು ಬಿಡಿ ಬಿಡಿಯಾಗಿ ಸೇರಿಸಲಾಗುತ್ತಿದೆ.
ಈ ರೀತಿಯಾಗಿ ತಯಾರಾದ ಮೂರ್ತಿಗಳಿಗೆ ಬಣ್ಣ ಬಳಿಯುವುದು ಒಂದು ಸುಂದರ ಕಾಯಕ. ಮೊದಲಿಗೆ ಮಣ್ಣಿನ ಮೂರ್ತಿಯನ್ನು ಸ್ಯಾಂಡ್ ಪೇಪರ್ನಿಂದ ಉಜ್ಜಿ ಸ್ವಚ್ಛಗೊಳಿಸ ಲಾಗುತ್ತದೆ. ಬಣ್ಣ ಬಳಿಯಲು ಬೇಕಾದ ರೂಪಕ್ಕೆ ತಂದು ನಂತರ ಬಣ್ಣ ಬಣ್ಣಗಳಿಂದ ದೇಹ, ಬಟ್ಟೆ ಆಭರಣ, ಕಿರೀಟ, ಹೂವು ಮುಂತಾದವುಗಳಿಂದ ಸಿಂಗಾರ ಮಾಡಿ ಚಿತ್ತಾಕರ್ಷಕಗೊಳಿಸಲಾಗುತ್ತದೆ.
ನಾವು ತಯಾರಿಸುವ ಗಣೇಶ ಮೂರ್ತಿಗಳು ಹೆಚ್ಚಾಗಿ ಮಾರಾಟವಾದರೆ, ನಮಗೆ ಅದೇ ಹಬ್ಬ, ವಾಸ್ತವವಾಗಿ ಹಬ್ಬ ಆಚರಣೆಗೆ ನಮಗೆ ಸಮಯವೇ ಇರುವುದಿಲ್ಲ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಗಣಪತಿ ಮೂರ್ತಿ ಪೂರೈಕೆ ಮಾಡುವುದೇ ಆಗುತ್ತದೆ.
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡುವೆ ನಾಟಿ ಕೋಳಿಯ ಬಗ್ಗೆ ಚರ್ಚೆ…
ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿಯಡಿ ಇದುವರೆಗೆ 2,84,802 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ…
ಬೆಳಗಾವಿ (ಸುವರ್ಣಸೌಧ) : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೇಬಲ್ ಟಿವಿ ಆಪರೇಟರ್ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು…
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…