Chunchanakatte Falls
ಮೇ ತಿಂಗಳಲ್ಲೇ ತುಂಬಿ ಹರಿದ ಕಾವೇರಿ; ಜಲಪಾತ ವೀಕ್ಷಣೆಗೆ ಆಗಮಿಸುತ್ತಿರುವ ಜನರು
ಆನಂದ್ ಹೊಸೂರು
ಹೊಸೂರು: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರೈತ ಸಮುದಾಯದಲ್ಲಿ ಹರ್ಷ, ಮೇ ತಿಂಗಳಲ್ಲೇ ತುಂಬಿ ಹರಿದ ಕಾವೇರಿ, ಜಲಪಾತದ ರಮಣೀಯ ದೃಶ್ಯ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರು, ಸೆಲ್ಫಿ ತೆಗೆಯಲು ಮುಗಿಬೀಳುತ್ತಿರುವ ಯುವ ಜನತೆ…
ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕಂಡು ಬರುತ್ತಿರುವ ರಮಣೀಯ ದೃಶ್ಯ.
ಕೊಡಗಿನಲ್ಲಿ ಹಾಗೂ ನದಿಯ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಚುಂಚನಕಟ್ಟೆಯಲ್ಲಿ ೨೧ ಸಾವಿರ ಕ್ಯೂಸೆಕ್ಸ್ಗೂ ಅಧಿಕ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಕಾವೇರಿ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಈ ನದಿಯ ಕೊನೆಯ ಜಲಪಾತವಾಗಿರುವ ಚುಂಚನಕಟ್ಟೆಯ ಶ್ರೀರಾಮ ದೇವರ ದೇವಸ್ಥಾನದ ಸಮೀಪ ಇರುವ ಧನುಷ್ಕೋಟಿ ಜಲಪಾತ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸಿ ಜಲಧಾರೆಯ ವೈಭವ ಸವಿಯುತ್ತಿದ್ದಾರೆ.
ಮಳೆ ಇಲ್ಲದೆ ತನ್ನ ಸೊಬಗನ್ನು ಕಳೆದುಕೊಂಡಿದ್ದ ಈ ಜಲಪಾತದಲ್ಲಿ ಈಗ ೪೦ಕ್ಕೂ ಹೆಚ್ಚು ಅಡಿ ಎತ್ತರದಿಂದ ನದಿಯ ನೀರು ಬೀಳುತ್ತಾ, ಹಾಲಿನಂತೆ ಉಕ್ಕಿ ಹರಿಯುತ್ತಿರುವುದನ್ನು ಕಾಣಬಹುದಾಗಿದೆ.
ಕಳೆದ ವರ್ಷ ಜೂನ್ ಅಂತ್ಯದಲ್ಲಿ ತುಂಬಿ ಹರಿದಿದ್ದ ಕಾವೇರಿ ಈ ಬಾರಿ ತಿಂಗಳಿಗೂ ಮುಂಚೆಯೇ ತುಂಬಿ ಹರಿಯುತ್ತಿರುವುದು ಪ್ರಕೃತಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ಜಲಪಾತ ವೀಕ್ಷಣೆ ಮಾಡಲು ಹೆಚ್ಚಿನ ರೀತಿಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಆಂಜನೇಯ ಸ್ವಾಮಿ ಪ್ರತಿಮೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂಬಂತೆ ಮುಗಿಬೀಳುತ್ತಿದ್ದಾರೆ.
ಇದೇ ರೀತಿ ನದಿಯ ಕೂದಲೆಳೆ ದೂರದಲ್ಲಿ ಇರುವ ರಾಮಸಮುದ್ರ ಅಣ್ಣೆಕಟ್ಟೆ ಮತ್ತು ಚುಂಚನಕಟ್ಟೆಯಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಚಾಮರಾಜ ನಾಲೆಯ ಅಣೆಕಟ್ಟೆಯ ಮೇಲೆ ಕಾವೇರಿ ನದಿ ಹರಿಯುವ ದೃಶ್ಯ ನಯನ ಮನೋಹರವಾಗಿದೆ.
” ಜಲಪಾತಗಳು ಮೈದುಂಬಿ ಹರಿಯುವಾಗಲೂ ಜನರನ್ನು ಸೆಳೆಯಲು ಯಾವುದೇ ಪ್ರಚಾರ ಮಾಡದಿರುವುದು ಹಾಗೂ ಪ್ರವಾಸಿಗರಿಗೆ ವಿಚಾರ ತಿಳಿಸದಿರುವುದು ದುರಂತ.”
-ಎಚ್.ಡಿ.ಭಾಸ್ಕರ್, ಹೊಸೂರು ಗ್ರಾಮಸ್ಥರು
” ಚುಂಚನಕಟ್ಟೆ ನಮಗೆ ಬಾಲ್ಯದಿಂದಲೂ ಆಕರ್ಷಣೀಯ ಸ್ಥಳವಾಗಿದ್ದು ಜಲಪಾತ ವೀಕ್ಷಣೆಯೇ ನಮಗೆ ಒಂದು ಅದ್ಭುತ ಅನುಭವ ನೀಡುತ್ತದೆ. ಪ್ರವಾಸಿಗರಿಗೆ ಚುಂಚನಕಟ್ಟೆ ಉತ್ತಮ ಆಯ್ಕೆಯಾಗಲಿದೆ.”
-ರಮೇಶ್, ಪ್ರವಾಸಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್ಗಳನ್ನು…
ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…
ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…
ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…
ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…